ಹಾಸನ ಮಣ್ಣಿನ ಹೆಣ್ಣು ಬೇರುಗಳು | ಸ್ತ್ರೀ ಲೋಕದ ಅಸ್ಮಿತೆ- ಪದ್ಮಾ ಶ್ರೀರಾಮ್

Date:

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ…

ಸರಳತೆಯ ಸಾಕಾರಮೂರ್ತಿಯಂತಿರುವ ಪದ್ಮಾ ಶ್ರೀರಾಮ್ ಅವರ ವ್ಯಕ್ತಿತ್ವಕ್ಕೆ ಹಲವು ಛಾಯೆಗಳಿವೆ. ಬರವಣಿಗೆ, ಸಾಮಾಜಿಕ ಹೋರಾಟ, ಪುಸ್ತಕ ಪ್ರಕಾಶನ, ಅನುವಾದ, ಕೃಷಿ- ಇವು ಅವರ ಬದುಕಿನ ಹುಡುಕಾಟದ ಕೆಲವು ದಾರಿಗಳು. ‘ನಾನು ಹಿನ್ನೆಲೆ ಗಾಯಕಿ ಆಗಬೇಕು ಅಂತಿದ್ದೆ, ಇನ್ನೂ ಕೆಲವು ಸರ್ತಿ ನ್ಯಾಚುರಲಿಸ್ಟ್ ಆಗಬೇಕು ಅನ್ನಿಸ್ತಿತ್ತು’ ಎಂದು ಒಂದು ಸಂದರ್ಶನದಲ್ಲಿ ಹೇಳಿಕೊಂಡಿರುವುದು ಪದ್ಮಾ ಅವರ ಜೀವನೋತ್ಸಾಹಕ್ಕೆ ಹಿಡಿದ ಕನ್ನಡಿ.

ಪದ್ಮಾ ಶ್ರೀರಾಮ್ ಅವರು ಹುಟ್ಟಿದ್ದು 1943ರಲ್ಲಿ ಹಾಸನದಲ್ಲಿ. ಇವರ ತಂದೆ ಎಂ.ಆರ್.ಪುಟ್ಟಸ್ವಾಮಯ್ಯ, ತಾಯಿ ದೇವಮ್ಮ. ದೇವಮ್ಮನವರು ಶ್ರೀರಂಗಪಟ್ಟಣದ ಹೆಸರಾಂತ ‘ಚೌಬೀನಿ’ ಮನೆತನಕ್ಕೆ ಸೇರಿದವರು. ಪುಟ್ಟಸ್ವಾಮಯ್ಯನವರು ಮೂವತ್ತು-ನಲವತ್ತರ ದಶಕದಲ್ಲೇ ಹೆಸರಾಂತ ಅಬಕಾರಿ ಕಂಟ್ರಾಕ್ಟರ್ ಆಗಿದ್ದವರು. ಜಮೀನ್ದಾರರು, ಹಾಸನದ ‘ಪಿಕ್ಚರ್ ಪ್ಯಾಲೇಸ್’ ಚಿತ್ರಮಂದಿರದ ಒಡೆಯರು. ಇವರ ಸ್ನೇಹವಲಯ ದೊಡ್ಡದಿದ್ದದ್ದರಿಂದ ಎಲ್ಲ ಜಾತಿಯ, ಹಲವು ರೀತಿಯ ಜನಗಳು ಇವರ ಮನೆಗೆ ಬರುತ್ತಿದ್ದರು. ಇವೆಲ್ಲದರ ಸಕಾರಾತ್ಮಕ ಪ್ರಭಾವ ಸಹಜವಾಗಿಯೇ ಪದ್ಮಾ ಅವರ ಮೇಲೆ ಆಗಿದೆ. ಜೊತೆಗೆ, ಒಕ್ಕಲು ಕುಟುಂಬದ ಹಿನ್ನೆಲೆ ಇದ್ದದ್ದರಿಂದ ಒಕ್ಕಲು ಕುಟುಂಬದ ಕೆಲಸಗಳು, ಅದರ ಸರಳ ಜೀವನ ಕ್ರಮಗಳೂ ಪದ್ಮಾ ಅವರ ಬದುಕಿನ ಭಾಗವಾಗಿದೆ.

