ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ಮನರೇಗಾ)ಯನ್ನು ರದ್ದುಪಡಿಸಿ, ವಿಕಸಿತ ಭಾರತ-ಗ್ರಾಮೀಣ ಉದ್ಯೋಗ ಮತ್ತು ಆಜೀವಿಕಾ ಮಿಷನ್ ಗ್ಯಾರಂಟಿ (VB-GRAMG) ಕಾಯ್ದೆಯನ್ನು ಜಾರಿಗೆ ತಂದಿರುವ ಕೇಂದ್ರ ಸರ್ಕಾರದ ನಡೆಯನ್ನು ತೀವ್ರವಾಗಿ ವಿರೋಧಿಸಿ, ರಾಜ್ಯಾದ್ಯಂತದ ನರೇಗಾ ಕಾರ್ಮಿಕರು ಒಗ್ಗೂಡಿ ಬೃಹತ್ ಮಹಾಪಂಚಾಯತ್ ನಡೆಸಲು ನಿರ್ಧರಿಸಿದ್ದಾರೆ.
ಫೆಬ್ರುವರಿ 2ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳಿಂದ ಕಾರ್ಮಿಕರು ಭಾಗವಹಿಸಿ, ಹೊಸ ಕಾಯ್ದೆಯ ವಿರುದ್ಧ ನಿರ್ಣಯಗಳನ್ನು ಮುಖ್ಯಮಂತ್ರಿ ಮತ್ತು ಪ್ರಧಾನಮಂತ್ರಿಗಳಿಗೆ ಕಳುಹಿಸಲಿದ್ದಾರೆ. ನರೇಗಾ ಸಂಘರ್ಷ ಮೋರ್ಚಾ ರಾಷ್ಟ್ರೀಯ ಆಂದೋಲನದ ಭಾಗವಾಗಿ ನಡೆಯುತ್ತಿರುವ ಈ ಕಾರ್ಯಕ್ರಮದಲ್ಲಿ, ಮನರೇಗಾ ಯೋಜನೆಯನ್ನು ಮರುಸ್ಥಾಪಿಸುವಂತೆ ಒತ್ತಾಯಿಸಲಾಗುತ್ತದೆ.
ಬೇಡಿಕೆ ಆಧಾರಿತವಾಗಿದ್ದ ಮನರೇಗಾ ಯೋಜನೆ ಗ್ರಾಮೀಣ ಭಾಗದ ಎಲ್ಲರಿಗೂ ಉದ್ಯೋಗದ ಹಕ್ಕು ನೀಡಿತ್ತು. ಆದರೆ VB-GRAMG ಕಾಯ್ದೆಯು ಕೇಂದ್ರ ಸರ್ಕಾರದ ಮರ್ಜಿಗೆ ಉದ್ಯೋಗವನ್ನು ಒಳಪಡಿಸಿ, ಕೆಲಸದ ಸ್ಥಳ, ಕಾಮಗಾರಿಗಳನ್ನು ಸರ್ಕಾರವೇ ನಿರ್ಧರಿಸುವಂತೆ ಮಾಡಿದೆ. ಇದರಿಂದ ಕಾರ್ಮಿಕರ ಹಕ್ಕುಗಳು ಕಡಿಮೆಯಾಗಿ, ರಾಜ್ಯಗಳ ಮೇಲೆ ಹೆಚ್ಚುವರಿ ಹೊರೆ ಬೀಳುತ್ತದೆ ಎಂದು ಆಂದೋಲನಕಾರರು ಆರೋಪಿಸಿದ್ದಾರೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಮನೆಮುರುಕ ಮಹಾ‘ನಾಯಕ’ ಮೊದಲಿಗನಲ್ಲ, ಕಡೆಯವನೂ ಆಗಿರುವುದಿಲ್ಲ!
ಇದು ಕಾರ್ಮಿಕರನ್ನು ಗುಲಾಮರಂತೆ ಮಾಡುವ ಸಂಚು ಎಂದು ಆಂದೋಲನದ ಸಂಘಟಕರಾದ ಬಸವರಾಜ್ ಗಬ್ಬೂರು ಹೇಳಿದ್ದಾರೆ. ಹೊಸ ಕಾಯ್ದೆಯು ಉದ್ಯೋಗ ದಿನಗಳನ್ನು 100 ರಿಂದ 125ಕ್ಕೆ ಹೆಚ್ಚಿಸಿದೆ ಎಂದು ಸರ್ಕಾರ ಹೇಳುತ್ತಿದ್ದರೂ, ಅದು ಬಜೆಟ್ ನಿರ್ಬಂಧಿತವಾಗಿದ್ದು, ಕೇಂದ್ರೀಕೃತ ನಿಯಂತ್ರಣಕ್ಕೆ ಒಳಪಡುತ್ತದೆ. ಇದರಿಂದ ಸಾಮಾಜಿಕ ನ್ಯಾಯದ ಮೂಲ ತತ್ವ ಕಳೆದುಹೋಗುತ್ತದೆ ಎಂದು ಟೀಕಿಸಿರುವ ಆಂದೋಲನಕಾರರು, ಮನರೇಗಾ ಉಳಿಸಿಕೊಳ್ಳುವುದು ನಮ್ಮ ಸಾಮಾಜಿಕ ಬದ್ಧತೆಯ ಕರ್ತವ್ಯ ಎಂದು ತಿಳಿಸಿದ್ದಾರೆ.
ಈ ಆಂದೋಲನದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಸಾವಿರಾರು ಕಾರ್ಮಿಕರು ಭಾಗವಹಿಸಲಿದ್ದು, ಹೊಸ ಕಾಯ್ದೆಯ ವಿರುದ್ಧದ ನಿರ್ಣಯಗಳನ್ನು ಮುಖ್ಯಮಂತ್ರಿ ಮತ್ತು ಪ್ರಧಾನಮಂತ್ರಿಗಳಿಗೆ ಕಳುಹಿಸುವ ಮೂಲಕ ಆಂದೋಲನವನ್ನು ತೀವ್ರಗೊಳಿಸಲು ಯೋಜನೆ ರೂಪಿಸಲಾಗಿದೆ. ಆಂದೋಲನದಲ್ಲಿ ಪಾಲ್ಗೊಳ್ಳಲು ಹೆಚ್ಚಿನ ಮಾಹಿತಿಗಾಗಿ ಬಸವರಾಜ್ ಗಬ್ಬೂರು ಅವರ ದೂರವಾಣಿ ಸಂಖ್ಯೆಗಳಾದ 9611221232 ಅಥವಾ 944974474 ಸಂಖ್ಯೆಗಳಲ್ಲಿ ಸಂಪರ್ಕಿಸಬಹುದು.





