“ಹಿಂದೂಗಳು, ಹಿಂದೂ ಮಾಲೀಕತ್ವದ ಸಭಾಂಗಣದಲ್ಲೇ ಮದುವೆ ಆಗಬೇಕು, ಹಿಂದೂ ಮಾಲೀಕತ್ವದ ಶಿಕ್ಷಣ ಸಂಸ್ಥೆಗಳಿಗೆ ಮಾತ್ರ ತಮ್ಮ ಮಕ್ಕಳನ್ನು ಕಳುಹಿಸಬೇಕು. ಅನ್ಯ ಧರ್ಮೀಯರ ಸಭಾಂಗಣದಲ್ಲಿ ಮದುವೆ ಆಗಬಾರದು. ಅವರ ಶಾಲೆಗಳಿಗೆ ಕಳುಹಿಸಬಾರದು. ಅವರಿಗೆ ನಿಮ್ಮಿಂದ ಸಲ್ಲುವ ಆದಾಯದ ಒಂದು ಪಾಲು ವಿದೇಶಕ್ಕೆ ಸಲ್ಲುತ್ತದೆ…”
ಹೀಗಂತ ದ್ವೇಷ ಭಾಷಣ ಮಾಡಿರುವುದು ಬೇರಾರೂ ಅಲ್ಲ. ಮಂಗಳೂರಿನ ಒಬ್ಬ ಪ್ರೊಫೆಸರ್. ಹೌದು. ಈ ರೀತಿಯ ಹೇಳಿಕೆ ನೀಡಿರುವುದು ಮಂಗಳೂರಿನ ಸೈಂಟ್ ಆ್ಯಗ್ನೆಸ್ ಕಾಲೇಜಿನಲ್ಲಿ ಅಸಿಸ್ಟೆಂಟ್ ಪ್ರೊಫೆಸರ್ ಆಗಿರುವ ಡಾ. ಅರುಣ್ ಉಳ್ಳಾಲ್.
ಮಂಗಳೂರು ನಗರದ ಹೊರವಲಯದ ಮಂಜನಾಡಿ ಸಮೀಪದ ಕಿನ್ಯ ಪ್ರದೇಶದಲ್ಲಿರುವ ಕೇಶವ ಶಿಶು ಮಂದಿರದ ಸಭಾಭವನದಲ್ಲಿ ಇತ್ತೀಚೆಗೆ ನವದಂಪತಿ ಸಮಾವೇಶವನ್ನು ಆಯೋಜಿಸಲಾಗಿತ್ತು. ಈ ಸಮಾವೇಶದಲ್ಲಿ ಆರ್ಎಸ್ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಸೇರಿದಂತೆ ಹಲವರು ಭಾಗವಹಿಸಿದ್ದರು.
ಈ ವೇಳೆ ಮಾತನಾಡಿದ್ದ ಶಿಕ್ಷಕ ಡಾ. ಅರುಣ್ ಉಳ್ಳಾಲ್, “ಹಿಂದೂಗಳು, ಹಿಂದೂ ಮಾಲಕತ್ವದ ಸಭಾಂಗಣದಲ್ಲೇ ಮದುವೆ ಆಗಬೇಕು. ಹಿಂದೂ ಮಾಲೀಕತ್ವದ ಶಿಕ್ಷಣ ಸಂಸ್ಥೆಗಳಿಗೆ ತಮ್ಮ ಮಕ್ಕಳನ್ನು ಕಳುಹಿಸಬೇಕು, ಅನ್ಯ ಧರ್ಮೀಯರ ಸಭಾಂಗಣದಲ್ಲಿ ಮದುವೆ ಆಗಬಾರದು, ಅವರ ಶಾಲೆಗಳಿಗೆ ಕಳುಹಿಸಬಾರದು, ಅವರಿಗೆ ನಿಮ್ಮಿಂದ ಸಲ್ಲುವ ಆದಾಯದ ಒಂದು ಪಾಲು ವಿದೇಶಕ್ಕೆ ಸಲ್ಲುತ್ತದೆ” ಎಂದು ಹೇಳುವ ಮೂಲಕ ಸಮಾಜ ವಿಭಜನೆಯ, ಧರ್ಮ ದ್ವೇಷದ, ನೆಲದ ಕಾನೂನುಗಳಿಗೆ ವಿರುದ್ಧವಾದ ಭಾಷಣ ಮಾಡಿದ್ದಾರೆ. ಸದ್ಯ ಇವರ ಹೇಳಿಕೆಯ ವಿಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ವೈರಲಾಗಿದೆ.
