“ಮಾನವನ ಕುತೂಹಲಕ್ಕೆ ಮಿತಿ ಇಲ್ಲ; ನಾವು ಸ್ವತಃ ಸಮಸ್ಯೆಗಳನ್ನು ಸೃಷ್ಟಿಸಿ ಅವುಗಳಿಗೆ ಪರಿಹಾರ ಹುಡುಕುವ ಪ್ರಾಣಿಗಳು”– ಬೆಂಗಳೂರು ಟೆಕ್ ಸಮ್ಮಿಟ್-2025 ಕೊನೆಯ ದಿನವಾದ ಇಂದು (ನ.20) ಭಾರತೀಯ ಬಾಹ್ಯಾಕಾಶ ಯಾತ್ರಿ ಶುಭಾಂಶು ಶುಕ್ಲಾ ನೀಡಿದ ಉಪನ್ಯಾಸ ಪ್ರೇಕ್ಷಕರನ್ನು ಸಮಕಾಲೀನ ವಿಜ್ಞಾನ, ಮಾನವ ಸಹಜ ಕುತೂಹಲ ಮತ್ತು ಭಾರತದ ಬಾಹ್ಯಾಕಾಶ ಗುರಿಗಳತ್ತ ಬೆರಗಾಗುವಂತೆ ಮಾಡಿತು.
“An Astronaut’s View: India Among the Stars” ಎಂಬ ವಿಷಯದ ಬಗ್ಗೆ ಮಾತನಾಡಿದ ಅವರು “ನಾವು ಏಕೆ ಬಾಹ್ಯಾಕಾಶಕ್ಕೆ ಹೋಗುತ್ತೇವೆ” ಎಂಬ ಪ್ರಶ್ನೆಗೆ ನೀಡಿದ ಉತ್ತರದಲ್ಲಿ ಮಾನವ ಕುತೂಹಲದ ಮೂಲ ಸ್ವಭಾವವನ್ನು ಒತ್ತಿಹೇಳಿದರು.
ಬಾಹ್ಯಾಕಾಶದ ತೇಲಾಟ, ತೂಕರಹಿತ ಜೀವನ, ವಸ್ತುಗಳನ್ನು ಹಿಡಿದುಕೊಳ್ಳಬೇಕೆಂಬ ಮನದಾಸೆ—ಇವೆಲ್ಲವನ್ನು ಅವರು ಹಾಸ್ಯಮಿಶ್ರಿತ ಅನುಭವಗಳೊಂದಿಗೆ ಹಂಚಿಕೊಂಡರು.
ಶುಭಾಂಶು ಶುಕ್ಲಾ ತಮ್ಮ ಬಾಹ್ಯಾಕಾಶ ಯಾನದ ತೀವ್ರತೆಯನ್ನು ವಿವರಿಸುತ್ತಾ, ರಾಕೆಟ್ ಉಡಾವಣೆ ವೇಳೆಯಲ್ಲಿ ದೇಹದ ಮೇಲೆ ಭಾರೀ ಒತ್ತಡ ಬೀಳುತ್ತದೆ. ಇದು ಕ್ಷಣಾರ್ಧದಲ್ಲಿ ದೇಹಕ್ಕೆ ಹಲವು ಪಟ್ಟು ತೂಕ ಹೆಚ್ಚಾದಂತೆ ಅನುಭವವಾಗುತ್ತದೆ. ಕೆಲವು ಸಂದರ್ಭದಲ್ಲಿ ಈ ಒತ್ತಡ ನಿರೀಕ್ಷೆಗೂ ಮೀರಿ ಹೆಚ್ಚಾಗುತ್ತದೆ ಎಂದು ಹೇಳಿದರು.

ತೂಕರಹಿತ ಪರಿಸ್ಥಿತಿಯಲ್ಲಿ ಮಾನವ ಮೆದುಳಿಗೆ ಉಂಟಾಗುವ ಭ್ರಮೆಗಳ ಕುರಿತು ಶುಕ್ಲಾ ಉದಾಹರಣೆಗಳೊಂದಿಗೆ ವಿವರಿಸಿದರು. ಭೂಮಿಯಲ್ಲಿನ ಅಭ್ಯಾಸದಿಂದಾಗಿ ವಸ್ತು ಕೈ ಬಿಡುತ್ತಿದ್ದಂತೆಯೇ ಅದು ಕೆಳಗೆ ಬೀಳುತ್ತದೆ ಎಂಬ ಭ್ರಮೆ ಬಾಹ್ಯಾಕಾಶದಲ್ಲೂ ಮುಂದುವರಿಯುತ್ತದೆ. ಲ್ಯಾಪ್ಟಾಪ್ ತೇಲುತ್ತದೆ ಎಂದುಕೊಂಡು ಬಿಡುತ್ತಿದ್ದಂತೆಯೇ ಅದು ನೆಲಕ್ಕೆ ಬಿದ್ದ ಘಟನೆಯ ಅನುಭವಗಳು ಸಭಾಂಗಣದಲ್ಲಿ ವಿಶೇಷ ಗಮನ ಸೆಳೆದವು.