ಇದನ್ನು ಓದಿದ್ದೀರಾ?: ಜಾನಪದ ಕ್ಷೇತ್ರದ ಅನನ್ಯ ಸಾಧಕಿ- ಡಾ. ವೈ.ಸಿ.ಭಾನುಮತಿ

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಪದ್ಮಾ ಅವರು ಮೂರನೇ ತರಗತಿಯವರೆಗಿನ ವಿದ್ಯಾಭ್ಯಾಸವನ್ನು ಹಾಸನದ ವಾಣಿವಿಲಾಸ ಶಾಲೆಯಲ್ಲಿ, ನಂತರ ಸಂತಫಿಲೋಮಿನಾ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದರು. ಬೆಂಗಳೂರಿನ ಮೌಂಟ್‌ಕಾರ್ಮಲ್ ಕಾಲೇಜಿನಲ್ಲಿ ತಮ್ಮ ಇಷ್ಟದ ಬಾಟನಿ, ಜುವಾಲಜಿ ವಿಷಯಗಳಲ್ಲಿ ಬಿಎಸ್‌ಸಿ ಓದಿದರು. ಎಂಎಸ್ಸಿಯನ್ನು ಸೆಂಟ್ರಲ್ ಕಾಲೇಜಿನಲ್ಲಿ ಮುಗಿಸಿದರು. ಸಮಾಜವಾದಿ ವಿಚಾರಗಳಿಂದ ಪ್ರಭಾವಿತರಾಗಿದ್ದ, ಪೂರ್ಣಚಂದ್ರ ತೇಜಸ್ವಿಯವರ ಒಡನಾಡಿ ಶ್ರೀರಾಮ್ ಅವರನ್ನು ಪ್ರೀತಿಸಿ ವಿವಾಹವಾದ ನಂತರ ಸರಳ ಬದುಕು ಇವರಿಬ್ಬರ ಮಂತ್ರವಾಯಿತು. ಹೆಣ್ಣುಮಕ್ಕಳು ಸಾರ್ವಜನಿಕ ಪ್ರತಿಭಟನೆ, ಮೆರವಣಿಗೆಯಲ್ಲಿ ಪಾಲ್ಗೊಳ್ಳುವ ಮನಸ್ಥಿತಿ ಅಷ್ಟೇನೂ ಇಲ್ಲದ ಕಾಲದಲ್ಲಿ ಪದ್ಮಾ ಅವರು ಶ್ರೀರಾಮ್ ಅವರ ಪ್ರೋತ್ಸಾಹದಿಂದ ಮತ್ತು ‘ಸಮತಾ’ ಸಂಘಟನೆಯ ಮೂಲಕ ಹಲವು ಕಾರ್ಯಕ್ರಮಗಳಲ್ಲಿ ತೊಡಗಿಕೊಂಡರು. ಲೇಖಕಿ, ಅನುವಾದಕಿಯಾಗಿ ಗುರುತಿಸಿಕೊಂಡರು.

