ಹಾಸನ ಮಣ್ಣಿನ ಹೆಣ್ಣು ಬೇರುಗಳು | ಉನ್ನತ ಆಡಳಿತಾಧಿಕಾರಿಗಳಾಗಿ ಜಿಲ್ಲೆಯ ಮಹಿಳೆಯರು 

Date:

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ…

ಅದೆಷ್ಟೇ ಸಮಾನತೆ, ಏಕತೆಯ ಬಗ್ಗೆ ನಾವುಗಳು- ಸರ್ಕಾರ ಮತ್ತು ಸಂವಿಧಾನವೆಂದು ಮಾತನಾಡಿದರೂ ಸಮಾನತೆ ಎಂಬುದು ಎಷ್ಟರಮಟ್ಟಿಗೆ ಅಸ್ತಿತ್ವದಲ್ಲಿದೆ ಎಂಬುದು ವಾಸ್ತವಕ್ಕಿಳಿದರಷ್ಟೇ ತಿಳಿಯುವ ಸತ್ಯ. ಪುರುಷಪ್ರಧಾನ ಸಮಾಜದಲ್ಲಿ ತಲೆಮಾರುಗಳಿಂದ ಮಹಿಳೆಯರು ಸಂಸ್ಕೃತಿ, ಪರಂಪರೆ, ಕೌಟುಂಬಿಕ ಸ್ಥಾನಮಾನ, ಮಕ್ಕಳ ಆರೈಕೆ, ಗೌರವ, ಮರ್ಯಾದೆ, ಸುರಕ್ಷತೆ ಹೀಗೆ ಬಹಳಷ್ಟು ಕಾರಣಗಳಿಂದ ಮನೆಯ ನಾಲ್ಕು ಗೋಡೆಗಳೊಳಗೇ ಹಲವಾರು ದಶಕಗಳ ಕಾಲ ಉಳಿದುಹೋಗಿದ್ದರು. ಮುಂದೆ ಹೆಣ್ಣಿಗೂ ಶಿಕ್ಷಣ ಲಭಿಸಿ, ಕ್ರಮೇಣ ಅವಕಾಶಗಳೂ ದೊರೆತು, ಸಮಾಜದ ಎಲ್ಲಾ ಕ್ಷೇತ್ರಗಳಲ್ಲೂ ಕಾಲಿಡಲಾರಂಭಿಸಿ ಇಂದಿಗೆ ಮಹಿಳೆಯರು ಎಲ್ಲೆಡೆಯೂ ಸಮರ್ಪಕವಾಗಿ, ದಕ್ಷವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅಡುಗೆಮನೆ ನಿರ್ವಹಣೆಯಿಂದ ಹಿಡಿದು, ದೇಶ ಆಳುವವರೆಗೂ; ವಿಜ್ಞಾನ, ತಂತ್ರಜ್ಞಾನ, ಕಲೆ, ಸಾಹಿತ್ಯ ಮತ್ತು ಕ್ರೀಡೆಗಳಲ್ಲಿ ದೇಶವನ್ನು ಪ್ರತಿನಿಧಿಸುತ್ತಾ ಗೆಲ್ಲುವವರೆಗೂ; ಮನೆಯಂಗಳ ದಾಟಿ ಮಂಗಳನಂಗಳ ತಲುಪುವವರೆಗೂ ಸ್ತ್ರೀಯರು ತಮ್ಮ ಛಾಪನ್ನು ಮೂಡಿಸುತ್ತಿದ್ದಾರೆ ಎಂಬುದು ಸ್ಪಷ್ಟವಾದ ಸಂಗತಿ.

