ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರವನ್ನು ಉಳಿಸಲು ನಾನು ಪ್ರಯತ್ನಿಸುತ್ತಿದ್ದಾಗ, ಬಿಜೆಪಿಯ ಹಿರಿಯ ನಾಯಕರೊಬ್ಬರು ನನಗೆ ಉಪಮುಖ್ಯಮಂತ್ರಿ ಹುದ್ದೆಯ ಆಮಿಷವೊಡ್ಡಿದ್ದರು. ಅದಕ್ಕೆ ಒಪ್ಪದಿದ್ದಲ್ಲಿ ಜೈಲಿಗೆ ಕಳುಹಿಸುವುದಾಗಿ ಬೆದರಿಸಿದ್ದರು. ಆದರೆ, ನಾನು ನನ್ನ ಪಕ್ಷದ ನಿಷ್ಠೆಗೆ ಬದ್ಧನಾಗಿ ಜೈಲನ್ನೇ ಆಯ್ದುಕೊಂಡೆ,” ಎಂದು ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಹೇಳಿದ್ದಾರೆ. ಈ ಮೂಲಕ ಮೊದಲ ಬಾರಿಗೆ ಬಿಜೆಪಿಯ ಡಿಸಿಎಂ ಆಫರ್ ಬಗ್ಗೆ ಬಾಯಿಬಿಟ್ಟಿದ್ದಾರೆ.
ನಗರದ ಎಫ್ಕೆಸಿಸಿಐ ಸಭಾಂಗಣದಲ್ಲಿ ಲೇಖಕ ಕೆ.ಎಂ. ರಘು ಅವರು ರಚಿಸಿದ ‘ಎ ಸಿಂಬಲ್ ಆಫ್ ಲಾಯಲ್ಟಿ ಡಿ.ಕೆ. ಶಿವಕುಮಾರ್’ ಕೃತಿಯನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು. “ಒಂದು ವೇಳೆ ಅಂದು ನಾನು ಡಿಸಿಎಂ ಸ್ಥಾನಕ್ಕೆ ಆಸೆಪಟ್ಟು ಹೋಗಿದ್ದರೆ, ರಾಜ್ಯದ ರಾಜಕೀಯ ಚಿತ್ರಣವೇ ಇಂದು ಸಂಪೂರ್ಣವಾಗಿ ಬದಲಾಗಿರುತ್ತಿತ್ತು,” ಎಂದು ಅವರು ಅಭಿಪ್ರಾಯಪಟ್ಟರು.
ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡರ ಕುಟುಂಬದ ವಿರುದ್ಧ ಸುಮಾರು ಮೂರು ದಶಕಗಳ ಕಾಲ ರಾಜಕೀಯವಾಗಿ ಹೋರಾಡಿದ್ದರೂ, 2018ರಲ್ಲಿ ಪಕ್ಷದ ನಾಯಕರ ಸೂಚನೆಯಂತೆ ಎಚ್.ಡಿ. ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರ ರಚನೆಗೆ ಶ್ರಮಿಸಿದ್ದಾಗಿ ಶಿವಕುಮಾರ್ ನೆನಪಿಸಿಕೊಂಡರು. “ನಾನು ಕುಮಾರಸ್ವಾಮಿಯವರ ಕೈ ಹಿಡಿದು ಮೇಲೆತ್ತುವ ಸಂದರ್ಭವೂ ಬಂತು. ಆದರೆ, ನಾನು ಜೈಲಿಗೆ ಹೋದಾಗ, ‘ನಾವೇನು ದುಡ್ಡು ಹೊಡಿ ಎಂದು ಹೇಳಿದ್ದೆವಾ?’ ಎಂದು ಅವರೇ ನನ್ನನ್ನು ಅಣಕಿಸಿದ್ದು ಬಹಳ ನೋವುಂಟುಮಾಡಿತು,” ಎಂದು ಬೇಸರ ವ್ಯಕ್ತಪಡಿಸಿದರು.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಕಾಂಗ್ರೆಸ್ಸಿನೊಳಗೊಂದು ಆರೆಸ್ಸೆಸ್ ಆನೆ ಅವಿತಿರುವ ದುರಂತ!
