ಇದೇ ಸೆಪ್ಟೆಂಬರ್ 9 ರಂದು ನಡೆದ ರಾಷ್ಟ್ರೀಯ ಲೋಕ್ ಅದಾಲತ್ ನಲ್ಲಿ ಒಟ್ಟು 24,36,270 ಪ್ರಕರಣಗಳು ಇತ್ಯರ್ಥಗೊಂಡಿವೆ ಎಂದು ಕರ್ನಾಟಕ ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿಗಳು ಹಾಗೂ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಗೌರವಾನ್ವಿತ ಕಾರ್ಯನಿರ್ವಾಹಕ ಅಧ್ಯಕ್ಷರಾದ ಜಿ.ನರೇಂದರ್ ತಿಳಿಸಿದರು.
ಇಂದು ಉಚ್ಚನ್ಯಾಯಾಲಯದಲ್ಲಿ ಹಮ್ಮಿಕೊಳ್ಳಲಾದ ಪತ್ರಿಕಾಗೋಷ್ಠಿಯಲ್ಲಿ ಅವರು ಈ ವಿಷಯ ತಿಳಿಸಿದರು ‘ಸರ್ವರಿಗೂ ನ್ಯಾಯ” ಇದು ಕಾನೂನು ಸೇವೆಗಳ ಪ್ರಾಧಿಕಾರದ ಧ್ಯೇಯೋದ್ದೇಶವಾಗಿದ್ದು, ಜನತಾ ನ್ಯಾಯಾಲಯ/ಲೋಕ್ ಅದಾಲತ್ ಮೂಲಕ ಜನರಿಗೆ ತ್ವರಿತ ಮತ್ತು ಸಕ್ಷಮ ನ್ಯಾಯ ಒದಗಿಸುವಲ್ಲಿ ಮುಖ್ಯ ಪಾತ್ರ ವಹಿಸುತ್ತಿದೆ ಎಂದರು.
ಈ ಸುದ್ದಿ ಓದಿದ್ದೀರಾ? ಪಶ್ಚಿಮ ಬಂಗಾಳ | ಕೇಂದ್ರ ಸಚಿವರನ್ನು ಕೊಠಡಿಯಲ್ಲಿ ಕೂಡಿ ಹಾಕಿದ ಬಿಜೆಪಿ ಕಾರ್ಯಕರ್ತರು
ರಾಷ್ಟ್ರೀಯ ಲೋಕ್ ಅದಾಲತ್ ನಲ್ಲಿ ಇತ್ಯರ್ಥಗೊಂಡ ಪ್ರಕರಣಗಳ ಪೈಕಿ 1305 ವೈವಾಹಿಕ ಪ್ರಕರಣಗಳು,255 ಪುನರ್ ಮಿಲನ ಪ್ರಕರಣ, 2806 ದಾವಾ ಪ್ರಕರಣಗಳು, 3,303 ವಾಹನ ಅಪಘಾತ ಪರಿಹಾರ ಪ್ರಕರಣ, 9,269 ಚೆಕ್ ಬೌನ್ಸ್ ಪ್ರಕರಣಗಳು, ಭೂಸ್ವಾಧೀನ ಪರಿಹಾರಕ್ಕೆ ಸಂಬಂಧಿಸಿದ 430,ಇತರೆ 2899 ಅಮಲುಜಾರಿ ಪ್ರಕರಣಗಳು, ರೇರಾಗೆ ಸಂಬಂಧಿಸಿದ 35 ಹಾಗೂ ಗ್ರಾಹಕರ ವ್ಯಾಜ್ಯಗಳ 95 ಪ್ರಕರಣಗಳು ಸೇರಿವೆ ಎಂದರು.
1012 ಪೀಠಗಳಲ್ಲಿ ನಡೆದ ಲೋಕ್ ಅದಾಲತ್ ನಲ್ಲಿ ನ್ಯಾಯಾಲಯದಲ್ಲಿ ಬಾಕಿ ಇದ್ದ 2,14,925 ಪ್ರಕರಣಗಳು ಹಾಗೂ 22,21,345 ವ್ಯಾಜ್ಯಪೂರ್ವ ಪ್ರಕರಣಗಳು ಇತ್ಯರ್ಥಗೊಂಡಿದೆ. ಒಟ್ಟು ಇತ್ಯರ್ಥಗೊಂಡ ಮೊತ್ತ 1,420 ಕೋಟಿ ರೂ.ಗಳು ಎಂದು ತಿಳಿಸಿದರು.
ಲೋಕ್ ಅದಾಲತ್ ನಲ್ಲಿ ಬೆಂಗಳೂರು, ಧಾರವಾಡ, ಕಲಬುರಗಿಯ ಉಚ್ಛನ್ಯಾಯಾಲಯದ ಪೀಠಗಳು ಕರ್ತವ್ಯ ನಿರ್ವಹಿಸಿದ್ದು 655 ದಾವೆಗಳು ಇತ್ಯರ್ಥಗೊಂಡಿವೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿಗಳು ಹಾಗೂ ಉಚ್ಚ ನ್ಯಾಯಾಲಯದ ಕಾನೂನು ಸೇವೆಗಳ ಸಮಿತಿಯ ಅಧ್ಯಕ್ಷರಾದ ನ್ಯಾಯಮೂರ್ತಿ ಕೆ.ಸೋಮಶೇಖರ್ ಹಾಗೂ ಪ್ರಾಧಿಕಾರದ ಇತರ ಗೌರವಾನ್ವಿತ ಸದಸ್ಯರು ಉಪಸ್ಥತರಿದ್ದರು.





