“ರಾಜ್ಯದ ಬಜೆಟ್ನಲ್ಲಿ ಅಂಗನವಾಡಿ ನೌಕರರ ಗೌರವ ಧನವನ್ನು 15,000 ರೂ.ಗಳಿಗೆ ಹೆಚ್ಚಿಸಬೇಕು” ಎಂದು ಕರ್ನಾಟಕ ರಾಜ್ಯ ಸಂಯುಕ್ತ ಅಂಗನವಾಡಿ ನೌಕರರ ಸಂಘದ ರಾಜ್ಯ ಕಾರ್ಯದರ್ಶಿ ಎಂ.ಉಮಾದೇವಿ ಆಗ್ರಹಿಸಿದರು.
ಬೆಂಗಳೂರು ನಗರದ ಫ್ರೀಡಂ ಪಾರ್ಕ್ನಲ್ಲಿ “ಅಂಗನವಾಡಿ ನೌಕರರ ರಾಜ್ಯ ಮಟ್ಟದ ಪ್ರತಿಭಟನೆ”ಯಲ್ಲಿ ಅವರು ಮಾತನಾಡಿದರು.
“ಕಳೆದ ಐದು ದಶಕಗಳಿಂದ ಹಳ್ಳಿಗಳಲ್ಲಿ ಬಡಜನರ ನಡುವೆ ಶ್ರದ್ಧೆಯಿಂದ ಅಂಗನವಾಡಿ ನೌಕರರು ದುಡಿಯುತ್ತಾ ಬಂದಿದ್ದಾರೆ. ಚುನಾವಣೆಯಲ್ಲಿ ನೀಡಿದ ಭರವಸೆಯಂತೆ 15,000 ರೂ ಗೌರವಧನವನ್ನು ಹೆಚ್ಚಿಸಬೇಕು ಹಾಗೂ ನಿವೃತ್ತಿ ಪರಿಹಾರವನ್ನು 2 ಲಕ್ಷ ರೂ.ವರೆಗೆ ನೀಡಬೇಕು” ಎಂದು ಸರ್ಕಾರಕ್ಕೆ ಮನವಿ ಮಾಡಿದರು.
“ದಿನನಿತ್ಯದ ಬೆಲೆ ಏರಿಕೆಯಿಂದ ಅತ್ಯಲ್ಪ ಗೌರವಧನ ಕುಟುಂಬ ನಿರ್ವಹಣೆಗೆ ಸಾಕಾಗುತ್ತಿಲ್ಲ. ಆದ್ದರಿಂದ ಅವರ ಕುಟುಂಬಗಳು ತೀವ್ರ ಸಂಕಷ್ಟವನ್ನು ಎದುರಿಸುತ್ತಿವೆ. ರಾಜ್ಯ ಸರ್ಕಾರವು ಅಂಗನವಾಡಿ ನೌಕರರನ್ನು ಸಿ ಮತ್ತು ಡಿ ದರ್ಜೆಯ ನೌಕರರೆಂದು ಪರಿಗಣಿಸಬೇಕು. ಸರ್ಕಾರಿ ನೌಕರರ ಸರಿಸಮಾನವಾಗಿ ವೇತನ ನೀಡಬೇಕು.” ಎಂದು ಆಗ್ರಹ ಮಾಡಿದರು.
ಅಂಗನವಾಡಿ ಕಾರ್ಯಕರ್ತೆ ನಿರ್ಮಲಾ ಅವರು ʼಈದಿನʼ ಜೊತೆ ಮಾತನಾಡಿ, “ಸರ್ಕಾರ ಈಗ ಕೊಡುತ್ತಿರುವ ಗೌರವ ಧನದಲ್ಲಿ ಜೀವನ ನಿರ್ವಹಣೆ ತುಂಬಾ ಕಷ್ಟವಾಗುತ್ತಿದೆ. ಈ ವರ್ಷದ ಬಜೆಟ್ನಲ್ಲಾದರೂ ಗೌರವ ಧನವನ್ನು ಹೆಚ್ಚಿಸಿದರೆ, ಬೀದಿಗೆ ಬಂದು ಪ್ರತಿಭಟನೆ ಮಾಡುವುದನ್ನು ನಿಲ್ಲಿಸುತ್ತೇವೆ. ಚುನಾವಣೆಯ ಪ್ರಣಾಳಿಕೆಯಲ್ಲಿ ಹೇಳಿದಂತೆ ಅಂಗನವಾಡಿ ನೌಕರರ ಗೌರವ ಧನ ಹೆಚ್ಚಿಸುವ ಆರನೇ ಗ್ಯಾರಂಟಿಯನ್ನು ಈ ಬಾರಿ ಆದರೂ ಜಾರಿಗೆ ತನ್ನಿ” ಎಂದು ಮನವಿ ಮಾಡಿದರು.

