“ಇತ್ತೀಚೆಗೆ ಹೆಚ್ಚು ಹೆಣ್ಣುಮಕ್ಕಳ ಕೊಲೆಗಳಾಗುತ್ತಿದೆ. ಕೋರ್ಟ್ನಲ್ಲೂ ಹಲವು ಪ್ರಕರಣಗಳು ಬಾಕಿ ಇವೆ. ಪೊಲೀಸರ ತನಿಖೆಯಲ್ಲಿ ಕೊರತೆಯಿದೆ. ಪ್ರಾಸಿಕ್ಯೂಟ್ ಮಾಡುವಲ್ಲೂ ಲೋಪಯಿದೆ” ಎಂದು ಹಿರಿಯ ವಕೀಲ ಬಾಲನ್ ಹೇಳಿದರು.
ಬುಧವಾರ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಪ್ರಗತಿಪರ ಸಂಘಟನೆಗಳು ಆಯೋಜಿಸಿದ್ದ ಮಹಿಳೆಯರ ಕಗ್ಗೊಲೆಗಳ ವಿರುದ್ಧ ಹಕ್ಕೊತ್ತಾಯ ಸಭೆಯಲ್ಲಿ ಅವರು ಮಾತನಾಡಿದರು.
“ಬಡವರು ಪೊಲೀಸರಿಗೆ ದೂರು ಕೊಡಲು ಹೋದರೆ ಮಾತನಾಡಿಸಲ್ಲ. ಅಂತಹ ಇನ್ಸ್ಪೆಕ್ಟರ್ಗಳನ್ನು ಆ ಜಾಗದಲ್ಲಿ ಬಿಡಬಾರದು. ಮಗಳ ಕೊಲೆಯಾಗಿದೆ ಎಂದು ದೂರು ಕೊಡಲು ತಾಯಿ ಹೋದರೆ ಕಮಿಷನರ್ ಮಾತೇ ಆಡಲ್ವಂತೆ. ಬೆಂಗಳೂರು ಸಿಟಿಗೆ ಈ ತರಹದ ಕಮಿಷನರ್ ಬೇಡವೇ ಬೇಡ. ಮಹಿಳಾ ಆಯೋಗ ಈ ವಿಷಯವನ್ನು ಸರ್ಕಾರದ ಗಮನಕ್ಕೆ ತರಬೇಕು” ಎಂದು ಹೇಳಿದರು.
“ನಿರ್ಭಯ ಪ್ರಕರಣ ನಡೆಯುವವರೆಗೂ ಅತ್ಯಾಚಾರವನ್ನು ಬಹಳ ಲಘವಾಗಿ ಪರಿಗಣಿಸಲಾಗಿತ್ತು. ಈ ಪ್ರಕರಣ ಆದಾಗ ಹಲವು ಹೋರಾಟ ಮಾಡಿದ ನಂತರ ಎವಿಡೆನ್ಸ್ ಆಕ್ಟ್ ತಿದ್ದುಪಡಿಯಾಯ್ತು. ಪ್ರಶ್ನೆ ಮಾಡುವಂತೆ, ವೈಯಕ್ತಿಕ ವಿವರ ಕೇಳುವಂತಿಲ್ಲ. ಎವಿಡೆನ್ಸ್ ಆಕ್ಟ್ ತಿದ್ದುಪಡಿ ಮಾಡಿದ್ರು. 376, 375, ಪೋಕ್ಸೋ , 354(ಎಬಿಸಿಡಿಇ) ತಿದ್ದುಪಡಿಯಾಯ್ತು. ಕೆಲವರಿಗೆ ಶಿಕ್ಷೆಯಾಗಿದೆ. ಅದೇ ರೀತಿ ಬಾಲನ್ಯಾಯ ಕಾಯ್ದೆಗೂ ತಿದ್ದುಪಡಿಯಾಗಬೇಕು. ಒಂದರಿಂದ ಏಳರವರೆಗೆ ತಪ್ಪು ಮಾಡಿದ್ರೆ ಪ್ರಕರಣ ದಾಖಲಿಸುವಂತಿಲ್ಲ. ಏಳರಿಂದ ಹನ್ನೆರಡರವರೆಗೆ ಬಂಧಿಸುವಂತಿಲ್ಲ. ಆದರೆ ಅವರೆಲ್ಲ ಸೈಕಿಕ್ಗಳು ಎಂದು ಹೇಳಿದರು.