ಇನ್ನು 20 ದಿನಗಳ ಬಾಹ್ಯಾಕಾಶ ಮಿಷನ್ ನಂತರ ದೇಹದಲ್ಲಿ ಕಾಣುವ ಬದಲಾವಣೆಗಳನ್ನೂ ಅವರು ವಿವರಿಸಿದರು. ತೂಕರಹಿತ ಪರಿಸ್ಥಿತಿಯಿಂದ 5–10 ಸೆಂ.ಮೀ ಎತ್ತರ ಹೆಚ್ಚಾಗುವುದು, ಸ್ನಾಯು ಕ್ಷಯವಾಗುವುದು ಮತ್ತು ಭೂಮಿಗೆ ಮರಳಿದ ಬಳಿಕ ಕೆಲಕಾಲ ಸರಾಗ ನಡೆಯಲಾರದೆ ಇರುವ ಸ್ಥಿತಿಗಳು ಬಾಹ್ಯಾಕಾಶ ಯಾತ್ರೆಯ ಸಾಮಾನ್ಯ ಪರಿಣಾಮಗಳಾಗಿವೆ ಎಂದು ಹೇಳಿದರು.
ಶೀಘ್ರದಲ್ಲಿ ಬಾಹ್ಯಾಕಾಶ ವಿಜ್ಞಾನದಲ್ಲಿ ಭಾರತ ಸ್ವಾವಲಂಬನೆ
“ಅತೀ ಶೀಘ್ರದಲ್ಲೇ ಭಾರತೀಯರು, ಭಾರತದಲ್ಲಿ ತಯಾರಿಸಲಾದ ರಾಕೆಟ್ಗಳಲ್ಲಿ, ಭಾರತದ ನೆಲದಿಂದಲೇ ಬಾಹ್ಯಾಕಾಶಕ್ಕೆ ತೆರಳಲಿದ್ದಾರೆ. ಇದು ಭಾರತದ ಬಾಹ್ಯಾಕಾಶ ಯೋಜನೆಗೆ ದೊಡ್ಡ ಮೈಲಿಗಲ್ಲಾಗಲಿದೆ” ಎಂದು ಶುಕ್ಲಾ ಹೇಳಿದರು.
ಇದುವರೆಗೆ ಭಾರತೀಯ ಗಗನಯಾತ್ರಿಗಳು ರಷ್ಯಾ ಅಥವಾ ಅಮೆರಿಕದ ರಾಕೆಟ್ಗಳ ಮೂಲಕ ಮಾತ್ರ ಬಾಹ್ಯಾಕಾಶ ಪ್ರವಾಸ ಮಾಡಿದ್ದಾರೆ. ಆದರೆ ಗಗನ್ಯಾನ್ ಯೋಜನೆಯೊಂದಿಗೆ, ಮೊದಲ ಬಾರಿಗೆ ಸಂಪೂರ್ಣವಾಗಿ ಭಾರತೀಯ ತಂತ್ರಜ್ಞಾನ ಬಳಸಿಕೊಂಡು, ಭಾರತೀಯ ಉಡಾವಣಾ ಕೇಂದ್ರದಿಂದಲೇ ಮಾನವ ಸಹಿತ ಬಾಹ್ಯಾಕಾಶ ಯಾನ ನಡೆಯಲಿದೆ ಎಂಬುದು ಅವರ ಮಾತುಗಳಿಂದ ಸ್ಪಷ್ಟವಾಯಿತು.
