ಕಾಂಗ್ರೆಸ್ ಅಭ್ಯರ್ಥಿ ಪ್ರಚಾರಕ್ಕೆ ಬರುವ ಹಿನ್ನೆಲೆ, ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಕೋಡಿಹಳ್ಳಿ ಗ್ರಾಮದಲ್ಲಿ ಭರ್ಜರಿ ಬಾಡೂಟ ಏರ್ಪಡಿಸಲಾಗಿತ್ತು. ಈ ಬಗ್ಗೆ ಮಾಹಿತಿ ಪಡೆದ ಫ್ಲೈಯಿಂಗ್ ಸ್ಕ್ವಾಡ್ ತಂಡ ದಾಳಿ ನಡೆಸಿದ್ದು, ಆಹಾರವನ್ನು ವಶಕ್ಕೆ ಪಡೆದುಕೊಂಡಿದೆ. ಆದರೆ, ವಶಕ್ಕೆ ಪಡೆದ ಆಹಾರವನ್ನ ರಸ್ತೆಗೆ ಚೆಲ್ಲಿದೆ. ರಸ್ತೆಗೆ ಚೆಲ್ಲಿದ್ದ ಆಹಾರವನ್ನೇ ಕೆಲವರು ತಿಂದ ಘಟನೆ ನಡೆದಿದೆ.
ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ ಕೋಡಿಹಳ್ಳಿ ಗ್ರಾಮಕ್ಕೆ ಚುನಾವಣೆ ಪ್ರಚಾರಕ್ಕೆ ಆಗಮಿಸುತ್ತಿದ್ದರು. ಇವರು ಬರುವ ಹಿನ್ನೆಲೆ, ಪ್ರಚಾರ ಸಭೆಗೆ ಬರುವ ಜನರಿಗಾಗಿ ಕಾಂಗ್ರೆಸ್ ಮುಖಂಡರು ಭರ್ಜರಿ ಬಾಡೂಟ ಮಾಡಿಸಿದ್ದರು. ಈ ವಿಚಾರ ತಿಳಿದ ಎಫ್ಎಸ್ಟಿ ತಂಡ ಗ್ರಾಮಕ್ಕೆ ಭೇಟಿ ನೀಡಿ ದಾಳಿ ನಡೆಸಿದೆ.
ಅಲ್ಲದೇ, ಪರಿಶೀಲನೆ ನಡೆಸಿದಾಗ ಬಾಡೂಟ ವ್ಯವಸ್ಥೆ ಮಾಡಿರುವುದು ಬೆಳಕಿಗೆ ಬಂದಿದೆ. ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಹಿನ್ನೆಲೆ ಬಾಡೂಟ ವಶಕ್ಕೆ ಪಡೆದುಕೊಂಡು ನಂತರ ಬಾಡೂಟವನ್ನು ರಸ್ತೆಗೆ ಸುರಿದು ನಾಶಪಡಿಸಿದೆ.
ಬಳಿಕ ಘಟನೆ ಸಂಬಂಧ ಹೊಳೆನರಸೀಪುರ ಪೊಲೀಸ್ ಠಾಣೆಯಲ್ಲಿ ಗ್ರಾಮದ ಓರ್ವ ಕಾಂಗ್ರೆಸ್ ಮುಖಂಡನ ವಿರುದ್ಧ ದೂರು ದಾಖಲಿಸಲಾಗಿದೆ.
ಈ ಸುದ್ದಿ ಓದಿದ್ದೀರಾ? ರಾಮೇಶ್ವರಂ ಕೆಫೆಯಲ್ಲಿ ಸ್ಪೋಟ | ಇಬ್ಬರು ಶಂಕಿತರನ್ನು ಪಶ್ಚಿಮ ಬಂಗಾಳದ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಿದ ಎನ್ಐಎ
ಹುಟ್ಟುಹಬ್ಬದ ಅಂಗವಾಗಿ ನಾನ್ವೆಜ್ ಊಟ ಮಾಡಿಸಲಾಗಿತ್ತು ಎಂದು ಗ್ರಾಮಸ್ಥರು ಹೇಳುತ್ತಿದ್ದು, ವೀಡಿಯೋ ಮಾಡಿ ಮಾಜಿ ಸಚಿವ ಎಚ್.ಡಿ.ರೇವಣ್ಣ ಹಾಗೂ ಪೊಲೀಸರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಫ್ಲೈಯಿಂಗ್ ಸ್ಕ್ವಾಡ್ ಬಾಡೂಟ ವಶಕ್ಕೆ ಪಡೆದು ಬಳಿಕ ರಸ್ತೆಯ ಬದಿ ಚೆಲ್ಲಿ ಹೋಗಿದ್ದರು. ಆದರೆ, ನಾನ್ವೆಜ್ ಚೆಲ್ಲಿದ ಸ್ಥಳಕ್ಕೆ ಹೋಗಿರುವ ಗ್ರಾಮಸ್ಥರು ರಸ್ತೆಗೆ ಚೆಲ್ಲಿದ ಬಾಡೂಟವನ್ನೇ ತಟ್ಟೆಗೆ ಹಾಕಿಕೊಂಡು ತಿಂದಿದ್ದಾರೆ. ಇನ್ನೂ ಕೆಲವರು ನೇರವಾಗಿ ಅಲ್ಲಿಯೇ ನೆಲದ ಮೇಲೆ ಬಿದ್ದ ಅನ್ನ ಬಾಡೂಟ ಸವಿದಿದ್ದಾರೆ.