“ಹಿಂದೂಗಳಿಗೆ ಸೈದ್ಧಾಂತಿಕ ಬದ್ಧತೆ ಬೇಕಿದೆ. ಹಿಂದೂಗಳು, ಹಿಂದೂ ಮಾಲಕತ್ವದ ಸಭಾಂಗಣದಲ್ಲೇ ಮದುವೆ ಆಗಬೇಕು. ನನ್ನ ಮದುವೆಯ ಸಂದರ್ಭದಲ್ಲಿ ನನ್ನ ಮನೆಯ ಸಮೀಪವೇ ಕ್ರಿಶ್ಚಿಯನ್ನರ ಒಡೆತನದ ಸಭಾಂಗಣ ಇತ್ತು. ನಾನು ಅಲ್ಲಿಯವರ ಉದ್ಯೋಗಿಯಾಗಿದ್ದೆ. ಕೇಳಿದ್ದಿದ್ದರೆ ಕಡಿಮೆ ಬಾಡಿಗೆಗೆ ಕೊಡುತ್ತಿದ್ದರು. ಆದರೆ, ಎಲ್ಲ ಅನುಕೂಲಗಳಿದ್ದರೂ ಕೂಡ ನಾನು ಅಲ್ಲಿ ಮದುವೆ ಆಗಿಲ್ಲ. ಹುಡುಕಿಕೊಂಡು ಹೋಗಿ, ಇಕ್ಕಟ್ಟಾಗಿದ್ದರೂ ಗಟ್ಟಿ ಸಮಾಜದ ಸಭಾಂಗಣದಲ್ಲಿ ಮದುವೆ ಆಗಿದ್ದೆ. ಸಿದ್ಧಾಂತದ ಕಾರಣಕ್ಕೆ ಅಲ್ಲಿ ಮದುವೆಯಾದೆ” ಎಂದು ಅರುಣ್ ತಿಳಿಸಿದ್ದಾರೆ.
ಅಲ್ಲದೇ, “ಸಭಾಂಗಣ ಕಟ್ಟಿದವರ ಸಮುದಾಯವರು ಅವರ ಸಭಾಂಗಣದಲ್ಲಿ ಮದುವೆಯಾಗುವುದು ಬಹಳ ಕಡಿಮೆ. ಮಂಗಳೂರಿನ ದೊಡ್ಡ ದೊಡ್ಡ ಹಾಲ್ಗಳ ಮಾಲೀಕರಿಗೆ ಹಿಂದೂಗಳದ್ದೇ ದೊಡ್ಡ ಆದಾಯ. ಮುಂದಕ್ಕೆ ಮದುವೆಯಾಗುವ ಹಿಂದೂಗಳು, ಹಿಂದೂ ಮಾಲಕತ್ವದ ಸಭಾಂಗಣದಲ್ಲೇ ಮದುವೆ ಆಗಬೇಕು” ಎಂದು ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಪ್ರವಾದಿ ಮುಹಮ್ಮದ್ ಕುರಿತು ಯತಿ ನರಸಿಂಹಾನಂದ್ ಪ್ರಚೋದನಾಕಾರಿ ಹೇಳಿಕೆ; ಕ್ರಮಕ್ಕೆ ಆಗ್ರಹ
ಮಂಗಳೂರಿನಲ್ಲಿ ಹಿಂದೂಗಳ ಒಡೆತನದಲ್ಲಿರುವ ಕೆನರಾ, ಶಾರದಾ, ಎಸ್ಡಿಎಂ ಸೇರಿದಂತೆ ಹಲವು ಶಾಲೆಗಳಲ್ಲಿ ವರ್ಷ ವರ್ಷವೂ ಹಿಂದೂ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿದೆ. ಪ್ರತಿಷ್ಠಿತ ಅನ್ಯಮತೀಯರ ಕೆಲವು ಕಾಲೇಜಿನಲ್ಲಿ 11 ಕಾಮರ್ಸ್ ಬ್ಯಾಚ್ ಇದೆ. ನಮ್ಮವರ ಒಡೆತನದ ಶಾಲೆಯಲ್ಲಿ ಒಂದು ಕಾಮರ್ಸ್ ಕಾಲೇಜಲ್ಲಿ ವಿದ್ಯಾರ್ಥಿಗಳಿಲ್ಲ. ಹಾಗಾಗಿ, ಹಿಂದೂ ಮಾಲೀಕತ್ವದ ಶಿಕ್ಷಣ ಸಂಸ್ಥೆಗಳಿಗೆ ತಮ್ಮ ಮಕ್ಕಳನ್ನು ಕಳುಹಿಸಬೇಕು” ಎಂದು ಹೇಳುವ ಮೂಲಕ ಸಮುದಾಯಗಳ ನಡುವೆ ದ್ವೇಷ ಹರಡಿದ್ದಾರೆ.