ಇದನ್ನು ಓದಿದ್ದೀರಾ? ತಂತ್ರಜ್ಞಾನದ ಹೆಬ್ಬಾಗಿಲು ಬೆಂಗಳೂರು; ವಿಶ್ವದ ಗಮನ ಸೆಳೆದ Bengaluru Tech Summit 2025
“ಯೋಜನೆ ಯಶಸ್ವಿಯಾಗಲು ದೇಶದ ವಿದ್ಯಾರ್ಥಿಗಳು, ಉದ್ಯಮಿಗಳು ಮತ್ತು ಯುವಜನರ ಸಹಕಾರ ಅಗತ್ಯವಿದೆ ಎಂಬುದನ್ನು ಅವರು ವಿಶೇಷವಾಗಿ ಒತ್ತಿಹೇಳಿದರು. ಚಿಕ್ಕ ಉಪಕರಣವಾಗಲಿ, ದೊಡ್ಡ ತಂತ್ರಜ್ಞಾನ ಉಪಕರಣವಾಗಲಿ ಯಾವುದೇ ಕೊಡುಗೆಯೂ ಈ ಮಿಷನ್ಗಾಗಿ ಬಹಳ ಮಹತ್ವದ್ದಾಗಿದೆ,” ಎಂದು ಸ್ಪಷ್ಟಪಡಿಸಿದರು.
ವಿಕಸಿತ ಭಾರತ-2047 ಗುರಿ ಸಾಧನೆಗೆ ದೇಶದ ಪ್ರತಿಯೊಬ್ಬ ನಾಗರಿಕನ ಪಾತ್ರ ಅವಶ್ಯಕ. 2047ರಲ್ಲಿ ಭಾರತವನ್ನು ಅಭಿವೃದ್ಧಿಶೀಲ ರಾಷ್ಟ್ರವನ್ನಾಗಿಸಲು ನಾವು ಈಗಲೇ ಜವಾಬ್ದಾರಿ ತೆಗೆದುಕೊಳ್ಳಬೇಕು. ‘ಇದನ್ನು ಸರಳವಾಗಿ ಹೀಗೆ ಹೇಳಬಹುದು:“ಭಾರತ 2047ರಲ್ಲಿ ಅಭಿವೃದ್ಧಿ ರಾಷ್ಟ್ರವಾಗಬೇಕೆಂದರೆ, ಅದಕ್ಕೆ ನಾನು ಈಗಿನಿಂದ ಏನು ಕೊಡುಗೆ ನೀಡಬಹುದು’ ಎಂಬ ಪ್ರಶ್ನೆಯನ್ನು ಪ್ರತಿಯೊಬ್ಬರೂ ತಮ್ಮೊಳಗೆ ಕೇಳಿಕೊಳ್ಳಬೇಕು” ಎಂದು ಶುಭಾಂಶು ಶುಕ್ಲಾ ಒತ್ತಿ ಹೇಳಿದರು
ಗಗನ್ಯಾನ್ ಮಿಷನ್ ಯಶಸ್ವಿಯಾದರೆ, ಭಾರತ ಸ್ವಂತ ತಂತ್ರಜ್ಞಾನದ ರಾಕೆಟ್ನಲ್ಲಿ ಮನುಷ್ಯರನ್ನು ಬಾಹ್ಯಾಕಾಶಕ್ಕೆ ಕಳುಹಿಸುವ ವಿಶ್ವದ ನಾಲ್ಕನೇ ರಾಷ್ಟ್ರವಾಗಲಿದೆ ಎಂದು ಶುಭಾಂಶು ಶುಕ್ಲಾ ಇದೇ ಸಂದರ್ಭದಲ್ಲಿ ತಿಳಿಸಿದರು.

ಗಗನ್ಯಾನ್ ಯೋಜನೆಯ ಗುರಿ—ಭಾರತೀಯರ ದೀರ್ಘಾವಧಿಯ ಬಾಹ್ಯಾಕಾಶ ಉಪಸ್ಥಿತಿ, ಮುಂದೆ ನಡೆಯಲಿರುವ ಕಠಿಣ ಮಿಷನ್ಗಳಿಗೆ ಸಿದ್ಧತೆ ಮತ್ತು ಇಂದಿಗೂ ಅನ್ವೇಷಿಸದ ಕೆಲವು ಕ್ಷೇತ್ರಗಳನ್ನು ಅಧ್ಯಯನ ಮಾಡುವುದು ಸೇರಿದಂತೆ ಶುಭಾಂಶು ಅವರು ಇದೇ ಸಂದರ್ಭದಲ್ಲಿ ಭಾರತ ಕೈಗೊಂಡಿರುವ ಮಾನವ ಬಾಹ್ಯಾಕಾಶ ಯಾನದ ಪ್ರಮುಖ ಹಂತಗಳನ್ನು ಶುಭಾಂಶು ಶುಕ್ಲಾ ವಿವರಿಸಿದರು
ಭಾರತದ ಮಿಷನ್ ಯಶಸ್ವಿಯಾಗಲು ಸಣ್ಣ ಉಪಕರಣಗಳಿಂದ ಹಿಡಿದು ಜೀವ ರಕ್ಷಣಾ ವ್ಯವಸ್ಥೆಯಂತಹ ದೊಡ್ಡ ತಂತ್ರಜ್ಞಾನಗಳವರೆಗೆ ಅನೇಕ ಅಂಶಗಳು ಬೇಕಾಗುತ್ತವೆ ಎಂದು ಅವರು ಹೇಳಿದರು. ಪ್ರಸ್ತುತ, ಭಾರತದಲ್ಲಿ 300ಕ್ಕೂ ಹೆಚ್ಚು ಸ್ಟಾರ್ಟ್ಅಪ್ಗಳು ಬಾಹ್ಯಾಕಾಶ ತಂತ್ರಜ್ಞಾನ ಅಭಿವೃದ್ಧಿಯಲ್ಲಿ ಭಾಗಿಯಾಗಿದ್ದು, ನಾವೀನ್ಯತೆ ಮತ್ತು ತಂತ್ರಜ್ಞಾನ ಸಾಮರ್ಥ್ಯ ದೇಶವನ್ನು ಈ ಗುರಿಯತ್ತ ಮುಂದೆ ಕೊಂಡೊಯ್ಯುತ್ತಿದೆ ಎಂದು ಶುಕ್ಲಾ ಒತ್ತಿಹೇಳಿದರು.
