- ದೂರದರ್ಶನ ಕೇಂದ್ರದಲ್ಲಿ ಸೇವೆಯಲ್ಲಿದ್ದಾಗ ನಡೆದ ಪ್ರಕರಣ
- ಮಾಹಿತಿ ಹಕ್ಕು ಅಡಿಯಲ್ಲಿ ಮಾಹಿತಿ ನೀಡಲು ನಿರಾಕರಿಸಿದ್ದರು
ಕನ್ನಡ ಸಾಹಿತ್ಯ ಪರಿಷತ್ತಿನ ಹಾಲಿ ಅಧ್ಯಕ್ಷ ಮಹೇಶ್ ಜೋಶಿಗೆ ಹಳೆಯ ಎರಡು ಪ್ರಕರಣದಲ್ಲಿ ಕರ್ನಾಟಕ ಹೈಕೋರ್ಟ್ 50ಸಾವಿರ ದಂಡ ವಿಧಿಸಿ, ಆದೇಶ ಹೊರಡಿಸಿದೆ.
ಬೆಂಗಳೂರು ದೂರದರ್ಶನ ಕೇಂದ್ರದ ನಿರ್ದೇಶಕ ಹಾಗೂ ಕೇಂದ್ರ ಮಾಹಿತಿ ಅಧಿಕಾರಿಯಾಗಿದ್ದ ಮಹೇಶ್ ಜೋಶಿ ಅವರಿಗೆ ಕೇಂದ್ರ ಮಾಹಿತಿ ಆಯೋಗವು ರೂ. 25,000 ದಂಡ ವಿಧಿಸಿತ್ತು. ಇದನ್ನು ಪ್ರಶ್ನಿಸಿದ್ದ ಜೋಶಿ ಹೈಕೋರ್ಟ್ಗೆ ರಿಟ್ ಅರ್ಜಿ ಸಲ್ಲಿಸಿದ್ದರು.
ಇದರ ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್ ಜೋಶಿ ಸಲ್ಲಸಿದ್ದ ಅರ್ಜಿಯನ್ನು ವಜಾ ಮಾಡಿದ್ದಲ್ಲದೆ ವಿನಾಕಾರಣ ರಿಟ್ ಹಾಕಿ ಕೋರ್ಟ್ ಸಮಯವನ್ನು ಹಾಳು ಮಾಡಿದ್ದಕ್ಕೆ ಮತ್ತೆ 25,000 ರೂ ದಂಡ ವಿಧಿಸಿದೆ.
ಎಸ್. ಬಿ. ಭಜಂತ್ರಿ ಎಂಬುವವರು 2009ರ ಏ 9 ರಂದು ಕೆಲವು ಮಾಹಿತಿಗಳನ್ನು ನೀಡುವಂತೆ ಕೋರಿ ದೂರದರ್ಶನದ ಕೇಂದ್ರ ಮಾಹಿತಿ ಅಧಿಕಾರಿಯಾಗಿದ್ದ ಮಹೇಶ ಜೋಶಿ ಅವರಿಗೆ ಅರ್ಜಿ ಸಲ್ಲಿಸಿದ್ದರು. ಆದರೆ, ಈ ಮಾಹಿತಿಯನ್ನು ನೀಡಲು ಮಹೇಶ ಜೋಶಿ ನಿರಾಕರಿಸಿದ್ದರು.
ಈ ವಿಷಯ ಪ್ರಶ್ನಿಸಿದ್ದ ಭಜಂತ್ರಿ ಕೇಂದ್ರ ಮಾಹಿತಿ ಆಯೋಗದ ಮುಂದೆ ಮನವಿ ಸಲ್ಲಿಸಿದ್ದರು. ಮನವಿ ಪುರಸ್ಕರಿಸಿದ ಕೇಂದ್ರ ಮಾಹಿತಿ ಆಯೋಗ 10 ದಿನಗಳಲ್ಲಿ ಮಾಹಿತಿ ನೀಡುವಂತೆ ಮಹೇಶ್ ಜೋಶಿಗೆ ನಿರ್ದೇಶಿಸಿತ್ತು. ಇದನ್ನು ಪ್ರಶ್ನಿಸಿದ್ದ ಮಹೇಶ 2011ರಲ್ಲಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು.