ಸೋಷಿಯಲ್ ಮೀಡಿಯಾಗಳಲ್ಲಿ ಸದ್ಯ ಡಾ. ಅರುಣ್ ಉಳ್ಳಾಲ್ ಅವರ ಹೇಳಿಕೆಯ ವಿಡಿಯೋ ವೈರಲಾಗಿದ್ದು, ವ್ಯಾಪಕ ಟೀಕೆ ವ್ಯಕ್ತವಾಗಿದೆ. ಸಮಾಜ ವಿಭಜನೆಯ, ಧರ್ಮ ದ್ವೇಷದ, ನೆಲದ ಕಾನೂನುಗಳಿಗೆ ವಿರುದ್ಧವಾದ ಭಾಷಣ ಮಾಡಿರುವುದಕ್ಕೆ ಇವರ ವಿರುದ್ಧ ಮಂಗಳೂರಿನ ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಳ್ಳಬೇಕು ಎಂದು ಸಾಮಾಜಿಕ ಹೋರಾಟಗಾರರು ಆಗ್ರಹಿಸಿದ್ದಾರೆ.
ಈ ಬಗ್ಗೆ ಫೇಸ್ಬುಕ್ ಪೋಸ್ಟ್ ಹಾಕಿರುವ ಸಾಮಾಜಿಕ ಕಾರ್ಯಕರ್ತ ಮುನೀರ್ ಕಾಟಿಪಳ್ಳ, “ಸಮಾಜ ವಿಭಜನೆಯ, ಧರ್ಮ ದ್ವೇಷದ, ನೆಲದ ಕಾನೂನುಗಳಿಗೆ ವಿರುದ್ಧವಾದ ಭಾಷಣ ಮಾಡಿದ ಶಿಕ್ಷಕ ಡಾ. ಅರುಣ್ ಉಳ್ಳಾಲ್ ಪ್ರಾಥಮಿಕ ಶಾಲೆಯಿಂದ ಹಿಡಿದು ಪದವಿಯವರೆಗೆ ಶಿಕ್ಷಣ ಪಡೆದಿರುವುದು ಸೈಂಟ್ ಸೆಬಾಸ್ಟಿಯನ್, ಸೈಂಟ್ ಅಲೋಶಿಯಸ್ ಮುಂತಾದ ಕ್ರೈಸ್ತ ಶಿಕ್ಷಣ ಸಂಸ್ಥೆಗಳಲ್ಲಿ. ಅರುಣ್ ಉಳ್ಳಾಲ್ ಸದ್ಯ ಮಂಗಳೂರಿನಲ್ಲಿ ಕ್ರೈಸ್ತ ಸಮುದಾಯದ ಒಡೆತನದ ಸೈಂಟ್ ಆಗ್ನೆಸ್ ಕಾಲೇಜಿನಲ್ಲಿ ಅಸಿಸ್ಟೆಂಟ್ ಪ್ರೊಫೆಸರ್ ಆಗಿದ್ದಾರೆ. ಅದಕ್ಕಿಂತ ಮೊದಲು ಅದೇ ಕ್ರೈಸ್ತ ಸಮುದಾಯದ ಪೆರ್ಮನ್ನೂರು ಸೈಂಟ್ ಸೆಬಾಸ್ಟಿಯನ್ ಕಾಲೇಜಿನಲ್ಲಿ ಪಾಠ ಮಾಡುತ್ತಿದ್ದರು. ಕ್ರೈಸ್ತರ ಒಡೆತನದ ಶಿಕ್ಷಣ ಸಂಸ್ಥೆಗಳಲ್ಲಿ ಶಿಕ್ಷಕರಾಗಿ ದುಡಿಯುತ್ತಾ, ಅದೇ ಶಿಕ್ಷಣ ಸಂಸ್ಥೆಗಳಿಗೆ ಹಿಂದೂಗಳು, ತಮ್ಮ ಮಕ್ಕಳನ್ನು ಕಳುಹಿಸಬೇಡಿ ಅಂತ ಕರೆ ನೀಡುತ್ತಾರೆ” ಎಂದು ಕಿಡಿಕಾರಿದ್ದಾರೆ.