“ನನ್ನ ಬಳಿಯೇ ಒಂದು ಪ್ರಕರಣ ಬಂದಿದೆ. ಒಬ್ಬ ಸೈಕೋ ಮದುವೆಯಾಗುವಂತೆ ಯುವತಿಗೆ ಒತ್ತಾಯಿಸುತ್ತಾನೆ. ಪೋಷಕರು ದೂರು ಕೊಟ್ಟರೆ ಪೊಲೀಸರು ಏನೂ ಆಗಲ್ಲ ಎಂದು ವಾಪಸ್ ಕಳಿಸಿದ್ದಾರೆ. ಮತ್ತೆ ತೊಂದರೆ ಕೊಡುತ್ತಾನೆ, ಮತ್ತೆ ಪೊಲೀಸರ ಬಳಿ ಹೋಗುತ್ತಾರೆ. ಪೊಲೀಸರು ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಮೂರನೇ ಸಲ ಆತ ಹುಡುಗಿಯನ್ನು ಕೊಲೆ ಮಾಡಿದ್ದ. ವಿಕ್ಟೋರಿಯಾ ಆಸ್ಪತ್ರೆಗೆ ಪೋಸ್ಟ್ ಮಾರ್ಟಂಗೆ ಶವ ಬಂದಿತ್ತು. ಪಂಚನಾಮೆಗೆ ಇನ್ಸ್ಪೆಕ್ಟರ್ ಬರದೇ ಮೂರು ತಿಂಗಳ ಹಿಂದೆ ಕೆಲಸಕ್ಕೆ ಸೇರಿದ ಪೊಲೀಸ್ ಕಾನ್ಸ್ಟೆಬಲ್ ಒಬ್ಬರು ಮಾಡುತ್ತಿದ್ದರು. ಇನ್ಸ್ಪೆಕ್ಟರ್ ಮಾಡಬೇಕಾದ ಕೆಲಸ ಸಬ್ ಇನ್ಸ್ಪೆಕ್ಟರ್ ಕೂಡಾ ಮಾಡುವಂತಿಲ್ಲ. ನಾನು ಹೋಗಿ ಇನ್ಸ್ಪೆಕ್ಟರ್ನ ಪ್ರಶ್ನೆ ಮಾಡಿದ್ದೆ. ನಂತರ ಆತ ಬಂದು ಪಂಚನಾಮೆ ಮಾಡಿದ್ದ” ಎಂದು ವಿವರಿಸಿದರು.
ಒಬ್ಬ ಹೆಣ್ಣುಮಗಳಿಗೆ ತೊಂದರೆ, ಕಿರುಕುಳ ಕೊಡುತ್ತಿದ್ದಾರೆ ಎಂದು ಪೊಲೀಸ್ ಠಾಣೆಗೆ ದೂರು ಬಂದರೆ ತಕ್ಷಣ ಮಹಿಳಾ ಪೊಲೀಸ್ ಠಾಣೆಗೆ ವರ್ಗಾಯಿಸಬೇಕು. ಅಲ್ಲಿ ಮನೋಚಿಕಿತ್ಸೆ ವ್ಯವಸ್ಥೆ ಇರಬೇಕು. ಈ ಬಗ್ಗೆ ಸರ್ಕಾರಕ್ಕೆ ಒತ್ತಾಯಿಸಬೇಕು ಎಂದು ಮಹಿಳಾ ಆಯೋಗದ ಅಧ್ಯಕ್ಷರಿಗೆ ಮನವಿ ಮಾಡಿದರು.
“ಇತ್ತೀಚೆಗೆ ಒಂದು ಪೋಕ್ಸೊ ಕಾಯ್ದೆಯಡಿ ದೊಡ್ಡ ಮನುಷ್ಯಯೊಬ್ಬರ ಮೇಲೆ ಪ್ರಕರಣ ದಾಖಲಾಗಿದೆ. ಮಗಳ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ ಪೊಲೀಸರು ದೂರು ದಾಖಲಿಸುತ್ತಿಲ್ಲ ಸಹಾಯ ಮಾಡಿ ಎಂದು ಆ ದೊಡ್ಡಮನುಷ್ಯನತ್ರ ಹೋದರೆ ಆತ ಬಾಲಕಿಯನ್ನು ರೂಮಿಗೆ ಕರೆದುಕೊಂಡು ಹೋಗಿ ಟೀಶರ್ಟ್ ಒಳಗೆ ಕೈ ಹಾಕಿದ್ದಾನೆ. ಹಿ ಈಸ್ ಮಸ್ಟ್ ಬಿ ಎ ಸೈಕಿಕ್. ಇದನ್ನು ಪ್ರಶ್ನಿಸಿದ ತಾಯಿಗೆ ಹಣದ ಆಮಿಷ ಒಡ್ಡಿದ್ದಾನೆ. ಆ ತಾಯಿ ಈ ಪ್ರಕರಣವನ್ನು ನೀವು ನಡೆಸಬೇಕು ಎಂದು ಶನಿವಾರ ಫೋನ್ ಮಾಡಿದ್ದರು, ಬನ್ನಿ ಎಂದಿದ್ದೆ ಸೋಮವಾರ ಆಕೆ ನಿಧನರಾಗಿದ್ದಾರೆ. ಆತನನ್ನು ಇನ್ನೂ ಬಂಧಿಸಿಲ್ಲ. ಇದು ಪ್ರಾಸಿಕ್ಯೂಟ್ ಹೇಗೆ ನಡೆಯುತ್ತದೆ ಎಂಬುದಕ್ಕೆ ಉದಾಹರಣೆ” ಎಂದು ಹೇಳಿದರು.