ಇದನ್ನು ಓದಿದ್ದೀರಾ?: ವಿಶೇಷ ಚೇತನರ ಆಶಾಕಿರಣ- ವಿಜಯಕುಮಾರಿ ಮುರಾರಪ್ಪ

ಪದ್ಮಾ ಅವರಿಗೆ ಚಿಕ್ಕಂದಿನಿಂದ ಗಿಡಗಳನ್ನು ಕುರಿತು ವಿಶೇಷ ಆಸಕ್ತಿ. ಕುಟುಂಬದ ವಾತಾವರಣದಲ್ಲಿದ್ದ ವೈಜ್ಞಾನಿಕ ಹಿನ್ನೆಲೆಯ ಕಾರಣವೂ ಸೇರಿಕೊಂಡು ಬರವಣಿಗೆಗೆ ಇವರ ಮನಸ್ಸು ಒಲಿಯಿತು. ಇತ್ತೀಚೆಗೆ ‘ಮಯೂರ’ ಮಾಸಪತ್ರಿಕೆಯಲ್ಲಿ ಜ.ನಾ.ತೇಜಶ್ರೀಯವರು ಮಾಡಿದ ಪದ್ಮಾ ಅವರ ದೀರ್ಘ ಸಂದರ್ಶನದಲ್ಲಿ ಪದ್ಮಾ ಅವರು ”ಬರೀ ವೈಜ್ಞಾನಿಕವಾಗಿ ಒಂದು ಗಿಡ ಅಥವಾ ಹೂವಿನ ಬಗ್ಗೆ ಹೇಳ್ತಾ ಹೋದ್ರೆ, ವಿಜ್ಞಾನದ ಹಿನ್ನೆಲೆ ಇರದೇ ಇರುವವರಿಗೆ ಅದನ್ನು ಓದೋದು ಬರಡು, ಹೊರೆ ಅನ್ನಿಸುತ್ತೆ ಅಲ್ವಾ? ಒಂದು ಹೂವನ್ನ, ಗಿಡವನ್ನ ನೋಡ್ತಾ ಇದ್ರೆ ನಮ್ಮ ಮನಸ್ಸಿಗೆ ಹಲವಾರು ವಿಷಯಗಳು ಬಂದು ಹೋಗ್ತವೆ, ಹಾಗೆ ಸಹಜವಾಗಿ ಅನ್ನಿಸಿದ್ದನ್ನು ನಾನು ಬರೀತಾ ಹೋದೆ ಅಷ್ಟೆ. ವೈಜ್ಞಾನಿಕ ವಿವರಗಳೂ ಅದರಲ್ಲಿ ಬರ್ತವೆ, ಆದರೆ ಕಡಿಮೆ. ಬಹುಶಃ ಈ ತರದ ಅನಿಸಿಕೆ, ನೋಟವು ನನ್ನ ವಿಜ್ಞಾನೇತರ ಪುಸ್ತಕಗಳ ಅಂದರೆ, ಕತೆ, ಬೇರೆಬೇರೆ ಅನುವಾದಗಳ ಓದಿನಿಂದ ಬಂದಿರಬಹುದು. ಹಾಗೂ ನಾನು ಬರೆಯೋದು ಸರಳವಾಗಿರಬೇಕು, ಬೇರೆಯವರಿಗೆ ಅರ್ಥ ಆಗಬೇಕು ಅನ್ನೋ ನಿಲುವಿನಿಂದಲೂ ನನ್ನ ಶೈಲಿ ರೂಪುಗೊಂಡಿರಬಹುದು” ಎನ್ನುವ ಮಾತುಗಳು ಬರವಣಿಗೆಯಲ್ಲಿ ತೊಡಗಿರುವ ಪ್ರತಿಯೊಬ್ಬರಿಗೂ ಮನನ ಯೋಗ್ಯವಾದುದು. ಹಾಗೂ ಇವರ ‘ಗಿಡಗಂಟೆಯಾ ಕೊರಳು’ ಕೃತಿಯ ಲೇಖನಗಳನ್ನು ನಾವು ಈ ಹಿನ್ನೆಲೆಯಲ್ಲಿ ಓದಬೇಕು.

