ಫೆಬ್ರವರಿ 06, 07 ಮತ್ತು 08ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ʼಅಂತರರಾಷ್ಟ್ರೀಯ ವಾಣಿಜ್ಯ ಮೇಳ-2026; ಉತ್ಪಾದನೋತ್ತರ ಕೃಷಿ-ರೈತರ ಸಬಲೀಕರಣʼವನ್ನು ಆಯೋಜನೆ ಮಾಡಲಾಗಿದೆ. ಅದರಲ್ಲಿ120 ಮಂದಿಗೆ ಕೃಷಿ ಪ್ರಶಸ್ತಿಗಳನ್ನು ನೀಡಲಾಗುವುದು ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದರು.
ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ”ಈ ಬಾರಿಯ ಮೇಳ ʼಸಾವಯವ ಸಿರಿ ಧಾನ್ಯʼವನ್ನು ಹೆಚ್ಚು ಪ್ರಚಾರ ಮಾಡುವುದು ಹಾಗೂ ಸಾವಯವ ಸಿರಿ ಧಾನ್ಯಗಳ ಸಂಸ್ಕರಣೆ ಮತ್ತು ಮೌಲ್ಯವರ್ಧನೆ, ಕೃಷಿ-ಪರಿಸರ ವಿಜ್ಞಾನ, ಬ್ರಾಂಡಿಂಗ್ ಮತ್ತು ಸಾಲ ಸೌಲಭ್ಯ ಎಂಬ ಪ್ರಮುಖ ಉಪಕಲ್ಪನೆಗಳ ಮೇಲೆ ಕೇಂದ್ರೀಕರಿಸಲಿದೆ. ಸಣ್ಣ ಮಟ್ಟದ ಆಹಾರ ಸಂಸ್ಕರಣಾದಾರರು, ರೈತ ಗುಂಪುಗಳು, ಸ್ವಸಹಾಯ ಗುಂಪುಗಳು ಹಾಗೂ ರೈತ ಉತ್ಪಾದಕ ಸಂಸ್ಥೆಗಳ (FPOS) ನಡುವೆ ಜಾಗೃತಿ ಮೂಡಿಸುವುದು ಮತ್ತು ರಾಜ್ಯದ ರೈತರನ್ನು ಉದ್ಯಮಿಗಳಾಗಿ ರೂಪಿಸುವುದಕ್ಕೆ ಸೂಕ್ತ ವೇದಿಕೆಯನ್ನು ಒದಗಿಸುವುದೇ ಈ ಮೇಳದ ಪ್ರಮುಖ ಉದ್ದೇಶವಾಗಿದೆ” ಎಂದರು.
“ಕೃಷಿ ಉತ್ಪನ್ನಗಳ ಉತ್ಪಾದಕತೆಯಲ್ಲಿ ಭಾರತವು ಗಮನಾರ್ಹ ಪ್ರಗತಿ ಸಾಧಿಸಿದ್ದರೂ, ಅನೇಕ ರೈತರು ಕೊಯ್ಲಿನ ನಂತರ ನಷ್ಟ ಅನುಭವಿಸುತ್ತಾರೆ. ಸೀಮಿತ ಮಾರುಕಟ್ಟೆ ಪ್ರವೇಶ, ಸಮರ್ಪಕ ಬ್ರಾಂಡಿಂಗ್ ಕೊರತೆ ಮತ್ತು ಪರ್ಯಾಯ ಸಾಲ ಸೌಲಭ್ಯಗಳ ಅಭಾವದಂತಹ ಸವಾಲುಗಳನ್ನು ಎದುರಿಸುತ್ತಿದ್ದಾರೆ. ಈ ಸವಾಲುಗಳನ್ನು ಸಮರ್ಥವಾಗಿ ನಿರ್ವಹಿಸುವಲ್ಲಿ ರೈತರನ್ನು ಪ್ರಾಥಮಿಕ ಉತ್ಪಾದಕರಿಂದ ಯಶಸ್ವಿ ಕೃಷಿ ಉದ್ಯಮಿಗಳಾಗಿ ರೂಪಾಂತರಿಸಿ ಸುಸ್ಥಿರ ಗ್ರಾಮೀಣ ಅಭಿವೃದ್ಧಿಗಾಗಿ ಹೊಸ ಆರ್ಥಿಕ ಅವಕಾಶಗಳಿಗೆ ಒತ್ತು ನೀಡುವ ಅವಶ್ಯಕತೆ ಇದೆ” ಎಂದು ಹೇಳಿದರು.
