“ಕುವೆಂಪು ರೀತಿಯಲ್ಲಿ ಕನ್ನಡ ರಾಷ್ಟ್ರೀಯತೆಯನ್ನು ಕಟ್ಟಿದ ಮಹನೀಯರಲ್ಲಿ ಡಾ.ರಾಜಕುಮಾರ್ ಮೇರು ಸ್ಥಾನದಲ್ಲಿ ನಿಲ್ಲುತ್ತಾರೆ. ಕುವೆಂಪು ಆಶಯ, ಬಸವಣ್ಣನ ಕಾಯಕ ಪ್ರಜ್ಞೆಯನ್ನು ರಾಜಕುಮಾರ್ ಅವರ ಅನೇಕ ಸಿನಿಮಾಗಳು ಮೈಗೂಡಿಸಿಕೊಂಡಿವೆ” ಎಂದು ಹಿರಿಯ ಪತ್ರಕರ್ತರಾದ ಚ ಹ ರಘುನಾಥ ಅಭಿಪ್ರಾಯಪಟ್ಟರು.
ಬೆಂಗಳೂರಿನ ಚಿತ್ರಕಲಾ ಪರಿಷತ್ತಿನಲ್ಲಿ ಶನಿವಾರದಂದು (ಜ.10) ನಡೆದ ಡಾ.ಮಂಜುನಾಥ ಅದ್ದೆ ಅವರ ಸಂಶೋಧನಾ ಕೃತಿ ‘ಬಡವರ ರಾಜಕುಮಾರ’ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಪುಸ್ತಕದ ಕುರಿತು ಮಾತನಾಡಿದರು.
“ರಾಜಕುಮಾರ್ ಕುರಿತು ವ್ಯಕ್ತಿ ನಿಷ್ಠವಾಗಿ ಅನೇಕ ಕೃತಿಗಳು ಬಂದಿವೆ. ಆದರೆ ವಸ್ತು ನಿಷ್ಠವಾಗಿ ಇಲ್ಲಿಯವರೆಗೂ ಒಂದೂ ಕೃತಿ ಬಂದಿಲ್ಲ. ಜನರ ನಾಯಕನಾಗಿ ರಾಜಕುಮಾರ್ ಏರಿದ ಸ್ಥಾನವನ್ನು ಯಾರಿಗೂ ತಲುಪಲು ಸಾಧ್ಯವಿಲ್ಲ. ಶ್ರೀಮಂತರ ರಾಜಕುಮಾರ್ ಎಂದಿಗೂ ಬಡವರ ಕೇರಿಗೆ ಬರುವುದಿಲ್ಲ. ಆದರೆ ಬಡವರ ರಾಜಕುಮಾರ್ ಎಲ್ಲ ಕಡೆಯೂ ಇರುತ್ತಾರೆ. ರಾಜಕುಮಾರ್ ಬೇಕಿರುವುದು ಬಡವರಿಗಾಗಿಯೇ ಹೊರತು, ಉದ್ಯಮದವರಿಗಲ್ಲ” ಎಂದು ಹೇಳಿದರು.
“ಸಿನಿಮಾ ಕೇವಲ ಮನರಂಜನಾ ಮಾಧ್ಯಮವಲ್ಲ. ಅದಕ್ಕೆ ಕನ್ನಡದ ಸಂಸ್ಕೃತಿಯ ಹೊಣೆಗಾರಿಕೆ ಇದೆ ಅನ್ನುವುದನ್ನು ಮರೆಯಬಾರದು” ಎಂದರು.

ದಲಿತ ಸಂಘರ್ಷ ಸಮಿತಿಯ ಮುಖಂಡರಾದ ಮಾವಳ್ಳಿ ಶಂಕರ್ ಮಾತನಾಡಿ “ತಳಸಮುದಾಯದಿಂದ ಬಂದ ರಾಜಕುಮಾರ್ ವೈದಿಕ ಕುತಂತ್ರವನ್ನು ಮೆಟ್ಟಿನಿಂತು ಜನಮಾನಸದಲ್ಲಿ ಉಳಿದುಕೊಂಡರು. ಗೋಕಾಕ್ ಚಳುವಳಿಯ ವೇಳೆ ರಾಜಕುಮಾರ್ ಆ ವೇದಿಕೆಗೆ ಬರದಿದ್ದರೆ, ಇಂದಿನ ಕನ್ನಡ ಊಹಿಸಲು ಸಾಧ್ಯವಿಲ್ಲ” ಎಂದು ಅಭಿಪ್ರಾಯಪಟ್ಟರು.
“ನಮ್ಮ ತಾತನ (ರಾಜಕುಮಾರ್) ನಡವಳಿಕೆಯೇ ನಮಗೆ ಮಾದರಿ. ತಾತನ ಶ್ರಮ ಮತ್ತು ಅವರ ಶಿಸ್ತು ನಮ್ಮ ಬದುಕನ್ನು ಕಟ್ಟಿಕೊಟ್ಟಿದೆ” ಎಂದು ರಾಜಕುಮಾರ್ ಅವರ ಮೊಮ್ಮಗ ಹಾಗೂ ನಟ ವಿನಯ್ ರಾಜಕುಮಾರ್ ಹೇಳಿದರು.
“ರಾಜಕುಮಾರ್ ಅವರ ಅನೇಕ ಸಿನಿಮಾಗಳನ್ನು ನೋಡಿ ಬೆಳೆದಿದ್ದೇನೆ. ಅದೇ ರೀತಿ ನನ್ನ ಪರಿಶ್ರಮ, ಹೋರಾಟ, ಬೆವರನ್ನು ನಂಬಿ ಬದುಕುತ್ತಿದ್ದೇನೆ. ಇತ್ತೀಚೆಗೆ ತುಂಬಾ ಇಷ್ಟಪಟ್ಟು ಓದುತ್ತಿರುವುದು ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು” ಎಂದು ನಟ ದುನಿಯಾ ವಿಜಯ್ ಹೇಳಿದರು.

“ಕರ್ನಾಟಕದಲ್ಲಿ ಸಿನಿಮಾ ಕ್ಷೇತ್ರದಲ್ಲಿ ರಾಜಕುಮಾರ್ ಅವರ ಸಿನಿಮಾಗಳು ದೊಡ್ಡ ಕ್ರಾಂತಿಯನ್ನೇ ಮಾಡಿವೆ. ಅದೇ ರೀತಿಯಲ್ಲಿ ರಾಜಕುಮಾರ್ ಅವರು ಬದುಕಿದ್ದ ಕಾಲಘಟ್ಟದಲ್ಲಿ ನಾವೆಲ್ಲ ಬದುಕಿದ್ದೆವು ಎನ್ನುವುದೇ ನಮ್ಮ ಸೌಭಾಗ್ಯ” ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ.ಪುರುಷೋತ್ತಮ ಬಿಳಿಮಲೆ ಅಭಿಪ್ರಾಯಪಟ್ಟರು.
ವೇದಿಕೆಯ ಮೇಲೆ ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ಡಾ.ಆರ್.ಸುನಂದಮ್ಮ, ಕೃತಿಯ ಕರ್ತೃ ಡಾ.ಮಂಜುನಾಥ್ ಅದ್ದೆ, ಕೌದಿ ಪ್ರಕಾಶನದ ಮುಖ್ಯಸ್ಥರಾದ ಡಾ.ಮಮತಾ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಧನಲಕ್ಷ್ಮೀ ದೇವರಾಜ್ ನಿರೂಪಣೆ ಮಾಡಿದರು.






