ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಸದ್ಯ ನೀರಿನ ಸಮಸ್ಯೆ ತಲೆದೂರಿದೆ. ಈ ಹಿನ್ನೆಲೆ, ಜಲಮಂಡಳಿ ನೀರಿನ ಸಮಸ್ಯೆ ನಿವಾರಿಸಲು ನಾನಾ ಕ್ರಮಗಳನ್ನು ಕೈಗೊಳ್ಳುತ್ತಿದೆ. ಇದೀಗ, ನೀರು ಸೋರಿಕೆ ಪತ್ತೆಹಚ್ಚಲು ರೊಬೋಟ್ ತಂತ್ರಜ್ಞಾನದ ಬಳಕೆಗೆ ಜಲಮಂಡಳಿ ಮುಂದಾಗಿದೆ.
ಮೊದಲ ಬಾರಿಗೆ ಜಲಮಂಡಳಿ ಈ ಯೋಜನೆಯನ್ನು ಬೆಂಗಳೂರಿನಲ್ಲಿ ಜಾರಿಗೆ ತರಲು ಸಿದ್ಧತೆ ನಡೆಸಿದೆ. ಪೈಪ್ಲೈನ್ಗಳಲ್ಲಿನ ನೀರಿನ ಸೋರಿಕೆಯನ್ನು ಗುರುತಿಸಲು ರೋಬೋಟಿಕ್ ತಂತ್ರಜ್ಞಾನವನ್ನು ಬಳಸಲು ಯೋಜಿಸುತ್ತಿದ್ದು, ನಗರ ನೀರಿನ ಬಿಕ್ಕಟ್ಟನ್ನು ಎದುರಿಸುತ್ತಿರುವ ಸಮಯದಲ್ಲಿ ಇದು ಸಮಯೋಚಿತ ಕ್ರಮವಾಗಿದೆ.
“ಪೈಪ್ಲೈನ್ಗಳಲ್ಲಿನ ಲೀಕೇಜ್ ಪತ್ತೆ ಹಚ್ಚಲು ಸಣ್ಣ ರೊಬೋಟ್ಗಳನ್ನು ಪೈಪ್ಗಳಲ್ಲಿ ಇರಿಸಲು ತೀರ್ಮಾನಿಸಲಾಗಿದೆ. ಈ ರೋಬೋಟ್ಗಳು ನೀರು ಸೋರಿಕೆಯಾಗುತ್ತಿರುವ ಸ್ಥಳವನ್ನು ಗುರುತಿಸಿ ಮಾಹಿತಿ ರವಾನಿಸಲಿವೆ. ಇದರಿಂದ ಸಂಪೂರ್ಣ ಪೈಪ್ಲೈನ್ ನೆಟ್ವರ್ಕ್ನಲ್ಲಿ ನೀರು ಎಲ್ಲಿ ಸೋರಿಕೆಯಾಗುತ್ತಿದೆ ಎಂಬುದನ್ನು ಹುಡುಕಾಡುವ ಬದಲು, ನಿರ್ದಿಷ್ಟ ಸಮಸ್ಯೆ ಇರುವ ಸ್ಥಳದಲ್ಲಿ ರಿಪೇರಿ ಕೆಲಸ ನಡೆಸಬಹುದಾಗಿದೆ” ಎಂದು ಮೂಲಗಳು ತಿಳಿಸಿವೆ.
ಕಳೆದ ವರ್ಷಗಳಲ್ಲಿ ಹಳೆಯ ಪೈಪ್ಲೈನ್ಗಳನ್ನು ಹೊಸದಕ್ಕೆ ಬದಲಾಯಿಸುವ ಮೂಲಕ ಅಕ್ರಮ ನೀರಿನ ಸಂಪರ್ಕ ಕಡಿಮೆ ಮಾಡುವಂತಾಯಿತು. ಇದರಿಂದ ಜಲಮಂಡಳಿ ಅಕ್ರಮ ನೀರಿನ ಸೋರಿಕೆ ಪ್ರಮಾಣವನ್ನು ಗಣನೀಯವಾಗಿ ಕಡಿಮೆ ಮಾಡಲು ಸಾಧ್ಯವಾಯಿತು.