ಇದನ್ನು ಓದಿದ್ದೀರಾ?: ಹಾಸನದ ರಾಜಕೀಯ ಕ್ಷೇತ್ರದಲ್ಲಿ ಮಹಿಳೆಯರು

ಹಾಸನದ ರಾಣಿ ಶಾಂತಲೆಯನ್ನು ಸೇರಿದಂತೆ ಇಲ್ಲಿಯ ಮಣ್ಣಿನ ಹೆಣ್ಣು ಬೇರುಗಳು ಇಂದಿಗೂ ದೇಶದ ವಿವಿಧ ಸ್ಥಳಗಳಲ್ಲಿ ಆಡಳಿತಾತ್ಮಕವಾಗಿ ಉನ್ನತ ಹುದ್ದೆಗೆ ಏರುವ ಮೂಲಕ ದೇಶ ಕಟ್ಟುವ ಕೆಲಸಕ್ಕೆ ತಮ್ಮದೇ ಕೊಡುಗೆ ನೀಡುತ್ತಿದ್ದಾರೆ. ”ತೊಟ್ಟಿಲನ್ನು ತೂಗುವ ಕೈ, ದೇಶವನ್ನೂ ಆಳಬಲ್ಲದು” ಎಂಬುದಕ್ಕೆ ನಿದರ್ಶನಗಳಂತೆ ಇಲ್ಲಿಯ ಮಹಿಳೆಯರು ಬದುಕುತ್ತಾ ಮಾದರಿಯಾಗಿದ್ದಾರೆ. ಒಬ್ಬೊಬ್ಬರ ಕಥೆಯೂ ಒಂದೊಂದು ಸಂಘರ್ಷದ ಬೆನ್ನಿಗೆ ಹುಟ್ಟಿದ ಆದರ್ಶ ಕಥನವೆನ್ನಬಹುದು. ಈ ಸಂಘರ್ಷಗಳ ಹಿಂದಿನ ಸಾರ್ಥಕ ಸಾಧಕಿಯರ ಪರಿಚಯ ಮಾಡಿಕೊಡುವ ಕಿರು ಪ್ರಯತ್ನವಿದು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಇದನ್ನು ಓದಿದ್ದೀರಾ?: ಜಿಲ್ಲೆಯ ದಲಿತ ಸಂಘರ್ಷ ಸಮಿತಿಯಲ್ಲಿ ಮಹಿಳೆಯರು

ಕೆ.ಎಂ.ಜಾನಕಿ ಅವರದ್ದು ಸ್ಪೂರ್ತಿದಾಯಕ ಕಥೆ. ಹಾಸನದ ಕೊಣನೂರಿನಲ್ಲಿ ಹುಟ್ಟಿದ ಇವರು, ಹೊಳೆನರಸೀಪುರ, ಮಲ್ಲಿಪಟ್ಟಣ, ಕೊಣನೂರು ಗ್ರಾಮಗಳ ಕನ್ನಡ ಮಾಧ್ಯಮ ಸರ್ಕಾರಿ ಶಾಲೆ ಮತ್ತು ಕಾಲೇಜಿನಲ್ಲಿ ಪ್ರಾಥಮಿಕ, ಮಾಧ್ಯಮಿಕ ಹಾಗೂ ಪದವಿಪೂರ್ವ ಶಿಕ್ಷಣ ಪಡೆದಿದ್ದಾರೆ. ಕನ್ನಡ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿರುತ್ತಾರೆ. 1999ರಲ್ಲಿ ಕರ್ನಾಟಕ ಆಡಳಿತ ಸೇವೆಯ ಅಧಿಕಾರಿಯಾಗಿ ಆಯ್ಕೆಯಾಗಿದ್ದು, ದಾವಣಗೆರೆಯಲ್ಲಿ(2007-2011) ಸಹಾಯಕ ಆಯುಕ್ತರು ಮತ್ತು ಸಬ್ ಡಿವಿಜನಲ್ ಮ್ಯಾಜಿಸ್ಟ್ರೇಟ್ ಆಗಿ, ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯಲ್ಲಿ(2011-12) ಮುಖ್ಯ ಕಾರ್ಯನಿರ್ವಾಹಣಾಧಿಕಾರಿಯಾಗಿ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿಯಾಗಿ(2012-13), ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಕಾರ್ಯದರ್ಶಿಯಾಗಿ(2013-14) ತೋಟಗಾರಿಕಾ ಇಲಾಖೆಯಲ್ಲಿ ಜಂಟಿ ನಿರ್ದೇಶಕರಾಗಿ(2014-15), ಹಾಸನ ಜಿಲ್ಲೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿಯಾಗಿ(2015-17) ಸೇವೆ ಸಲ್ಲಿಸಿದರು. 2018ರಲ್ಲಿ ಭಾರತೀಯ ಆಡಳಿತ ಸೇವೆಯ ಹುದ್ದೆಗೆ ಮುಂಬಡ್ತಿ ಪಡೆದು, ಹಾಸನದಲ್ಲಿ ಜಿಲ್ಲಾಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ, ಕರ್ನಾಟಕ ಜೈವಿಕ ಇಂಧನ ಅಭಿವೃದ್ಧಿ ಮಂಡಳಿಯಲ್ಲಿ ವ್ಯವಸ್ಥಾಪಕ ನಿರ್ದೇಶಕರಾಗಿ(2917-18), ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರಾಗಿ (2018-19), ಕರ್ನಾಟಕ ಮುನಿಸಿಪಾಲ್ ಡಾಟಾ ಸೊಸೈಟಿಯಲ್ಲಿ ಜಂಟಿ ನಿರ್ದೇಶಕರಾಗಿ (2020-22), ಸಕಾಲ ಮಿಷನ್ ಬೆಂಗಳೂರಿನಲ್ಲಿ ಅಪರ ನಿರ್ದೇಶಕರಾಗಿ (2022-23), ಬಾಗಲಕೋಟೆಯ ಜಿಲ್ಲಾಧಿಕಾರಿಗಳಾಗಿ (2023-25) ಕಾರ್ಯನಿರ್ವಹಿಸಿದ್ದು, ಪ್ರಸ್ತುತ ಪ್ರಾದೇಶಿಕ ಆಯುಕ್ತರಾಗಿ ಬೆಳಗಾವಿ ವಿಭಾಗದಲ್ಲಿ- ಪುನರ್ವಸತಿ ಪುನರ್ ನಿರ್ಮಾಣ, ಕೃಷ್ಣ ಮೇಲ್ದಂಡೆ ಯೋಜನೆ ಬಾಗಲಕೋಟೆಯಲ್ಲಿ ಹೆಚ್ಚುವರಿ ಆಯುಕ್ತರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಹೀಗೆ ಹಲವು ಹುದ್ದೆಗಳಲ್ಲಿ ಸೇವೆ ಸಲ್ಲಿಸಿರುವ ಇವರು ಸಾಮಾನ್ಯ ಬಡ ದಲಿತ ಕುಟುಂಬದ ಹಿನ್ನೆಲೆಯಿಂದ ಬಂದವರು. ಜಾತಿ, ಬಣ್ಣ, ಅಂತಸ್ತಿನ ಕಾರಣ ಹಲವು ಸವಾಲುಗಳು, ಕಷ್ಟಕಾರ್ಪಣ್ಯಗಳನ್ನು ಅನುಭವಿಸಿಯೂ, ಅನುಕರಣ ಯೋಗ್ಯ ಜೀವನ ನಡೆಸಿದವರು. ಆಡಳಿತ ಕ್ಷೇತ್ರದಲ್ಲಿ ಮಾತ್ರವಲ್ಲ ಗಾಯಕರಾಗಿಯೂ ಹೆಸರು ಪಡೆದವರು. ಸಾಹಿತ್ಯಾಸಕ್ತರು. ಕರ್ನಾಟಕ ಸರ್ಕಾರದಿಂದ ಉತ್ತಮ ಜಿಲ್ಲಾಧಿಕಾರಿ, ಉತ್ತಮ ಜಿಲ್ಲಾ ಚುನಾವಣಾಧಿಕಾರಿ ಎಂಬ ಪ್ರಶಸ್ತಿಗೂ ಭಾಜನರಾಗಿದ್ದಾರೆ.