ರಾಜ್ಯದ ಮೂಲೆಮೂಲೆಯಿಂದ ಸಾವಿರಾರು ಅಂಗನವಾಡಿ ನೌಕರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. “ಈ ವರ್ಷದ ಬಜೆಟ್ನಲ್ಲಿ ಗೌರವಧನವನ್ನು ಹೆಚ್ಚಿಸಿ” ಎಂಬುದು ಎಲ್ಲರ ಒಕ್ಕೊರಲ ಧ್ವನಿಯಾಗಿತ್ತು.
ಕರ್ನಾಟಕ ರಾಜ್ಯ ಸಂಯುಕ್ತ ಅಂಗನವಾಡಿ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಕೆ.ಸೋಮಶೇಖರ್ ಯಾದಗಿರಿ ಅವರು ʼಗೌರವ ಧನ 15,000 ರೂ ಹೆಚ್ಚಿಸುವ ಜೊತೆಗೆ 15 ಪ್ರಮುಖ ಬೇಡಿಕೆಗಳನ್ನುʼ ಮಂಡಿಸಿದರು.
ಬೇಡಿಕೆಗಳು
- ಚುನಾವಣಾ ಭರವಸೆಯಂತೆ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಗೌರವ ಧನವನ್ನು ರೂ.15,000 ಕ್ಕೆ ಹೆಚ್ಚಿಸಬೇಕು ಮತ್ತು ನಿವೃತ್ತಿ ಪರಿಹಾರ ರೂ.2 ಲಕ್ಷ ನೀಡಬೇಕು.
- ಸುಪ್ರೀಂಕೋರ್ಟ್ ಆದೇಶದಂತೆ ಅಂಗನವಾಡಿ ನೌಕರರಿಗೆ ಗ್ರಾಚೂಟಿ (ಉಪ ಧನ) ಹಣ ನಿವೃತ್ತಿಯಾದ ಎಲ್ಲಾ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ನೀಡಬೇಕು. ಈಗಿರುವ ನಿರ್ಬಂಧಗಳನ್ನು ತೆಗೆದು ಹಾಕಬೇಕು.
- ಸರ್ಕಾರದ ಸಿ ಮತ್ತು ಡಿ ಗ್ರೂಪ್ ನೌಕರರೆಂದು ಪರಿಗಣಿಸಬೇಕು ಎನ್ನುವ ಅಂಗನವಾಡಿ ನೌಕರರ ಬಹುದಿನಗಳ ಬೇಡಿಕೆಯನ್ನು ಎತ್ತಿ ಹಿಡಿದಿರುವ ಗುಜರಾತ್ ಹೈಕೋರ್ಟ್ನ ಆದೇಶದಂತೆ, ಅಂಗನವಾಡಿ ನೌಕರರನ್ನು ಸರ್ಕಾರಿ ನೌಕರರೆಂದು ಪರಿಗಣಿಸಬೇಕು.
- ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರ ವೈದ್ಯಕೀಯ ವೆಚ್ಚಗಳ ಮರುಪಾವತಿ ಸಹಾಯ ಧನವನ್ನು ಕನಿಷ್ಠ ರೂ.2 ಲಕ್ಷ ಗಳಿಗೆ ಹೆಚ್ಚಿಸಬೇಕು. ಫಲಾನುಭವಿಗಳಿಗೆ ಸುಲಭವಾಗಿ ಪಾವತಿಸಲು ಸೂಕ್ತ ಕ್ರಮ ವಹಿಸಬೇಕು.
- ಈಗಾಗಲೇ ನಿವೃತ್ತಿಯಾದ ನೌಕರರಿಗೆ ರೂ. 50,000 ಮತ್ತು ರೂ 30,000 ನಿವೃತ್ತಿ ಪರಿಹಾರ ಹಣ ಹಲವರಿಗೆ ಸಿಗುತ್ತಿಲ್ಲ. ಈ ಸಮಸ್ಯೆಯನ್ನು ಪರಿಹರಿಸಿ ಸರಳವಾಗಿ ನಿವೃತ್ತಿ ಪರಿಹಾರ ಸಿಗುವಂತೆ ಸೂಕ್ತ ಕ್ರಮವಹಿಸಬೇಕು ಮತ್ತು ನೌಕರರನ್ನು ಸರ್ಕಾರದ ಪಿಂಚಣಿ ಯೋಜನೆಗೆ ಒಳಪಡಿಸಬೇಕು.
- ಸೇವಾ ಹಿರಿತನವನ್ನು ಆಧರಿಸಿ 50% ಮತ್ತು ಮೆರಿಟ್ ಆಧರಿಸಿ 50% ಮೇಲಿನ ಹುದ್ದೆಗೆ ಮುಂಬಡ್ತಿಗೆ ಆದೇಶ ಮಾಡಬೇಕು.
