“ಇರಾನ್-ಇಸ್ರೇಲ್ ಸಂಘರ್ಷದ ಹಿನ್ನೆಲೆಯಲ್ಲಿ ಮಧ್ಯಪ್ರಾಚ್ಯ ದೇಶಗಳಲ್ಲಿ ಸಿಲುಕಿರುವ ಕನ್ನಡಿಗರಿಗೆ ವೀಸಾ ವ್ಯವಸ್ಥೆಯ ಪ್ರಯತ್ನ ಮಾಡುತ್ತೇವೆ” ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ತಿಳಿಸಿದರು.
ಈ ಕುರಿತು ಸೋಮವಾರ ವಿಧಾನಸೌಧದ ಕೆಂಗಲ್ ಗೇಟ್ ಬಳಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು “ಮಧ್ಯಪ್ರಾಚ್ಯ ಏಷ್ಯಾದಲ್ಲಿ ಇರಾನ್-ಇಸ್ರೇಲ್ ಸಂಘರ್ಷ ನಡೆಯುತ್ತಿದ್ದು ಪ್ರಕ್ಷುಬ್ಧ ಪರಿಸ್ಥಿತಿ ನಿರ್ಮಾಣವಾಗಿದೆ. ಪ್ರವಾಸಕ್ಕೆಂದು ಹೋಗಿದ್ದ ಕರ್ನಾಟಕದವರು ದುಬೈ ಸೇರಿದಂತೆ ಮಧ್ಯಪ್ರಾಚ್ಯ ದೇಶಗಳಲ್ಲಿ ಸಿಲುಕಿಕೊಂಡಿದ್ದಾರೆ. ಅವರ ಸ್ಪಂದನೆಗಾಗಿಯೇ ಶನಿವಾರ ರಾತ್ರಿಯೇ ಸಹಾಯವಾಣಿಯನ್ನು ನೀಡಿದ್ದೇವೆ. ಇಲ್ಲಿಯವರೆಗೆ 109 ಮಂದಿ ನಮಗೆ ಕರೆ ಮಾಡಿ ತಾವಿರುವ ಸ್ಥಳವನ್ನು ಹೇಳಿದ್ದಾರೆ. ಯಾರೂ ಗಾಬರಿಯಾಗುವುದು ಬೇಡ. ರಾಜ್ಯ ಸರ್ಕಾರ ನಿಮ್ಮ ಜೊತೆ ಇರುತ್ತದೆ” ಎಂದು ಭರವಸೆ ಕೊಟ್ಟರು.
“ರಾಜ್ಯ ವಿಪತ್ತು ನಿರ್ವಹಣಾ ಕೇಂದ್ರʼದಿಂದ ಭಾರತ ಸರ್ಕಾರದ ವಿದೇಶಾಂಗ ಸಚಿವಾಲಯದ ಜೊತೆ ಸಂಪರ್ಕಿಸಿದ್ದೇವೆ. ಮಧ್ಯಪ್ರಾಚ್ಯದಲ್ಲಿ ಸಿಲುಕಿಕೊಂಡಿರುವ ಕನ್ನಡಿಗರನ್ನು ತಲುಪುವ ಪ್ರಯತ್ನವನ್ನು ಮಾಡುತ್ತಿದ್ದೇವೆ” ಎಂದರು.
“ಇಡೀ ವಿಮಾನ ಸಂಚಾರ ನಿಂತಿರುವುದರಿಂದ, ಪ್ರಯಾಣಕ್ಕೆ ಯಾವ ಪರ್ಯಾಯ ಮಾರ್ಗಗಳಿಲ್ಲ. ವಿಮಾನ ಸಂಚಾರಕ್ಕೆ ಅವಕಾಶ ಸಿಕ್ಕ ಕೂಡಲೇ, ವಿಶೇಷ ವಿಮಾನದ ವ್ಯವಸ್ಥೆ ಮಾಡುವ ಬಗ್ಗೆ ಕೇಂದ್ರ ಸರ್ಕಾರ ಹೇಳಿದೆ. ಕದನ ವಿರಾಮ ಘೋಷಿಸುವ ತನಕ ವಿಮಾನ ಪ್ರಯಾಣ ಮಾಡುವುದು ಸೂಕ್ತವಲ್ಲ” ಎಂದು ಹೇಳಿದರು.
ಬ್ರಿಟನ್, ಅಮೆರಿಕದ ದುಷ್ಟ ಸಂಚುಗಳಿಗಿಲ್ಲ ಕೊನೆ: ಇರಾನ್ ಇತಿಹಾಸದ ಬಹುಮುಖ್ಯ ಮಜಲುಗಳಿವು
“ಈಗಾಗಲೇ ವಿಮಾನ ನಿಲ್ದಾಣಕ್ಕೆ ಬಂದು ಸಿಲುಕಿಕೊಂಡವರು, ʼರಾಜ್ಯ ವಿಪತ್ತು ನಿರ್ವಹಣ ಕೇಂದ್ರʼದ ಸಹಾಯವಾಣಿ ಸಂಖ್ಯೆ 080-22340675 ಅಥವಾ 22253707 ಕರೆ ಮಾಡಬಹುದು. ಕರೆ ಮಾಡಿದವರ ಮಾಹಿತಿಯನ್ನು, ಭಾರತ ಸರ್ಕಾರದ ವಿದೇಶಾಂಗ ಸಚಿವಾಲಯಕ್ಕೆ ಕೊಡುತ್ತೇವೆ. ಅವರು ಆ ದೇಶದ ಸ್ಥಳೀಯ ಸಚಿವಾಲಯವನ್ನು ತಲುಪಿ, ವಿಮಾನ ನಿಲ್ದಾಣದಲ್ಲಿ ಸಿಲುಕಿಕೊಂಡವರಿಗೆ ವೀಸಾ ವ್ಯವಸ್ಥೆ ಮಾಡಿ, ವಿಮಾನ ನಿಲ್ದಾಣದಿಂದ ಹೊರಗಡೆ ಬರಲು ಸಹಾಯ ಮಾಡುತ್ತಾರೆ” ಎಂದು ಮಾಹಿತಿ ನೀಡಿದರು.
“ವಿಮಾನ ನಿಲ್ದಾಣದಿಂದ ಹೊರಬಂದವರಿಗೆ ರಾಯಭಾರ ಕಚೇರಿ ಮೂಲಕ ಹೋಟೆಲ್ ವ್ಯವಸ್ಥೆ ಮಾಡಿ ಅದರ ಖರ್ಚು ವೆಚ್ಚವನ್ನು ಸರ್ಕಾರ ಭರಿಸುವ ಬಗ್ಗೆ ಯೋಚಿಸುತ್ತಿದೆ. ರಾಜ್ಯ ಸರ್ಕಾರ ಮಧ್ಯಪ್ರಾಚ್ಯದಲ್ಲಿ ಸಿಲುಕಿಕೊಂಡ ಕನ್ನಡಿಗರಿಗೆ ಎಲ್ಲಾ ಸಹಕಾರ ನೀಡಲು ಸಿದ್ದ” ಎಂದು ತಿಳಿಸಿದರು.





