ಉಡುಪಿ ಮೂಲದ ದುಬೈ ನಿವಾಸಿ ಉದ್ಯಮಿ ಹಾಗೂ ಎನ್ಎಂಸಿ ಹೆಲ್ತ್ ಸಂಸ್ಥಾಪಕ ಡಾ.ಬಿ.ಆರ್.ಶೆಟ್ಟಿ ಚಿಕಿತ್ಸೆಗೆ ಅಬುಧಾಬಿಗೆ ತೆರಳಲು ಹೈಕೋರ್ಟ್ ಅನುಮತಿ ನೀಡಿದೆ.
ಬಿ ಆರ್ ಶೆಟ್ಟಿ ಅವರು ನಾನಾ ಬ್ಯಾಂಕ್ಗಳಿಂದ ಸುಮಾರು ₹2,800 ಕೋಟಿ ಸಾಲ ಪಡೆದಿದ್ದರು. ಪಡೆದಿದ್ದ ಸಾಲವನ್ನು ತೀರಿಸದೇ ಇರುವ ಹಿನ್ನೆಲೆ, ಬ್ಯಾಂಕುಗಳ ಮನವಿ ಮೇರೆಗೆ ಉದ್ಯಮಿ ವಿರುದ್ಧ ಲುಕ್ ಔಟ್ ನೋಟಿಸ್ ಜಾರಿಯಾಗಿತ್ತು. ಹೀಗಾಗಿ, ಅವರು ವಿದೇಶಕ್ಕೆ ತೆರಳಲು ಅನುಮತಿ ಇರಲಿಲ್ಲ.
ಅಬುಧಾಬಿಗೆ ಪ್ರಯಾಣಿಸಲು ಶೆಟ್ಟಿಗೆ ಅನುಮತಿ ನೀಡಿರಲಿಲ್ಲ. ಇದನ್ನು ಪ್ರಶ್ನಿಸಿ ಶೆಟ್ಟಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ವಕೀಲ ಬಿ.ವಿ.ಆಚಾರ್ಯ, ಪ್ರಭುಲಿಂಗ್ ನಾವದಗಿ ಶೆಟ್ಟಿ ಪರವಾಗಿ ನ್ಯಾಯಾಲಯದ ಮುಂದೆ ವಾದ ಮಂಡಿಸಿದ್ದರು. ನ್ಯಾ.ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ಹೈಕೋರ್ಟ್ ಪೀಠ ಅರ್ಜಿ ವಿಚಾರಣೆ ನಡೆಸಿ ಆದೇಶಿಸಿದೆ.
”ಶೆಟ್ಟಿ ಅವರು ಭಾರತೀಯ ಪ್ರಜೆ. ಅವರಿಗೆ 80 ವರ್ಷ ವಯಸ್ಸಾಗಿದೆ. ಡಾ.ಬಿ.ಆರ್.ಶೆಟ್ಟಿ ವಿರುದ್ಧ ಯಾವುದೇ ಕ್ರಿಮಿನಲ್ ಪ್ರಕರಣಗಳಿಲ್ಲ. ನ್ಯಾಯಾಲಯದ ಆದೇಶದಂತೆ, ಸಾಲ ವಸೂಲಾತಿ ಪ್ರಕ್ರಿಯೆ ಜಾರಿಯಲ್ಲಿದೆ. ಹೀಗಾಗಿ, ಅವರು ಚಿಕಿತ್ಸೆ ಪಡೆಯಲು ಅಬುಧಾಬಿಗೆ ತೆರಳಲು ಅನುಮತಿ ನೀಡಬೇಕು” ಎಂದು ನ್ಯಾಯಾಲಯದ ಮುಂದೆ ವಾದ ಮಂಡಿಸಿದ್ದರು.
