ರಾಜ್ಯದಲ್ಲಿರುವ ವಕ್ಫ್ ಆಸ್ತಿಗಳು ಒತ್ತುವರಿಯಾಗುತ್ತಿರುವುದಕ್ಕೆ ಕೇವಲ ಹೊರಗಿನವರು ಮಾತ್ರವಲ್ಲ, ಸ್ವತಃ ಮುಸ್ಲಿಂ ಸಮುದಾಯದವರೇ ಹೆಚ್ಚಿನ ಪ್ರಮಾಣದಲ್ಲಿ ಹೊಣೆಗಾರರು ಎಂದು ಅಲ್ಪಸಂಖ್ಯಾತರ ಕಲ್ಯಾಣ ಮತ್ತು ವಕ್ಫ್ ಸಚಿವ ಬಿ.ಜೆಡ್. ಜಮೀರ್ ಅಹ್ಮದ್ ಖಾನ್ ಕಳವಳ ವ್ಯಕ್ತಪಡಿಸಿದ್ದಾರೆ ಎಂದು ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ.
ವಿಧಾನಸಭೆಯಲ್ಲಿ ಕಾಂಗ್ರೆಸ್ ಶಾಸಕ ಡಿ ವೈ ಪಾಟೀಲ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, “ನಮ್ಮ ಸಮುದಾಯದವರೇ ವಕ್ಫ್ ಆಸ್ತಿಗಳನ್ನು ಅಕ್ರಮವಾಗಿ ಅತಿಕ್ರಮಿಸಿಕೊಂಡಿದ್ದಾರೆ ಅಥವಾ ಮಾರಾಟ ಮಾಡಿದ್ದಾರೆ,” ಎಂದು ಸಚಿವರು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ದಾಖಲೆಗಳ ಪ್ರಕಾರ ರಾಜ್ಯದಲ್ಲಿ ಒಟ್ಟು ಸುಮಾರು 1,12,000 ಎಕರೆ ವಕ್ಫ್ ಆಸ್ತಿ ಇದೆ. ಆದರೆ, ಸದ್ಯ ವಕ್ಫ್ ಮಂಡಳಿಯ ವಶದಲ್ಲಿ ಇರುವುದು ಕೇವಲ 20,054 ಎಕರೆ ಮಾತ್ರ ಎಂದು ಸಚಿವರು ತಿಳಿಸಿದರು.
“17,969 ಎಕರೆ ಒತ್ತುವರಿಯಾಗಿದೆ. ಇನಾಂ ನಿರ್ಮೂಲನೆ ಕಾಯ್ದೆಯಡಿ 47,263 ಎಕರೆ ಹಾಗೂ ಭೂ ಸುಧಾರಣೆ ಕಾಯ್ದೆಯಡಿ 23,627 ಎಕರೆ ಭೂಮಿಯನ್ನು ಕಳೆದುಕೊಂಡಿದ್ದೇವೆ” ಎಂದು ಸಚಿವರು ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಪೆಟ್ರೋಲ್-ಡೀಸೆಲ್ ಧಾರಾಳ; ಭಾರತದಲ್ಲಿ ಅಡುಗೆ ಅನಿಲಕ್ಕೆ ಹಾಹಾಕಾರ ಎದ್ದಿರುವುದೇಕೆ?
ಅನೇಕ ಕಡೆಗಳಲ್ಲಿ ಮಸೀದಿ, ದರ್ಗಾ ಮತ್ತು ಈದ್ಗಾ ಮೈದಾನಗಳಿಗೆ ಸೇರಿದ ಜಾಗಗಳನ್ನು ಪ್ರಭಾವಿ ಮುಸ್ಲಿಂ ವ್ಯಕ್ತಿಗಳೇ ತಮ್ಮ ಸ್ವಂತಕ್ಕೆ ಬಳಸಿಕೊಳ್ಳುತ್ತಿದ್ದಾರೆ; ಇದು ಸಮುದಾಯಕ್ಕೆ ಮಾಡುತ್ತಿರುವ ದ್ರೋಹ. ವಕ್ಫ್ ಆಸ್ತಿಗಳು ಸಮುದಾಯದ ಬಡವರ ಏಳಿಗೆಗಾಗಿ ಮೀಸಲಿಟ್ಟವುಗಳಾಗಿದ್ದು, ಇವುಗಳನ್ನು ವೈಯಕ್ತಿಕ ಲಾಭಕ್ಕಾಗಿ ಬಳಸಿಕೊಳ್ಳುತ್ತಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ. ವಕ್ಫ್ ಮಂಡಳಿಯು ಈ ಕುರಿತು ಸಮಗ್ರ ಸಮೀಕ್ಷೆ ನಡೆಸುತ್ತಿದ್ದು, ಅಕ್ರಮವಾಗಿ ಸ್ವಾಧೀನಪಡಿಸಿಕೊಂಡಿರುವ ಪ್ರತಿಯೊಂದು ಇಂಚು ಭೂಮಿಯನ್ನೂ ಮರಳಿ ಪಡೆಯಲು ಸರ್ಕಾರ ಬದ್ಧವಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ವಕ್ಫ್ ಆಸ್ತಿಗಳ ಸಂರಕ್ಷಣೆಯಲ್ಲಿ ಸಮುದಾಯದ ಒಳಗಿನ ಪ್ರಾಮಾಣಿಕತೆಯೇ ಬಹಳ ಮುಖ್ಯವಾಗಿದ್ದು, ಒತ್ತುವರಿಯಾದ ಆಸ್ತಿಗಳನ್ನು ಮರಳಿ ಪಡೆದು ಶೈಕ್ಷಣಿಕ ಮತ್ತು ಸಾಮಾಜಿಕ ಅಭಿವೃದ್ಧಿಗೆ ಬಳಸುವುದೇ ಸರ್ಕಾರದ ಮುಂದಿರುವ ಪ್ರಮುಖ ಗುರಿಯಾಗಿದೆ ಎಂದು ಅವರು ತಿಳಿಸಿದ್ದಾರೆ.





