ಭಾಷೆ ಎನ್ನುವುದು ಒಂದು ಜನಾಂಗದ ಸಕಲ ಸರ್ವಸ್ವದ ಪ್ರತೀಕ ಎಂದಿದ್ದ ಕುವೆಂಪು

Date:

ಕನ್ನಡದ ಕಡೆಗೆ ಬರುವುದೆಂದರೆ ಜಾತಿ ಧರ್ಮದ ಭೇದವಾದಗಳ ವಿರುದ್ಧ ನಿಲ್ಲುವುದು ಎಂದು ಅರ್ಥ. ತೇಜಸ್ವಿಯವರ ವಿಶ್ಲೇಷಣೆಯು ಕುವೆಂಪು ಪ್ರಜ್ಞೆ, ಕನ್ನಡ ಮತ್ತು ಜಾತ್ಯತೀತತೆ ಎರಡನ್ನೂ ಸಮಾನ ಆಸ್ಥೆಯ ಅಥವಾ ಧ್ಯೇಯದ ಸಂಗತಿಗಳಾಗಿ ಸ್ವೀಕರಿಸಿರುವ ಅಸಾಧಾರಣ ನೋಟದತ್ತ ನಮ್ಮ ಗಮನ ಸೆಳೆಯುತ್ತದೆ.

ಪೂರ್ಣಚಂದ್ರ ತೇಜಸ್ವಿಯವರು ತಮ್ಮ ‘ಅಣ್ಣನ ನೆನಪು’ ಪುಸ್ತಕದಲ್ಲಿ ಕುವೆಂಪು ಅವರ ಬಗೆಗೆ ಒಂದು ಅಪರೂಪದ ನೋಟವನ್ನು ನೀಡಿದ್ದಾರೆ.

”ಅಣ್ಣನ ಕನ್ನಡದ ಬಗ್ಗೆಯ ಅಭಿಮಾನ ಮತ್ತು ಜಾತಿ ಧರ್ಮಗಳ ಬಗೆಗಿನ ಸಿಟ್ಟು ಇವೆಲ್ಲದರ ಅಂತಃಸ್ಸತ್ವ ಒಂದೇ ಮೂಲದಿಂದ ಉದ್ಭವಿಸಿದ್ದು ಎಂದು ಹೇಳಬಹುದು. ಭಾಷೆ ಎಂದರೆ ಅವರಿಗೆ ಆ ಭಾಷೆಯನ್ನು ಮಾತಾಡುವ ಇಡೀ ಜನಪದದ ಸಂಕೇತ. ಬಹುಶಃ ಅವರ ಓರಗೆಯ ಪ್ರಸಿದ್ಧ ಲೇಖಕರೆಲ್ಲ ಬ್ರಾಹ್ಮಣರಾಗಿದ್ದರಿಂದ ಭಾಷೆಯ ಬಗ್ಗೆ ಅಣ್ಣನಂತೆ ಆಳವಾದ ನೆಲೆಯಿಂದ ಕಾಳಜಿ ವಹಿಸಲಾಗಲಿಲ್ಲ. ಮಾಸ್ತಿಯವರಂತೆ ಹಿಂದೂಧರ್ಮದ ಜಾತಿಪದ್ಧತಿಯಲ್ಲಿ ನಂಬಿಕೆ ಇರುವವರು, ತಮ್ಮ ಜನರಲ್ಲೇ ಮೇಲುಕೀಳುಗಳಿದ್ದಾವೆಂದು ಸೈದ್ಧಾಂತಿಕವಾಗಿ ಒಪ್ಪುವವರು ಭಾಷೆಯನ್ನು ತನ್ನ ಅಭಿವ್ಯಕ್ತಿ ಮಾಧ್ಯಮವೆಂದು ಮಾತ್ರ ಒಪ್ಪುತ್ತಾರೆಯೇ ಹೊರತು ಅದು ಆ ಜನಾಂಗದ ಸಕಲ ಸರ್ವಸ್ವದ ಪ್ರತೀಕ ಎಂದು ಒಪ್ಪುವುದು ಕಷ್ಟ.”(ಅಣ್ಣನ ನೆನಪು, ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಪುಟ: 172, ಪುಸ್ತಕ ಪ್ರಕಾಶನ, ಮೈಸೂರು, 1999).

