ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ಮಸೂದೆಯು ಈಗ ನ್ಯಾಯಾಲಯದ ಅಂಗಳದಲ್ಲಿದ್ದು, ಅದು ಇತ್ಯರ್ಥವಾಗುವವರೆಗೂ ಸದ್ಯ, ಪ್ರಕ್ರಿಯೆಯಲ್ಲಿರುವ ಹೊಸ ನೇಮಕಾತಿಗೆ ಹಳೆಯ ಮಾದರಿಯಲ್ಲಿಯೇ ಶೇ.50ರಷ್ಟು ಮೀಸಲಾತಿಗೆ ಅನುಗುಣವಾಗಿ ಪರಿಶಿಷ್ಟ ಜಾತಿಗಳಿಗೆ ಸಿಗುವ ಶೇ.15ರಲ್ಲೇ ಒಳ ಮೀಸಲಾತಿ ನೀಡಬೇಕೆಂದು ಮಾದಿಗ ಸಮುದಾಯದ ಮುಖಂಡರು ರಾಜ್ಯ ಸರಕಾರವನ್ನು ಒಕ್ಕೊರಲಿನಿಂದ ಒತ್ತಾಯಿಸಿದ್ದಾರೆ.
ಈ ಸಂಬಂಧವಾಗಿ ಮಂಗಳವಾರ ಬೆಂಗಳೂರು ನಗರದ ಖಾಸಗಿ ಹೋಟೆಲ್ನಲ್ಲಿ ಸುದ್ದಿಗೋಷ್ಠಿ ನಡೆಸಿದ ಮಾದಿಗ ಸಮುದಾಯದ ಪ್ರಮುಖ ನಾಯಕರ ನಿಯೋಗವು ರಾಜ್ಯ ಸರಕಾರ ಮಾದಿಗರಿಗೆ ಘೋರ ಅನ್ಯಾಯ ಮಾಡುತ್ತಿದೆ. ಒಳ ಮೀಸಲಾತಿ ಆಧಾರಲ್ಲಿಯೇ ಹೊಸ ನೇಮಕಾತಿ ಪ್ರಕ್ರಿಯೆಯನ್ನು ನಡೆಸಬೇಕು. ಇಲ್ಲದಿದ್ದಲ್ಲಿ ನಮ್ಮ ಮುಂದಿನ ಹೋರಾಟದ ಪರಿಣಾಮವನ್ನು ಸರಕಾರ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಈ ವೇಳೆ ಸುದ್ದಿಗೋಷ್ಠಿಯಲ್ಲಿ ಪಾಲ್ಗೊಂಡಿದ್ದ ಆಹಾರ ಸಚಿವ ಕೆ.ಎಚ್.ಮುನಿಯಪ್ಪ ಮಾತನಾಡಿ, ಸತತ 40 ವರ್ಷಗಳ ಹೋರಾಟ ಫಲ. ಸುಪ್ರೀಂ ಕೋರ್ಟ್ನ ತೀರ್ಪಿನ ಅನುಗುಣವಾಗಿ ಪರಿಶಿಷ್ಟ ಜಾತಿಗೆ ಒಳ ಮೀಸಲಾತಿಯನ್ನು ಜಾರಿಗೊಳಿಸಲು ನಮ್ಮ ಸರಕಾರ ಬದ್ಧವಾಗಿದೆ. ಒಳ ಮೀಸಲಾತಿ ಮಸೂದೆಗೆ ಈಗಾಗಲೇ ರಾಜ್ಯಪಾಲರ ಅಂಕಿತ ಹಾಕಲಾಗಿದ್ದು, ಆಡಳಿತಾತ್ಮಕವಾಗಿ ಪ್ರಕ್ರಿಯೆ ಮುಗಿದಿದೆ. ಆದರೆ, ಎಸ್ಸಿ, ಎಸ್ಟಿ ಮೀಸಲಾತಿ ಹೆಚ್ಚಳದಿಂದಾಗಿ ಈ ಪ್ರಮಾಣ ಶೇ.56ಕ್ಕೆ ಹೆಚ್ಚಿಸಲ್ಪಟ್ಟಿದ್ದ 2022ರ ಮೀಸಲಾತಿ ಕಾಯ್ದೆಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.
ಇದರ ನಡುವೆ ಸರಕಾರ ಹಳೆಯ ಮಾದರಿಯಾದ ಶೇ.50ರಷ್ಟು ಮೀಸಲಾತಿ ಅಡಿಯಲ್ಲಿಯೇ 56,432 ಹುದ್ದೆಗಳ ನೇಮಕಾತಿಗೆ ಮುಂದಾಗಿದ್ದು, ಪರಿಶಿಷ್ಟ ಜಾತಿಗಳಿಗೆ ಸಿಗುವ ಶೇ.15ರಲ್ಲೇ ಒಳ ಮೀಸಲಾತಿ ನೀಡಬೇಕೆಂಬುದು ನಮ್ಮ ಆಗ್ರಹವಾಗಿದೆ. ಒಳ ಮೀಸಲಾತಿಗಾಗಿ ಸಮುದಾಯ ಇಷ್ಟೆಲ್ಲ ಹೋರಾಡಿದರೂ ಈಗ ಅದು ಜಾರಿಯಾಗದೇ ಸರಕಾರಿ ಹುದ್ದೆ ಭರ್ತಿಗೆ ಮುಂದಾಗುವುದು ಸರಿಯಲ್ಲ. ಇದರ ಬಗ್ಗೆ ಸಿಎಂ ಜೊತೆಗೆ ಚರ್ಚಿಸಿದ್ದು, ಮಾ.5ರಂದು ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಸ್ಪಷ್ಟ ತೀರ್ಮಾನ ನೀಡುವುದಾಗಿ ಮುಖ್ಯಮಂತ್ರಿಗಳು ಭರವಸೆ ನೀಡಿದ್ದಾರೆ ಎಂದು ಕೆ.ಎಚ್.ಮುನಿಯಪ್ಪ ತಿಳಿಸಿದರು.
