ಕೇಂದ್ರ ಚುನಾವಣಾ ಆಯೋಗ ನಡೆಸುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್) ಎಂಬುದು ‘ದೂರಾಲೋಚನೆ’ಯಲ್ಲ, ಬದಲಿಗೆ ಅದು ಸಿಎಎ-ಎನ್ಆರ್ಸಿಯನ್ನು ಜಾರಿಗೊಳಿಸುವ ‘ದುರಾಲೋಚನೆʼ. ಎಸ್ಐಆರ್ ಕುರಿತ ಮೊಕದ್ದಮೆಗಳ ವಿಚಾರಣೆಯು ಸುಪ್ರೀಂ ಕೋರ್ಟಿನಲ್ಲಿರುವಾಗ ಕರ್ನಾಟಕದಲ್ಲಿ ಎಸ್ಐಆರ್ ಪ್ರಕ್ರಿಯೆಯನ್ನು ತರಾತುರಿಯಲ್ಲಿ ನಡೆಸಬಾರದು ಎಂದು ಪ್ರಗತಿಪರ ಸಂಘಟನೆಗಳು ಹಾಗೂ ಜಾತ್ಯತೀತ ಪಕ್ಷಗಳ ಮುಖಂಡರು ಒಕ್ಕೊರಲಿನಿಂದ ಆಗ್ರಹಿಸಿದ್ದಾರೆ.
ಸೋಮವಾರ (ಮಾ 23) ಬೆಂಗಳೂರು ನಗರದ ಪ್ರೆಸ್ಕ್ಲಬ್ ಸಭಾಂಗಣದಲ್ಲಿ ಪ್ರಗತಿಪರ ಸಂಘಟನೆಗಳು ಹಾಗೂ ಜಾತ್ಯಾತೀತ ಪಕ್ಷಗಳ ಮುಖಂಡರು ಸೇರಿ ಜಂಟಿ ಪತ್ರಿಕಾಗೋಷ್ಠಿಯನ್ನು ನಡೆಸಿದರು.
ಈ ಜಂಟಿ ಪತ್ರಿಕಾಗೋಷ್ಠಿಯಲ್ಲಿ “ಎಸ್ಐಆರ್ ಸಂವಿಧಾನದಲ್ಲಿ ಇಲ್ಲದ, ಚುನಾವಣಾ ಆಯೋಗದ ನಿಯಮಗಳನ್ನು ಉಲ್ಲಂಘಿಸುವ, ತರಾತುರಿಯಲ್ಲಿ ನಡೆಸುವ, ಜನಸಾಮಾನ್ಯರನ್ನು ಇಕ್ಕಟ್ಟಿಗೆ ಸಿಲುಕಿಸುವ, ಮಹಿಳೆಯರು, ಅಲೆಮಾರಿಗಳು, ಆದಿವಾಸಿಗಳು, ದಲಿತರು, ಅಲ್ಪಸಂಖ್ಯಾತರು ಹಾಗೂ ಎಲ್ಲ ಜಾತಿಯ ಬಡವರು ದೊಡ್ಡ ಸಂಖ್ಯೆಯಲ್ಲಿ ಮತದಾನದ ಹಕ್ಕನ್ನು ಕಳೆದುಕೊಳ್ಳಲು ಕಾರಣವಾಗುತ್ತಿರುವ ಮತ ಪಟ್ಟಿಯ ಪರಿಷ್ಕರಣಾ ಪದ್ಧತಿ. ದಾಖಲೆಗಳ ಕಾರಣ ನೀಡಿ ಅರ್ಹ ಪ್ರಜೆಗಳ ಮತದಾನದ ಹಕ್ಕನ್ನು ಜೀವಂತ ಕಾಲದಲ್ಲಿಯೇ ನಿರಾಕರಿಸುವುದು ಪ್ರಜಾತಂತ್ರ ವ್ಯವಸ್ಥೆಯ ದುರಂತ ಅಂತ್ಯವಾಗಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ಎಸ್ಐಆರ್ ನಡೆದ ರಾಜ್ಯಗಳಲ್ಲಿ 20 ಲಕ್ಷದಿಂದ ಆರಂಭಿಸಿ 3 ಕೋಟಿಯ ತನಕ ಅರ್ಹ ಮತದಾರರನ್ನು ಪಟ್ಟಿಯಿಂದ ತೆಗೆದುಹಾಕಲಾಗಿದೆ. ಕರ್ನಾಟಕ ರಾಜಕೀಯವಾಗಿ ಅತ್ಯಂತ ಸೂಕ್ಷ್ಮ ರಾಜ್ಯವಾಗಿದೆ. ಶೇ.2ರಷ್ಟು ಮತಗಳು ರಾಜ್ಯದ ಚುನಾವಣಾ ಭವಿಷ್ಯವನ್ನೇ ಏರುಪೇರು ಮಾಡಲಿದೆ. ಈ ಕಾರಣದಿಂದಾಗಿ ನಾವು ಅಸಂವಿಧಾನಿಕವಾದ ಮತ್ತು ದೊಡ್ಡ ಸಂಖ್ಯೆಯಲ್ಲಿ ಮತದಾರರನ್ನು ಚುನಾವಣಾ ಪ್ರಕ್ರಿಯೆಯಿಂದ ಹೊರದಬ್ಬುವ ಮತಪಟ್ಟಿಯನ್ನು ಒಪ್ಪುವುದಿಲ್ಲ ಮತ್ತು ಮನಬಂದಂತೆ ವಕ್ರೀಕರಿಸುವುದನ್ನು ಸಹಿಸುವುದಿಲ್ಲ” ಎಂದು ತಿಳಿಸಿದ್ದಾರೆ.
