“ಪ್ರಸಕ್ತ ವರ್ಷದ 2026-2027ರ ಬಜೆಟ್ ನಲ್ಲಿ ದಲಿತರ ಜನಸಂಖ್ಯೆ ಅನುಗುಣವಾಗಿ ಶೇ. 24.1ರಷ್ಟು ಅನುದಾನ ಮೀಸಲಿರಿಸಿ, ವಿಶೇಷ ಯೋಜನೆಯ ಹಣ ದುರ್ಬಳಕೆ ತಡೆಯಲು ಎಸ್ಸಿಪಿಎಸ್ಟಿ (SCSP/TSP) ಕಾಯ್ದೆ ಸೆಕ್ಷನ್ 7 (ಸಿ) ರದ್ದುಪಡಿಸಬೇಕು” ಎಂದು ದಲಿತ ಸಂಘರ್ಷ ಸಮಿತಿಯ (ಪ್ರೊ.ಕೃಷ್ಣಪ್ಪ) ದಾವಣಗೆರೆ ಜಿಲ್ಲಾ ಸಂಚಾಲಕ ಮಂಜುನಾಥ ಕುಂದುವಾಡ ಒತ್ತಾಯಿಸಿದರು.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಜನಸಂಖ್ಯೆಗೆ ಅನುಗುಣವಾಗಿ ಶೇ.24.1 ರಷ್ಟು ಅನುದಾನವನ್ನು ಮೀಸಲಿರಿಸಿ ಖರ್ಚು ಮಾಡಬೇಕು ಮತ್ತು ಅದರ ದುರ್ಬಳಕೆಯನ್ನು ತಡೆಯಬೇಕು ಎಂದು ಒತ್ತಾಯಿಸಿ ದಾವಣಗೆರೆ ಪ್ರೊ.ಕೃಷ್ಣಪ್ಪ ಸ್ಥಾಪಿತ ದಸಂಸ ಮುಖಂಡರು ಹಾಗೂ ಕಾರ್ಯಕರ್ತರು ಮಾನ್ಯ ಮುಖ್ಯಮಂತ್ರಿಗಳಿಗೆ ದಾವಣಗೆರೆ ಜಿಲ್ಲಾಧಿಕಾರಿಗಳ ಮೂಲಕ ಮನವಿ ಸಲ್ಲಿಸಿ ಒತ್ತಾಯಿಸಿದರು.

ಈ ವೇಳೆ ಮಾತನಾಡಿದ ಜಿಲ್ಲಾ ಸಂಚಾಲಕ ಮಂಜುನಾಥ್ ಕುಂದವಾಡ “ಸರ್ಕಾರಕ್ಕೆ ಮನವಿ ಮಾಡುತ್ತಿದ್ದು, ಸಂವಿಧಾನದ ರಾಜ್ಯ ನಿರ್ದೇಶಿತ ತತ್ವಗಳ ಪರಿಚ್ಛೇದ 37 ಮತ್ತು 46 ರಲ್ಲಿ ಶೋಷಿತ ಸಮುದಾಯಗಳನ್ನು ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕವಾಗಿ ಸಬಲೀಕರಣಗೊಳಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮಂಡಿಸುವ ಒಟ್ಟು ಬಜೆಟ್ ಗಾತ್ರದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಸಂಖ್ಯೆಯ ಅನುಗುಣವಾಗಿ ಅನುದಾನ ಮೀಸಲಿಡಲು ಸೂಚಿಸಿದೆ, ಮೀಸಲಿರಿಸಿದ ಅನುದಾನ ರದ್ದಾಗದಂತೆ ಮತ್ತು ಇತರೆ ಯೋಜನೆಗಳಿಗೆ ವರ್ಗಾಯಿಸದಂತೆ ಉದ್ದೇಶಿತ ಯೋಜನೆಗಳಿಗೆ ಬಳಕೆಯಾಗಬೇಕೆಂದೂ ನಿರ್ದೇಶನ ನೀಡಿದೆ. ಆದರೆ, 2023 ರಿಂದ ಅಧಿಕಾರದಲ್ಲಿರುವ ಕಾಂಗ್ರೆಸ್ ಸರ್ಕಾರ ತನ್ನ ಆಡಳಿತಾವಧಿಯಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ (ಎಸ್ ಸಿ ಎಸ್ ಪಿ /ಟಿ ಎಸ್ ಪಿ)ಗಳ ಅಭಿವೃದ್ಧಿಗೆ ಮೀಸಲಿಟ್ಟಿದ್ದ ಅನುದಾನವನ್ನು ಏಕಪಕ್ಷೀಯವಾಗಿ ಸುಮಾರು 25 ಸಾವಿರ ಕೋಟಿಗೂ ಹೆಚ್ಚು ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ವರ್ಗಾಯಿಸುವ ಮೂಲಕ ಅವಕಾಶ ವಂಚಿತ ಪರಿಶಿಷ್ಟ ಜಾತಿಗಳಿಗೆ ವಂಚನೆ ಮಾಡಿದೆ” ಎಂದು ಆರೋಪಿಸಿದರು.