ಇದನ್ನು ಓದಿದ್ದೀರಾ?: ಹಾಸನ ಜಿಲ್ಲೆಯ ರೈತ ಚಳವಳಿಯಲ್ಲಿ ಸ್ತ್ರೀಶಕ್ತಿಯ ಹೆಜ್ಜೆಗುರುತುಗಳು

ಹಾಸನದ ಮಧ್ಯಮ ವರ್ಗದ ಕೂಡು ಕುಟುಂಬದ ಹಿನ್ನೆಲೆಯ ಜ್ಯೋತಿ ಕೆ. ಅವರದ್ದೂ ಮತ್ತೊಂದು ಮಾದರಿ ಜೀವನ ಪಯಣ. ಭಾರತಿ ವಿದ್ಯಾಮಂದಿರ, ಚನ್ನಕೇಶವ ವಿದ್ಯಾಲಯ ಮತ್ತು ಎ.ವಿ.ಕೆ. ಕಾಲೇಜಿನಲ್ಲಿ ಓದಿ ಪದವಿಯಲ್ಲಿ ಉತ್ತಮ ಶ್ರೇಣಿ ಪಡೆದವರು. ಮಾನಸಗಂಗೋತ್ರಿಯಲ್ಲಿ ಭೌತಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದವರು. ಎಲ್‌ಐಸಿಯಲ್ಲಿ ದೊರಕಿದ ಕೆಲಸವನ್ನು ತೊರೆದು, ಎವಿಕೆ ಕಾಲೇಜಿನ ಅರೆಕಾಲಿಕ ಉಪನ್ಯಾಸಕ ವೃತ್ತಿಯನ್ನು ತೊರೆದು, ಆಡಳಿತ ಹುದ್ದೆಗಾಗಿ ತಯಾರಿ ನಡೆಸಿದವರು. ಓದುವಾಗ ಎನ್‌ಎಸ್‌ಎಸ್‌ನಲ್ಲಿ, ಕನ್ನಡ ಸಂಘದಲ್ಲಿ, ವಿಜ್ಞಾನ ಸಂಘದಲ್ಲಿ ಚಟುವಟಿಕೆಯಿಂದ ತೊಡಗಿಸಿಕೊಂಡಿದ್ದರು. ಮೊದಲ ದರ್ಜೆಯ ಗುಮಾಸ್ತರಾಗಿದ್ದ ಅಪ್ಪನ ಬಳಿ ಹಲವು ಸಮಸ್ಯೆ ಹೊತ್ತು ಬರುತ್ತಿದ್ದ ಜನರ ಸಂಕಷ್ಟ ಕಂಡು ಸೇವೆ ಮಾಡಬೇಕೆಂಬ ನಿರ್ಧಾರಕ್ಕೆ ಬಂದು ಐಎಎಸ್ ತಯಾರಿಯಲ್ಲಿ ತೊಡಗಿದ್ದರೂ, 2006ರಲ್ಲಿ ಕೆಎಎಸ್ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದರು. ಪ್ರಸ್ತುತ ಜವಳಿ ಅಭಿವೃದ್ಧಿ ಆಯುಕ್ತರು ಮತ್ತು ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಖಜಾನೆ ಇಲಾಖೆಯಲ್ಲಿ ಸಲ್ಲಿಸಿದ ಇವರ ಸೇವೆಗೆ ಸರ್ಕಾರವು ಸರ್ವೋತ್ತಮ ಸೇವೆ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಅಲ್ಲದೇ ಬಸವ ವೇದಿಕೆಯು ಕಾಯಕಯೋಗಿ ಪ್ರಶಸ್ತಿಯನ್ನು, ಬೆಂಗಳೂರು ಸಾಂಸ್ಕೃತಿಕ ಸಂಘವು ಕನ್ನಡ ಸಿರಿ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಸಂಗೀತ ಮತ್ತು ಸಾಹಿತ್ಯ ಇವರ ಇತರೆ ಆಸಕ್ತಿಯ ವಿಚಾರಗಳು.