ಕೊನೆಯ ದಿನ ರಂಜನೆಯ ಕಾರ್ಯಕ್ರಮಗಳು
ಬೆಂಗಳೂರು ಟೆಕ್ ಸಮ್ಮಿಟ್ನ ಕೊನೆಯ ದಿನವಾದ ಇಂದಿನ ಹಲವು ಕಾರ್ಯಕ್ರಮಗಳು ಪ್ರೇಕ್ಷಕರಿಗೆ ವಿಭಿನ್ನ ಅನುಭವಗಳನ್ನು ನೀಡಿತು. ಮೈಂಡ್ ರೀಡರ್ ಸುಹಾನಿ ಶಾ ಅವರು ತಮ್ಮ ಮನೋವೈಜ್ಞಾನಿಕ ಕೌಶಲ್ಯಗಳಿಂದ ಎಲ್ಲರನ್ನು ಮನರಂಜಿಸಿದರು. ಪ್ರೇಕ್ಷಕರು ದೂರದಲ್ಲಿ ಹಿಡಿದಿದ್ದ ಕಾಗದ, ಸಂಖ್ಯೆಗಳು, ಬಣ್ಣಗಳನ್ನು ನಿಖರವಾಗಿ ಊಹಿಸುವ ಮೂಲಕ ಅವರು ಸಭಾಂಗಣದಲ್ಲಿ ಕುತೂಹಲದ ವಾತಾವರಣ ಸೃಷ್ಟಿಸಿದರು.

“Grit, Glory and Grace” ಎಂಬ ಚರ್ಚಾ ಕಾರ್ಯಕ್ರಮದಲ್ಲಿ ಟೆನಿಸ್ ತಾರೆ ಸಾನಿಯಾ ಮಿರ್ಜಾ ಮತ್ತು ಭಾರತೀಯ ಮಹಿಳಾ ಕ್ರಿಕೆಟ್ನ ಯುವ ಆಟಗಾರ್ತಿ ರಿಚಾ ಘೋಷ್ ವೇದಿಕೆ ಹಂಚಿಕೊಂಡರು. ಸಾನಿಯಾ ತಮ್ಮ ಗಾಯಗಳು, ಅದರಿಂದಾದ ಹಿನ್ನಡೆಗಳು ಮುಂತಾದವುಗಳ ಬಗ್ಗೆ ಮಾತು ಹಂಚಿಕೊಂಡರೆ, ರಿಚಾ ತನ್ನ ಮೊದಲ ವಿಶ್ವಕಪ್ ಅನುಭವ ಮತ್ತು ಮಹಿಳಾ ಕ್ರಿಕೆಟ್ನಲ್ಲಿ ನಡೆಯುತ್ತಿರುವ ಬದಲಾವಣೆಗಳ ಬಗ್ಗೆ ಮಾತನಾಡಿದರು.
ಈ ಸಂವಾದ ಇಬ್ಬರ ಜೀವನದಲ್ಲಿನ ಹೋರಾಟ ಮತ್ತು ಸಾಧನೆಯ ಕಥನಗಳನ್ನು ಹೊರಹಾಕಿ ನೆರೆದಿದ್ದ ಸಾವಿರಕ್ಕೂ ಹೆಚ್ಚು ಪ್ರೇಕ್ಷಕರಿಗೆ ನಿಜವಾದ ಪ್ರೇರಣೆಯನ್ನು ನೀಡಿತು.