ಒಳ ಮೀಸಲಾತಿ ಮಸೂದೆಗೆ ನಮ್ಮ ಸಚಿವ ಸಂಪುಟ, ಸರಕಾರ ಹಾಗೂ ವಿಪಕ್ಷಗಳು ಬೆಂಬಲವನ್ನು ವ್ಯಕ್ತಪಡಿಸಿವೆ. ಆದರೆ, ಸ್ವಲ್ಪ ಗೊಂದಲ ಉಂಟಾಗಿರುವುದರಿಂದ ಆಘಾತವಾಗಿದೆ. ಎಲ್ಲವನ್ನೂ ಸರಿಪಡಿಸಿ ಒಳ ಮೀಸಲಾತಿ ಜಾರಿಗೆ ತರುತ್ತೇವೆ. ಆದ್ದರಿಂದ ಹೋರಾಟಗಾರರು ಯಾವುದೇ ಕಾರಣಕ್ಕೂ ಮತ್ತೆ ಹೋರಾಟ ಮಾಡುವ ಅಗತ್ಯವಿಲ್ಲ. ಇದನ್ನು ಆದಷ್ಟು ಬೇಗ ಬಗೆಹರಿಸುತ್ತೇವೆ. ಎಂತಹ ಕಷ್ಟ ಕಾಲದಲ್ಲೂ ನಿಮ್ಮನ್ನು ಬಿಟ್ಟು ಕೊಡುವುದಿಲ್ಲ ಎಂದು ಕೆ.ಎಚ್.ಮುನಿಯಪ್ಪ ಹೇಳಿದರು.
ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ಮಾತನಾಡಿ, ಮಾರ್ಚ್ 5ರ ಸಚಿವ ಸಂಪುಟ ಸಭೆಯಲ್ಲಿ ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ಪರವಾಗಿ ಸರಕಾರ ತೀರ್ಮಾನಕ್ಕೆ ಬರುವ ನಂಬಿಕೆಯಿದೆ. ಸಮುದಾಯದ ಮುಖಂಡರು ಯಾವುದೇ ಗೊಂದಲಕ್ಕೆ ಒಳಗಾಗಬೇಡಿ ಎಂದು ಮನವಿ ಮಾಡಿದರು.

ರಾಜ್ಯಸಭಾ ಮಾಜಿ ಸದಸ್ಯ ಎಲ್.ಹನುಮಂತಯ್ಯ ಮಾತನಾಡಿ, ಹಿಂದಿನ ವಿಧಾನಸಭಾ ಚುನಾವಣೆಗೂ ಮುನ್ನ ಕಾಂಗ್ರೆಸ್ ಪಕ್ಷವು ಡಾ.ಜಿ.ಪರಮೇಶ್ವರ್ ಅಧ್ಯಕ್ಷತೆಯಲ್ಲಿ ಚುನಾವಣಾ ಪ್ರಣಾಳಿಕೆ ತಯಾರಿಸಿತ್ತು. ಅದರಲ್ಲಿ ಸರಕಾರ ಬಂದ ಕೂಡಲೇ ಒಳ ಮೀಸಲಾತಿ ಜಾರಿಗೊಳಿಸುವುದಾಗಿ ತಿಳಿಸಲಾಗಿತ್ತು. ಇದರ ಬಗ್ಗೆ ಮಲ್ಲಿಕಾರ್ಜುನ ಖರ್ಗೆ ಕೂಡ ಭರವಸೆ ಕೊಟ್ಟಿದ್ದರು. ಆದರೆ, ಸರಕಾರ ಬಂದು ಮೂರು ವರ್ಷ ಕಳೆದಿವೆ. ಇನ್ನಾದರೂ ನೊಂದ ಸಮುದಾಯಕ್ಕೆ ನ್ಯಾಯ ಬೇಕಲ್ಲವೇ? ಶೇ.50ರಷ್ಟು ಮೀಸಲಾತಿ ಅಡಿಯಲ್ಲೇ ಪರಿಶಿಷ್ಟ ಜಾತಿಗಳಿಗೆ ಸಿಗುವ ಶೇ.15ರೊಳಗೆ ಒಳ ಮೀಸಲಾತಿ ನೀಡಿ ನೇಮಕಾತಿ ಆರಂಭಿಸಬೇಕು ಎಂದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾಜಿ ಸಚಿವ ಎಚ್.ಆಂಜನೇಯ, ಮಾದಿಗ ಮುಖಂಡರಾದ ವೈ.ಎಚ್.ಹುಚ್ಚಯ್ಯ, ಜಿ.ಎಸ್.ಮಂಜುನಾಥ್ ಸಹಿತ ಹಲವರು ಉಪಸ್ಥಿತರಿದ್ದರು.