Padma sriram 1
ಪದ್ಮಾ ಶ್ರೀರಾಮ್

ಬರವಣಿಗೆಯ ಆರಂಭಿಕ ಕಾಲದಲ್ಲಿ ‘ಲಂಕೇಶ್ ಪತ್ರಿಕೆ’ಯಲ್ಲಿ ಪದ್ಮಾ ಅವರು ನಿಯಮಿತವಾಗಿ ಬರೆದರು. ಲಂಕೇಶ್ ಅವರು ಇವರಿಗೆ ನೀಡಿದ ಸಕಾಲಿಕ ಸಲಹೆ ಮತ್ತು ಮಾರ್ಗದರ್ಶನವು ಪದ್ಮಾ ಅವರ ಬರವಣಿಗೆ ಕೌಶಲ್ಯವನ್ನು ಸಾಣೆ ಹಿಡಿಯಿತು. ಶ್ರೀರಾಮ್ ಮತ್ತು ಪೂರ್ಣಚಂದ್ರ ತೇಜಸ್ವಿಯವರ ಮುಖೇನ ರಾಮಮನೋಹರ ಲೋಹಿಯಾ ಅವರ ಬರವಣಿಗೆಯ ಪ್ರಭಾವ ಕೂಡ ಪದ್ಮಾ ಅವರ ಮೇಲೆ ದಟ್ಟವಾಗಿ ಆಯಿತು. ಚಿಂತಕ, ಹೋರಾಟಗಾರರಾಗಿದ್ದ ಕಿಶನ್ ಪಟ್ನಾಯಕ್ ಅವರ ಸ್ನೇಹ ಮತ್ತು ವಿಚಾರಗಳು ಪದ್ಮಾ ಅವರ ವ್ಯಕ್ತಿತ್ವವನ್ನು ಬೆಳೆಸಿದೆ.

ಇದನ್ನು ಓದಿದ್ದೀರಾ?: ಭಜನೆ ಕಲಾವಿದೆ- ವಿರಕ್ತೆ ಸಾವಿತ್ರಮ್ಮ

1967ರಲ್ಲಿ ವಿಧಾನಸಭೆಯ ಕಲಾಪಗಳು ಹೇಗೆ ನಡೆಯುತ್ತವೆ ಎಂದು ನೋಡಬೇಕೆಂಬ ಕುತೂಹಲದಿಂದ ಪದ್ಮಾ ಅವರು ವಿಧಾನಸೌಧಕ್ಕೆ ಹೋಗುತ್ತಾರೆ. ಆ ದಿನ ಶಾಂತವೇರಿ ಗೋಪಾಲಗೌಡರು ತಮ್ಮ ವಿಚಾರಗಳನ್ನು ಅಲ್ಲಿ ಮಂಡಿಸಿದ ರೀತಿ, ಅವರ ಬದ್ಧತೆ ಇವರನ್ನು ರೋಮಾಂಚನಗೊಳಿಸುತ್ತದೆ. ಗೋಪಾಲಗೌಡರು ಮೈಸೂರು ಮಹಾರಾಜರ ವಿರುದ್ಧದ ಪ್ರತಿಭಟನೆ ಬಗ್ಗೆ ಮಾತನಾಡುತ್ತ ಕೋಪಗೊಂಡು ತಮ್ಮ ಕೈಯಲ್ಲಿದ್ದ ಟಿಪ್ಪಣಿ ಕಾಗದವನ್ನು ಹರಿದು ನೆಲಕ್ಕೆ ಹಾಕಿ ಹೊಸಕಿ ಸಭಾತ್ಯಾಗ ಮಾಡುತ್ತಾರೆ. ಗೋಪಾಲಗೌಡರ ಪ್ರಾಮಾಣಿಕತೆ, ಧೈರ್ಯವು ಒಬ್ಬ ಮನುಷ್ಯನಿಗೆ ಆತ್ಮಗೌರವ ಎಷ್ಟು ಮುಖ್ಯ ಎಂಬುದನ್ನು ಕಲಿಸಿತು ಎಂದು ಪದ್ಮಾ ಅವರು ನೆನಪಿಸಿಕೊಳ್ಳುತ್ತಾರೆ.