“ಸಿದ್ದರಾಮಯ್ಯನವರ ನೇತೃತ್ವದ ಸರ್ಕಾರವೇ ಜಾರಿಗೆ ತಂದಿರುವ ಪರಿಶಿಷ್ಟ ಜಾತಿ ವಿಶೇಷ ಯೋಜನೆ ಮತ್ತು ಪರಿಶಿಷ್ಟ ಪಂಗಡದ ಉಪ ಯೋಜನೆ (ಎಸ್ ಸಿ ಎಸ್ ಪಿ/ ಟಿ ಎಸ್ ಪಿ) ಕಾಯ್ದೆ 2013ರ ಪ್ರಕಾರ ರಾಜ್ಯ ಸರ್ಕಾರ ಪ್ರತಿ ವರ್ಷ ತನ್ನ ವಾರ್ಷಿಕ ಒಟ್ಟು ಬಜೆಟ್ ನ ಶೇ. 24.1ರಷ್ಟು ಮೊತ್ತವನ್ನು ಈ ಸಮುದಾಯಗಳ ಅಭಿವೃದ್ಧಿಗಾಗಿ ಖರ್ಚು ಮಾಡಬೇಕೆಂದು ಕಾಯ್ದೆಯಲ್ಲಿ ಸ್ಪಷ್ಟವಾಗಿ ತಿಳಿಸಿದೆ” ಎಂದು ಅಭಿಪ್ರಾಯಪಟ್ಟರು.

ಪರಿಶಿಷ್ಟರು ಹೆಚ್ಚಾಗಿ ವಾಸಿಸುವ ಪ್ರದೇಶದಲ್ಲಿ ಮೂಲ ಸೌಕರ್ಯ ಸೃಷ್ಟಿಸಲು ಮತ್ತು ಅಲಕ್ಷಿತ ಸಮುದಾಯಗಳನ್ನು ಬಡತನ ರೇಖೆಯಿಂದ ಮೇಲತ್ತಲು ಹಾಗೂ ಸಮಾಜದ ಮುಖ್ಯ ವಾಹಿನಿಯೊಂದಿಗೆ ಬೆರೆಯುವಂತೆ ಮಾಡುವುದು ಈ ಕಾಯ್ದೆಯ ಉದ್ದೇಶವಾಗಿದೆ. ಸದರಿ ಯೋಜನೆಯ ಉದ್ದೇಶ ತುಂಬಾ ಸ್ಪಷ್ಟವಾಗಿದ್ದರೂ ಗ್ಯಾರಂಟಿ ಯೋಜನೆಗಳಿಗೆ 25 ಸಾವಿರ ಕೋಟಿ ದಲಿತರ ಅಭಿವೃದ್ಧಿ ನಿಧಿಯನ್ನು ವರ್ಗಾಯಿಸಿರುವ ಸರ್ಕಾರದ ಕ್ರಮವನ್ನು ದಸಂಸ ಖಂಡಿಸುತ್ತದೆ” ಎಂದರು.
