ಸರ್ಕಾರ ಹಾದಿಯೂ ತಪ್ಪಿಲ್ಲ, ನಾನೂ ಅಸಹಾಯಕ ಮುಖ್ಯಮಂತ್ರಿಯೂ ಅಲ್ಲ. ಎರಡೂವರೆ ವರ್ಷದಲ್ಲಿ ಜನರಿಗೆ ಏನು ಹೇಳಿದ್ದೇವೋ ಅದನ್ನು ಮಾಡಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.
ವಿಧಾನಸಭೆಯಲ್ಲಿ ಇಂದು ರಾಜ್ಯಪಾಲರ ಭಾಷಣದ ವಂದನಾ ನಿರ್ಣಯ ಮೇಲಿನ ಚರ್ಚೆಗೆ ಉತ್ತರಿಸಿದ ಅವರು, ರಾಜ್ಯಪಾಲರು ಪೂರ್ಣ ಭಾಷಣ ಓದಿಲ್ಲ. ಮೊದಲ ಮೂರು ವಾಕ್ಯ ಹಾಗೂ ಕೊನೆಯ ವಾಕ್ಯವನ್ನು ಓದಿದರು. ಭಾಷಣದಲ್ಲಿ ಕೊನೆಗೆ ಜೈ ಸಂವಿಧಾನ ಅಂತನೂ ಉಲ್ಲೇಖಿಸಲಾಗಿತ್ತು. ಅದನ್ನು ಹೇಳದೆಯೇ ಆತುರ ಆತುರವಾಗಿ ಹೋದರು. ರಾಷ್ಟ್ರಗೀತೆ ಮುಗಿಯುವ ಮೊದಲೇ ಹೋದರು. ವಿಪಕ್ಷಗಳು ನನ್ನನ್ನು ಅಸಹಾಯಕ ಸಿಎಂ ಎಂದು ಟೀಕಿಸಿದ್ದಾರೆ. ಒಂದೊಂದು ಸಾರಿ ಅಸಹಾಯಕತೆಯನ್ನು ವ್ಯಕ್ತಪಡಿಸುವ ಪರಿಸ್ಥಿತಿ ನಿರ್ಮಾಣ ಆಗುತ್ತದೆ. ಅಸತ್ಯದ ಎದುರು ಸತ್ಯ ಅಸಹಾಯಕ ಆಗುತ್ತದೆ ಎಂದರು.
ನಮ್ಮ ಸಿದ್ಧಾಂತವೇ ಬೇರೆ, ವಿಪಕ್ಷಗಳ ಸಿದ್ಧಾಂತವೇ ಬೇರೆ. ನಾವು ಸಿದ್ಧಾಂತ ವಿರೋಧ ಮಾಡಬಹುದು. ಆದರೆ, ಸಂವಿಧಾನವನ್ನು ವಿರೋಧ ಮಾಡುವ ಹಾಗಿಲ್ಲ. ಅದನ್ನು ಎಲ್ಲರೂ ಒಪ್ಪಬೇಕು. ಸಂವಿಧಾನದಂತೆ ಸರ್ಕಾರ ನಡೆಯಬೇಕು. ರಾಜ್ಯಪಾಲರು ಮೂಲತಃ ಒಳ್ಳೆಯವರೇ. ಬಜೆಟ್ ಭಾಷಣದಲ್ಲಿ ಮನರೇಗಾ ರದ್ದು ಮಾಡಿ ಜಿ ರಾಮ್ ಜಿ ಕಾಯ್ದೆ ತರಲಾಗಿರುವ ಬಗ್ಗೆ ಉಲ್ಲೇಖಿಸಲಾಗಿದೆ. ಅದರಲ್ಲಿರುವ ರಾಮ ದಶರಥ ರಾಮನೂ ಅಲ್ಲ, ರಾಮಾಯಣದ ರಾಮನೂ ಅಲ್ಲ. ಸಿದ್ದರಾಮನೂ ಅಲ್ಲ. ಆರ್ಟಿಕಲ್ 176ರ ಪ್ರಕಾರ ರಾಜ್ಯಪಾಲರು ಭಾಷಣ ಓದಬೇಕಾಗಿತ್ತು. ಓದದೇ ಇರುವುದು ಸಂವಿಧಾನ ಬಾಹಿರ. ಗ್ರಾಮೀಣಾಭಿವೃದ್ಧಿಗೆ ಮನರೇಗಾ ಸಂಜೀವಿನಿ ಅಂತ ಕುಮಾರಸ್ವಾಮಿ ಅವರು ಸಿಎಂ ಆಗಿದ್ದಾಗ ಹೇಳಿದ್ದರು. ಈಗ ಇದ್ದಕ್ಕಿದ್ದ ಹಾಗೆ ವಿರೋಧ ಮಾಡುತ್ತಿದ್ದಾರೆ ಎಂದು ಟೀಕಿಸಿದರು.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ| ₹100 ತೆರಿಗೆಯಲ್ಲಿ ₹5 ಕೂಡ ವಾಪಸು ಸಿಗ್ತಿಲ್ಲ; ರಾಜ್ಯಕ್ಕೆ ಮೋದಿ ಮುಂದುವರೆಸಿದ ಅಗಾಧ ಅನ್ಯಾಯ!
