ರಾಜ್ಯದ ವಿವಿಧ ಜೈಲುಗಳಲ್ಲಿರುವ ಆದಿವಾಸಿಗಳ ವಾಸ್ತವಿಕ ಸ್ಥಿತಿಗತಿಯನ್ನು ಪರಿಶೀಲಿಸಲು ತಕ್ಷಣವೇ ಉನ್ನತ ಮಟ್ಟದ ಸಮಿತಿಯೊಂದನ್ನು ರಚಿಸಬೇಕು ಹಾಗೂ ಅವರ ಬಿಡುಗಡೆಗೆ ಜಾಮೀನು ಮತ್ತು ನ್ಯಾಯಯುತ ವಿಚಾರಣೆಗೆ ಸೂಕ್ತ ಏರ್ಪಾಡು ಮಾಡಬೇಕು ಎಂದು ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಉಪಸಮಿತಿಯು ಸರ್ಕಾರಕ್ಕೆ ಮಹತ್ವದ ಶಿಫಾರಸು ಮಾಡಿದೆ.
ಆದಿವಾಸಿಗಳು ಮತ್ತು ಅರಣ್ಯವಾಸಿಗಳ ಹಕ್ಕುಗಳ ರಕ್ಷಣೆ ಕುರಿತಂತೆ ವರದಿಯಲ್ಲಿ ವಿಶೇಷವಾಗಿ ಪ್ರಸ್ತಾಪಿಸಲಾಗಿದ್ದು, ಅರಣ್ಯ ಹಕ್ಕುಗಳ ಕಾಯ್ದೆಯನ್ನು ರಾಜ್ಯಾದ್ಯಂತ ಸಂಪೂರ್ಣವಾಗಿ ಹಾಗೂ ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಎಂದು ಒತ್ತಾಯಿಸಲಾಗಿದೆ.
ನ್ಯಾಯಯುತ ವಿಚಾರಣೆ ಮತ್ತು ಜಾಮೀನು ವ್ಯವಸ್ಥೆ
ಸಣ್ಣಪುಟ್ಟ ಪ್ರಕರಣಗಳಲ್ಲಿ ಮತ್ತು ಅರಣ್ಯ ಒತ್ತುವರಿ ನೆಪದಲ್ಲಿ ಅನೇಕ ಆದಿವಾಸಿಗಳು ಸುದೀರ್ಘ ಕಾಲದಿಂದ ಜೈಲುಗಳಲ್ಲಿ ದಿನದೂಡುತ್ತಿದ್ದಾರೆ. ಸರಿಯಾದ ಕಾನೂನು ನೆರವು ಸಿಗದೆ, ಜಾಮೀನು ಪಡೆಯಲು ಆರ್ಥಿಕ ಚೈತನ್ಯವಿಲ್ಲದೆ ಅವರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ, ಜೈಲುಗಳಲ್ಲಿರುವ ಆದಿವಾಸಿಗಳ ಸ್ಥಿತಿಗತಿಯನ್ನು ಅರಿಯಲು ತಜ್ಞರ ಸಮಿತಿಯೊಂದನ್ನು ನೇಮಿಸುವುದು ಅತ್ಯಗತ್ಯ. ಜೊತೆಗೆ, ಅವರಿಗೆ ಉಚಿತ ಕಾನೂನು ನೆರವು ಒದಗಿಸಿ, ತ್ವರಿತಗತಿಯಲ್ಲಿ ನ್ಯಾಯಯುತ ವಿಚಾರಣೆ ನಡೆಯುವಂತೆ ನೋಡಿಕೊಳ್ಳಬೇಕು ಹಾಗೂ ಜಾಮೀನು ಮಂಜೂರಾತಿಗೆ ಅಗತ್ಯ ಬೆಂಬಲ ನೀಡುವ ವ್ಯವಸ್ಥೆ ಜಾರಿಗೆ ಬರಬೇಕು ಎಂದು ವರದಿಯಲ್ಲಿ ಸ್ಪಷ್ಟಪಡಿಸಲಾಗಿದೆ.