ನಮ್ಮ ಕಾಲದ ಸಮಾಜ ಎದುರಿಸಿದ, ಎದುರಿಸಬೇಕಾದ ಎರಡು ಬಹುಮುಖ್ಯ ಸವಾಲುಗಳತ್ತ ತೇಜಸ್ವಿಯವರು ಇಲ್ಲಿ ಗಮನ ಸೆಳೆದಿದ್ದಾರೆ. ಒಂದು, ಭಾಷೆಯನ್ನು(ಕನ್ನಡವನ್ನು) ಕುರಿತದ್ದಾದರೆ; ಇನ್ನೊಂದು,  ಜಾತ್ಯತೀತತೆಯದು(ತೇಜಸ್ವಿಯವರ ಮಾತುಗಳಲ್ಲಿ ಅದು ಜಾತಿ ಧರ್ಮಗಳ ಕುರಿತ ಸಿಟ್ಟು ಎಂಬ ಪದಕಟ್ಟಿನಲ್ಲಿ ಹೇಳಲ್ಪಟ್ಟಿದೆ). ಈ ಎರಡೂ ಸಂಗತಿಗಳೂ ಸಹ ಎರಡು ಮೌಲ್ಯಗಳಾಗಿ ಎರಡು ಧ್ಯೇಯಗಳಾಗಿ, ಸವಾಲುಗಳಾಗಿ ಜನಸಾಮಾನ್ಯರಾದ ನಮ್ಮೆದುರು ಸ್ವೀಕಾರದ ಸವಾಲೊಡ್ಡಿ ಆಹ್ವಾನಿಸುವ ಭಂಗಿಯಲ್ಲಿ ನಿಲ್ಲುತ್ತವೆ. ಕನ್ನಡದ ಕಡೆಗೆ ಬರುವುದೆಂದರೆ ಜಾತಿ ಧರ್ಮದ ಭೇದವಾದಗಳ ವಿರುದ್ಧ ನಿಲ್ಲುವುದು ಎಂದು ಅರ್ಥ. ತೇಜಸ್ವಿಯವರ ವಿಶ್ಲೇಷಣೆಯು ಕುವೆಂಪು ಪ್ರಜ್ಞೆ, ಕನ್ನಡ ಮತ್ತು ಜಾತ್ಯತೀತತೆ ಎರಡನ್ನೂ ಸಮಾನ ಆಸ್ಥೆಯ ಅಥವಾ ಧ್ಯೇಯದ ಸಂಗತಿಗಳಾಗಿ ಸ್ವೀಕರಿಸಿರುವ ಅಸಾಧಾರಣ ನೋಟದತ್ತ ನಮ್ಮ ಗಮನ ಸೆಳೆಯುತ್ತದೆ. ಈ ಧ್ಯೇಯದ್ವಯದಲ್ಲಿ ಕನ್ನಡವೆಂಬುದು ಕುವೆಂಪು ಅವರಿಗೆ ಲೌಕಿಕ ಉನ್ನತಿಗಾಗಿನ ಸಮಸ್ತ ಸಂಗತಿಗಳ ಸಾಧನವಾದರೆ ಅವರ ಮತ್ತೊಂದು ಆಸ್ಥಾ ಕೇಂದ್ರವಾದ ‘ಜಾತಿ ಧರ್ಮಗಳ ಕುರಿತ ಸಿಟ್ಟು’ ಅವರ ವಿಶ್ವಮಾನವ ಸಂದೇಶವನ್ನು ಸೃಜಿಸಿರುವ ಅನಿಕೇತನ ಪ್ರಜ್ಞೆಯಿಂದ ಸ್ಫೋಟಿಸಿದ್ದಾಗಿದೆ. ಅವರ ಕನ್ನಡತ್ವಕ್ಕಾಗಿನ ಚಿಂತನೆ, ಆಗ್ರಹಗಳ ನೋಟ ಲೌಕಿಕ ನೆಲೆಯದಾದರೆ, ಜಾತಿ ಧರ್ಮಗಳ ಕುರಿತ ಸಿಟ್ಟು, ಆಧ್ಯಾತ್ಮಿಕ ಆಯಾಮದ್ದು. ಕನ್ನಡದ ನೆಲೆಯಿಂದ ಅಥವಾ ನೆಲದಿಂದ ಅನಿಕೇತನದ ವಿಶ್ವಪ್ರಜ್ಞೆಯತ್ತ ಚಿಮ್ಮುವ ಮಹತ್ವಾಕಾಂಕ್ಷೆ ಅದರದ್ದು. ವಿಘಟನಕಾರಿಯಾದ ಜಾತಿ ಧರ್ಮಗಳು, ಅಧ್ಯಾತ್ಮದ ವೈಯಕ್ತೀಕರಣದ ಶತ್ರುಗಳು ಎಂದು ಕುವೆಂಪು ತಿಳಿಯುತ್ತಾರೆ. ‘ಅಧ್ಯಾತ್ಮದ ವೈಯಕ್ತೀಕರಣ’ ಎಂಬುದು ಕುವೆಂಪು ಅವರೇ ಠಂಕಿಸಿದ ನುಡಿಗಟ್ಟು. ಕುವೆಂಪು ಅವರ ದೃಷ್ಟಿಯಲ್ಲಿ ಕನ್ನಡ ಮತ್ತು ಅನಿಕೇತನ ಪ್ರಜ್ಞೆ ಎಂಬುವು ಅಪ್ರತ್ಯೇಕವಾದವು. ಈ ಕಾರಣದಿಂದಲೇ ಅವರು ಕನ್ನಡದ ಬಗ್ಗೆ ಬರೆವಾಗಲೂ-