ಇದರ ಜತೆಗೆ, 2022ರಿಂದ ಪ್ರತಿ ವರ್ಷ ರಾಜ್ಯಕ್ಕೆ 18ರಿಂದ 20 ಸಾವಿರ ಕೋಟಿ ರೂ.ಗಳಷ್ಟು ಜಿಎಸ್ಟಿ ಪರಿಹಾರ ನಷ್ಟವಾಗಿದೆ. 4 ವರ್ಷಗಳಲ್ಲಿ 75ರಿಂದ 80 ಸಾವಿರ ಕೋಟಿ ಇದೊಂದೇ ಬಾಬತ್ತಿನಲ್ಲಿ ನಷ್ಟವಾಗಿದೆ. 2020ರಿಂದ 2025 ರವರೆಗೆ 2,00,000 ಕೋಟಿ ರೂ.ಗಳಷ್ಟು ರಾಜ್ಯಕ್ಕೆ ನಷ್ಟವಾಗಿದೆ. ಜಿಎಸ್ಟಿ ಪರಿಹಾರದ ಸೆಸ್ಸನ್ನು ಕೇಂದ್ರದವರು ಜನರಿಂದ ಸಂಗ್ರಹಿಸುವುದನ್ನು ನಿಲ್ಲಿಸಿದ್ದರೆ ಒಪ್ಪುತ್ತಿದ್ದೆ. 2025-26ರಲ್ಲಿ 1,67,000 ಕೋಟಿ ರೂಗಳಷ್ಟು ಸೆಸ್ಸನ್ನು ಸಂಗ್ರಹಿಸಿದ್ದಾರೆ. ಈ ವರ್ಷ ಎಲ್ಲಾ ಸೆಸ್, ಸರ್ ಚಾರ್ಜ್ ಮುಂತಾದವು ಸೇರಿ 6 ಲಕ್ಷ ಕೋಟಿ ರೂ ಸಂಗ್ರಹಿಸುತ್ತಿದ್ದಾರೆ ಎಂದರು.
16ನೇ ಹಣಕಾಸು ಆಯೋಗದ ಶಿಫಾರಸುಗಳನ್ನು ಕೇಂದ್ರ ಸರ್ಕಾರ ಒಪ್ಪಿಕೊಂಡಿದೆ. ಆದರೆ ಆಯೋಗದ ಶಿಫಾರಸುಗಳಿಂದಲೂ ನಮಗೆ ಸಿಗಬೇಕಾದ ನ್ಯಾಯ ಸಿಕ್ಕಿಲ್ಲ. 14ನೇ ಹಣಕಾಸು ಆಯೋಗವು ನಮಗೆ ಶೇ.4.71ರಷ್ಟು ತೆರಿಗೆ ಹಂಚಿಕೆ ಮಾಡಿತ್ತು. ಅದಕ್ಕಿಂತ ಹೆಚ್ಚಿನ ಅನುದಾನ ಸಿಕ್ಕರೆ ಮಾತ್ರ ನಮಗೆ ನ್ಯಾಯ ದೊರೆಯುತ್ತದೆಂದು ಹೇಳಿದ್ದೆವು. ಆದರೆ, 16ನೇ ಹಣಕಾಸು ಆಯೋಗ ಶೇ.4.13ರಷ್ಟನ್ನು ಮಾತ್ರ ಶಿಫಾರಸ್ಸು ಮಾಡಿದೆ. ತೆರಿಗೆ ಪಾಲನ್ನು ಶೇ.50ಕ್ಕೆ ಏರಿಸಿ ಎಂದು ಕೇಳಿದ್ದೆವು. ಆದರೆ ಶೇ.41ರಷ್ಟೇ ಕೊಟ್ಟಿದೆ. ಇದರಿಂದಲೂ ನಮಗೆ 14ನೇ ಹಣಕಾಸು ಆಯೋಗದ ಶಿಫಾರಸಿಗೆ ಹೋಲಿಸಿದರೆ ಶೇ.14.1ರಷ್ಟು ಕಡಿಮೆಯಾಗುತ್ತದೆ ಎಂದು ವಿವರಿಸಿದರು.