ಬಲಾತ್ಕಾರದ ತೆರವು ಕಾರ್ಯಾಚರಣೆಗೆ ತಡೆ
ಅರಣ್ಯ ಸಂರಕ್ಷಣೆಯ ಹೆಸರಿನಲ್ಲಿ ಮೂಲ ನಿವಾಸಿಗಳಾದ ಆದಿವಾಸಿಗಳನ್ನು ಅವರ ಪಾರಂಪರಿಕ ನೆಲೆಗಳಿಂದ ಬಲಾತ್ಕಾರವಾಗಿ ಒಕ್ಕಲೆಬ್ಬಿಸುತ್ತಿರುವ ಕ್ರಮಗಳನ್ನು ತಕ್ಷಣವೇ ನಿಲ್ಲಿಸಬೇಕು ಎಂದು ಉಪಸಮಿತಿ ಸರ್ಕಾರಕ್ಕೆ ಕಟ್ಟುನಿಟ್ಟಿನ ಸಲಹೆ ನೀಡಿದೆ. ಆದಿವಾಸಿಗಳು ಕಾಡಿನೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದು, ಅವರ ತೆರವು ಕ್ರಮವು ಅವರ ಬದುಕು ಮತ್ತು ಸಂಸ್ಕೃತಿಯ ಮೇಲಿನ ಆಕ್ರಮಣವಾಗಿದೆ. ಹೀಗಾಗಿ ಯಾವುದೇ ಕಾರಣಕ್ಕೂ ಬಲವಂತದ ಒಕ್ಕಲೆಬ್ಬಿಸುವಿಕೆ ಹಾಗೂ ಒತ್ತುವರಿ ತೆರವು ನೆಪದಲ್ಲಿ ದೌರ್ಜನ್ಯ ನಡೆಯಬಾರದು ಎಂದು ಆಗ್ರಹಿಸಲಾಗಿದೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ವಿದೇಶಗಳಲ್ಲಿ ದ್ವೇಷಕ್ಕೆ ಭಾರತೀಯರ ಬಲಿ- ಕೈಕಟ್ಟಿ ಕುಳಿತಿರುವರೇ ‘ವಿಶ್ವಗುರು’?
ಮೂಲಭೂತ ಸೌಲಭ್ಯಗಳ ಕಲ್ಪನೆಗೆ ಒತ್ತು
ಆದಿವಾಸಿಗಳು ತಲತಲಾಂತರದಿಂದ ವಾಸಿಸುತ್ತಿರುವ ನೆಲೆಗಳಲ್ಲಿ (ಹಾಡಿಗಳಲ್ಲಿ) ಕನಿಷ್ಠ ಮೂಲಭೂತ ಸೌಲಭ್ಯಗಳ ಕೊರತೆ ಇಂದಿಗೂ ಎದ್ದುಕಾಣುತ್ತಿದೆ. ಈ ಹಿನ್ನೆಲೆಯಲ್ಲಿ, ಅವರ ವಾಸಸ್ಥಾನಗಳಿಗೆ ಶುದ್ಧ ಕುಡಿಯುವ ನೀರು, ವಿದ್ಯುತ್, ರಸ್ತೆ ಸಂಪರ್ಕ, ಆರೋಗ್ಯ ಕೇಂದ್ರಗಳು ಹಾಗೂ ಗುಣಮಟ್ಟದ ಶಿಕ್ಷಣ ಒದಗಿಸುವ ನಿಟ್ಟಿನಲ್ಲಿ ಸರ್ಕಾರ ಆದ್ಯತೆ ಮೇರೆಗೆ ಯೋಜನೆ ರೂಪಿಸಬೇಕು. ಅರಣ್ಯ ಹಕ್ಕುಗಳ ಕಾಯ್ದೆಯಡಿ ಅವರಿಗೆ ಸಿಗಬೇಕಾದ ಜಮೀನಿನ ಹಕ್ಕುಪತ್ರಗಳನ್ನು ವಿಳಂಬವಿಲ್ಲದೆ ವಿತರಿಸಬೇಕು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಕಾಡಿನ ಮಕ್ಕಳಾದ ಆದಿವಾಸಿಗಳಿಗೆ ಸಾಂವಿಧಾನಿಕವಾಗಿ ಸಿಗಬೇಕಾದ ಹಕ್ಕುಗಳನ್ನು ಖಚಿತಪಡಿಸುವ ಹಾಗೂ ಅವರನ್ನು ದೌರ್ಜನ್ಯ ಮುಕ್ತರನ್ನಾಗಿಸಿ ಸಮಾಜದ ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಮುಂಬರುವ ಬಜೆಟ್ನಲ್ಲಿ ಸರ್ಕಾರ ದಿಟ್ಟ ಹೆಜ್ಜೆ ಇಡಬೇಕು ಎಂಬುದು ಆಯೋಗದ ಪ್ರಮುಖ ಆಶಯವಾಗಿದೆ.