ಇದನ್ನು ಓದಿದ್ದೀರಾ?: ಸ್ತ್ರೀ ಲೋಕದ ಅಸ್ಮಿತೆ- ಪದ್ಮಾ ಶ್ರೀರಾಮ್

ಹಾಸನದ ವಿ.ರಶ್ಮಿ ಮಹೇಶ್ ಅವರು 1996ರ ಐಎಎಸ್ ತಂಡದಲ್ಲಿ ಆಯ್ಕೆಯಾದವರು. ಪ್ರಸ್ತುತ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಮೊದಲು ಕಂದಾಯ ಇಲಾಖೆಯಲ್ಲಿ ಕಾವೇರಿ 2.0ನಂತಹ ಇ-ಆಡಳಿತ ಸೇವೆಯನ್ನು ಕಾರ್ಯರೂಪಗೊಳಿಸಲು ಗುರುತರ ಸೇವೆ ಸಲ್ಲಿಸಿರುತ್ತಾರೆ. ಮೈಸೂರಿನ ಪ್ರಾದೇಶಿಕ ಆಯುಕ್ತರಾಗಿಯೂ ಸೇವೆ ಸಲ್ಲಿಸಿರುತ್ತಾರೆ. ಚನ್ನರಾಯಪಟ್ಟಣ ಮೂಲದ ಶಿಲ್ಪಾನಾಗ್ ಸಿ.ಟಿ. ಅವರು ಐಎಎಸ್ ಮಾಡಿಕೊಂಡು ಪ್ರಸ್ತುತ ರೇಷ್ಮೆ ಇಲಾಖೆಯಲ್ಲಿ ಆಯುಕ್ತರಾಗಿ ಕಾರ್ಯನಿರ್ವಹಿಸುತ್ತಿರುತ್ತಾರೆ. ಇವರು ಚಾಮರಾಜನಗರ ಜಿಲ್ಲೆಯಲ್ಲಿ ಉಪಆಯುಕ್ತರು ಮತ್ತು ಜಿಲ್ಲಾ ಮ್ಯಾಜಿಸ್ಟ್ರೇಟರ್ ಆಗಿ ಕರ್ತವ್ಯ ನಿರ್ವಹಿಸಿರುತ್ತಾರೆ. ಹೊಳೆನರಸೀಪುರದ ಎಚ್.ಹಿಂದಲಹಳ್ಳಿಯವರಾದ ಎಚ್.ಕೆ.ಸುಮಾ ಅವರು ಕುಮಾರ್ ಎಚ್.ವಿ. ಅವರ ಪುತ್ರಿ. ಬಿ.ಇ. ಪದವಿ ಪಡೆದ ಇವರನ್ನು ಆಕರ್ಷಿಸಿದ್ದು, ಭಾರತೀಯ ಲೋಕ ಸೇವಾ ಆಯೋಗದ ಅಧ್ಯಯನ. ಉತ್ತಮ ಅಂಕಗಳೊಂದಿಗೆ ಯುಪಿಎಸ್‌ಸಿ ಪರೀಕ್ಷೆ ತೇರ್ಗಡೆಯಾದ ಇವರು, ಕಳೆದ ಮೂರು ವರ್ಷಗಳಿಂದ ಸಹಾಯಕ ನಿರ್ದೇಶಕರಾಗಿ ಭಾರತೀಯ ಕ್ರೀಡಾ ಪ್ರಾಧಿಕಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಇದನ್ನು ಓದಿದ್ದೀರಾ?: ಜಾನಪದ ಕ್ಷೇತ್ರದ ಅನನ್ಯ ಸಾಧಕಿ- ಡಾ. ವೈ.ಸಿ.ಭಾನುಮತಿ

