‘ಸ್ವರಾಜ್ಯ ನನ್ನ ಜನ್ಮ ಸಿದ್ಧ ಹಕ್ಕು, ಅದನ್ನು ಪಡೆದೇ ಪಡೆಯುತ್ತೇನೆ’ ಎಂದು ಹೇಳುವ ಮೂಲಕ ಬ್ರಿಟಿಷ್ ವಸಾಹತುಶಾಹಿ ಆಡಳಿತ ವಿರುದ್ಧ ಚಳುವಳಿ ಆರಂಭಿಸಿ ಭಾರತದ ಚಳುವಳಿ ಪಿತಾಮಹರಾದವರು ಬಾಲ ಗಂಗಾಧರ ತಿಲಕರು ಎಂದು ಕರ್ನಾಟಕ ರಾಜ್ಯ ಕ್ರಿಯಾಶೀಲ ಶಿಕ್ಷಕರ ವೇದಿಕೆಯ ಬಳ್ಳಾರಿ ಜಿಲ್ಲಾ ಘಟಕದ ಅಧ್ಯಕ್ಷ ರವಿಚೇಳ್ಳಗುರ್ಕಿ ಹೇಳಿದರು.
ಬಳ್ಳಾರಿ ತಾಲೂಕಿನ ಸಂಜೀವ ರಾಯನಕೋಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ತಿಲಕರ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. “ತಿಲಕರು ಗಣಿತ ಭಾಷೆಯ ಶಿಕ್ಷಕರಾಗಿ, ವಕೀಲರಾಗಿ, ಪತ್ರಕರ್ತರಾಗಿ, ಎಲ್ಲಕ್ಕೂ ಮಿಗಿಲಾಗಿ ಭಾರತ ಸ್ವಾತಂತ್ರ್ಯ ಹೋರಾಟಗಾರರಾಗಿ ಬ್ರಿಟಿಷರ ವಿರುದ್ಧ ಹೋರಾಡಿದರು. ಯುವಕರನ್ನು ಒಂದುಗೂಡಿಸಲು ಶಿವಾಜಿ ಉತ್ಸವ ಹಾಗೂ ಗಣೇಶ ಉತ್ಸವಗಳನ್ನು ಆರಂಭಿಸಿದರು” ಎಂದು ತಿಳಿಸಿದರು.
“ಪಂಜಾಬಿನ ಕೇಸರಿ ಲಾಲಾ ಲಜಪತ ರಾಯ್, ಮಹರಾಷ್ಟ್ರದ ಬಾಲ ಗಂಗಾಧರ ತಿಲಕ್ ಹಾಗೂ ಪಶ್ಚಿಮ ಬಂಗಾಳದ ಬಿಪಿನ್ ಚಂದ್ರಪಾಲ್ ಸೇರಿ ಹೋರಾಟದ ಮುಂದಾಳತ್ವ ವಹಿಸಿ ‘ಲಾಲ್ ಬಾಲ್ ಪಾಲ್’ ಎಂದೇ ಹೆಸರಾಗಿದ್ದಾರೆ. ಆದ್ದರಿಂದ ವಿದ್ಯಾರ್ಥಿಗಳು ಸ್ವತಂತ್ರ ಹೋರಾಟಗಾರರ ಜೀವನ ಚರಿತ್ರೆಯ ಪುಸ್ತಕಗಳನ್ನು ಓದುವ ಅಭ್ಯಾಸ ಮೈಗೂಡಿಸಿ ಕೊಳ್ಳಬೇಕು” ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಶಿಕ್ಷಕರಾದ ಚನ್ನಮ್ಮ, ಬಸವರಾಜ, ದಿಲ್ಷಾದ್ ಬೇಗಂ, ಮೋದಿನ್ ಸಾಬ್,ಸುಮತಿ, ಶ್ವೇತಾ, ಉಮ್ಮೆಹಾನಿ, ಶಶಮ್ಮ ಹಾಗೂ ವಿದ್ಯಾರ್ಥಿ ಪ್ರತಿನಿಧಿ ಮಹೇಶ ಮುಂತಾದವರು ಇದ್ದರು.




