ಮಡಿಕೇರಿಯ ಸೋಮವಾರಪೇಟೆ ತಾಲ್ಲೂಕಿನ ಮೆಟ್ಲು ಗ್ರಾಮದಲ್ಲಿ ಬಾಲಕಿಯನ್ನು ಕೊಂದು ಆಕೆಯ ರುಂಡದೊಂದಿಗೆ ಪರಾರಿಯಾಗಿದ್ದ ಆರೋಪಿ ಪ್ರಕಾಶ್ (32) ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬ ಸಂಗತಿ ಸುಳ್ಳಾಗಿದೆ.
ಕೊಲೆ ಬಳಿಕ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ಶುಕ್ರವಾರ ವ್ಯಕ್ತವಾಗಿತ್ತು. ಈತನಿಗಾಗಿ ಹಗಲು ರಾತ್ರಿ ನಿರಂತರವಾಗಿ ಶೋಧ ಕಾರ್ಯ ನಡೆದಿದ್ದು, ಶನಿವಾರ ಬೆಳಿಗ್ಗೆ ಹಮ್ಮಿಯಾಳ ಗ್ರಾಮದ ಸಮೀಪ ಕಾಡಿನಲ್ಲಿ ಈತ ಅವಿತುಕೊಂಡಿರುವ ಕುರಿತ ಮಾಹಿತಿ ಲಭಿಸಿದೆ. “ಕೂಡಲೇ ಆತನನ್ನು ಬಂಧಿಸಲಾಯಿತು. ಇನ್ನು ಬಾಲಕಿಯ ರುಂಡದ ಕುರಿತು ಇನ್ನಷ್ಟೇ ತನಿಖೆ ನಡೆಸಬೇಕಿದೆ” ಎಂದು ಪೊಲೀಸರು ತಿಳಿಸಿದ್ದಾರೆ.
“ಆರೋಪಿಯನ್ನು ಬಂಧಿಸಿರುವುದು ನಿಜ. ಆದರೆ ಬಾಲಕಿಯ ರುಂಡ ಇನ್ನೂ ಪತ್ತೆಯಾಗಿಲ್ಲ” ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಹೇಳಿದ್ದಾರೆ.
ಕಳೆದೊಂದು ವರ್ಷದಿಂದ ಆರೋಪಿ ಪ್ರಕಾಶ್, ಕೊಲೆಯಾದ ಬಾಲಕಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಮೀನಾ ಇಬ್ಬರೂ ಪ್ರೀತಿಸುತ್ತಿದ್ದರು. ನಿನ್ನೆ ಪ್ರಕಟಗೊಂಡ ಫಲಿತಾಂಶದಲ್ಲಿ ದ್ವಿತೀಯ ದರ್ಜೆಯಲ್ಲಿ ಪಾಸಾಗಿದ್ದಾಳೆ ಎಂದು ತಿಳಿದುಬಂದಿದೆ.