ಇನ್ನು ಹಾಸನದ ಮಮತಾ ಅವರು ಎಂಟೆಕ್ ಪದವಿಯ ನಂತರ ಕೆಎಎಸ್ ತೇರ್ಗಡೆ ಹೊಂದಿದವರು. ಬೇಲೂರಿನ ತಾಲ್ಲೂಕು ಪಂಚಾಯತಿಯಲ್ಲಿ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ಅರಕಲಗೂಡು ತಾಲ್ಲೂಕಿನ ಸ್ಮಿತಾ ಅವರು ಐಎಫ್‌ಎಸ್ ಮಾಡಿಕೊಂಡು ಕರ್ತವ್ಯ ನಿರ್ವಹಿಸುತ್ತಿದ್ದಾರೆ. 

ವಿಜಯಲಕ್ಷಿ ನುಗ್ಗೇಹಳ್ಳಿಯವರು(ಗೋ.ಶಿ.ವಿಜಯಲಕ್ಷ್ಮಿ) ಹಾಸನದ ಚನ್ನರಾಯಪಟ್ಟಣದ ನುಗ್ಗೇಹಳ್ಳಿಗೆ ಹೊಂದಿಕೊಂಡಂತೆ ಇರುವ ಗೋಸನಾಯಕನ ಕೊಪ್ಪಲು ಗ್ರಾಮದ ಬಡ ಅವಿಭಕ್ತ ಕುಟುಂಬದವರು. ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿಯನ್ನೂ, ಹತ್ತನೇ ಶ್ರೇಣಿಯೊಂದಿಗೆ ಪಡೆದುಕೊಳ್ಳುತ್ತಾರೆ. 2006ರಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಇಲಾಖೆಗೆ ಗೆಜೆಟೆಡ್ ಪರೀಕ್ಷೆಯಲ್ಲಿ ತೇರ್ಗಡೆಯಾಗುವ ಮೂಲಕ ಸಹಾಯಕ ನಿರ್ದೇಶಕರಾಗಿ ಆಯ್ಕೆಯಾಗುತ್ತಾರೆ. ಹೆಗ್ಗಡದೇವನಕೋಟೆ, ಬಾಗಲಕೋಟೆ, ಮೈಸೂರು, ಶಿವಮೊಗ್ಗ, ಧಾರವಾಡ, ಚಿಕ್ಕಮಗಳೂರು, ಸಾಗರ, ಶಿರಸಿ, ಉತ್ತರಕನ್ನಡ ಜಿಲ್ಲೆ, ಮಂಡ್ಯ ಮೊದಲಾದ ಜಿಲ್ಲೆಗಳಲ್ಲಿ ಕರ್ತವ್ಯ ನಿರ್ವಹಿಸಿ, ಪ್ರಸ್ತುತ ಬೆಂಗಳೂರುನಗರ ಮತ್ತು ಯಶವಂತಪುರ ಎಪಿಎಂಸಿ ಪ್ರಾಂಗಣದಲ್ಲಿ ಜಿಲ್ಲೆಯ ಉಪನಿರ್ದೇಶಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಹಾಗೂ ಜೀವಿ ಎಂಬ ಕಾವ್ಯನಾಮದೊಂದಿಗೆ ಸಾಹಿತ್ಯ ಕೃಷಿಯಲ್ಲೂ ತೊಡಗಿಕೊಂಡಿರುವ ಇವರು ಸಾಹಿತ್ಯದ ಹಲವು ಪ್ರಕಾರಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಹಂಪಿಯ ಕನ್ನಡ ವಿಶ್ವವಿದ್ಯಾಲಯದಲ್ಲಿ ಪಿಎಚ್‌.ಡಿ ವಿದ್ಯಾಭ್ಯಾಸ ನಡೆಸುತ್ತಿದ್ದಾರೆ. ಡಾ.ಸಿಪಿಕೆ ಕಾವ್ಯ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನಿಂದ ನೀಡಲಾಗುವ ಶ್ರೀಮತಿ ನೀಲಗಂಗಾ ದತ್ತಿ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿ ಪುರಸ್ಕಾರಗಳನ್ನು ಪಡೆದಿರುತ್ತಾರೆ.

