“ಮಹಾದೇವಪ್ಪನವರೇ ನೀವೊಬ್ಬ ಅಪ್ಪಟ ಜಾತಿವಾಗಿ, ಸುಳ್ಳುಗಾರ ಢೋಂಗಿ ರಾಜಕಾರಣಿ. ಬಾಬಾ ಸಾಹೇಬರ ಹೆಸರು ನಿಮ್ಮಂಥವರ ಬಾಯಲ್ಲಿ ಬಾರಬಾರದು. ನಮ್ಮಂತಹ ವಂಚಿತ ಸಮುದಾಯಗಳಿಗೆ ಮತ್ತಷ್ಟು ವಂಚನೆ ಮಾಡಿದ್ದೀರಿ” ಎಂದು ಕರ್ನಾಟಕ ಅಸ್ಪೃಶ್ಯ ಅಲೆಮಾರಿ ಸಮುದಾಯಗಳ ಮಹಾಒಕ್ಕೂಟದ ಮುಖ್ಯಸ್ಥರಾದ ಮಂಜುನಾಥ್ ಆಕ್ರೋಶ ವ್ಯಕ್ತಪಡಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “ಒಳಮೀಸಲಾತಿಯ ವಿಚಾರದಲ್ಲಿಯೂ ಅನ್ಯಾಯ ಮಾಡಲಾಗಿದೆ. ಸಮಾಜ ಕಲ್ಯಾಣ ಸಚಿವರಾದ ಮಹಾದೇವಪ್ಪನವರು, ದೆಹಲಿಯಲ್ಲಿ ಧರಣಿ ನಿರತರಾಗಿರುವ ಎಲ್ಲಾ ಅಲೆಮಾರಿ ಸಮುದಾಯಗಳ ಮುಖಂಡರು ಬೆಂಗಳೂರಿಗೆ ಹಿಂದಿರುಗಿ ಬನ್ನಿ, ನಾವು ನಿಮ್ಮ ಬೇಡಿಕೆಗಳನ್ನು ಈಡೇರಿಸಲು ಮುಖ್ಯಮಂತ್ರಿಗಳ ಜೊತೆಗೆ ಚರ್ಚೆ ಮಾಡೋಣ. ಇದಲ್ಲದೆ, ಪ್ರತ್ಯೇಕ ಅಭಿವೃದ್ಧಿ ನಿಗಮ ಮತ್ತು ಅಲೆಮಾರಿ ಸಮುದಾಯಗಳ ಅಭಿವೃದ್ಧಿಗೆ ವಿಶೇಷ ಪ್ಯಾಕೇಜನ್ನು ಜಾರಿ ಮಾಡುತ್ತೇವೆ ಎಂದು ಭರವಸೆ ನೀಡಿದ್ದರು. ಆದರೆ, ಈಗ ಮಾತು ತಪ್ಪಿದ್ದಾರೆ. ಅಲೆಮಾರಿಗಳಿಗೆ ಅನ್ಯಾಯ ಮಾಡಿದ್ದಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ಸಚಿವ ಮಹದೇವಪ್ಪನವರು ಅಲೆಮಾರಿ ಸಮುದಾಯಗಳ ಪ್ರತಿನಿಧಿಗಳನ್ನು 2026-27ನೇ ಸಾಲಿನ ಆಯವ್ಯಯದಲ್ಲಿ ಅಭಿವೃದ್ಧಿ ಯೋಜನೆಗಳಿಗೆ ನೀಡಬೇಕಿರುವ ಹಣಕಾಸಿನ ಕುರಿತು ಚರ್ಚಿಸಿದರು. ಆದರೆ, ಮಾತೆತ್ತಿದರೆ ಅಂಬೇಡ್ಕರ್ ಮತ್ತು ಸಂವಿಧಾನವನ್ನು ಮಾತನಾಡುವ ಹಾಗೂ ಸಾಮಾಜಿಕ ನ್ಯಾಯದ ಪಾಠವನ್ನು ಹರಿಬಿಡುವ ಸಿದ್ದರಾಮಯ್ಯನವರು ಬಜೆಟ್ನಲ್ಲಿ ಅಲೆಮಾರಿಗಳನ್ನು ಕಡೆಗಣಿಸಿದ್ದಾರೆ” ಎಂದು ಆರೋಪ ಮಾಡಿದರು.
“ನ್ಯಾಯಮೂರ್ತಿ ನಾಗಮೋಹನ್ ದಾಸ್ ಆಯೋಗದ ಅನುಸಾರ 49 ಅಲೆಮಾರಿ ಸಮುದಾಯಗಳನ್ನು ಪ್ರವರ್ಗ ‘ಎ’ನಲ್ಲಿ ಇರಿಸಿ ಶೇ 14ರಷ್ಟು ಮೀಸಲಾತಿಯನ್ನು ನೀಡಬೇಕಿತ್ತು. ಆದರೆ ಕರ್ನಾಟಕ ಸರಕಾರ ಅಲೆಮಾರಿ ಸಮುದಾಯಗಳನ್ನು ಬಲಾಢ್ಯರ ಗುಂಪಿಗೆ ಸೇರಿಸಿ, ಮೀಸಲಾತಿಯನ್ನು ನೀಡದೆ ವಂಚಿಸಿತ್ತು. ಆ ಮೂಲಕ ಸರ್ವೋಚ್ಚ ನ್ಯಾಯಾಲಯವು ಒಳಮೀಸಲಾತಿಯನ್ನು ಕುರಿತು ನೀಡಿದ್ದ ಚಾರಿತ್ರಿಕ ತೀರ್ಪನ್ನೇ ಸರ್ಕಾರ ಮೂಲೆಗುಂಪು ಮಾಡಿತ್ತು. ಇದರ ವಿರುದ್ಧ ನಾವು ಕೋರ್ಟ್ಗೆ ಹೋಗುತ್ತೇವೆ” ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ಅಸ್ಪೃಶ್ಯ ಅಲೆಮಾರಿ ಸಮುದಾಯಗಳ ಮಹಾಒಕ್ಕೂಟದ ಶೇಷಪ್ಪ ಅಂದೋಳು, ಬಸವರಾಜ ನಾರಾಯಣ್ಕರ್, ಡಿ. ಆರ್. ಚಿನ್ನ ಇದ್ದರು.





