ಬಿಡುಗಡೆಯೇ ಆಗದಿರುವ ಜಾತಿ ಗಣತಿಯ ಬಗ್ಗೆ ಉಂಟಾಗಿರುವ ವಿವಾದಕ್ಕೆ ಸಂಬಂಧಿಸಿದಂತೆ ಮೈಸೂರಿನಲ್ಲಿ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು, “ಕಾಂತರಾಜ ಆಯೋಗದ ವರದಿ (ಜಾತಿ ಗಣತಿ) ನನ್ನ ಕೈಸೇರಿಲ್ಲ. ಆಗಲೇ ಅದಕ್ಕೆ ವಿರೋಧವೆಂದರೆ ನಾನೇನು ಮಾಡಲಿ?” ಎಂದು ಪ್ರಶ್ನಿಸಿದ್ದಾರೆ.
ಕಾಂತರಾಜ ಆಯೋಗದ ವರದಿಗೆ ಸಂಬಂಧಿಸಿದಂತೆ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪನವರು ಮಾಡಿರುವ ವಿರೋಧಕ್ಕೆ ಪ್ರತಿಕ್ರಿಯಿಸಿರುವ ಅವರು, “ವರದಿಯಲ್ಲಿ ಏನಿದೆ ಏಂಬುದೇ ಗೊತ್ತಿಲ್ಲ. ಅಂಕಿ ಅಂಶವನ್ನೇ ತಿಳಿಯದೇ ಅದರ ಬಗ್ಗೆ ಮಾತನಾಡುವುದು ಹೇಗೆ? ಈ ತಿಂಗಳೊಳಗೆ ವರದಿ ಕೊಡಬಹುದೇನೋ. ಸಿಕ್ಕ ನಂತರ ನೋಡೋಣ” ಎಂದಿದ್ದಾರೆ.
“ಈಶ್ವರಪ್ಪ ಸವಕಲು ನಾಣ್ಯ. ಆದ್ದರಿಂದಲೇ ಅವರಿಗೆ ಬಿಜೆಪಿಯವರು ಟಿಕೆಟ್ ಕೊಡಲಿಲ್ಲ. ಅವರ ಮಾತುಗಳಿಗೆ ಬೆಲೆಯೇ ಇಲ್ಲ. ವರದಿ ಮಂಡಿಸುವಂತೆ ನನ್ನೊಂದಿಗೆ ಅವರೂ ಒತ್ತಾಯ ಮಾಡಿದ್ದರಲ್ಲಾ? ಈಗ, ಅದನ್ನು ಸುಟ್ಟು ಹಾಕುತ್ತೇವೆ ಎಂದರೆ ಏನರ್ಥ?’ ಎಂದು ಪ್ರತಿಕ್ರಿಯಿಸಿದ್ದಾರೆ.
ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ (ಜಾತಿ ಗಣತಿ) ವರದಿಯನ್ನು ಸ್ವೀಕರಿಸಬೇಕು ಎಂಬ ಬೇಡಿಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಒಕ್ಕಲಿಗರ ಸಂಘ ಇತ್ತೀಚೆಗೆ ಸಭೆ ನಡೆಸಿತ್ತು. ಒಕ್ಕಲಿಗ ಸಮುದಾಯದ ಸ್ವಾಮೀಜಿಗಳು, ಶಾಸಕರು ಸಭೆಯಲ್ಲಿ ಪಾಲ್ಗೊಂಡು ವರದಿಯನ್ನು ಯಾವುದೇ ಕಾರಣಕ್ಕೆ ಒಪ್ಪದಿರುವ ತೀರ್ಮಾನಕ್ಕೆ ಬಂದಿದ್ದರು.