ಸೋಲು, ಗೆಲುವು ಹಾಗೂ ಟೀಕೆಗಳನ್ನು ಸಮಾನವಾಗಿ ಸ್ವೀಕರಿಸುವುದಾಗಿ ಹೇಳಿದ ಅವರು, “ನನ್ನ ವಿರೋಧಿಗಳು ಮಾಡುವ ಆರೋಪಗಳು ಅವರಿಗೆ ಸಂತೋಷ ಕೊಡುತ್ತದೆ ಎಂದಾದರೆ ಅದನ್ನು ನಾನು ಸ್ವಾಗತಿಸುತ್ತೇನೆ. ಹಳ್ಳಿಯಿಂದ ಬಂದ ನನ್ನನ್ನು ಈ ಮಟ್ಟಕ್ಕೆ ಬೆಳೆಸಿದ ನನ್ನ ಕ್ಷೇತ್ರದ ಹಾಗೂ ರಾಜ್ಯದ ಜನತೆಗೆ ನಾನು ಸದಾ ಆಭಾರಿಯಾಗಿದ್ದೇನೆ,” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಕನ್ನಡ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್.ಎನ್. ಮುಕುಂದರಾಜ್, “2023ರ ಚುನಾವಣೆಯಲ್ಲಿ 136 ಸ್ಥಾನ ಗೆಲ್ಲುವುದಾಗಿ ಹೇಳಿದ್ದ ಶಿವಕುಮಾರ್, ಅಂದೇ ಮುಖ್ಯಮಂತ್ರಿ ಆಗಬೇಕಿತ್ತು. ಆದರೆ, ಅವರು ಇಂದಲ್ಲ ನಾಳೆ ಖಂಡಿತವಾಗಿಯೂ ಸಿಎಂ ಆಗುತ್ತಾರೆ,” ಎಂದು ಭವಿಷ್ಯ ನುಡಿದರು.
ಇದೇ ವೇಳೆ, ಪ್ರೊ. ಭಕ್ತರಹಳ್ಳಿ ಕಾಮರಾಜ್ ಅವರು, “ಬೆಂಗಳೂರಿನ ರಸ್ತೆಗಳ ಬಗ್ಗೆ ಎಲ್ಲರೂ ದೂರುತ್ತಿದ್ದಾರೆ. ದಯವಿಟ್ಟು ನಗರವನ್ನು ಶೀಘ್ರವಾಗಿ ಸುಸ್ಥಿತಿಗೆ ತನ್ನಿ,” ಎಂದು ಡಿಕೆಶಿಯವರಲ್ಲಿ ಮನವಿ ಮಾಡಿದರು.
ಖ್ಯಾತ ಸಾಹಿತಿ ಚಂದ್ರಶೇಖರ ಕಂಬಾರ ಮಾತನಾಡಿ, “ಸಾಮಾನ್ಯವಾಗಿ ರಾಜಕಾರಣಿಗಳು ಮತ್ತು ಸಾಹಿತಿಗಳ ನಡುವೆ ಆತ್ಮೀಯತೆ ಬೆಳೆಯುವುದಿಲ್ಲ. ಆದರೆ, ಡಿ.ಕೆ. ಶಿವಕುಮಾರ್ ಅವರೊಂದಿಗೆ ಮುಕ್ತವಾಗಿ ಬೆರೆಯಲು ಇಷ್ಟವಾಗುತ್ತದೆ. ಅವರ ವ್ಯಕ್ತಿತ್ವವೇ ಬಹಳ ವಿಭಿನ್ನವಾದದ್ದು,” ಎಂದು ಶ್ಲಾಘಿಸಿದರು.
ಇದೇ ಸಂದರ್ಭದಲ್ಲಿ, ತಾವು ಬರೆದಿರುವ ಎರಡು ಪುಸ್ತಕಗಳ ಬಗ್ಗೆಯೂ ಶಿವಕುಮಾರ್ ಮಾಹಿತಿ ನೀಡಿದರು. “ಹಮೀದ್ ಪಾಳ್ಯ ಅವರ ಸಹಕಾರದೊಂದಿಗೆ ‘ನೀರಿನ ಹೆಜ್ಜೆ’ ಎಂಬ ಪುಸ್ತಕ ಬರೆದಿದ್ದೇನೆ. ಅದನ್ನು ನವೆಂಬರ್ 6ರಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬಿಡುಗಡೆ ಮಾಡಲಿದ್ದಾರೆ. ನಂತರ, ‘ಗಾಂಧಿ ಭಾರತ’ ಎಂಬ ಇನ್ನೊಂದು ಕೃತಿಯನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಂದ ಲೋಕಾರ್ಪಣೆಗೊಳಿಸುವ ಸಿದ್ಧತೆಯಲ್ಲಿದ್ದೇವೆ,” ಎಂದು ತಿಳಿಸಿದರು.