ಇದನ್ನು ಓದಿದ್ದೀರಾ?: ವಿಶೇಷ ಚೇತನರ ಆಶಾಕಿರಣ- ವಿಜಯಕುಮಾರಿ ಮುರಾರಪ್ಪ

ಅರಸೀಕೆರೆ ತಾಲ್ಲೂಕು ಗಂಡಸಿ ಹೋಬಳಿ ಚನ್ನಾಪುರ ಗ್ರಾಮದ ಸಿ.ಸುಜಾತ ಜಯಣ್ಣ ಅವರು ಸಮಾಜ ಕಲ್ಯಾಣ ಇಲಾಖೆಯಲ್ಲಿ ಕಾರ್ಯನಿರ್ವಹಿಸಿರುತ್ತಾರೆ. 1999ರಲ್ಲಿ ಕೆಇಎಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಪ್ರೊಬೆಷನರಿ ಪ್ರೌಢಶಾಲೆಯಲ್ಲಿ ಮುಖ್ಯಶಿಕ್ಷಕಿಯಾಗಿ ಸೇವೆ ಸಲ್ಲಿಸಿದ್ದು, ಪ್ರಸ್ತುತ ಡಯಟ್‌ನಲ್ಲಿ ಹಿರಿಯ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಹೊಳೆನರಸೀಪುರದ ನಿಡೂಣಿ ಗ್ರಾಮದ ಎನ್.ಮೀನಾಕ್ಷಿಯವರು 1999ರಲ್ಲಿ ಕೆಇಎಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಪ್ರೊಬೆಷನರಿ ಪ್ರೌಢಶಾಲೆಯಲ್ಲಿ ಮುಖ್ಯಶಿಕ್ಷಕಿಯಾಗಿ ಸೇವೆ ಸಲ್ಲಿಸಿದ್ದು, ಪ್ರಸ್ತುತ ಮೂಡಿಗೆರೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅಂತೆಯೇ ಹಾಸನದ ಡಯಟ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಬಿ.ಎಂ.ಗೀತಾ ಅವರು, ಮಂಡ್ಯದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಸೌಭಾಗ್ಯ ಅವರು, ಎಸ್‌ಎಡಿಪಿಐ ಆಗಿ ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಬಾನುಮತಿಯವರು, ಸಕಲೇಶಪುರದ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಪುಷ್ಪ ಅವರು, ಬೇಲೂರಿನ ಕ್ಷೇತ್ರ ಶಿಕ್ಷಣಾಧಿಕಾರಿಯಾದ ಭಾಗ್ಯಮ್ಮ ಅವರು, ಚನ್ನರಾಯಪಟ್ಟಣದ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿರುವ ದೀಪಾ ಅವರು, ಸಾರ್ವಜನಿಕ ಶಿಕ್ಷಣ ಇಲಾಖೆಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿರುವ ಮಲ್ಲಮ್ಮ ಅವರು, ಚಿಕ್ಕಮಗಳೂರಿನ ಡಯಟ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಮೋಹನ್‌ಕುಮಾರಿ, ಪುಷ್ಪಲತಾ, ಮೀನಾಕ್ಷಿ, ಸುಜಾತಾ ಜಯಣ್ಣ… ಮುಂತಾದವರು ಹಾಸನದ ಕೆಇಎಸ್ ಅಧಿಕಾರಿಗಳಾಗಿದ್ದಾರೆ.

ಇದನ್ನು ಓದಿದ್ದೀರಾ?: ಭಜನೆ ಕಲಾವಿದೆ- ವಿರಕ್ತೆ ಸಾವಿತ್ರಮ್ಮ

ಬಿ.ಎಸ್.ಮೀನಾಕ್ಷಿಯವರು ಹಾಸನ ಜಿಲ್ಲೆಯ ಅರಸೀಕೆರೆಯವರು. ಕನ್ನಡ ಮತ್ತು ಸಮಾಜಶಾಸ್ತ್ರಗಳಲ್ಲಿ ಎಂಎ ಪದವಿ ಪಡೆದಿರುವುದಲ್ಲದೇ, ನಾಟಕಶಾಸ್ತ್ರ ಮತ್ತು ಪತ್ರಿಕೋದ್ಯಮದಲ್ಲಿ ಡಿಪ್ಲೊಮೊ ಪದವಿಯನ್ನು ಪಡೆದಿರುತ್ತಾರೆ. ಹಾಸನ, ಚಿತ್ರದುರ್ಗ ಮತ್ತು ಮೈಸೂರಿನಲ್ಲಿ ಪ್ರಥಮ ಕ್ಷೇತ್ರಪ್ರಚಾರಾಧಿಕಾರಿಯಾಗಿ ಆಯ್ಕೆಯಾದವರು. ಆಕಾಶವಾಣಿ/ದೂರದರ್ಶನದಲ್ಲಿ ಕಾರ್ಯಕ್ರಮ ನಿರ್ವಾಹಕ ಅಧಿಕಾರಿಯಾಗಿ ಕೆಲಸ ನಿರ್ವಹಿಸಿದ್ದಾರೆ. ಸಮಾಚಾರ ಸೇವೆಗೆ ಹಿರಿಯ ಅಧಿಕಾರಿಯಾಗಿಯೂ ಕಾರ್ಯ ನಿರ್ವಹಿಸಿರುತ್ತಾರೆ. ಆಡಳಿತಾತ್ಮಕವಾಗಿ ಅಲ್ಲದೇ ಸಾಹಿತ್ಯಾತ್ಮಕವಾಗಿಯೂ ತೊಡಗಿಸಿಕೊಂಡಿರುವ ಇವರ ಕೃತಿಗಳಿಗೆ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ರಂಗನಾಥ್ ನೆನಪಿನ ಪ್ರಶಸ್ತಿ, ಸುರಭಿ ರಂಗವೇದಿಕೆ ಪ್ರಶಸ್ತಿ, ಸುಧಾಮೂರ್ತಿ ಪ್ರಶಸ್ತಿ ದೊರೆತಿರುವುದಲ್ಲದೇ, ಅತ್ಯುತ್ತಮ ನಟಿ ಪ್ರಶಸ್ತಿಯನ್ನೂ ಪಡೆದು ಆಡಳಿತ ಕಲೆ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮ ಕೊಡುಗೆ ನೀಡುತ್ತಿದ್ದಾರೆ.

