ʼಹಿರಿಯ ಸಾಹಿತಿ ವಿರೇಂದ್ರ ಸಿಂಪಿ ಅವರು ಇಂಗ್ಲಿಷ್ ಪ್ರಾಧ್ಯಾಪಕರಾದರೂ ಬರೆದದ್ದೆಲ್ಲಾ ಕನ್ನಡದಲ್ಲೆ. ಪ್ರಬಂಧಕಾರ, ಅಂಕಣಕಾರರೆಂದೇ ಪ್ರಸಿದ್ಧಿಯಾದ ಅವರು ಕನ್ನಡ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಕೃಷಿ ಮಾಡಿದ್ದಾರೆʼ ಎಂದು ಕಥೆಗಾರ ಶಿವಕುಮಾರ ನಾಗವಾರ ಹೇಳಿದರು.
ಔರಾದ್ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಶಬನಮ್ ಎಜುಕೇಷನ್ ಮತ್ತು ಚಾರಿಟೇಬಲ್ ಟ್ರಸ್ಟ್ ವತಿಯಿಂದ ಹಿರಿಯ ಸಾಹಿತಿ ವೀರೇಂದ್ರ ಸಿಂಪಿ ಅವರ ಬದುಕು-ಬರಹ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ʼವಿರೇಂದ್ರ ಸಿಂಪಿ ಅವರು ಬದುಕಿನ್ನುದ್ದಕ್ಕೂ ಅನೇಕ ಕಷ್ಟ, ನೋವುಗಳನ್ನು ಉಂಡವರು. ಕನ್ನಡ ಅಂದರೆ ಅವರಿಗೆ ಪಂಚ ಪ್ರಾಣವಾಗಿತ್ತು. ಸಾಹಿತ್ಯ ಹುಟ್ಟಿಕೊಳ್ಳುವುದು ಆಸಕ್ತಿ, ಅಭಿರುಚಿಯಿಂದ ಮಾತ್ರ. ವಿದ್ಯಾರ್ಥಿಗಳು ಪಠ್ಯ ಜೊತೆಗೆ ಸಾಹಿತ್ಯ ಅಧ್ಯಯನದಲ್ಲಿ ತೊಡಗಿಸಿಕೊಳ್ಳಬೇಕುʼ ಎಂದರು.
ಸರ್ಕಾರಿ ಪಿಯು ಕಾಲೇಜು ಪ್ರಾಚಾರ್ಯ ಓಂಪ್ರಕಾಶ್ ದಡ್ಡೆ ಅವರು ಮಾತನಾಡಿ, ʼ ಉತ್ತಮ ಓದುಗ ಮಾತ್ರ ಉತ್ತಮ ಬರಗಾರನಾಗಲು ಸಾಧ್ಯ. ನಮ್ಮ ಉಜ್ವಲ ಭವಿಷ್ಯ ನಿರ್ಮಾಣಕ್ಕೆ ಎಲ್ಲರೊಂದಿಗೆ ಮಿತ್ರತ್ವ ಹೊಂದಿರಬೇಕು. ಕನ್ನಡ ನಾಡು-ನುಡಿ, ಸಂಸ್ಕೃತಿ ಉಳಿಸಿ ಬೆಳೆಸುವ ದಿಸೆಯಲ್ಲಿ ತೊಡಗಿಸಿಕೊಳ್ಳಬೇಕುʼ ಎಂದು ಕರೆ ನೀಡಿದರು.
ನಿವೃತ್ತ ಪ್ರಾಚಾರ್ಯೆ ಡಾ.ಜಯದೇವಿ ತೇಲಿ ಅವರು ವಿಶೇಷ ಉಪನ್ಯಾಸ ನೀಡಿ, ʼವಿರೇಂದ್ರ ಸಿಂಪಿ ಅವರು ಮುಖ್ಯವಾಗಿ ಕಥೆ, ಕವನ, ಕಾದಂಬರಿ, ಪ್ರವಾಸ ಕಥನ, ಮುಂತಾದ ಪ್ರಕಾರಗಳನ್ನು ಬರೆದಿದ್ದಾರೆ. ಬೀದರ ಜಿಲ್ಲೆಯ ಉತ್ತಮ ಸಾಹಿತಿಗಳ ಸಾಲಿನಲ್ಲಿ ವಿರೇಂದ್ರ ಸಿಂಪಿ ಒಬ್ಬರಾಗಿದ್ದರು. ಇಂಗ್ಲಿಷ್ ಪ್ರಾಧ್ಯಾಪಕರಾದರೂ ಅದರ ವ್ಯಾಮೋಹ ತೊರೆದು ಕನ್ನಡ ಅಭಿಮಾನ ತೋರಿದರುʼ ಎಂದು ನುಡಿದರು.
ಅಧ್ಯಕ್ಷತೆ ವಹಿಸಿದ್ದ ಡಾ.ಮಕ್ತುಂಬಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ʼಮನುಷ್ಯತ್ವವೇ ಮಹಾ ನವಮಿ ಎಂಬ ಶೀರ್ಷಿಕೆಯಡಿ ಶಬನಮ್ ಸಂಸ್ಥೆಯು ಅನೇಕ ಸಾಹಿತ್ಯಿಕ ಕಾರ್ಯಕ್ರಮಗಳನ್ನು ಆಯೋಜಿಸಿದೆ. ಇಂದಿನ ವಿದ್ಯಾರ್ಥಿಗಳು ಮೊಬೈಲ್ ಬಿಟ್ಟು ಹೆಚ್ಚು ಸಾಹಿತ್ಯದ ಕಡೆ ಒಲವು ತೋರಬೇಕುʼ ಎಂದು ತಿಳಿಸಿದರು.
ಇದನ್ನೂ ಓದಿ : ಶಾಸಕ ಪ್ರಭು ಚವ್ಹಾಣ ವಾಟ್ಸ್ಆ್ಯಪ್ಗೆ ಅಶ್ಲೀಲ ಫೋಟೊ, ವಿಡಿಯೊ ಕಳುಹಿಸಿ ಹಣದ ಬೇಡಿಕೆ : ದೂರು ದಾಖಲು
ಕಾರ್ಯಕ್ರಮದಲ್ಲಿ ಕಾಲೇಜಿನ ಉಪನ್ಯಾಸಕರು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಗೌರಮ್ಮ ನಿರೂಪಿಸಿದರು. ಶಬನಮ್ ಸ್ವಾಗತಿಸಿದರು ಹಾಗೂ ಪ್ರದೀಪ ವಂದನಾರ್ಪಣೆ ಮಾಡಿದರು.