“ಇಷ್ಟೊಂದು ಉನ್ನತ ಶಿಕ್ಷಣ ಪಡೆದ, ಸಂಶೋಧನಾ ಪದವಿ ಪಡೆದ ಇವರಿಗೆ ಭಾರತ ದೇಶದ ಸಂವಿಧಾನದ ಮೂಲಭೂತ ಆಶಯಗಳು ಅರ್ಥ ಆಗಿಲ್ಲ ಎಂಬುದು ಅಚ್ಚರಿಯ ಸಂಗತಿ. ಇಷ್ಟೊಂದು ಉನ್ನತ ಪದವಿ ಪಡೆದರು ಸಹ ನೆಲದ ಕಾನೂನು, ಸಂವಿಧಾನದ ಜಾತ್ಯಾತೀತತೆ, ಸಮಾನತೆಯ ಕುರಿತು ಕನಿಷ್ಠ ಗೌರವವೂ ಇಲ್ಲದ್ದು ಖೇದಕರ. ಮನಸ್ಸಿನೊಳಗೆ ಮತಾಂಧತೆಯ ವಿಷತುಂಬಿಕೊಂಡಿದ್ದರೂ ಬಹಿರಂಗವಾಗಿ ಮಾತಾಡುವಾಗಲಾದರೂ ಅದನ್ನೆಲ್ಲ ತೋರ್ಪಡಿಸಬಾರದು ಎಂಬ ಕನಿಷ್ಠ ವಿವೇಕವೂ ಈತನಲ್ಲಿ ಇಲ್ಲದೆ ಹೋದದ್ದು ವಿಷಾದನೀಯ” ಎಂದು ಆಕ್ರೋಶ ಹೊರಹಾಕಿದ್ದಾರೆ.
“ಸ್ವತಃ ಕ್ರೈಸ್ತರ ಶಾಲೆ, ಕಾಲೇಜುಗಳಲ್ಲಿ ಕಲಿತು, ಅಲ್ಲಿಯೇ ಉದ್ಯೋಗ ಪಡೆದಿರುವ ವ್ಯಕ್ತಿಗೆ “ಕ್ರೈಸ್ತರು ಒಳಗೊಂಡಂತೆ ಭಿನ್ನ ಧರ್ಮದವರ ಶಿಕ್ಷಣ ಸಂಸ್ಥೆಗಳಿಗೆ ಹಿಂದೂಗಳು ಮಕ್ಕಳನ್ನು ಸೇರಿಸಬೇಡಿ” ಎಂದು ಬಹಿರಂಗವಾಗಿ ಹೇಳಲು ಆತ್ಮಸಾಕ್ಷಿ ಬಿಡಿ ಕನಿಷ್ಠ ಲಜ್ಜೆಯೂ ಅಡ್ಡಿ ಬರಲಿಲ್ಲ ಎಂಬುದು ಗಮನಾರ್ಹ. ಇದೇ ಅರುಣ್ ಉಳ್ಳಾಲ್ ಅವರಿಗೆ ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ, ತುಳು ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರಕಿದೆ. ಇಂತಹ ದ್ವೇಷ ಹರಡುವ, ಸಂವಿಧಾನದ ಆಶಯಗಳನ್ನು ಉಲ್ಲಂಘಿಸುವ ವ್ಯಕ್ತಿಗಳಿಗೆ ಸರಕಾರದ ಅಧೀನದ ಸಂಸ್ಥೆಗಳಿಂದ ಪ್ರಶಸ್ತಿಗಳು ಲಭ್ಯ ಆಗಿರುವುದು ಅಚ್ಚರಿ ಮೂಡಿಸಿದೆ” ಎಂದು ಮುನೀರ್ ಕಾಟಿಪಳ್ಳ ತಿಳಿಸಿದ್ದಾರೆ.