“ಸುಪ್ರೀಂಕೋರ್ಟ್ನ ಆದೇಶದಂತೆ ಆಧಾರ್ ಕಾರ್ಡ್ ಅನ್ನು ಕಡ್ಡಾಯವಾಗಿ ಪರಿಗಣಿಸಬೇಕು. ಆಧಾರ್ ಕಾರ್ಡ್ ಇದ್ದವರನ್ನು ಯಾವುದೇ ಕಾರಣದಿಂದಲೂ ಮತಪಟ್ಟಿಯಿಂದ ಹೊರಗಿಡಬಾರದು. ಭಾರತೀಯರಲ್ಲದ ಅನುಮಾನಗಳು ಬಂದಲ್ಲಿ ಅದನ್ನು ಗೃಹ ಇಲಾಖೆಯ ಗಮನಕ್ಕೆ ತಂದು ಸೂಕ್ತ ಪ್ರಕ್ರಿಯೆ ನಡೆದು ದೃಢೀಕರಣಗೊಂಡ ನಂತರವಷ್ಟೇ ಮತ ಪಟ್ಟಿಯಿಂದ ತೆಗೆಯಬೇಕು” ಎಂದರು.
“ಗ್ರಾಮ/ ವಾರ್ಡ್ ಸಭೆಗಳನ್ನು ಸಿಎಜಿ ರೂಪಿಸಿರುವ ಸಾಮಾಜಿಕ ಪರಿಶೀಲನೆಯ ಮಾನದಂಡಗಳನ್ನು ಅನ್ವಯಿಸಿ ನಡೆಸಬೇಕು. ಆ ಮೂಲಕ ರಾಜ್ಯ ಚುನಾವಣಾ ಆಯೋಗದ ಪಟ್ಟಿಗೆ ಹೆಚ್ಚಿನ ಖಚಿತತೆ ಹಾಗೂ ಮಾನ್ಯತೆ ಬರುವಂತೆ ನೋಡಿಕೊಳ್ಳಬೇಕು. ಸಾರಾಂಶದಲ್ಲಿ ರಾಜ್ಯ ತನ್ನದೇ ಆದ ಖಚಿತ ಮತಪಟ್ಟಿಯನ್ನು ಸಿದ್ಧಪಡಿಸಿಕೊಳ್ಳಬೇಕು” ಎಂದು ರಾಜ್ಯ ಚುನಾವಣಾ ಆಯೋಗಕ್ಕೆ ಮನವಿ ಮಾಡಿದರು.
“ಸಂವಿಧಾನದ ಮೌಲ್ಯಗಳಿಗಿಂತ, ಪ್ರಜಾತಂತ್ರದ ಬುನಾದಿಗಿಂತ ಮೇಲಿನದು ಯಾವುದೂ ಇಲ್ಲ. ಚುನಾವಣಾ ಆಯೋಗ ಅಸಂವಿಧಾನಿಕವಾಗಿ, ಅಪ್ರಜಾತಾಂತ್ರಿಕವಾಗಿ ನಡೆದುಕೊಂಡರೆ ಕರ್ನಾಟಕ ಅದನ್ನು ಸಹಿಸುವುದಿಲ್ಲ ಮತ್ತು ಬಲವಂತವಾಗಿ ನಮ್ಮ ಮೇಲೆ ಹೇರಲು ಬಿಡುವುದಿಲ್ಲ. ನಮ್ಮ ಹಕ್ಕೊತ್ತಾಯಗಳನ್ನು ಕೇಂದ್ರ ಚುನಾವಣಾ ಅಯೋಗ, ರಾಜ್ಯ ಚುನಾವಣಾ ಆಯೋಗ ಹಾಗೂ ರಾಜ್ಯ ಸರಕಾರಕ್ಕೆ ಇಂದೇ ಮನವಿ, ಎಚ್ಚರಿಕೆಯ ಆಗ್ರಹಗಳನ್ನು ಸಲ್ಲಿಸುತ್ತಿದ್ದೇವೆ” ಎಂದು ಮಾಹಿತಿ ನೀಡಿದರು.