ವಾದ ಆಲಿಸಿದ ನ್ಯಾಯಪೀಠ, ”ಡಾ.ಬಿ.ಆರ್.ಶೆಟ್ಟಿ ಅವರ ವಿರುದ್ಧ ಬೇರೆ ಪ್ರಕರಣಗಳಿಲ್ಲದಿದ್ದರೆ ಅವರು ಚಿಕಿತ್ಸೆಗೆ ಅಬುಧಾಬಿಗೆ ತೆರಳಬಹುದು. ಆದರೆ, ಶೆಟ್ಟಿ ಅವರು ಕೋರ್ಟ್ಗೆ ಪ್ರಮಾಣಪತ್ರ ಸಲ್ಲಿಸಬೇಕು. ₹1 ಕೋಟಿ ಶ್ಯೂರಿಟಿ ನೀಡಬೇಕು. ಅಲ್ಲದೇ, ಪ್ರಪಂಚದ ಯಾವುದೇ ಭಾಗದ ಆಸ್ತಿಗಳ ಪರಭಾರೆ ಮಾಡಬಾರದು. ಎಲ್ಒಸಿ ನೀಡುವ ಅಧಿಕಾರ ಹಸ್ತಾಂತರಿಸುವಂತಿಲ್ಲ” ಎಂದು ಪೀಠ ಆದೇಶಿಸಿದೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | 2025ಕ್ಕೆ ಕಾಳೇನ ಅಗ್ರಹಾರದಿಂದ ನಾಗವಾರದವರೆಗಿನ ನಮ್ಮ ಮೆಟ್ರೋ ಕಾಮಗಾರಿ ಪೂರ್ಣ
ಯಾರಿದು ಬಿ.ಆರ್.ಶೆಟ್ಟಿ? ಏನಿದು ಪ್ರಕರಣ?
ಬಾವಗುತ್ತು ರಘುರಾಮ ಶೆಟ್ಟಿ ಅವರು ಉಡುಪಿಯ ಕಾಪುವಿನಲ್ಲಿ 1942ರಲ್ಲಿ ಹುಟ್ಟಿದರು. ಫಾರ್ಮಾಸಿಸ್ಟ್ ಆದ ಅವರು ಉಡುಪಿಯಲ್ಲಿ ಫಾರ್ಮಾ ಕಂಪನಿಯೊಂದರ ಡಿಸ್ಟ್ರಿಬ್ಯುಟರ್ ಆಗಿದ್ದರು. ತಮ್ಮ ಸೋದರಿಯ ಮದುವೆಗೆ ಬ್ಯಾಂಕ್ ಸಾಲ ಮಾಡಿದ್ದರು. ಸಾಲ ತೀರಿಸಲು ದಾರಿ ಕಾಣದಾಗ ಶೆಟ್ಟಿ ಅವರು ಕೇವಲ 8 ಡಾಲರ್ ಅಂದರೆ, ಆಗಿನ ಲೆಕ್ಕಾಚಾರದಲ್ಲಿ ಸುಮಾರು ₹56 ರೂ.ಗಳನ್ನು ಇಟ್ಟುಕೊಂಡು ಅಬುಧಾಬಿ ನಗರಕ್ಕೆ ಕಾಲಿಟ್ಟು, ಕೆಲವೇ ದಿನಗಳಲ್ಲಿ ಬಿಲಿಯನೇರ್ ಆದರು.
ನಂತರ ಶೆಟ್ಟಿ ಅವರ ಸಾಮ್ರಾಜ್ಯ ಪತನವಾಯಿತು. ಸಾಲದ ಸುಳಿಯಲ್ಲಿ ಸಿಲುಕಿದ್ದ ಶೆಟ್ಟಿಯವರು 2 ಬ್ಯಾಂಕ್ಗಳಿಂದ ಸುಮಾರು ₹2,800 ಕೋಟಿ ಸಾಲ ಪಡೆದಿದ್ದರು. ಪಡೆದ ಸಾಲ ತೀರಿಸದ ಕಾರಣಕ್ಕೆ ಉದ್ಯಮಿ ವಿರುದ್ಧ ಲುಕ್ ಔಟ್ ನೋಟಿಸ್ ಜಾರಿಯಾಗಿತ್ತು. ಹೀಗಾಗಿ, ಅಬುಧಾಬಿಗೆ ಪ್ರಯಾಣಿಸಲು ಶೆಟ್ಟಿಗೆ ಅನುಮತಿ ನೀಡಿರಲಿಲ್ಲ.




