“ಮುಖ್ಯಮಂತ್ರಿ ಬದಲಾವಣೆ ವಿಚಾರದಲ್ಲಿ ನಾನು ಯಾವುದೇ ರೀತಿ ಪಕ್ಷಕ್ಕೆ ಮುಜುಗರ ಆಗುವ ರೀತಿಯಲ್ಲಿ ಮಾತನಾಡಿಲ್ಲ. ಆದರೂ ನನಗೆ ನೋಟೀಸ್ ಕೊಡಲಾಗಿದೆ. ಹಾಗೂ ಬೇರೆಯವರಿಗೂ ನೋಟೀಸ್ ನೀಡಲಾಗಿದೆ. ಆದರೆ ಮುಖ್ಯಮಂತ್ರಿ ವಿಚಾರದ ಬಗ್ಗೆ ಸಿಎಂ ಸಿದ್ದರಾಮಯ್ಯರ ಪುತ್ರ ಯತೀಂದ್ರ ಪಕ್ಷಕ್ಕೆ ಮುಜುಗರವಾಗುವ ರೀತಿ ಮಾತನಾಡಿದ್ದಾರೆ. ಆದರೆ ಯಾವುದೇ ಕ್ರಮ ಮತ್ತು ನೋಟೀಸ್ ಇಲ್ಲ. ಇದು ಯಾವ ರೀತಿಯ ನ್ಯಾಯ” ಎಂದು ದಾವಣಗೆರೆ ಜಿಲ್ಲೆ ಚನ್ನಗಿರಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಬಸವರಾಜ್ ಶಿವಗಂಗಾ ಪ್ರಶ್ನಿಸಿದ್ದಾರೆ.
ದಾವಣಗೆರೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, “ನಾನು ಮುಖ್ಯಮಂತ್ರಿ ವಿಚಾರ ಮಾತನಾಡಿಲ್ಲ. ಆದರೂ ನೊಟೀಸ್ ಕೊಟ್ಟಿದ್ದಾರೆ. ಅದೇ ರೀತಿ ಬಹಳಷ್ಟು ಜನರಿಗೆ ನೀಡಿದ್ದಾರೆ. ಹೈಕಮಾಂಡ್ ಗಮನಿಸಬೇಕು. ಯತೀಂದ್ರ ಸಿದ್ದರಾಮಯ್ಯ ಹಾಗೂ ಸತೀಶ್ ಜಾರಕಿಹೊಳಿ ಅವರು ಮೊದಲು ಏನು ಮಾತನಾಡಿದ್ದರು? ಆಮೇಲೆ ಏನು ಮಾತನಾಡಿದ್ದಾರೆ ಎಂಬುದು ಮಾಧ್ಯಮಗಳಲ್ಲಿ ಬಂದಿದೆ. ಪದೇ ಪದೇ ಮಾತನಾಡಲ್ಲ. ಎಲ್ಲರೂ ನವೆಂಬರ್ ಕ್ರಾಂತಿ ಎನ್ನುತ್ತಿದ್ದಾರೆ. ಡಿಸೆಂಬರ್ ನಂತರ ಆಗುತ್ತದೆ. ನಾನು ಈಗ ಮಾತನಾಡಲ್ಲ. ಡಿಸೆಂಬರ್ ನಂತರ ಮುಂದಿನ ವರ್ಷದ ಜನವರಿಯಲ್ಲಿ ಮಾತನಾಡುತ್ತೇನೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ | ಕನಕ ಜಯಂತಿ ಪ್ರಯುಕ್ತ ಲಕ್ಷ ದೀಪೋತ್ಸವ ರಾಜ್ಯ ಮಟ್ಟದ ಟಗರಿನ ಕಾಳಗ, ಕಬಡ್ಡಿ ಮತ್ತು ಕೃಷಿ ಮೇಳ
“ಮುಖ್ಯಮಂತ್ರಿ ಸಿದ್ದರಾಮಯ್ಯ ಮುತ್ಸದ್ದಿ ರಾಜಕಾರಣಿ. ಒಬ್ಬ ಉತ್ತಮ ಆಡಳಿತಗಾರರು. ಹೀಗೆ ಬಾಲಿಶವಾಗಿ ಮಾತನಾಡುವಂತೆ ಎಂದಿಗೂ ಯಾರಿಗೂ ಅವರು ಹೇಳಲ್ಲ. ಹೇಳುವುದೂ ಇಲ್ಲ. ಸಿದ್ದರಾಮಯ್ಯನವರು ಕುಟುಂಬಸ್ಥರನ್ನು ರಾಜಕೀಯಕ್ಕೆ ತಂದಿರಲಿಲ್ಲ. ರಾಜಕೀಯ ಕೊನೆಗಾಲದಲ್ಲಿದ್ದಾರೆಂದು ಎಂದು ಯತೀಂದ್ರ ಸಿದ್ದರಾಮಯ್ಯ ಹೇಳಿದ್ದಾರೆ. ಮುಖ್ಯಮಂತ್ರಿ ಸ್ಥಾನದಿಂದ ಇಳಿಯುತ್ತೇನೆ ಎಂದೂ ಸಿದ್ದರಾಮಯ್ಯರು ಹೇಳಿಲ್ಲ. ನಾಲ್ವರು ಅವರ ಬೇಳೆ ಕಾಳು ಬೇಯಿಸಿಕೊಳ್ಳಲು ಯತ್ನಿಸುತ್ತಾ ಗೊಂದಲಮಯ ಹೇಳಿಕೆ ನೀಡುತ್ತಿದ್ದಾರೆ” ಎಂದು ಪ್ರತಿಕ್ರಿಯಿಸಿದರು.





