ಗ್ರಾಮೀಣ ಬಡವರ ಪಾಲಿನ ಆರ್ಥಿಕ ಸಂಜೀವಿನಿಯಾಗಿದ್ದ ‘ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ’ ಕಾಯ್ದೆಯನ್ನು ರದ್ದುಪಡಿಸಿ, ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಹೊಸ ‘ವಿಕಸಿತ ಭಾರತ್ ಗ್ಯಾರಂಟಿ ಫಾರ್ ರೋಜ್ಗಾರ್ ಮತ್ತು ಆಜೀವಿಕಾ ಮಿಷನ್’ ಕಾಯ್ದೆಯನ್ನು ತಕ್ಷಣವೇ ಹಿಂಪಡೆಯಬೇಕು ಎಂದು ಒತ್ತಾಯಿಸಿ ಇಂದು (ಫೆ.03) ಕರ್ನಾಟಕ ವಿಧಾನಸಭೆಯಲ್ಲಿ ಮಹತ್ವದ ನಿರ್ಣಯವನ್ನು ಅಂಗೀಕರಿಸಲಾಯಿತು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿದ ಈ ನಿರ್ಣಯವು, ಕೇಂದ್ರದ ಹೊಸ ನೀತಿಯು ಒಕ್ಕೂಟ ವ್ಯವಸ್ಥೆಯ ಆಶಯಗಳಿಗೆ ವಿರುದ್ಧವಾಗಿದ್ದು, ರಾಜ್ಯದ ಬೊಕ್ಕಸಕ್ಕೆ ಹೊರೆಯಾಗುವ ಜೊತೆಗೆ ಗ್ರಾಮೀಣ ಜನರ ಬದುಕುವ ಹಕ್ಕನ್ನು ಕಸಿದುಕೊಳ್ಳುತ್ತಿದೆ ಎಂದು ತೀವ್ರ ಕಳವಳ ವ್ಯಕ್ತಪಡಿಸಿದೆ.
ನಿರ್ಣಯವನ್ನು ಮಂಡಿಸಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ”ಹಳೆಯ ನರೇಗಾ ಕಾಯ್ದೆಯಡಿ 100 ಮಾನವ ದಿನಗಳ ಕೂಲಿ ಹಣವನ್ನು ಕೇಂದ್ರ ಸರ್ಕಾರವೇ ಸಂಪೂರ್ಣವಾಗಿ (ಶೇ.100) ಭರಿಸುತ್ತಿತ್ತು. ಆದರೆ, ರಾಜ್ಯಗಳೊಂದಿಗೆ ಯಾವುದೇ ಸಮಾಲೋಚನೆ ನಡೆಸದೆ ಜಾರಿಗೆ ತಂದಿರುವ ಹೊಸ ‘ಜಿ ರಾಮ್ ಜಿ’ ಕಾಯ್ದೆಯಲ್ಲಿ ಶೇ. 40ರಷ್ಟು ಅನುದಾನವನ್ನು ರಾಜ್ಯ ಸರ್ಕಾರಗಳೇ ಭರಿಸಬೇಕೆಂಬ ನಿಯಮ ಹೇರಲಾಗಿದೆ. 125 ದಿನಗಳ ಕೆಲಸ ನೀಡುವುದಾಗಿ ಹೇಳಿದ್ದರೂ, ವಾಸ್ತವದಲ್ಲಿ 50 ದಿನಗಳ ವೆಚ್ಚವನ್ನು ರಾಜ್ಯವೇ ಭರಿಸಬೇಕಾಗಿರುವುದು ಸಂವಿಧಾನದ 258 ಮತ್ತು 280ನೇ ಅನುಚ್ಛೇದಗಳ ಸ್ಪಷ್ಟ ಉಲ್ಲಂಘನೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ದೇಶದಲ್ಲೇ ಅತಿ ಹೆಚ್ಚು ತೆರಿಗೆ ಪಾವತಿಸುವ ಎರಡನೇ ರಾಜ್ಯವಾಗಿದ್ದರೂ, 16ನೇ ಹಣಕಾಸು ಆಯೋಗದ ಶಿಫಾರಸಿನಲ್ಲೂ ಕರ್ನಾಟಕಕ್ಕೆ ನ್ಯಾಯ ಸಿಕ್ಕಿಲ್ಲ (ಶೇ. 4.131 ಹಂಚಿಕೆ). ಇಂತಹ ಸಂದರ್ಭದಲ್ಲಿ ಶೇ. 40ರಷ್ಟು ಹೆಚ್ಚುವರಿ ಹೊರೆ ಹೊರಿಸುವುದು ರಾಜ್ಯದ ಆರ್ಥಿಕ ಭದ್ರತೆಯನ್ನು ಅಪಾಯಕ್ಕೆ ದೂಡುವ ಹುನ್ನಾರ ಎಂದು ನಿರ್ಣಯದಲ್ಲಿ ವಿವರಿಸಲಾಗಿದೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಮೋದಿ ಇದ್ರೆ ಎಲ್ಲವೂ ಸಾಧ್ಯ- ಇದು ಬಿಜೆಪಿ ಮಂತ್ರ!