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

”ಕ್ಷಯಿಸೆ ಶಿವೇತರ ಕೃತಿ ಕೃತಿಯಲ್ಲಿ
ಮೂಡಲಿ ಮಂಗಳ ಮತಿಮತಿಯಲ್ಲಿ” ಎಂಬ ಹಂಬಲವನ್ನು ಒರೆಯುತ್ತಾರೆ.

ಅಥವಾ

ಅಖಂಡ ಕರ್ಣಾಟಕ:
ಸರಸ್ವತಿಯೆ ರಚಿಸಿದೊಂದರಾಜಕೀಯ ತ್ರೋಟಕ!
ಮೆರೆಯಲಾತ್ಮ ಸಂಸ್ಕೃತಿ
ಬೆಳಗೆ ಜೀವ ಧೀದಿತಿ

ಎಂದು ಕನ್ನಡದ ಉದ್ದೇಶವನ್ನು ಹಾಡುತ್ತಾರೆ.

ಅಥವಾ ವ್ಯಗ್ರರಾಗಿ-

ಕರ್ಣಾಟಕ ಎಂಬುದೇನು
ಹೆಸರೆ ಬರಿಯ ಮಣ್ಣಿಗೆ?
ಮಂತ್ರ ಕಣಾ! ಶಕ್ತಿ ಕಣಾ!
ತಾಯಿ ಕಣಾ! ದೇವಿ ಕಣಾ!
ಬೆಂಕಿ ಕಣಾ! ಸಿಡಿಲು ಕಣಾ!

ಎಂದು ಸ್ಪೋಟಿಸುತ್ತಾರೆ.

ಮಾನವ ಅಸ್ತಿತ್ವವನ್ನು ವಿವರಿಸುವಾಗ ದೇಹಾತ್ಮ ಅಥವಾ ದೇಹ ಪ್ರಾಣಗಳ, ಏಕತ್ರವಾದ ಚೈತನ್ಯ ಎಂದು ನೋಡುತ್ತೇವಲ್ಲ ಹಾಗೆ. ಮತ್ತೂ ಖಚಿತವಾಗಿ ನೋಡಿದರೆ ಕನ್ನಡ ಮತ್ತು ಅಧ್ಯಾತ್ಮಗಳೆರಡೂ ಕುವೆಂಪು ಅವರಲ್ಲಿ ಶುದ್ಧ ಲೌಕಿಕ ಸ್ವರೂಪಿಯಾದವು. ಕುವೆಂಪು ಅವರ ಈ ಅದ್ವಯ ದೃಷ್ಟಿ ಅವರ ವಿಶ್ವಮಾನವ ಸಂದೇಶದ ವಿವರಗಳನ್ನೂ, ಕನ್ನಡದ ಬಗೆಗಿನ ಅವರ ನೋಟಗಳೆರಡನ್ನೂ ಜೊತೆಗಿಟ್ಟು ನೋಡಿದರೆ ಸ್ಪಷ್ಟವಾಗುತ್ತದೆ.