“ಆಯೋಗದ ಆದೇಶದ ಮರುಪರಿಶೀಲನೆಗೆಂದು ಆಯೋಗದ ಮುಂದೆ ಸಲ್ಲಿಸಿರುವ ಮನವಿಯ ವಿಚಾರಣೆ ಮುಗಿಯುವವರೆಗೆ ಮಾಹಿತಿ ನೀಡವುದಿಲ್ಲ ಎಂಬ ತಮ್ಮ ನಿಲುವನ್ನು ಮಾನ್ಯ ಮಾಡಬೇಕು” ಎಂದು ಜೋಶಿ ಪರ ವಕೀಲರು ವಾದಿಸಿದ್ದರು.
ಈ ಸುದ್ದಿ ಓದಿದ್ದೀರಾ? : ಮುಸ್ಲಿಂ ಮೀಸಲಾತಿ ರದ್ದು: ತನ್ನ ನಿರ್ಧಾರ ಸಮರ್ಥಿಸಿಕೊಂಡ ರಾಜ್ಯ ಸರ್ಕಾರ
ವಾದ ಆಲಿಸಿದ್ದ ನ್ಯಾಯಾಲಯವು “ಯಾವುದೋ ಸಂಬಂಧಪಡದ ಕಾರಣಗಳಿಂದಾಗಿ ಆಯೋಗದ ತೀರ್ಪನ್ನು ತಿರಸ್ಕರಿಸಿದ್ದು ಮಾತ್ರವಲ್ಲದೆ, ಮಾಹಿತಿ ಕೇಳುವ ಅರ್ಜಿದಾರನು ತನ್ನ ಉದ್ದೇಶ ತಿಳಿಸುವ ಅವಶ್ಯಕತೆ ಇಲ್ಲವಾದ್ದರಿಂದ ಜೋಶಿಯವರ ಮಾಹಿತಿ ನೀಡುವುದಿಲ್ಲ ಎಂಬ ನಿಲುವು ಮಾಹಿತಿ ಹಕ್ಕು ಕಾಯ್ದೆಯನ್ನೇ ಅಪ್ರಸ್ತುತಗೊಳಿಸುತ್ತದೆ. ಅಲ್ಲದೆ ಮಹೇಶ್ ಜೋಶಿಯವರ ಈ ರೀತಿಯ ನಿಲುವು ಮಾಹಿತಿ ಅಧಿಕಾರಿಯನ್ನು ನ್ಯಾಯಾಧೀಶ ಪೀಠದಲ್ಲಿ ಕೂರಿಸಿದಂತಾಗುತ್ತದೆ” ಎಂದು ಅಭಿಪ್ರಾಯ ವ್ಯಕ್ತಪಡಿಸಿ, ರಿಟ್ ಅರ್ಜಿಯನ್ನು ವಜಾ ಮಾಡಿದ್ದಲ್ಲದೇ, ವಿನಾಕಾರಣ ಅರ್ಜಿಯನ್ನು ದಾಖಲಿಸಿದ್ದಕ್ಕಾಗಿ ಕೇಂದ್ರ ಮಾಹಿತಿ ಅಧಿಕಾರಿ ಮಹೇಶ ಜೋಶಿಗೆ ರೂ.25,000 ದಂಡ ವಿದಿಸಿತು. ಆದೇಶದ ಒಂದು ತಿಂಗಳಲ್ಲಿ ಅದನ್ನು ಕೊಡಬೇಕೆಂದು ಹೈಕೋರ್ಟ್ ತೀರ್ಪು ಹೇಳಿದೆ.
ಮತ್ತೊಂದು ಪ್ರಕರಣದಲ್ಲಿ ಬಿ. ಅಶೋಕ ಎಂಬುವವರು ಹಲವು ಮಾಹಿತಿ ನೀಡಬೇಕು ಎಂದು ಕೋರಿ ಮಾಹಿತಿ ಹಕ್ಕಿನಡಿ 9 ಅರ್ಜಿಗಳನ್ನು ಬೆಂಗಳೂರು ದೂರದರ್ಶನಕ್ಕೆ ಸಲ್ಲಿಸಿದ್ದರು. ಮಾಹಿತಿ ನೀಡಲು ಆಗುವ 50,160 ರೂಪಾಯಿಗಳನ್ನು ಕಟ್ಟಬೇಕೆಂದು ಕೇಂದ್ರ ಮಾಹಿತಿ ಅಧಿಕಾರಿಯಾಗಿದ್ದ ಮಹೇಶ್ ಜೋಶಿ ಆದೇಶ ಹೊರಡಿಸಿದ್ದರು.