ಹೊಸ ಕಾಯ್ದೆಯು ಪಂಚಾಯತ್ ರಾಜ್ ವ್ಯವಸ್ಥೆಯ ಅಡಿಪಾಯವನ್ನೇ ಅಲುಗಾಡಿಸಿದೆ. ಈ ಹಿಂದೆ ಗ್ರಾಮಸಭೆಗಳು ತಮ್ಮ ಅಗತ್ಯಕ್ಕೆ ತಕ್ಕಂತೆ ಕಾಮಗಾರಿಗಳನ್ನು ಆಯ್ಕೆ ಮಾಡುತ್ತಿದ್ದವು. ಆದರೆ ಈಗ ದೆಹಲಿಯ ದಂತಗೋಪುರದಲ್ಲಿ ಕುಳಿತು ಯೋಜನೆಗಳನ್ನು ರೂಪಿಸಲಾಗುತ್ತಿದೆ. ಗ್ರಾಮ ಪಂಚಾಯತಿಗಳ ಅಧಿಕಾರ ಮತ್ತು ಸ್ವಾಯತ್ತತೆಯನ್ನು ಕಸಿದುಕೊಳ್ಳುವ ಮೂಲಕ ಸಂವಿಧಾನದ 73ನೇ ತಿದ್ದುಪಡಿಯ ಆಶಯವನ್ನು ಹೊಸ ಕಾಯ್ದೆ ಮುರಿದಿದೆ ಎಂದು ಸರ್ಕಾರ ದೂರಿದೆ.
“ನರೇಗಾ ಅಡಿಯಲ್ಲಿ ನಮ್ಮ ಹೊಲ-ನಮ್ಮ ದಾರಿ, ದನದ ಕೊಟ್ಟಿಗೆ, ಕಣ, ಶಾಲಾ ಕಾಂಪೌಂಡ್, ತೋಟಗಾರಿಕೆ ಬೆಳೆಗಳಂತಹ ಗ್ರಾಮೀಣ ಆಸ್ತಿಗಳನ್ನು ನಿರ್ಮಿಸಲಾಗುತ್ತಿತ್ತು. ಆದರೆ ಹೊಸ ಕಾಯ್ದೆಯನ್ನು ‘ಪಿ.ಎಂ ಗತಿಶಕ್ತಿ’ ಯೋಜನೆಗೆ ಜೋಡಿಸಲಾಗಿದೆ. ಇದರ ಅನ್ವಯ ದೊಡ್ಡ ರಸ್ತೆಗಳು ಮತ್ತು ಹೆದ್ದಾರಿಗಳ ನಿರ್ಮಾಣಕ್ಕೆ ಆದ್ಯತೆ ನೀಡುತ್ತಿರುವುದು ಪರೋಕ್ಷವಾಗಿ ಗುತ್ತಿಗೆದಾರರು ಮತ್ತು ಕಾರ್ಪೊರೇಟ್ ಕಂಪನಿಗಳಿಗೆ ಲಾಭ ಮಾಡಿಕೊಡುವ ತಂತ್ರವಾಗಿದೆ. ಇದು ಬಡವರ ಅನ್ನ ಕಸಿದು ಉಳ್ಳವರ ಜೇಬು ತುಂಬುವ ಯೋಜನೆಯಾಗಿದೆ” ಎಂದು ನಿರ್ಣಯದಲ್ಲಿ ಗಂಭೀರ ಆರೋಪ ಮಾಡಲಾಗಿದೆ.
ಹಳೆಯ ಕಾಯ್ದೆಯಲ್ಲಿ ಉದ್ಯೋಗ ಪಡೆಯುವುದು ಜನರ ‘ಹಕ್ಕು’ ಆಗಿತ್ತು. ಆದರೆ ಹೊಸ ಕಾಯ್ದೆಯಲ್ಲಿ ಇದನ್ನು ಕೇಂದ್ರದ ಮಾನದಂಡಗಳ ಹಂಗಿಗೆ ಒಳಪಡಿಸಲಾಗಿದೆ. ವರ್ಷಕ್ಕೆ 12 ತಿಂಗಳ ಬದಲು 10 ತಿಂಗಳು ಮಾತ್ರ ಕೆಲಸಕ್ಕೆ ಅವಕಾಶ ನೀಡಲಾಗಿದ್ದು, ಕೂಲಿ ದರದ ಬಗ್ಗೆಯೂ ಯಾವುದೇ ಖಚಿತತೆ ಇಲ್ಲ. ಇದು ಗ್ರಾಮೀಣ ಕೂಲಿ ಕಾರ್ಮಿಕರನ್ನು, ರೈತಾಪಿ ವರ್ಗವನ್ನು ಆಧುನಿಕ ಗುಲಾಮಗಿರಿಗೆ ತಳ್ಳುವ ಪ್ರಯತ್ನವಾಗಿದೆ ಎಂದು ಸದನ ಅಭಿಪ್ರಾಯಪಟ್ಟಿದೆ.