2021ರಲ್ಲಿ ಪದ್ಮಾ ಅವರು ತಮಿಳಿನ ಪ್ರಸಿದ್ಧ ಲೇಖಕಿ ಬಾಮ ಅವರ ‘ಸಂಗತಿ’ ಕಾದಂಬರಿಯನ್ನು ಅದೇ ಹೆಸರಿನಲ್ಲಿ ಕನ್ನಡಕ್ಕೆ ಅನುವಾದಿಸಿದ್ದಾರೆ. ದಲಿತ ಕ್ರಿಶ್ಚಿಯನ್ ಕುಟುಂಬದ ಸಂಕಷ್ಟಗಳು, ಬವಣೆ, ಅವರು ಶೋಷಣೆಗೆ ಒಳಪಡುವ ರೀತಿ ತಮ್ಮ ಮನಸ್ಸನ್ನು ಕಲಕಿದ್ದರಿಂದ ಇದನ್ನು ಅನುವಾದಿಸಿದ್ದಾಗಿ ಪದ್ಮಾ ಅವರು ಹೇಳಿಕೊಂಡಿದ್ದಾರೆ. ‘…ನನ್ನ ಅಜ್ಜಿಯವರ ದೆಸೆಯಿಂದ ನನಗೆ ಸಂಭವಿಸಿದ ತಮಿಳು ಭಾಷಿಕರ ಒಡನಾಟ, ಇಂದಿಗೂ ನಡೆದುಕೊಂಡು ಬಂದಿರುವ ಅವರೊಂದಿಗಿನ ಪ್ರೀತಿ ವಿಶ್ವಾಸದಿಂದ ನನಗಿದ್ದ ಆ ಭಾಷೆಯ ಮೇಲಿನ ಅವ್ಯಕ್ತ ನಂಟು ಈ ಅನುವಾದಕ್ಕೆ ನನ್ನನ್ನು ಪರೋಕ್ಷವಾಗಿ ತೊಡಗಿಸಿತೆಂದು ತಿಳಿದಿದ್ದೇನೆ’ ಎಂದು ಈ ಕೃತಿಯ ಆರಂಭದಲ್ಲಿ ಅವರು ಬರೆದಿರುವ ಮಾತುಗಳು ಮನುಷ್ಯ ಸಂಬಂಧಗಳಲ್ಲಿನ ಅವರ ನಂಬಿಕೆಯ ಪ್ರತೀಕ. ಹಾಗೆ ಇದೇ ಪುಸ್ತಕದಲ್ಲಿ ಅವರು ಬರೆಯುವಂತೆ, ‘..ಮುಂದೆ ಹೆಣ್ಣು, ಗಂಡು ಒಂದೇ ಅನ್ನುವ ದಿನ ಬರುವುದರಲ್ಲಿ ಸಂದೇಹವಿಲ್ಲ. ಆಗ ಅನ್ಯಾಯ, ಹಿಂಸೆ, ತಾರತಮ್ಯಗಳು ಕೊನೆಯಾಗಿ ಹೆಣ್ಣುಗಳು ಕಟ್ಟಬಲ್ಲರು ಅಥವಾ ಕೆಡವಬಲ್ಲರು ಎನ್ನುವುದು ನಿಜವಾಗುತ್ತದೆ. ಇಂತಹ ಒಂದು ಕಾಲ ಬರುವುದೆಂದು ನನಗೆ ಆಶಾಭಾವನೆ ಇದೆ’ ಎನ್ನುವ ಮಾತುಗಳು ಹೆಣ್ಣಿನ ಶಕ್ತಿಯ ಮೇಲಿನ ಅವರ ವಿಶ್ವಾಸವನ್ನು ತೋರಿಸುತ್ತದೆ.