ಜನಶಕ್ತಿ ಸಂಘಟನೆಯ ರಾಜ್ಯಾಧ್ಯಕ್ಷರಾದ ನೂರ್ ಶ್ರೀಧರ್ ಮಾತನಾಡಿ, “ಮತದಾರರ ಪಟ್ಟಿ ಜನರಿಗೆ ಸೇರಿರುವುದೇ ವಿನಃ, ರಾಜಕೀಯ ಪಕ್ಷಗಳಿಗೆ ಸೇರಿದ್ದಲ್ಲ. ನಮ್ಮ ಮತದಾರರ ಪಟ್ಟಿಯನ್ನು ನಿಮಗೆ ಬೇಕಾದ ರೀತಿಯಲ್ಲಿ ಬದಲಾಯಿಸಲು ನಾವು ಬಿಡುವುದಿಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮುಂದುವರೆದು ಮಾತನಾಡಿ “ರಾಜ್ಯ ಸರ್ಕಾರ ಪ್ರತಿ ಗ್ರಾಮಪಂಚಾಯಿತಿಗಳಲ್ಲಿ ಹಾಗೂ ನಗರಗಳ ವಾರ್ಡ್ಗಳಲ್ಲಿ ನೆರವು ಕೇಂದ್ರಗಳನ್ನು ತೆರೆಯಬೇಕು. ಒಬ್ಬ ಮತದಾರರು ಪಟ್ಟಿಯಿಂದ ಹೊರ ಉಳಿಯದಂತೆ ಎಚ್ಚರವಹಿಸಬೇಕು. ʼಎಸ್ಐಆರ್ʼಗಾಗಿ ಕೆಲಸ ಮಾಡುವ BLOಗಳಿಗೆ ಸರಿಯಾಗಿ ತರಬೇತಿ ಕೊಡಬೇಕು” ಎಂದು ಹೇಳಿದರು.
“ಕೇಂದ್ರ ಸರ್ಕಾರ, ರಾಜ್ಯದ ಎಲ್ಲಾ ವಿಚಾರಗಳಲ್ಲಿಯೂ ಕೈಹಾಕಿದೆ. ಅದರ ಭಾಗವಾಗಿಯೇ ಮತದಾರರ ಪಟ್ಟಿಯಲ್ಲಿ ಅವರಿಗೆ ಬೇಕಾದವರನ್ನು ಇಟ್ಟುಕೊಂಡು, ಬಡವರನ್ನು, ಆದಿವಾಸಿಗಳನ್ನು, ಕಾರ್ಮಿಕರನ್ನು ಹೊರಗೆ ಇಡುವ ಸಂಚು ನಡೆಸುತ್ತಿದೆ. ಈಗಾಗಲೇ ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳ ರಾಜ್ಯ ಸರ್ಕಾರಗಳು ʼಎಸ್ಐಆರ್ʼ ಬಗ್ಗೆ ಗಂಭೀರವಾಗಿವೆ. ಆದರೆ, ಕರ್ನಾಟಕ ಸರ್ಕಾರ ಮಾತ್ರ ಕಣ್ಣುಮುಚ್ಚಿ ಕುಳಿತಂತೆ ಕಾಣುತ್ತದೆ. ರಾಜ್ಯ ಸರ್ಕಾರ ಎಚ್ಚರಗೊಳ್ಳದೆ ಇದ್ದರೆ, ನಾವೇ ನಿಮಗೆ ಎಚ್ಚರಗೊಳಿಸುವ ಕೆಲಸ ಮಾಡುತ್ತೇವೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜಂಟಿ ಪತ್ರಿಕಾಗೋಷ್ಠಿಯಲ್ಲಿ ಬಿ.ಟಿ.ಲಲಿತಾ ನಾಯಕ್, ಎನ್.ವೆಂಕಟೇಶ್, ತಾರಾ ರಾವ್, ಕೆ.ಎಲ್.ಅಶೋಕ್, ಎಚ್.ಆರ್.ಬಸವರಾಜಪ್ಪ, ನೂರ್ ಶ್ರೀಧರ್, ಯೂಸಫ್ ಕನ್ನಿ,ಕೆ.ವಿ.ಭಟ್, ವಿನಯ್ ಶ್ರೀನಿವಾಸ್, ಹೈದರ್ ಬೇಗ್, ರಿಯಾಜ್ ಅಹ್ಮದ್, ನಾಗೇಶ್ವ ಅರಳಕುಪ್ಸೆ, ಕಾತ್ಯಾಯಿನಿ, ಸಾತಿ ಸುಂದರೇಶ್, ಮರಿಯಪ್ಪ, ಅಮ್ಜದ್ ಪಾಷಾ, ರಮೇಶ್ ಬೆಲ್ಲಕೊಂಡ ಸೇರಿದಂತೆ ಹಲವರು ಇದ್ದರು.