ಮೈಸೂರು ವಿಶ್ವವಿದ್ಯಾಲಯದ ಕುವೆಂಪು ಅಧ್ಯಯನ ಕೇಂದ್ರದ ನಿರ್ದೇಶಕರಾಗಿ ಹಾಸನದ ನುಗ್ಗೇಹಳ್ಳಿಯ ಲೋಲಾಕ್ಷಿಯವರು ಸೇವೆ ಸಲ್ಲಿಸುತ್ತಿದ್ದಾರೆ. ಚಿಕ್ಕಮಗಳೂರಿನಲ್ಲಿ ತಹಸೀಲ್ದಾರ್ ಆಗಿ ರೂಪ ನುಗ್ಗೇಹಳ್ಳಿಯವರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಶ್ಯಾಮಲಾ ಅವರು ಭಾರತೀಯ ಕಂದಾಯ ಸೇವಾ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಆಹಾರ ಸುರಕ್ಷತೆ ಮತ್ತು ಔಷಧಿ ನಿರ್ವಹಣಾ ಇಲಾಖೆಯಲ್ಲಿ ಪ್ರಮಿಳಾ ಎನ್‌.ಡಿ. ಅವರು ಸೇವೆ ಸಲ್ಲಿಸುತ್ತಿದ್ದಾರೆ. ತಮ್ಮ ಸಮಾಜ ಸೇವಾ ಕಾರ್ಯಗಳಿಂದಲೇ ಪ್ರಖ್ಯಾತರಾದ ಕವಿತಾ ಅವರು ಹಾಸನ ಜಿಲ್ಲೆಯ ನಗರಸಭೆಯಲ್ಲಿ ಅಭಿಯಂತರರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅರಕಲಗೂಡಿನ ಭವ್ಯ ಕೆ.ಆರ್.ಹೊಯ್ಸಳ, ಬೆಂಗಳೂರು ನಗರದ ವಾಣಿಜ್ಯ ತೆರಿಗೆ ಡೆಪ್ಯೂಟಿ ಕಮಿಷನರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇವರು ಕೆಎಎಸ್‌ನಲ್ಲಿ ಉನ್ನತ ಶ್ರೇಣಿಯಲ್ಲಿ ಉತ್ತಿರ್ಣರಾಗಿದ್ದಾರೆ.