ಸಭೆಯಲ್ಲಿ ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ, ಪಟ್ಟನಾಯಕನಹಳ್ಳಿ ಮಠದ ನಂಜಾವಧೂತ ಸ್ವಾಮೀಜಿ, ವಿಶ್ವ ಒಕ್ಕಲಿಗರ ಮಹಾಸಂಸ್ಥಾನದ ಕುಮಾರ ಚಂದ್ರಶೇಖರನಾಥ ಸ್ವಾಮೀಜಿ, ಕೃಷಿ ಸಚಿವ ಎನ್. ಚಲುವರಾಯಸ್ವಾಮಿ, ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಶಾಸಕರಾದ ಡಾ.ಸಿ.ಎನ್.ಅಶ್ವತ್ಥನಾರಾಯಣ, ಎಂ.ಕೃಷ್ಣಪ್ಪ, ಎಸ್.ಟಿ.ಸೋಮಶೇಖರ್, ಎಚ್.ಟಿ. ಮಂಜು, ರವಿಕುಮಾರ್ ಗಣಿಗ, ಶರತ್ ಬಚ್ಚೇಗೌಡ, ಡಾ.ರಂಗನಾಥ್, ಡಾ.ಮಂಥರ್ ಗೌಡ, ಎಸ್. ರವಿ, ಅ.ದೇವೇಗೌಡ, ದಿನೇಶ್ ಗೂಳಿಗೌಡ ಪಾಲ್ಗೊಂಡಿದ್ದರು. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅಧ್ಯಕ್ಷತೆ ವಹಿಸಿದ್ದರು.
ನಂಜಾವಧೂತ ಸ್ವಾಮೀಜಿ ಮಾತನಾಡಿ, “ಜಾತಿ ಗಣತಿ ವರದಿಯನ್ನು ಸರ್ಕಾರ ಅನುಷ್ಠಾನ ಮಾಡುವ ಮುನ್ನ ನಮ್ಮ ಅಭಿಪ್ರಾಯ ಕೇಳಬೇಕು. ಸಮುದಾಯದ ಮೀಸಲಾತಿ ವಿಚಾರದ ಬಗ್ಗೆ ಸ್ಪಷ್ಟ ನಿಲುವು ಹೇಳಬೇಕು. ಶೇ 4 ರಿಂದ ಶೇ 16ಕ್ಕೆ ಮೀಸಲಾತಿ ಏರಿಕೆ ಮಾಡಬೇಕು ಎಂಬುದು ನಮ್ಮ ಆಗ್ರಹ” ಎಂದು ತಿಳಿಸಿದ್ದರು.
ಸಚಿವ ಎನ್. ಚಲುವರಾಯಸ್ವಾಮಿ ಮಾತನಾಡಿ, “ಜಾತಿ ಗಣತಿ ವರದಿ ಬಗ್ಗೆ ಸಮುದಾಯದ ಶ್ರಿಗಳು, ಮುಖಂಡರು ಚರ್ಚೆ ಮಾಡಿದ್ದಾರೆ. ವರದಿ ಸಿದ್ಧಪಡಿಸುವಲ್ಲಿ ಕೆಲವೊಂದು ಲೋಪ ಇವೆ. ಸಮುದಾಯದ ಅಭಿಪ್ರಾಯವನ್ನು ಮುಖ್ಯಮಂತ್ರಿಯವರ ಗಮನಕ್ಕೆ ತರುತ್ತೇವೆ” ಎಂದಿದ್ದರು.
ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷರಾದ ನಿರ್ಮಲಾನಂದನಾಥ ಸ್ವಾಮೀಜಿ ಮಾತನಾಡಿ, “ಕಾಂತರಾಜ ವರದಿ ಸ್ವೀಕಾರ ಮಾಡಲು ಸರ್ಕಾರ ತಯಾರಿ ನಡೆಸಿದೆ ಎಂಬ ಮಾಹಿತಿ ಇದೆ. ಸಭೆಯ ಮೂಲಕ ಈ ಬಗ್ಗೆ ಸರ್ಕಾರಕ್ಕೆ ಒಂದು ಸೌಜನ್ಯಯುತ ಮನವಿ ಮಾಡುತ್ತೇವೆ” ಎಂದು ಹೇಳಿದ್ದರು.
ಇದನ್ನೂ ಓದಿರಿ: ಛತ್ತೀಸ್ಗಡ: ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ, ಜಾತಿ ಗಣತಿಯ ಭರವಸೆ