“2017ರಿಂದ ಆರಂಭವಾದ ಮೇಳವನ್ನು ಕೋವಿಡ್ ಸಂದರ್ಭದಲ್ಲಿ ಸ್ಥಗಿತಗೊಳಿಸಲಾಗಿತ್ತು. 2026ನೇ ಸಾಲಿನಲ್ಲಿ ಆಯೋಜಿಸುತ್ತಿರುವ ಅಂತರರಾಷ್ಟ್ರೀಯ ಮೇಳದಲ್ಲಿ ವಿದೇಶದವರು, 25ಕ್ಕೂ ಹೆಚ್ಚು ರಾಜ್ಯದ ರಾಜಕಾರಣಿಗಳು ಹಾಗೂ ಮಂತ್ರಿಗಳು, ಕೃಷಿ ತಜ್ಞರು, ವಿಶ್ವವಿದ್ಯಾಲಯದ ಪ್ರಾಧ್ಯಪಕರು, ವಿದ್ಯಾರ್ಥಿಗಳು, ರೈತರು ಸೇರಿದಂತೆ ಅನೇಕ ಕೃಷಿ ಆಸಕ್ತರು ಭಾಗವಹಿಸಲಿದ್ದಾರೆ” ಎಂದು ತಿಳಿಸಿದರು.
“ಕೃಷಿ ಕ್ಷೇತ್ರದಲ್ಲಿ ಅನನ್ಯ ಸಾಧನೆ ಮಾಡಿದ 104 ಸಾಧಕರಿಗೆ ಕೃಷಿ ಪ್ರಶಸ್ತಿ ಹಾಗೂ 18 ಸಾಧಕರಿಗೆ ಕೃಷಿ ಪಂಡಿತ್ ಪ್ರಶಸ್ತಿಯನ್ನು ಕೊಡಲಾಗುವುದು. ಕಳೆದ ವರ್ಷದ ಮೇಳದಲ್ಲಿ 3 ಲಕ್ಷಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು. ಈ ಬಾರಿ ನಿರೀಕ್ಷೆ ಜಾಸ್ತಿ ಇದೆ. ಜೊತೆಗೆ ಮೇಳದಲ್ಲಿ 250ಕ್ಕೂ ಹೆಚ್ಚು ಸಿರಿಧಾನ್ಯಕ್ಕೆ ಸಂಬಂಧಿಸಿದ ಸ್ಟಾಲ್ಗಳನ್ನು ತೆರೆಯಲಾಗುವುದು” ಎಂದು ಹೇಳಿದರು.
06ನೇ ಫೆಬ್ರವರಿ 2026 ರಂದು ಮೇಳವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಉದ್ಘಾಟಿಸಲಿದ್ದಾರೆ. ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಅಧ್ಯಕ್ಷತೆ ವಹಿಸಿದ್ದು, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಕೇಂದ್ರ ರಾಜ್ಯ ಖಾತೆ ಸಚಿವರಾದ ಶೋಭಾ ಕರಂದ್ಲಾಜೆ, ಸಾರಿಗೆ ಸಚಿವರ ರಾಮಲಿಂಗರೆಡ್ಡಿ, ಕಂದಾಯ ಸಚಿವ ಕೃಷ್ಣ ಬೈರೇಗೌಡ, ಜನಳಿ ಮತ್ತು ಸಕ್ಕರೆ ಸಚಿವ ಶಿವಾನಂದ ಪಾಟೀಲ, ತೋಟಗಾರಿಕೆ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್, ಪಶುಸಂಗೋಪನೆ ಸಚಿವ ಕೆ.ವೆಂಕಟೇಶ್, ವಿಪಕ್ಷ ನಾಯಕ ಆರ್ ಅಶೋಕ್, ವಿಧಾನ ಪರಿಷತ್ತು ವಿಪಕ್ಷ ನಾಯಕ ಛಲವಾದಿ ಟಿ ನಾರಾಯಣಸ್ವಾಮಿ ಹಾಗೂ ಶಾಸಕರಾದ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು ಭಾಗವಹಿಸಲಿದ್ದಾರೆ.