ಇದನ್ನು ಓದಿದ್ದೀರಾ?: ಕುವೆಂಪು ಪಂಚ ಮಂತ್ರಗಳಲ್ಲಿದೆ ಪ್ರಜಾಸತ್ತೆ ಕ್ರಾಂತಿ

ಕುವೆಂಪು ಅವರ ಈ ಸಾಲುಗಳನ್ನು ನೋಡಬಹುದು:

”ಈ ಪೃಥ್ವೀ ತತ್ವದಲ್ಲಿ ಅನ್ನಮಯ ಕ್ಷೇಮವೇ ಉಳಿದೆಲ್ಲ ಅಭ್ಯುದಯಗಳಿಗೂ ಆಧಾರಭೂತವಾಗಿರುತ್ತದೆ. ಆ ಮೂಲಭೂತವಾದ ಕ್ಷೇಮ ಸಾಧನೆಗಾಗಿಯೇ ಕನ್ನಡ ಜನತೆ ಕರ್ಣಾಟಕ ರಾಜ್ಯ ರಚನೆಗಾಗಿ ಹಾತೊರೆದದ್ದು ಅದರ ರಚನೆಗೆ ಭಂಗ ತರುವಂತಹ ವಿನಾಶಕ ಶಕ್ತಿಗಳು ಹೆಡೆಯೆತ್ತಿದಾಗ ಕೆರಳಿದ ಜನತೆ-

ದೀಕ್ಷೆಯ ತೊಡು ಇಂದೇ
ಕಂಕಣ ಕಟ್ಟಿಂದೇ
ಕನ್ನಡ ನಾಡೊಂದೇ
ಇನ್ನೆಂದೂ ತಾನೊಂದೇ!

ಎಂದು ಮೊದಲಾಗಿ ದೀಕ್ಷೆ ತೊಟ್ಟಿತು, ಕಂಕಣ ಕಟ್ಟಿತು; ದೃಢ ಮನಸ್ಸಿನಿಂದ ವರ್ತಿಸಿತು, ತನ್ನ ಇಚ್ಛೆ ಕ್ರಿಯೆಯಾಗುವಂತೆ!”(ಸಂಸ್ಕೃತಿ ಕರ್ನಾಟಕ, ಕುವೆಂಪು ಸಮಗ್ರಗದ್ಯ, ಸಂಪುಟ 2, ಪುಟ: 145-46).

(ಕುವೆಂಪು ಕಲ್ಪಿಸಿದ ಕನ್ನಡ ಜಗತ್ತು ಕೃತಿಯಿಂದ ಆಯ್ದ ಭಾಗ)

k p nararaj
ಕೆ ಪಿ ನಟರಾಜ್‌
+ posts

ಲೇಖಕ

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!

ಹೀಗೆ ಮೋದಿ ಸರ್ಕಾರವನ್ನು ವಿರೋಧಿಸಿದವರ ಖಾತೆಗಳು ಸಾಮಾಜಿಕ ಮಾಧ್ಯಮಗಳಿಂದ ಅಳಿಸಿ ಕೊನೆಗೆ...

ರಾಜ್ಯದಲ್ಲಿ ʼಎಸ್‌ಐಆರ್ʼ ಪ್ರಕ್ರಿಯೆಯನ್ನು ತರಾತುರಿಯಲ್ಲಿ ನಡೆಸಬೇಡಿ- ಪ್ರಗತಿಪರ ಸಂಘಟನೆ, ಜಾತ್ಯತೀತ ಪಕ್ಷಗಳ ಆಗ್ರಹ

ಕೇಂದ್ರ ಚುನಾವಣಾ ಆಯೋಗ ನಡೆಸುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಎಂಬುದು...