ರಾಜ್ಯ ವಿಧಾನಮಂಡಲದ ಇತಿಹಾಸದಲ್ಲೇ ಹಿಂದೆಂದೂ ಕಾಣದಂತಹ ಅಸಾಂವಿಧಾನಿಕ ಹಾಗೂ ಕಸಿವಿಸಿ ಉಂಟುಮಾಡುವ ವಿದ್ಯಮಾನವೊಂದಕ್ಕೆ ಗುರುವಾರ ವಿಧಾನಸಭೆ ಸಾಕ್ಷಿಯಾಯಿತು. ಸಂವಿಧಾನದ ಆಶಯಗಳನ್ನು ಎತ್ತಿಹಿಡಿಯಬೇಕಾದ ರಾಜ್ಯಪಾಲರೇ, ಜಂಟಿ ಅಧಿವೇಶನವನ್ನುದ್ದೇಶಿಸಿ ಮಾತನಾಡದೆ ಸದನದಿಂದ ಹೊರನಡೆದಿದ್ದು, ರಾಜ್ಯ ಸರ್ಕಾರದ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಈ ಕುರಿತು ರಾಜ್ಯಪಾಲರ ನಡೆಯನ್ನು ತೀವ್ರವಾಗಿ ಖಂಡಿಸಿರುವ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್ ಕೆ ಪಾಟೀಲ್, “ಇಂದು ಪ್ರಜಾಪ್ರಭುತ್ವದ ಇತಿಹಾಸದಲ್ಲಿ ಒಂದು ಕಪ್ಪು ದಿನ. ಸಂವಿಧಾನದ ರಕ್ಷಕರಾಗಬೇಕಿದ್ದ ರಾಜ್ಯಪಾಲರೇ ತಮ್ಮ ಸಾಂವಿಧಾನಿಕ ಕರ್ತವ್ಯವನ್ನು ನಿರ್ವಹಿಸುವಲ್ಲಿ ವಿಫಲರಾಗಿದ್ದಾರೆ,” ಎಂದು ಕಿಡಿಕಾರಿದ್ದಾರೆ.
ರಾಜ್ಯಪಾಲರ ಈ ಅನಿರೀಕ್ಷಿತ ಮತ್ತು ಅಸಹಜ ನಡೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ರಾಜ್ಯಪಾಲರ ವಿರುದ್ಧ ಹರಿಹಾಯ್ದರು. “ಜಂಟಿ ಅಧಿವೇಶನವನ್ನುದ್ದೇಶಿಸಿ ಪೂರ್ಣವಾಗಿ ಭಾಷಣ ಮಾಡುವುದು ರಾಜ್ಯಪಾಲರ ಹೊಣೆಗಾರಿಕೆ ಮತ್ತು ಬಾಧ್ಯತೆಯಾಗಿತ್ತು. ಆದರೆ, ಅವರು ಸದನಕ್ಕೆ ಮತ್ತು ಸಂವಿಧಾನಕ್ಕೆ ಅಗೌರವ ತೋರಿದ್ದಾರೆ. ಈ ಮೂಲಕ ಅವರು ಸಂವಿಧಾನಕ್ಕೆ ಅವಮಾನ ಎಸಗಿದ್ದಾರೆ,” ಎಂದು ಗಂಭೀರ ಆರೋಪ ಮಾಡಿದರು.
ಇದನ್ನು ಓದಿದ್ದೀರಾ? ರಾಜ್ಯಪಾಲರು ತಮ್ಮ ಭಾಷಣ ಓದಿರುವುದು ಸಂವಿಧಾನದ ಉಲ್ಲಂಘನೆ: ಸಿಎಂ ಸಿದ್ದರಾಮಯ್ಯ
ರಾಜ್ಯಪಾಲರ ಈ ನಿರ್ಲಕ್ಷ್ಯದ ಧೋರಣೆಯನ್ನು ಸರ್ಕಾರ ಲಘುವಾಗಿ ಪರಿಗಣಿಸಿಲ್ಲ ಎಂದಿರುವ ಎಚ್.ಕೆ. ಪಾಟೀಲ್, “ರಾಜ್ಯಪಾಲರ ಈ ನಡೆಯ ವಿರುದ್ಧ ನಾವು ಸೂಕ್ತ ನಿರ್ಧಾರವನ್ನು ತೆಗೆದುಕೊಳ್ಳುತ್ತೇವೆ,” ಎಂದು ಎಚ್ಚರಿಸಿದ್ದಾರೆ. ಸಂಪುಟವು ಒಪ್ಪಿ ಕಳುಹಿಸಿದ ಭಾಷಣವನ್ನು ಓದದೇ ಇರುವುದು ಅಥವಾ ಅರ್ಧಕ್ಕೆ ಮೊಟಕುಗೊಳಿಸಿ ಹೋಗುವುದು ಚುನಾಯಿತ ಸರ್ಕಾರಕ್ಕೆ ಮಾಡಿದ ಅವಮಾನ ಎಂದು ಅವರು ಹೇಳಿದ್ದಾರೆ.
ಸಂಪ್ರದಾಯದಂತೆ, ವಿಧಾನಮಂಡಲದ ಜಂಟಿ ಅಧಿವೇಶನದಲ್ಲಿ ಸರ್ಕಾರದ ನೀತಿ ನಿರೂಪಣೆಗಳನ್ನು ಒಳಗೊಂಡ ಭಾಷಣವನ್ನು ರಾಜ್ಯಪಾಲರು ಓದಬೇಕಿತ್ತು. ಇದು ಕೇವಲ ಔಪಚಾರಿಕತೆಯಲ್ಲದೆ, ಸಂವಿಧಾನದ ವಿಧಿ 176ರ ಅಡಿಯಲ್ಲಿನ ಕಡ್ಡಾಯ ಪ್ರಕ್ರಿಯೆಯಾಗಿದೆ. ಆದರೆ, ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ತಮ್ಮ ಸಾಂವಿಧಾನಿಕ ಜವಾಬ್ದಾರಿಯನ್ನು ಮರೆತು ಸದನದಿಂದ ಹೊರನಡೆದಿರುವುದು ಅವರ ಹುದ್ದೆಯ ಘನತೆಗೆ ತಕ್ಕುದಲ್ಲ ಎಂಬ ಮಾತುಗಳು ಎಲ್ಲಡೆ ಕೇಳಿಬರುತ್ತಿವೆ.





