ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಗೃಹಮಂತ್ರಿಗಳಾಗಿದ್ದ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರು ಆರ್ಎಸ್ಎಸ್ ಎರಡು ಬಾರಿ ಬ್ಯಾನ್ ಮಾಡಿದ್ದರು. ಇದನ್ನು ಬಿಜೆಪಿಯವರು ಮರೆತಿದ್ದಾರೆ ಅನ್ಸತ್ತೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿದರು.
ಬೀದರ್ನಲ್ಲಿ ಕಾರ್ಮಿಕ ಇಲಾಖೆ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿದ ವೇಳೆ ಮಾಧ್ಯಮ ಪ್ರತಿನಿಧಿಗಳು ಕೇಳಿದ ಪ್ರಶ್ನೆಯೊಂದಿಗೆ ಈ ಮೇಲಿನಂತೆ ಉತ್ತರಿಸಿದರು.
ದೇಶ ಪ್ರೀತಿಸುವರೆಲ್ಲರೂ ಆರ್ಎಸ್ಎಸ್ ಪ್ರೀತಿಸುತ್ತಾರೆ ಎಂಬ ಪೋಸ್ಟರ್ ಅಂಟಿಸುತ್ತಿದ್ದಾರೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು ʼ ʼಬಿಜೆಪಿ ಅವರು ಏನಾದರು ಅಂಟಿಸಲಿ, ಆರ್ಎಸ್ಎಸ್ ನಲ್ಲಿ ಇದ್ದವರಷ್ಟೇ ದೇಶಪ್ರೇಮಿಗಳಲ್ಲ, ದೇಶದಲ್ಲಿರುವ ಪ್ರತಿಯೊಬ್ಬ ಭಾರತೀಯ ಪ್ರಜೆಗಳಲ್ಲೂ ದೇಶಪ್ರೇಮ ಇದೆ. ಆರ್ಎಸ್ಎಸ್ನವರಿಗೆ ಹೆಚ್ಚಿನ ದೇಶಪ್ರೇಮ ಇರುವುದಿಲ್ಲʼ ಎಂದು ಹೇಳಿದರು.
ʼಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರತಿ ವರ್ಷವೂ ಸಚಿವರಿಗೆ ಡಿನ್ನರ್ ಕರೆಯುತ್ತಾರೆ. ಸಚಿವ ಸಂಪುಟ ಪುನರ್ ರಚನೆ ಬಗ್ಗೆ ಸಿಎಂ ಅವರು ಮಾತನಾಡಿಲ್ಲ. ಒಂದು ವೇಳೆ ಸಚಿವ ಸಂಪುಟ ಪುನರ್ ರಚಿಸಬೇಕಾದರೆ ಮುಖ್ಯಮಂತ್ರಿಗಳಿಗೆ ಪೂರ್ಣ ಅಧಿಕಾರ ಇದೆ. ಹೈಕಮಾಂಡ್ ತೀರ್ಮಾನಿಸುವುದೇ ಅಂತಿಮವಾಗುತ್ತದೆʼ ಎಂದರು.
ಪ್ರಧಾನಿ ಮೋದಿಯವರು ನಮ್ಮ ಗ್ಯಾರಂಟಿ ಯೋಜನೆಗಳನ್ನು ಹಿಡಿದುಕೊಂಡು ಎಲ್ಲೆಡೆ ಓಡಾಡುತ್ತಿದ್ದಾರೆ. ಬಿಹಾರ ವಿಧಾನಸಭಾ ಚುನಾವಣೆಯಲ್ಲೂ ನಮ್ಮ ಗ್ಯಾರಂಟಿಗಳನ್ನೇ ಬಳಸುತ್ತಿದ್ದಾರೆ. ಬಿಹಾರ ಚುನಾವಣೆಯಲ್ಲಿ ಮಹಿಳೆಯರಿಗೆ ಒಂದು ಮತಕ್ಕೆ ಬಿಜೆಪಿಯವರು ₹10 ಸಾವಿರ ಕೊಡುತ್ತಿದ್ದಾರೆʼ ಎಂದು ತಿಳಿಸಿದರು
ನವೆಂಬರ್ನಲ್ಲಿ ಕ್ರಾಂತಿಯಾಗುತ್ತದೆ ಎಂದು ಬಿಜೆಪಿ ಹೇಳಿಕೆ ವಿಚಾರ ಪ್ರಸ್ತಾಪಿಸಿದ ಅವರು, ʼಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಪ್ರಧಾನಿ ಆಗುತ್ತಾರೆ. ಇದರೊಂದಿಗೆ ನವೆಂಬರ್ ಕ್ರಾಂತಿ ಆಗಲಿದೆ.ಉತ್ತಮ ರೀತಿಯಲ್ಲಿ ಕೆಲಸ ಮಾಡುತ್ತಿರುವ ನಿತಿನ್ ಗಡ್ಕರಿ ಪ್ರಧಾನಿ ಆಗುವ ಸಾಧ್ಯತೆ ಇರುವ ವಿಷಯದ ಕುರಿತು ನಮಗೂ ಕುತೂಹಲ ಇದೆʼ ಎಂದರು.
ಇದನ್ನೂ ಓದಿ : ನಿಮ್ಮ ಮಕ್ಕಳು ಆರ್ಎಸ್ಎಸ್ಗೆ ಹೋಗ್ತಾರಾ? ಎಚ್ಚರ, ಈ ಕೃತಿಗಳು ಹೇಳುವ ಸತ್ಯಗಳೇ ಬೇರೆ!
ಈ ಸಂದರ್ಭದಲ್ಲಿ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ಮತ್ತು ಪೌರಾಡಳಿತ ಸಚಿವ ರಹೀಮ್ ಖಾನ್ ಸೇರಿದಂತೆ ಇತರರು ಇದ್ದರು.





