ಕಲಬುರಗಿಯವರು ಯಾರಿಗೂ ಹೆದರಿದ್ದವರಲ್ಲ. ಗುಲಗುಂಜಿಯಷ್ಟಾದರೂ ತನ್ನದಲ್ಲದ್ದನ್ನು ಮುಟ್ಟಿ ಕಿತ್ತುಕೊಂಡಿರಲಿಲ್ಲ. ಬದುಕಿದ್ದಾಗಲೂ ಕಿಡಿಗೇಡಿಗಳ ಕೆಡುನುಡಿ; ಸತ್ತಾಗಲೂ ಅವರದು ಅದೇ ಸುಡುನುಡಿ… ಈ ಹತ್ತು ವರ್ಷಗಳಲ್ಲಿ ಯಾವುದೂ ಬದಲಾಗಿಲ್ಲ...
…ಕುಲಪತಿ ಅವಧಿ ಮುಗಿದಿತ್ತು. ಅವರ ಬಗ್ಗೆ ಎಲ್ಲರಿಗೂ ಭಯವಿತ್ತು. ಆ ಭಯ ಕಳ್ಳತನದ ಭಯವಾಗಿತ್ತು. ಹಾಗಾಗಿ ಸದ್ಯ ಆ ಮುದುಕ ಹೋದ ಎಂದು ಕ್ಯಾಂಟೀನಿನ ಬಳಿ ಬೂಸಾ ವಿದ್ವಾಂಸರು ನಿರಾಳತೆಯ ಪ್ರದರ್ಶಿಸಿದ್ದರು. ನನಗೆ ಸಂಕಟವಾಯಿತು.
‘ಅಲ್ಲಯ್ಯಾ… ಯೋಗ್ಯತೆ ಇಲ್ಲದವರು… ಕಾಗುಣಿತ ಬರದವರು… ವಿವೇಕವೇ ಇಲ್ಲದವರೆಲ್ಲ, ಸಂಸ್ಕೃತಿ ಚಿಂತಕರು, ಸಂಶೋಧಕರು ಎಂದು ಮೀಸೆ ತಿರುಗುವ ಮಂದಿ ಮುಂದೆ ನೀನು ಎಲ್ಲ ಗೊತ್ತಿದ್ದರೂ ಏನೂ ಬೇಡ ಎಂದು ಕಾಲದ ಯಾವುದೋ ಹೊಡೆತಕ್ಕೆ ಜಾರಿ ತೂರಿ ಹೋಗುತ್ತಿದ್ದೀಯಲ್ಲಯ್ಯಾ… ಇದು ನ್ಯಾಯವೇ… ಅಂಬೇಡ್ಕರ್ ಅವರಿಂದ ನೀನು ಏನನ್ನೂ ಕಲಿಯಲಿಲ್ಲವೇ… ನೀನು ಬರೆಯಬೇಕಾದ್ದ ನೀನೇ ಬರೆಯಬೇಕು… ಅದನ್ನು ಬೇರೆಯವರು ಬರೆಯಲಾಗದು… ಬರೆಯಲೂ ಬಾರದು… ಛೇ…’ ಎಂದು ಉಳಿದಿದ್ದ ಮಾತುಗಳ ಆಡದೆ ನುಂಗಿಕೊಂಡಿದ್ದರು. ಅವತ್ತು ಅವರ ಮಾತು ನಾಟಿರಲಿಲ್ಲ.
ಕಲಬುರಗಿ ಅವರು ಯಾವ ಬೀಳ್ಕೊಡುಗೆಯನ್ನು ಬಯಸಿರಲಿಲ್ಲ. ಅತ್ಯಂತ ಸರಳ ಗಾಂಧಿವಾದಿ ಸಂಶೋಧಕ. ಯಾರಿಗೂ ಹೆದರಿದ್ದವರಲ್ಲ. ಗುಲಗುಂಜಿಯಷ್ಟಾದರೂ ತನ್ನದಲ್ಲದ್ದನ್ನು ಮುಟ್ಟಿ ಕಿತ್ತುಕೊಂಡಿರಲಿಲ್ಲ. ಕ್ಯಾಂಪಸ್ಸಿನಿಂದ ಧಾರವಾಡಕ್ಕೆ ಅವರೇ ಒಂದು ಸರ್ಕಾರಿ ಬಸ್ಸು ಹಾಕಿಸಿದ್ದರು. ಬಾಂಧವ್ಯದ ಸೇತುವೆಯಂತೆ.
