ಬಹಳಷ್ಟು ಜನರಲ್ಲಿ ತಪ್ಪು ತಿಳುವಳಿಕೆ ಇದೆ. ಮದುವೆಗಳು ಶುಭ ಶಕುನ, ಮರಣಗಳು ಅಪಶಕುನ ಎನ್ನುತ್ತಾರೆ. ಆದರೆ ಇಲ್ಲೊಂದು ಮದುವೆ ಮಂಟಪದಲ್ಲಿ ಅಗಲಿದ ರೈತರಿಗೆ ಶ್ರದ್ದಾಂಜಲಿ ಸಲ್ಲಿಸುವ ಮೂಲಕ ಮೌಢ್ಯಕ್ಕೆ ಸೆಡ್ಡು ಹೊಡೆದು ಜರುಗಿದ ವಿಶೇಷ ಮದುವೆ ಕಾರ್ಯಕ್ರಮ ಸಮಾಜಕ್ಕೆ ಮಾದರಿಯಾಗಿದೆ.
ಯಾದಗಿರಿ ಜಿಲ್ಲೆಯರ ಸುರಪುರ ತಾಲೂಕಿನ ಸತ್ಯಂಪೇಟೆ ಗ್ರಾಮದಲ್ಲಿ ಫೆ.26 ರಂದು ಅಪರೂಪದ ಮದುವೆ ಕಾರ್ಯಕ್ರಮ ಜರುಗಿತು. ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಮಲ್ಲಿಕಾರ್ಜುನ ಸತ್ಯಂಪೇಟೆ ಹಾಗೂ ಅಮರಮ್ಮ ದಂಪತಿಯ ಸುಪುತ್ರಿ ಅಕ್ಕಮಹಾದೇವಿ ಹಾಗೂ ವಾಡಿ ಪಟ್ಟಣದ ಪಾರ್ವತಿ ಹಾಗೂ ಲಿಂಗನಗೌಡ ದಂಪತಿಗಳ ಸುಪುತ್ರ ಮಲ್ಲಿಕಾರ್ಜುನ ಅವರ ಕಲ್ಯಾಣ ಮಹೋತ್ಸವ ಇಂಥದೊಂದು ವಿಶೇಷತೆಗೆ ಸಾಕ್ಷಿಯಾಯ್ತು.
ಮದುವೆ ಕಾರ್ಯಕ್ರಮ ಆರಂಭವಾಗುವುದಕ್ಕೂ ಮುನ್ನ ಅಕಾಲಿಕವಾಗಿ ಮರಣ ಹೊಂದಿದ್ದ ಸುರಪುರ ಮತ ಕ್ಷೇತ್ರದ ಶಾಸಕ ರಾಜಾ ವೆಂಕಟಪ್ಪ ನಾಯಕ ಹಾಗೂ ನ್ಯಾಯಕ್ಕಾಗಿ ದೆಹಲಿ ಗಡಿಯಲ್ಲಿ ಪ್ರತಿಭಟಿಸುವ ವೇಳೆ ಹತ್ಯೆಯಾದ ಐವರು ಮೃತ ರೈತರನ್ನು ಸ್ಮರಿಸಿಕೊಂಡು ಎರಡು ನಿಮಿಷಗಳ ಕಾಲ ಮೌನಾಚರಣೆ ಮಾಡಲಾಯಿತು.
ಸಮಾರಂಭವು ಷಟಸ್ಥಲ ಧ್ವಜವು ಮೆರೆಯುತಿದೆ ಎಂಬ ಗೀತೆಯೊಂದಿಗೆ ಹಿರಿಯ ವಕೀಲ .ಜಿ.ಎಸ್.ಪಾಟೀಲ ಧ್ವಜಾರೋಹಣ ನೆರೆವೇರಿಸಿದರು. ಅಲ್ಲಮಪ್ರಭು ಸತ್ಯಂಪೇಟೆ, ಪ್ರಣವ ಮತ್ತು ಪ್ರಮಥ ಸತ್ಯಂಪೇಟೆ ಅವರು ವಚನ ಗೀತೆ ಹಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಕಲ್ಯಾಣ ಮಹೋತ್ಸವದ ಕೇಂದ್ರ ಬಿಂದುಗಳಾದ ಅಕ್ಕಮಹಾದೇವಿ ಮತ್ತು ಮಲ್ಲಿಕಾರ್ಜುನ ಇಬ್ಬರೂ ರಾಜ್ಯದಲ್ಲಿ ನಡೆದ ಸಂವಿಧಾನ ಜಾಥಾ ಕಾರ್ಯಕ್ರಮದಿಂದ ಪ್ರೇರಣೆಯಾಗಿ ಡಾ.ಬಿ.ಆರ್. ಅಂಬೇಡ್ಕರ್ರವರು ರಚಿಸಿದ ಭಾರತದ ಸಂವಿಧಾನ ಪೀಠಿಕೆ ಪಠಿಸಿದರು, ಬಳಿಕ ಸಂವಿಧಾನ ಹಾಗೂ ವಚನ ಪ್ರತಿಜ್ಞೆ ಸ್ವೀಕರಿಸಿದರು. ಎಲ್ಲರೂ ಮದುಮಕ್ಕಳ ಮೇಲೆ ಅಕ್ಕಿಕಾಳು ಹಾಕಿ ಧಾನ್ಯ ವ್ಯರ್ಥ ಮಾಡುವ ಬದಲಿಗೆ ಪುಷ್ಪವೃಷ್ಠಿ ಚೆಲ್ಲುವ ಮೂಲಕ ವೈಚಾರಿಕ ಪ್ರಜ್ಞಾವಂತಿಕೆ ತೋರಿದರು.