ಇದನ್ನು ಓದಿದ್ದೀರಾ?: ಬಾನು ಮುಷ್ತಾಕ್ ಎಂಬ ಬೆಳಗುವ ಹಣತೆ

ಪದ್ಮಾ ಅವರು ರಾಷ್ಟ್ರಕವಿ ಕುವೆಂಪು ಮತ್ತು ತೇಜಸ್ವಿ ಅವರ ಕುಟುಂಬದ ಅತ್ಯಾಪ್ತರು. ಈ ಮಹಾನ್ ಲೇಖಕರ ಜೊತೆಗೆ ಅವರ ನೆನಪುಗಳು ನೂರಾರಿವೆ. ಸಂದರ್ಶನದಲ್ಲಿ ಅವರು ದಾಖಲಿಸಿರುವ ಒಂದು ನೆನಪು ಕುತೂಹಲಕಾರಿಯಾಗಿದೆ: ”ಕುವೆಂಪು ಅವರು ಸಾಮಾನ್ಯವಾಗಿ ಸಾಯಂಕಾಲ ನಾಲ್ಕು ಗಂಟೆಗೆ ಕಾಫಿ ಕುಡಿದು ವೆರಾಂಡದಲ್ಲಿ ಕುಳಿತಿರುತ್ತಿದ್ದರು. ನಾನು ಆ ಹೊತ್ತಿನಲ್ಲಿ ಹೋಗುತ್ತಿದ್ದೆ. ನಾನು ಹೋದ ಕೂಡಲೆ ‘ಪದ್ಮಾ ಬನ್ನಿ’ ಅಂದು, ತಾರಿಣಿಯವರಿಗೆ, ‘ಅಕ್ಕಾ… ಪದ್ಮಾ ಬಂದಿದ್ದಾರೆ ನೋಡಿ’ ಅನ್ನುತ್ತಿದ್ದರು. ನಮ್ಮ ಮನೆಯಲ್ಲಿ ಆಗ ತುಂಬ ಬೆಟ್ಟದಾವರೆ, ಗುಲಾಬಿ ಹೂವಿನ ಗಿಡಗಳಿದ್ದವು. ನಾನು ಕುವೆಂಪು ಅವರ ಮನೆಗೆ ಹೋಗುವಾಗ ಕೆಲವೊಮ್ಮೆ ಹೂಗಳನ್ನು ತೆಗೆದುಕೊಂಡು ಹೋಗುತ್ತಿದ್ದೆ. ಯಾವಾಗಾದರೂ ಹೂವನ್ನು ಕೊಂಡೊಯ್ಯದೆ ಇದ್ದಾಗ ಅವರು, ‘ಪದ್ಮಾ… ಹೂ ತಂದಿಲ್ವಾ?’ ಅಂತ ಕೇಳುತ್ತಿದ್ದರು. ಒಂದು ಸರ್ತಿ ನಾನು ಹಾಸನದ ನನ್ನ ತಾಯಿ ಮನೆಗೆ ಹೋಗಿದ್ದೆ. ಮೂಡಿಗೆರೆಗೆ ಹೋಗಿ ಬರೋಣ ಅಂತ ರಾಜೇಶ್ವರಿ ಅವರಿಗೆ ಕರೆ ಮಾಡಿದೆ. ರಾಜೇಶ್ವರಿಯವರು ಮೂಡಿಗೆರೆಗೆ ಕುವೆಂಪು ಮತ್ತು ಹೇಮಾವತಿ ಅವರು ಬಂದಿರುವ ವಿಷಯ ತಿಳಿಸಿದರು. ಹಾಗಾಗಿ ನಾನು ಹೋಗೋದು ಸರಿ ಅಲ್ಲ ಅನ್ನಿಸಿ ಸುಮ್ಮನಾದೆ. ಸ್ವಲ್ಪ ಹೊತ್ತಿಗೆ ನನಗೆ ಕರೆ ಬಂತು, ಹೇಮಾವತಿ ಅವರು ಮಾಡಿದ್ದ ಕರೆ ಅದು. ಅತ್ತ ಕಡೆಯಿಂದ ಅವರು, ‘ನೀವು ಯಾಕೆ ಮೂಡಿಗೆರೆಗೆ ಬರಲ್ಲ ಅಂತೀರ, ನನಗೋಸ್ಕರ ಬನ್ನಿ’ ಅಂದರು. ಅಷ್ಟು ದೊಡ್ಡವರು ಕರೆಯುವಾಗ ನಾನು ಹೋಗದೆ ಇರೋದು ಹೇಗೆ? ಹೋದೆ. ಆ ದಿನ ಅಲ್ಲೇ ಉಳಿದೆ…” ತೇಜಸ್ವಿಯವರನ್ನು ನೆನಪಿಸಿಕೊಳ್ಳುತ್ತ ‘ಎಷ್ಟು ದೊಡ್ಡ ಲೋಕದೊಳಗೆ ನಾನು ಬದುಕಿಬಿಟ್ಟೆ, ಇದು ನನ್ನ ಅದೃಷ್ಟ ಅನ್ನಿಸುತ್ತೆ’ ಎನ್ನುವ ಪದ್ಮಾ ಅವರ ಮಾತುಗಳು ವಿನಯದ ಪ್ರತೀಕವಾಗಿವೆ.

