“ಕೋಲಾರದಲ್ಲಿ ಕಾಂಗ್ರೆಸ್ ಯಾರಿಗೆ ಟಿಕೆಟ್ ನೀಡಿದರೂ ಅವರ ಪರವಾಗಿ ಕೆಲಸ ಮಾಡುತ್ತೇವೆ. ಕಾಂಗ್ರೆಸ್ಗೆ ಬೆಂಬಲ ನೀಡಿ” ಎಂದು ಬಂಗಾರಪೇಟೆ ಶಾಸಕ ಎಸ್ಎನ್ ನಾರಾಯಣಸ್ವಾಮಿ ಕಣ್ಣೀರು ಹಾಕುತ್ತಾ ಮನವಿ ಮಾಡಿದ್ದಾರೆ.
ಲೋಕಸಭೆ ಚುನಾವಣೆ ಹಿನ್ನಲೆ ಕೋಲಾರ ಜಿಲ್ಲೆಯ ಬಂಗಾರಪೇಟೆಯಲ್ಲಿ ಹಿರಿಯ ಶಾಸಕ ನಾರಾಯಣಸ್ವಾಮಿ ನೇತೃತ್ವದಲ್ಲಿ ಭಾನುವಾರ ಸಭೆ ನಡೆಯಿತು.
ಸಭೆಯಲ್ಲಿ ಮಾತನಾಡಿದ ಅವರು, “ಬಲಗೈ ಸಮಾಜದ ಸಿಎಂ ಮುನಿಯಪ್ಪ ಅವರಿಗೆ ಟಿಕೆಟ್ ನೀಡಲು ಬೇಡಿಕೆ ಇಟ್ಟಿದ್ದೇವೆ. ಇಲ್ಲವಾದರೇ, ಯಾರಿಗೆ ಟಿಕೆಟ್ ನೀಡಿದರೂ ನಾವು ಅವರ ಪರವಾಗಿ ಕೆಲಸ ಮಾಡುತ್ತೇವೆ. ಕಾರ್ಯಕರ್ತರು ಕೂಡ ಪಕ್ಷ ಯಾರಿಗೆ ಟಿಕೆಟ್ ಕೊಟ್ಟರು ಕೆಲಸ ಮಾಡಿ. ಯಾರೂ ಮೈಮರೆಯಬೇಡಿ. ದಯವಿಟ್ಟು ಕೋಲಾರದಲ್ಲಿ ಕಾಂಗ್ರೆಸ್ ಬೆಂಬಲಿಸಿ” ಎಂದರು.
“ಕಳೆದ 5 ವರ್ಷದಲ್ಲಿ ಬಿಜೆಪಿ ಸಂಸದರಿಂದ ಭಾರೀ ನೋವು ಅನುಭವಿಸಿದ್ದೇನೆ. ವ್ಯಾಪಾರ, ವಹಿವಾಟು ಸೇರಿ 100 ಕೋಟಿ ನಷ್ಟವಾಗಿದೆ” ಎಂದರು.
ಈ ಸುದ್ದಿ ಓದಿದ್ದೀರಾ? ಬಿಜೆಪಿ ಜೊತೆ ಕೆಆರ್ಪಿಪಿ ವಿಲೀನ; ಸೋಮವಾರ ಜನಾರ್ದನ ರೆಡ್ಡಿ ಬಿಜೆಪಿಗೆ ಸೇರ್ಪಡೆ
“ಲೋಕಸಭೆ ಚುನಾವಣೆ ಹಿನ್ನಲೆ ನನ್ನ ಮಗಳ ಮದುವೆಯನ್ನು ಮುಂದೂಡಿದ್ದೇನೆ. ಕಾಂಗ್ರೆಸ್ ಪಕ್ಷದ ಗೆಲುವಿಗಾಗಿ ಅದು ನನ್ನ ಬದ್ಧತೆ ಇದಾಗಿದೆ” ಎಂದು ತಿಳಿಸಿದರು.
ಸದ್ಯ ಕೋಲಾರದಲ್ಲಿ ಕಾಂಗ್ರೆಸ್ ಟಿಕೆಟ್ಗಾಗಿ ಜಟಾಪಟಿ ನಡೆದಿದೆ. ಒಂದೆಡೆ ಸಚಿವ ಕೆಎಚ್ ಮುನಿಯಪ್ಪ ಅಳಿಯ ಚಿಕ್ಕಪೆದ್ದಣ್ಣಗೆ ಟಿಕೆಟ್ ನೀಡುವಂತೆ ಪಟ್ಟು ಹಿಡಿದಿದೆ. ಇತ್ತಕಡೆ, ಮಾಜಿ ಸ್ಪೀಕರ್ ರಮೇಶ್ ಕುಮಾರ್ ಬಣ ಅವರಿಗೆ ಟಿಕೆಟ್ ನೀಡಿದರೆ ಕೆಲಸವೇ ಮಾಡುವುದಿಲ್ಲ ಎಂದು ಹೇಳಿದೆ.