ಇದೇ ಸಂದರ್ಭದಲ್ಲಿ ನಡೆದ ಬಸವ ಮಾರ್ಗ ಪ್ರತಿಷ್ಠಾನದ ಬಸವ ಬೆಳಕು-112 ಕಾರ್ಯಕ್ರಮದಲ್ಲಿ ಪ್ರಗತಿಪರ ಚಿಂತಕ ಪ್ರೊ.ಆರ್.ಕೆ.ಹುಡುಗಿ ಮಾತನಾಡಿ,”ಮದುವೆಗಳು ಸ್ವರ್ಗದಲ್ಲಿ ನಿರ್ಧಾರವಾಗಿರುತ್ತವೆ ಎಂಬ ಮಾತನ್ನು ಅಲ್ಲಗಳೆಯಬೇಕು. ಭೂಮಿಯ ಮೇಲೆಯೇ ಮದುವೆ ನಡೆಯುತ್ತವೆ. ಸತಿಪತಿಗಳೊಂದಾದ ಭಕ್ತಿ ಹಿತವಾಗಿಪ್ಪುದು ಶಿವಂಗೆ ಎನ್ನುವಂತೆ ವಧು-ವರರು ಕೂಡಿ ಸಾಮರಸ್ಯದಿಂದ ಬಾಳುವುದು ಬದುಕಿನ ಗುಟ್ಟು” ಎಂದು ನುಡಿದರು.
ಕರ್ನಾಟಕ ರಾಜ್ಯ ರೈತ ಸಂಘದ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ನಾಗರತ್ನ ಬಿ. ಪಾಟೀಲ, ಸಿಪಿಐಎಂ ಮುಖಂಡ ಚೆನ್ನಪ್ಪ ಆನೇಗುಂದಿ, ಗುರುಮಿಠಕಲ್ ನ ಶಾಂತವೀರ ಸ್ವಾಮೀಜಿ, ಚಿಗರಹಳ್ಳಿಯ ಸಿದ್ದಬಸವ ಸ್ವಾಮೀಜಿ, ಇಂಧೂದರ ಸ್ವಾಮೀಜಿ, ಚಿಂತಕ ಶಿವಣ್ಣ ಇಜೇರಿ ಮಾತನಾಡಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ‘ಪ್ರಸಾದ ಬೇಡ ಬಸ್ ಬೇಕು’ ಎಂದ ಬಾಲಕಿಯ ಮನವಿಯಲ್ಲಿದೆ ಮಹತ್ವದ ಸಂದೇಶ
ಸಮಾರಂಭದಲ್ಲಿ ರೈತ, ಕಾರ್ಮಿಕ, ದಲಿತ ಸಂಘಟನೆಗಳ ಮುಖಂಡರು, ಸಾಮಾಜಿಕ ಚಿಂತಕರು ಸೇರಿದಂತೆ ಸತ್ಯಂಪೇಟೆ ಕುಟುಂಬದ ನೂರಾರು ಸಂಬಂಧಿಕರು ಮದುವೆಗೆ ಕಳೆ ತಂದು ಕೊಟ್ಟರು. ಪತ್ರಕರ್ತ ಡಾ. ಶಿವರಂಜನ ಸತ್ಯಂಪೇಟೆ ನಿರೂಪಿಸಿದರು. ವಿಶ್ವಾರಾಧ್ಯ ಸತ್ಯಂಪೇಟೆ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಸಂಗಣ್ಣ ಗುಳಗಿ ವಂದಿಸಿರು. ಸಾಕ್ಷಿ ಎಸ್. ಹಾಗೂ ಗುರುದೇವಿ ನರಕಲದಿನ್ನಿ ಸಂಗಡಿಗರು ಕಲ್ಯಾಣ ಮಹೋತ್ಸವ ಕಾರ್ಯಕ್ರಮ ನೆರವೇರಿಸಿದರು.

ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ ಅವರು ಔರಾದ್ ತಾಲ್ಲೂಕಿನ ಚಟ್ನಾಳ ಗ್ರಾಮದವರು. ಸಾಹಿತ್ಯ, ಶಿಕ್ಷಣ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಸದ್ಯ 'ಈದಿನ.ಕಾಮ್' ಮಾಧ್ಯಮ ಸಂಸ್ಥೆಯಲ್ಲಿ ಬೀದರ್ ಜಿಲ್ಲಾ ಹಿರಿಯ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕವಿತೆ, ಲೇಖನ, ದೇಶಿ ನುಡಿ ಬರಹ ಬರೆಯುವುದು ಇವರ ಮುಖ್ಯ ಹವ್ಯಾಸ.