ಇದನ್ನು ಓದಿದ್ದೀರಾ?: ಕನ್ನಡ ನಾಡಿಗೆ ಗೌರವ ತಂದ ಬಾನು ಮುಷ್ತಾಕ್ಗೆ ಅಗೌರವ ಸರಿಯಲ್ಲ
ಆ ಬಸ್ಸಿಗಾಗಿ ಕಾಯುತ್ತ ರಸ್ತೆ ಬದಿಯ ಒಂದು ಮರದ ಕೆಳಗೆ ರಣಬಿಸಿಲಲ್ಲಿ ತಮ್ಮ ಮಡದಿ ಅವರನ್ನೂ ಕಟ್ಟಿಕೊಂಡು ನಿಂತಿದ್ದರು, ಧಾರವಾಡದ ಸ್ವಂತ ಮನೆಗೆ ತೆರಳಲು. ಕಾರಲ್ಲಿ ಹೋಗಬಹುದಿತ್ತು. ಬೇಡ ಎಂದಿದ್ದರು. ತಡೆಯಲಾಗಲಿಲ್ಲ. ಹತ್ತಿರ ಹೋಗಿ ಕೈ ಮುಗಿದೆ. ‘ಏನಪ್ಪಾ: ಈಗ ಬಂದೀ ಪಯಣ ಮಾಡೋವಾಗ…’ ಎನ್ನುತ್ತಿದ್ದಂತೆಯೇ ಆ ಬಸ್ಸು ಬಂದೇ ಬಿಟ್ಟಿತು. ತಾವೇ ಪುಟ್ಟ ಟ್ರಂಕನ್ನು ಬಸ್ಸಲ್ಲಿ ಇಟ್ಟುಕೊಂಡು ತಮ್ಮ ಹೆಂಡತಿಯ ಬಸ್ಸೇರಿಸಿ ‘ಬರ್ತೀನಪ್ಪಾ’ ಎಂದು ಕೈ ಬೀಸಿದರು.
ಕಣ್ಣು ಒದ್ದೆಯಾದವು. ಕೃತಜ್ಞಹೀನ ಜನರ ನಡೆತೆಗೆ ತಲೆ ತಗ್ಗಿಸಿದೆ. ಈ ಲೋಕವೇ ಹೀಗೆ… ಬದುಕಿದ್ದಾಗ ಬೈಯ್ಯೋದು; ಸತ್ತಾಗ ಹೊಗಳೋದು… ಅಂತಹ ಎಷ್ಟೊಂದು ಜನರ ಕಂಡಿರುವೆ… ನಾನು ಸತ್ತಾಗ… ನನ್ನದೇ ಬೇರೆ! ಬದುಕಿದ್ದಾಗಲೂ ಕಿಡಿಗೇಡಿಗಳ ಕೆಡುನುಡಿ; ಸತ್ತಾಗಲೂ ಅವರದು ಅದೇ ಸುಡುನುಡಿ… ಅದಕ್ಕೂ ಪಡೆದು ಬಂದಿರಬೇಕು ಬಿಡು ಎಂದು ಕೂತೇ ಇದ್ದೆ. ಅವರದೇ ಮಾತು ವಿಚಾರ ವ್ಯಕ್ತಿತ್ವ ಕಾಡುತಿದ್ದವು.
-ಮೊಗಳ್ಳಿ ಗಣೇಶ್
(‘ನಾನೆಂಬುದು ಕಿಂಚಿತ್ತು’ ಆತ್ಮಕಥನದಿಂದ ಆಯ್ದ ಭಾಗ)