ಇದನ್ನು ಓದಿದ್ದೀರಾ?: ಬಾನು ಮುಷ್ತಾಕ್ ಎಂಬ ಬೆಳಗುವ ಹಣತೆ

ನನ್ನ ಸೀಮಿತ ಪರಿಧಿ ಮತ್ತು ಸಿಕ್ಕ ಸಮಯದ ಮಿತಿಯಲ್ಲಿ ದೊರಕಿದ ಇಷ್ಟು ಮಹಿಳೆಯರ ಕುರಿತ ಮಾಹಿತಿಯನ್ನಿಟ್ಟುಕೊಂಡು ಇಲ್ಲಿ ಪರಿಚಯಿಸುವ ಪುಟ್ಟ ಪ್ರಯತ್ನ ನಡೆದಿದೆ. ಇದನ್ನೂ ಮೀರಿ ಬಹಳಷ್ಟು ಹಾಸನದ ಮಣ್ಣಿಗೆ ಸಂಬಂಧಿಸಿದ ಬೇರುಗಳು ದೂರದೂರಕ್ಕೆ ಚಾಚಿಕೊಂಡು ನನ್ನ ಗಮನಕ್ಕೆ ಬರದಿರಬಹುದು. ಇದಲ್ಲದೇ ಬ್ಯಾಂಕ್‌ಗಳಲ್ಲಿ, ಉದ್ದಿಮೆಗಳಲ್ಲಿ, ಸರ್ಕಾರೇತರ, ಅರೆಸರ್ಕಾರಿ, ಸಾರ್ವಜನಿಕ ಕ್ಷೇತ್ರಗಳಲ್ಲೂ ಅನೇಕ ಮಹಿಳೆಯರು ಉನ್ನತಾಧಿಕಾರಿಗಳಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಈ ವಿಷಯ ಕುರಿತ ವ್ಯಾಪಕ ಅಧ್ಯಯನಗಳಾಗಬೇಕೆಂದು ಬಯಸುತ್ತೇನೆ. ಮೇಲೆ ದಾಖಲಿಸಿದ ಪ್ರತಿ ಮಹಿಳೆಗೂ ಹಾಸನದ ಮಣ್ಣು ನೀರೆರೆದು ಪೋಷಿಸಿದೆ. ಇಲ್ಲಿನ ಶಿಕ್ಷಣ ಮತ್ತು ಸಮಾಜ ಅವರಿಗೆ ಅವಕಾಶವನ್ನೂ ಕಲ್ಪಿಸಿದೆ. ಹಲವರು ಜನರ ಸೇವೆ ಮಾಡುವ ಉದ್ದೇಶದಿಂದಲೆ ಕಷ್ಟಪಟ್ಟು ಅಧಿಕಾರಿಗಳಾಗಿದ್ದಾರೆ. ಎಲ್ಲರೂ ಬಡತನವನ್ನು, ಅಸಮಾನತೆಯನ್ನು ಬೆನ್ನ ಹಿಂದೆ ಇಟ್ಟು, ಕೇವಲ ತಮ್ಮ ಸಾಮರ್ಥ್ಯ, ಪ್ರತಿಭೆ, ಶ್ರಮದಿಂದ ಮೇಲೇರಿದವರು. ವ್ಯವಸ್ಥೆಯ ಲೋಪದ ವಿರುದ್ಧ ತಮ್ಮ ಪ್ರಾಮಾಣಿಕತೆ ಮತ್ತು ಜ್ಞಾನದ ಅಸ್ತ್ರವನ್ನು ಸಶಕ್ತವಾಗಿ ಬಳಸಿದವರು. ಸೋಲುಗಳನ್ನು ಮೆಟ್ಟಿಲಾಗಿಸಿಕೊಂಡು ಮೇಲೇರಿ ನಾಗರಿಕರ ಸೇವೆ ಮಾಡುತ್ತಿರುವವರು. ಮಹಿಳಾ ಅಧಿಕಾರಿಯೆಂಬ ಕಾರಣಕ್ಕೆ ಆಕೆಯ ಅಧಿಕಾರವನ್ನು ಒಪ್ಪಲೊಲ್ಲದ ಮನಸ್ಸುಗಳಿಗೆ, ತಮ್ಮ ದಕ್ಷ ಆಡಳಿತದ ಮೂಲಕವೇ ಸಮಾನತೆಯ ಪಾಠ ಕಲಿಸಿದವರು. ಇವರು ಹಾಸನ ಜಿಲ್ಲೆಯ ಮೂಲದವರು, ಉನ್ನತ ಆಡಳಿತ ನಿರ್ವಹಿಸುತ್ತಿರುವ ಮಹಿಳೆಯರು ಎಂಬುದು ನಮ್ಮ ಹೆಮ್ಮೆ.

-ಮಧು ಅಕ್ಷರಿ(ಮಧುಶ್ರೀ ಎ.ಪಿ.)

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...

18 ಸಾವಿರ ಕೋಟಿ ರೂ. ದಾಟಿದ ದೇಶದ ಕ್ರೀಡಾ ಅರ್ಥವ್ಯವಸ್ಥೆ; ಕ್ರಿಕೆಟ್ ದರ್ಬಾರಿನಲ್ಲಿ ಸೊರಗಿದ ಇತರ ಆಟಗಳು

ಐಪಿಎಲ್‌ನಲ್ಲಿ ಕೇವಲ ಬೆಂಚ್ ಕಾಯುವ ಸಾಮಾನ್ಯ ಕ್ರಿಕೆಟ್ ಆಟಗಾರನೊಬ್ಬ ಕೋಟ್ಯಾಧಿಪತಿಯಾಗಿ ಐಷಾರಾಮಿ...

ದಾವಣಗೆರೆ | ಸಮರ್ಥ್‌ ನಾಮಪತ್ರ ಸಲ್ಲಿಕೆ; ದೂರ ಉಳಿದ ರಾಜ್ಯ ಮುಸ್ಲಿಂ ಮುಖಂಡರು

ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ದಾವಣಗೆರೆ ಮುಸ್ಲಿಂ ಕಾಂಗ್ರೆಸ್‌ ಟಿಕೆಟ್...