ಈ ಆದೇಶವನ್ನು ಪ್ರಶ್ನಿಸಿದ್ದ ಬಿ ಅಶೊಕ ಕೇಂದ್ರ ಮಾಹಿತಿ ಆಯೋಗದ ಮುಂದೆ ಅಹವಾಲನ್ನು ಸಲ್ಲಿಸಿದ್ದರು. ಇವರ ಅರ್ಜಿಯನ್ನು ಮಾನ್ಯ ಮಾಡಿದ ಆಯೋಗವು ಬಿ ಅಶೋಕ ಅವರು ಕೇಳಿರುವ ಮಾಹಿತಿಯನ್ನು 2 ವಾರದೊಳಗೆ ಕೋಡಬೇಕು. ಹಾಗೂ ನಿರ್ದಿಷ್ಟ ಅವಧಿಯಲ್ಲಿ ಮಾಹಿತಿ ನೀಡದ ಕಾರಣ ಮಾಹಿತಿ ಅಧಿಕಾರಿ ಮಹೇಶ್ ಜೋಶಿಗೆ ರೂ.25,000 ಜುಲ್ಮಾನೆ ವಿಧಿಸಿತು.
ಈ ಜುಲ್ಮಾನೆ ಹಣವನ್ನು ಮಹೇಶ್ ಜೋಶಿ ಅವರ ಜನವರಿ – ಮೇ 2018ರ ಸಂಬಳದಲ್ಲಿ ಕಡಿತಗೊಳಿಸಬೇಕು ಎಂದು ಸಂಬಂಧಪಟ್ಟ ಇಲಾಖೆಗೆ ಆದೇಶಿಸಿತು. ಕೇಂದ್ರ ಮಾಹಿತಿ ಆಯೋಗವು ನೀಡಿದ್ದ ಆದೇಶ ಪ್ರಶ್ನಿಸಿದ ಜೋಶಿ ರಿಟ್ ಅರ್ಜಿ ಹಾಕಿದ್ದರು.
ಇವರು ಸಲ್ಲಿಸಿದ್ದ ವಿಚಾರಣೆ ನಡೆಸಿದ ಹೈಕೋರ್ಟ್ “ಕೇಂದ್ರ ಮಾಹಿತಿ ಆಯೋಗದ ನಿರ್ದೇಶನವನ್ನು ಪ್ರಶ್ನಿಸುವ ಹಕ್ಕು ಕೇಂದ್ರ ಮಾಹಿತಿ ಅಧಿಕಾರಿಗೆ ಇಲ್ಲ ಹಾಗೂ ನಿರ್ದಿಷ್ಟ ಅವಧಿಯಲ್ಲಿ ಮಾಹಿತಿ ಕೊಡದಿದ್ದರ ಕಾರಣ ಹಾಕಿರುವ ರೂ.25,000 ಜುಲ್ಮಾನೆ ಸಕಾರಣವಾಗಿದೆ. ಅಷ್ಟೇ ಅಲ್ಲದೇ ವಿನಾಕಾರಣ ರಿಟ್ ಅರ್ಜಿ ದಾಖಲಿಸಿರುವ ಕೇಂದ್ರ ಮಾಹಿತಿ ಅಧಿಕಾರಿಯ ನಡವಳಿಕೆ ಖಂಡಿತವಾಗಿಯೂ ಖಂಡನೆಗೆ ಅರ್ಹವಾಗಿದೆ” ಎಂದು ತಿಳಿಸಿದೆ.
ಈ ಎರಡು ಪ್ರಕರಣದಲ್ಲಿ ತಪ್ಪಿತಸ್ಥರಾಗಿರುವ ಹಾಲಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿರುವ ಮಹೇಶ್ ಜೋಶಿ ಒಟ್ಟು ರೂ. 50,000 ಜುಲ್ಮಾನೆ ತೆರಬೇಕಿದೆ.