ಇದನ್ನು ಓದಿದ್ದೀರಾ?: ಅರಳುವ ಮುನ್ನವೇ ಉದುರಿಬಿದ್ದ ಮೊಗ್ಗು- ವಸು ಮಳಲಿ

ಬಹಳ ಹಿಂದೆ ಹೆನ್ರಿ ವಾಲ್ಟರ್ ಬೇಟ್ಸ್ ಅವರು ಬರೆದ ‘ದ ನ್ಯಾಚುರಲಿಸ್ಟ್ ಆನ್ ದ ರಿವರ್ ಅಮೆಜಾನ್’ ಅನ್ನುವ ಪುಸ್ತಕದ ಒಂದು ಸಣ್ಣ ಭಾಗವನ್ನು ಓದಿ ಪ್ರಭಾವಿತರಾಗಿದ್ದ ಪದ್ಮಾ ಅವರು, ಸ್ನೇಹಿತರೊಬ್ಬರಿಂದ ಆ ಪುಸ್ತಕವನ್ನು ಅಮೆರಿಕಾದಿಂದ ತರಿಸಿಕೊಂಡು ಓದಿದಾಗ, ಅನುವಾದ ಮಾಡಲೇಬೇಕೆಂದು ತೀವ್ರವಾಗಿ ಅನ್ನಿಸಿತ್ತಂತೆ. ಸದ್ಯ ಅದರ ಅನುವಾದದಲ್ಲಿ ತೊಡಗಿದ್ದಾರೆ. ಎಲೆಮರೆಯ ಹೂವಿನಂತಿದ್ದು ಎಷ್ಟೊಂದು ಅರ್ಥಪೂರ್ಣ ಕೆಲಸಗಳನ್ನು ಮಾಡುತ್ತಿರುವ ಪದ್ಮಾ ಅವರು ಹಾಸನದವರು ಎಂಬುದು ನಮ್ಮ ಹೆಮ್ಮೆ. ಮೈಸೂರಿನಲ್ಲಿ ನೆಲೆಸಿ, ತಮ್ಮ 83ನೆಯ ವರ್ಷದ ಇಳಿಗಾಲದಲ್ಲಿಯೂ ಅವರು ಬರವಣಿಗೆ, ಅನುವಾದ ಕೆಲಸ, ‘ಪುಸ್ತಕ ಪ್ರಕಾಶನ’ದ ಕಾರ್ಯಚಟುವಟಿಕೆಗಳಲ್ಲಿ ತೊಡಗಿಕೊಂಡಿರುವುದು ನಮಗೆಲ್ಲ ಮಾದರಿಯಾಗಿದೆ.

-ಕೆ.ಸಿ. ಗೀತಾ

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...

18 ಸಾವಿರ ಕೋಟಿ ರೂ. ದಾಟಿದ ದೇಶದ ಕ್ರೀಡಾ ಅರ್ಥವ್ಯವಸ್ಥೆ; ಕ್ರಿಕೆಟ್ ದರ್ಬಾರಿನಲ್ಲಿ ಸೊರಗಿದ ಇತರ ಆಟಗಳು

ಐಪಿಎಲ್‌ನಲ್ಲಿ ಕೇವಲ ಬೆಂಚ್ ಕಾಯುವ ಸಾಮಾನ್ಯ ಕ್ರಿಕೆಟ್ ಆಟಗಾರನೊಬ್ಬ ಕೋಟ್ಯಾಧಿಪತಿಯಾಗಿ ಐಷಾರಾಮಿ...

ದಾವಣಗೆರೆ | ಸಮರ್ಥ್‌ ನಾಮಪತ್ರ ಸಲ್ಲಿಕೆ; ದೂರ ಉಳಿದ ರಾಜ್ಯ ಮುಸ್ಲಿಂ ಮುಖಂಡರು

ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ದಾವಣಗೆರೆ ಮುಸ್ಲಿಂ ಕಾಂಗ್ರೆಸ್‌ ಟಿಕೆಟ್...