ಕಳೆದ 9 ವರ್ಷದಲ್ಲಿ ಅಕ್ರಮ ನೀರಿನ ಸಂಪರ್ಕ, ನೀರಿನ ಸೋರಿಕೆ, ಹಳೆ ಪೈಪ್ಲೈನ್ಗಳ ಬದಲಾವಣೆಯಲ್ಲಿ ಸಾಕಷ್ಟು ಕೆಲಸ ಮಾಡಿದ್ದು, 2015ರಲ್ಲಿ 53% ರಷ್ಟಿದ್ದ ನೀರಿನ ಸೋರಿಕೆಯನ್ನು 2024ರಲ್ಲಿ 24%ಕ್ಕೆ ಇಳಿಸಿದೆ. ಈ ರೋಬೊಟ್ಗಳು ಪೈಪ್ಲೈನ್ ಸೋರಿಕೆ ಜತೆಗೆ ಅಕ್ರಮ ನೀರಿನ ಸಂಪರ್ಕ ಹಾಗೇ, ನೀರು ಸೋರಿಕೆಯಾಗಿ ಕಲುಷಿತಗೊಳ್ಳುತ್ತಿರುವುದನ್ನು ಕೂಡ ಕಂಡು ಹಿಡಿಯಲು ಸಹಾಯಕವಾಗಲಿದೆ.
“ಜನನಿಬಿಡ ಪ್ರದೇಶಗಳಾದ ಎಂಜಿ ರಸ್ತೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪೈಪ್ಲೈನ್ಗಳು ಸಾಕಷ್ಟು ಹಳೆಯದಾಗಿವೆ. ಈ ಹಳೆಯ ಪೈಪ್ಗಳನ್ನು ಬದಲಾಯಿಸಲು ನಿರ್ಧರಿಸಿದರೆ, ಈ ಕ್ರಮ ಸಂಚಾರದ ಮೇಲೆ ಪರಿಣಾಮ ಬೀರುತ್ತದೆ. ಅಲ್ಲದೆ, ಪೈಪ್ಗಳನ್ನು ಬದಲಾಯಿಸಲು ದೀರ್ಘ ಸಮಯ ಬೇಕಾಗುತ್ತದೆ. ಪೈಪ್ ಬದಲು ಮಾಡುವವರೆಗೂ ನೀರು ಸರಬರಾಜು ನಿಲ್ಲಿಸಬೇಕಾಗುತ್ತದೆ. ಇಂತಹ ಕಡೆಗಳಲ್ಲಿ ಸಣ್ಣ ರೋಬೋಟ್ಗಳು ಉಪಯೋಗಕ್ಕೆ ಬರುತ್ತವೆ” ಎಂದು ಅಧಿಕಾರಿ ಹೇಳಿದರು.
ಈ ಸುದ್ದಿ ಓದಿದ್ದೀರಾ? ಕುಮಾರಸ್ವಾಮಿ ರಾಜ್ಯದ ಹೆಣ್ಣು ಮಕ್ಕಳ ಕ್ಷಮೆ ಕೇಳಲೇಬೇಕು : ಮುಖ್ಯಮಂತ್ರಿ ಚಂದ್ರು ಆಗ್ರಹ
“ಈ ಹೊಸ ತಂತ್ರಜ್ಞಾನವು ನೀರಿನ ಸೋರಿಕೆ ಎಲ್ಲಿಯಾಗುತ್ತಿದೆ ಎಂಬ ಬಗ್ಗೆ ನಿಖರವಾದ ಮಾಹಿತಿ ನೀಡುತ್ತದೆ. ಇದರಿಂದ ಸಮಸ್ಯೆ ಎಲ್ಲಿದೆ ಎಂಬುದನ್ನು ಗುರುತಿಸಲು ನಮಗೆ ಸಹಾಯಕವಾಗುತ್ತದೆ. ಹೆಚ್ಚಿನ ಅನಾನುಕೂಲತೆಯನ್ನು ಉಂಟುಮಾಡದೆ ನಾವು ಆ ಹಂತದಲ್ಲಿ ಪೈಪ್ಲೈನ್ ಅನ್ನು ಸರಿಪಡಿಸಬಹುದು” ಎಂದರು.
“ಇಂತಹ ಪರಿಹಾರಗಳು ಕೇವಲ ನೀರನ್ನು ಉಳಿಸಲು ಸಹಾಯ ಮಾಡುತ್ತವೆ. ಸಣ್ಣ ಪೈಪ್ಲೈನ್ ಹಾನಿಯಾಗಿರುವುದರಿಂದ, ಕೆಲವೊಮ್ಮೆ ಒಳಚರಂಡಿ ಮಾರ್ಗವು ಹತ್ತಿರದಲ್ಲಿ ಹಾದುಹೋಗಿದ್ದರೆ, ನೀರು ಮಾಲಿನ್ಯ ಆಗುವ ಸಾಧ್ಯತೆಗಳಿವೆ. ಈ ಸೋರಿಕೆಗಳನ್ನು ಗುರುತಿಸಿ ಸರಿಪಡಿಸುವ ಮೂಲಕ ಇದನ್ನು ತಪ್ಪಿಸಬಹುದು. ಇದರಿಂದ ಆರ್ಥಿಕ ಹೊರೆಯೂ ಕಡಿಮೆಯಾಗಬಹುದು” ಎಂದು ಹೇಳಿದರು.