“ಡಾ. ಅರುಣ್ ಉಳ್ಳಾಲ್ ಮಾಡಿರುವ ವಿಭಜನೆಯ, ವಿಷಪೂರಿತ ಭಾಷಣಕ್ಕಾಗಿ ಶಿಕ್ಷಣ ಇಲಾಖೆ ಅವರಿಂದ ಕನಿಷ್ಠ ವಿವರಣೆಯನ್ನಾದರೂ ಕೇಳಬೇಕು. ನೆಲದ ಕಾನೂನು ಅಡಿಯಲ್ಲಿ ಕ್ರಮ ಕೈಗೊಳ್ಳಬೇಕು. ಇಂತಹ ವಿಷಕಾರಿ ಚಿಂತನೆಗಳು ಪಾಠ ಮಾಡುವ ಸಂದರ್ಭದಲ್ಲೂ ಸದ್ದಿಲ್ಲದೆ ವಿದ್ಯಾರ್ಥಿಗಳ ತಲೆಗೆ ದಾಟುವ ಸಾಧ್ಯತೆಗಳಿವೆ. ಧರ್ಮಾತೀತವಾಗಿ ಜನರು ವಿಭಜಕ ವಿಚಾರಗಳನ್ನು ಹರಡುವ, ಸಮಾಜವನ್ನು ಅಸ್ಥಿರಗೊಳಿಸುವ ಇಂತಹ ವ್ಯಕ್ತಿತ್ವಗಳ ಕುರಿತು ಜಾಗರೂಕರಾಗಬೇಕು, ಅವರ ಮಾತುಗಳನ್ನು ತಿರಸ್ಕರಿಸಬೇಕು, ಖಂಡಿಸಬೇಕು” ಎಂದು ಮುನೀರ್ ಕಾಟಿಪಳ್ಳ ತಿಳಿಸಿದ್ದಾರೆ.
“ಡಾ. ಅರುಣ್ ಉಳ್ಳಾಲ್ ಅವರನ್ನು ಅಸಿಸ್ಟೆಂಟ್ ಪ್ರೊಫೆಸರ್ ಹುದ್ದೆಯಿಂದ ಈಗಾಗಲೇ ಉದ್ಯೋಗದಿಂದ ತೆಗೆದು ಹಾಕಲಾಗಿದೆ” ಎಂದು ಸೈಂಟ್ ಆ್ಯಗ್ನೆಸ್ ಕಾಲೇಜಿನ ಆಡಳಿತಾಧಿಕಾರಿಗಳು ಈ ದಿನ.ಕಾಮ್ಗೆ ಮಾಹಿತಿ ನೀಡಿದ್ದಾರೆ.
ಸ್ವಯಂಪ್ರೇರಿತ ಪ್ರಕರಣ ದಾಖಲಿಸಿದ ಮಂಗಳೂರು ಪೊಲೀಸರು
ಡಾ. ಅರುಣ್ ಉಳ್ಳಾಲ್ ಹೇಳಿಕೆಯ ವಿರುದ್ಧ ಮಂಗಳೂರಿನ ಪೊಲೀಸರು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿರುವುದಾಗಿ ತಿಳಿದು ಬಂದಿದೆ. ಧರ್ಮ ದ್ವೇಷದ ಭಾಷಣ ಮಾಡಿದ ಹಿನ್ನೆಲೆಯಲ್ಲಿ ಮಂಗಳೂರು ಸೆನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆಯ ಕಲಂ; 66(C) IT ACT AND 196,351 (BNS), 2023 ರಂತೆ ಪ್ರಕರಣ ದಾಖಲು ಮಾಡಲಾಗಿದೆ.





