ಸರೋಜಿನಿ ದಾಮೋದರನ್ ಫೌಂಡೇಶನ್ (ಎಸ್ಡಿಎಫ್)ನಿಂದ 2025ರಲ್ಲಿ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಉತ್ತೀರ್ಣರಾದ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ಪ್ರತಿಭಾವಂತ ವಿದ್ಯಾರ್ಥಿಗಳಿಂದ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನಿಸಿದೆ.
ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು 2025ರಲ್ಲಿ ಕರ್ನಾಟಕ ರಾಜ್ಯದಿಂದ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ಶೇಕಡಾ 90ರಷ್ಟು ಅಂಕ ಅಥವಾ ಎಲ್ಲಾ ವಿಷಯಗಳಲ್ಲಿ A+ ಗ್ರೇಡ್ ಪಡೆದಿರಬೇಕು. ವಿದ್ಯಾರ್ಥಿ ಅಂಗವೈಕಲ್ಯ ಹೊಂದಿದ್ದರೆ ಶೇಕಡಾ 75ರಷ್ಟು ಅಂಕ ಪಡೆದಿರಬೇಕು. ಕುಟುಂಬದ ವಾರ್ಷಿಕ ಆದಾಯ ರೂ. 2 ಲಕ್ಷಕ್ಕಿಂತ ಕಡಿಮೆ ಹೊಂದಿರಬೇಕು.
ವಿದ್ಯಾರ್ಥಿ ವೇತನಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಅವರ ಪಿಯುಸಿ ಅಧ್ಯಯನದ ಅವಧಿಯಲ್ಲಿ ವರ್ಷಕ್ಕೆ 10,000 ರೂ. ವಿದ್ಯಾರ್ಥಿ ವೇತನ ನೀಡಲಾಗುತ್ತದೆ. ಬಳಿಕ ಅವರ ಪದವಿಯನ್ನು ಮುಂದುವರಿಸಲು ಪದವಿಗೆ ಅನುಗುಣವಾಗಿ ವರ್ಷಕ್ಕೆ 15,000 ರೂಪಾಯಿಯಿಂದ 75.000 ರೂಪಾಯಿವರೆಗೆ ವಿದ್ಯಾರ್ಥಿ ವೇತನವನ್ನು ನೀಡಲಾಗುತ್ತದೆ.
ಆಸಕ್ತ ವಿದ್ಯಾರ್ಥಿಗಳು www.vidyadhan.org ಗೆ ಭೇಟಿ ನೀಡುವ ಮೂಲಕ ಅಥವಾ ಗೂಗಲ್ ಪ್ಲೇ ಸ್ಟೋರ್ನಲ್ಲಿ ‘SDF Vidya’ ಆಪ್ ಬಳಸುವ ಮೂಲಕ ಅರ್ಜಿ ಸಲ್ಲಿಸಬಹುದು. 2025 ಮೇ 19ರಿಂದ ಆರಂಭವಾಗಿರುವ ಕರ್ನಾಟಕ ವಿದ್ಯಾರ್ಥಿ ವೇತನದ ಅರ್ಜಿಗಳು 2025 ಜುಲೈ 8ರವರೆಗೆ ಲಭ್ಯವಿದೆ. ಹೆಚ್ಚಿನ ಮಾಹಿತಿಗಾಗಿ ವಿದ್ಯಾರ್ಥಿಗಳು ಮೊಬೈಲ್ ಸಂಖ್ಯೆ +91 8068 33 3500 ಸಹಾಯವಾಣಿಯನ್ನು ಸಂಪಕರ್ಕಿಸಬಹುದಾಗಿದೆ.
ಈ ಬಗ್ಗೆ ಬೆಂಗಳೂರು ಪ್ರೆಸ್ಕ್ಲಬ್ನಲ್ಲಿ ಶನಿವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಸರೋಜಿನಿ ದಾಮೋದರನ್ ಫೌಂಡೇಶನ್ ಇದರ ಸಂಯೋಜಕರು, ರಾಜ್ಯದ ಎಲ್ಲಾ ಜಾತಿ, ಧರ್ಮಗಳ ವಿದ್ಯಾರ್ಥಿಗಳು ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳಿಗೆ ಆನ್ಲೈನ್ನಲ್ಲಿ ಅರ್ಹತಾ ಪರೀಕ್ಷೆ, ವೈಯಕ್ತಿಕ ಸಂದರ್ಶನ ಹಾಗೂ ಅವರ ಮನೆಗೆ ಭೇಟಿ ನೀಡಿ ಮಾಹಿತಿ ಪಡೆಯುವ ಮೂಲಕ ಅರ್ಹರಾದ ವಿದ್ಯಾರ್ಥಿಗಳನ್ನು ವಿದ್ಯಾರ್ಥಿ ವೇತನಕ್ಕೆ ಆಯ್ಕೆ ಮಾಡಲಾಗುವುದು ಎಂದು ತಿಳಿಸಿದರು.
ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ಆದಾಯ ಪ್ರಮಾಣ ಪತ್ರ, ಎಸ್.ಎಸ್.ಎಲ್.ಸಿ. ಅಂಕಪಟ್ಟಿ, ಭಾವಚಿತ್ರ, ಅಂಗವೈಕಲ್ಯತೆ ಇದ್ದರೆ ಅಂಗವೈಕಲ್ಯ ಪ್ರಮಾಣಪತ್ರ, ವಿದ್ಯಾರ್ಥಿಯ ಹೆಸರಿನ ಇ-ಮೇಲ್ ಐಡಿಯನ್ನು ಒದಗಿಸಬೇಕು. ಆಯ್ಕೆಯಾದ ವಿದ್ಯಾರ್ಥಿಗಳಿಗೆ ಪ್ರಥಮ ಮತ್ತು ದ್ವಿತೀಯ ಪಿಯುಸಿ ಹಾಗೂ ದ್ವಿತೀಯ ಪಿಯುಸಿ ಅಂಕದ ಆಧಾರದ ಮೇಲೆ ಪದವಿ ಶಿಕ್ಷಣಕ್ಕೂ ವಿದ್ಯಾರ್ಥಿ ವೇತನವನ್ನು ಮುಂದುರಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಸುಜಾತಾ, ಕಲ್ಪನಾ, ಪವಿತ್ರಾ, ಜೆಸ್ವಿನ್ ಉಪಸ್ಥಿತರಿದ್ದರು.