- ಐಸಿಡಿಎಸ್ ಕೆಲಸಗಳನ್ನು ಹೊರತುಪಡಿಸಿ, ಇತರ ಇಲಾಖೆಗಳ ಹೆಚ್ಚುವರಿ ಕೆಲಸಗಳನ್ನು ನೀಡಬಾರದು ಎನ್ನುವ ಇಲಾಖೆಯ ಆದೇಶವನ್ನು ಎಲ್ಲಾ ಜಿಲ್ಲೆಗಳಲ್ಲಿ ಕಟ್ಟುನಿಟ್ಟಾಗಿ ಪಾಲಿಸಲು ಕ್ರಮ ವಹಿಸಬೇಕು ಮತ್ತು ಬಿಎಲ್ಓ ಕೆಲಸ ಸಹಿತ ಇತರೆ ಹೆಚ್ಚುವರಿ ಕೆಲಸಗಳಿಂದ ಕೂಡಲೇ ಬಿಡುಗಡೆ ಮಾಡಬೇಕು.
- ಪ್ರತಿ ತಿಂಗಳು 5ನೇ ತಾರಿಖಿನ ಒಳಗಾಗಿ, ಮಾಸಿಕ ವೇತನ (ಗೌರವ ಧನ) ಪಾವತಿ ಮಾಡಬೇಕು.
- ಮಾತೃ ವಂದನಾ, ಬಾಗ್ಯಲಕ್ಷ್ಮೀ ಕೆಲಸಗಳಿಗೆ ಹೆಚ್ಚುವರಿ ಗೌರವ ಧನವನ್ನು ನಿಡಬೇಕು.
- ಬೆಲೆ ಏರಿಕೆಯ ಇಂದಿನ ದರದಲ್ಲಿ ಅಂಗನವಾಡಿ ಕೇಂದ್ರಗಳ ವಾಡಿಗೆ ವರ, ಮೊಟ್ಟೆ ದರ, ಸಾದಿಲ್ವಾರು, ಫ್ರೆತ್ರಿ ಫಂಡ್ ಅನುದಾನ ಇತ್ಯಾದಿ ದರಗಳನ್ನು ಹೆಚ್ಚಿಸಬೇಕು.
- ಅಂಗನವಾಡಿ ಕೇಂದ್ರಗಳಿಗೆ ಸಮರ್ಪಕ ಇಂಟರ್ನೆಟ್ ಸಂಪರ್ಕ ಸಹಿತ ಉತ್ತಮ ಗುಣಮಟ್ಟದ ಮೊಬೈಲ್ ಸೆಟ್ ಗಳು, ರುದ್ದ ಕುಡಿಯುವ ನೀರು, ಶೌಚಾಲಯ ಸಹಿತ ಸಮರ್ಪಕವಾಗಿ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು.
- ಅಂಗನವಾಡಿ ಕೇಂದ್ರಗಳಿಗೆ ಪ್ರತಿ ವರ್ಷಕ್ಕೆ ನಿಗದಿಪಡಿಸಿದ ಸಂಖ್ಯೆಯ ಸಿಲೆಂಡರ್ ಗಳನ್ನು ಕೆಲವು ಜಿಲ್ಲೆಗಳಲ್ಲಿ ನೀಡುತ್ತಿಲ್ಲ. ನಿಗದಿಪಡಿಸಿದ ಸಂಖ್ಯೆಯ ಸಿಲಿಂಡರ್ ನೀಡಲು ಕ್ರಮ ಕೈಗೊಳ್ಳಬೇಕು.
- ಅಂಗನವಾಡಿ ಕೇಂದ್ರಗಳಿಗೆ ಇನ್ ಚಾರ್ಜ್ ಕಾರ್ಯಕರ್ತೆಯರಿಗೆ ನೀಡುವ ಗೌರವ ಧನವನ್ನು ಹೆಚ್ಚಿಸಬೇಕು.
- ಅಂಗನವಾಡಿ ಕೇಂದ್ರಗಳಲ್ಲಿ ಹಲವಾರು ವರ್ಷಗಳಿಂದ ಖಾಲಿ ಇರುವ ಸಹಾಯಕಿಯರ ಹುದ್ದೆಗಳನ್ನು ಭರ್ತಿ ಮಾಡಬೇಕು.
- ಅಂಗನವಾಡಿ ಮಕ್ಕಳಿಗೆ ನೀಡುತ್ತಿರುವ ಪೌಷ್ಟಿಕ ಆಹಾರದ ಗ್ರಾಂ ಗಳ ಪ್ರಮಾಣ ಕಡಿಮೆ ಇದ್ದು, ಎಲ್ಲಾ ಪದಾರ್ಥಗಳ ಪ್ರಮಾಣಗಳನ್ನು ಹೆಚ್ಚಿಸಬೇಕು.