“ಈ ಕೆಳಕಂಡ ಬೇಡಿಕೆಗಳಿಗೆ ಸೂಕ್ತ ನ್ಯಾಯ ಒದಗಿಸಬೇಕು. ಈ ಕೂಡಲೇ ಸರ್ಕಾರ 25 ಸಾವಿರ ಕೋಟಿ ಹಣವನ್ನು ಪುನಃ ಹಿಂದಿರುಗಿಸುವ ಮೂಲಕ ದಲಿತಪರ ಕಾಳಜಿ ತೋರಿಸಬೇಕೆಂದು ಆಗ್ರಹಿಸುತ್ತೇವೆ. ಪ್ರಸಕ್ತ 2026-27ನೇ ಸಾಲಿನ ಒಟ್ಟು ಬಜೆಟ್ ನ ಶೇ 24.1ರಷ್ಟು SCSP /TSP ಗೆ ಅನುದಾನ ಮೀಸಲಿರಿಸಿ, ಅನುದಾನ ದುರ್ಬಳಕೆ ತಡೆಯಲು SCSP/TSP ಕಾಯ್ದೆಯಿಂದಲೇ ಸೆಕ್ಷನ್ 7( C) ಯನ್ನು ರದ್ದುಪಡಿಸುವಂತೆ, ದಲಿತಮತ್ತು ಇತರೆ ಹಿಂದುಳಿದ ವರ್ಗಗಳ ಈ ಕೆಳಕಂಡ ಅತ್ಯಗತ್ಯ ಬೇಡಿಕೆಗಳಿಗೆ ಸೂಕ್ತ ನ್ಯಾಯ ಒದಗಿಸಬೇಕೆಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ದಾವಣಗೆರೆ ಘಟಕದ ವತಿಯಿಂದ ಜಿಲ್ಲಾಧಿಕಾರಿಗಳ ಮೂಲಕ ಮನವಿ ಸಲ್ಲಿಸಲಾಗಿದೆ” ಎಂದು ಆಗ್ರಹಿಸಿದರು.
ೀ ಸುದ್ದಿ ಓದಿದ್ದೀರಾ? ವಸತಿ ಶಾಲೆ ನೆಪದಲ್ಲಿ ದಲಿತರ ಮನೆ ಕಿತ್ತು ಕೊಳ್ಳಲು ಯತ್ನ: ಪ್ರಾಣ ಬಿಟ್ಟರೂ ನೆಲ ಬಿಡಲ್ಲ ಎಂದ ಸಂತ್ರಸ್ತರು
ಮನವಿ ಸಲ್ಲಿಸುವ ವೇಳೆ ಹರಿಹರ ತಾಲೂಕು ಸಂಚಾಲಕ ಮಹಂತೇಶ್ ಎಚ್, ತಾಲೂಕು ಸಂಚಾಲಕ ಚಿತ್ತಾನಹಳ್ಳಿ ನಾಗರಾಜ್, ಜಿಲ್ಲಾ ಸಂಘಟನಾ ಸಂಚಾಲಕ ಕುಂದವಾಡ ಹಾಲೇಶ್, ಮಹಿಳಾ ಜಿಲ್ಲಾ ಸಂಚಾಲಕಿ ವಿಜಯಲಕ್ಷ್ಮಿ, ಜಿಲ್ಲಾ ಸಂಘಟನಾ ಸಂಚಾಲಕರಾದ ಆರತಿ ಮತ್ತು ಭಾಗ್ಯಮ್ಮ, ಹನುಮಂತಪ್ಪ ಗಂಗನಕಟ್ಟೆ ಹಾಗೂ ಪದಾಧಿಕಾರಿಗಳಾದ ಮಂಜುನಾಥ, ಕುಬೇಂದ್ರಪ್ಪ, ಎಚ್ ಬಸವರಾಜ್, ಖಾಲಿದ್ ಅಲಿ, ಶಿವಶಂಕರ್, ಹುಣ್ಸೆಕಟ್ಟೆ ರಾಜು ಸೇರಿದಂತೆ ಇತರ ಮುಖಂಡರು ಕಾರ್ಯಕರ್ತರು ಹಾಜರಿದ್ದರು.





