ಉಡುಪಿ ಜಿಲ್ಲೆಯ ಮಾಬುಕಳ ಹಂಗಾರಕಟ್ಟೆ ಬಾಳುದ್ರುವಿನ ಖ್ಯಾತ ವೈದ್ಯ ಡಾ. ಕೆ.ಪಿ. ಶೆಟ್ಟಿ (77) ಅವರು ನ.4 ರಂದು ನಿಧನ ಹೊಂದಿದರು.
ಜನಸ್ನೇಹಿ ವೈದ್ಯರಾಗಿ ಸಾಸ್ತಾನ, ಹಂಗಾರಕಟ್ಟೆ ಪರಿಸರದಲ್ಲಿ ಜನಾನುರಾಗಿಯಾಗಿದ್ದ ಅವರು ಸುಮಾರು 55 ವರ್ಷಕ್ಕೂ ಹೆಚ್ಚು ಕಾಲ ಸೇವೆ ನೀಡಿದ್ದರು. ವೃತ್ತಿಯನ್ನು ಸಮಾಜ ಸೇವೆಯಾಗಿ ಪರಿಗಣಿಸಿದ್ದ ಅವರು ಆರಂಭದಲ್ಲಿ ಮಣಿಪಾಲ ಆಸ್ಪತ್ರೆಯ ವೈದ್ಯರಾಗಿಯೂ ದುಡಿದಿದ್ದರು. ಅನಂತರ ಸರಕಾರಿ ವೈದ್ಯರಾಗಿ ಸೇವೆ ಸಲ್ಲಿಸಿದ್ದರು. ತನ್ನೂರಿನ ಜನರ ಸೇವೆಗಾಗಿ ಸರಕಾರಿ ಉದ್ಯೋಗಕ್ಕೆ ರಾಜೀನಾಮೆ ನೀಡಿ ಕ್ಲಿನಿಕ್ ಆರಂಭಿಸಿದ್ದರು.
ಅವರು 5 ರೂ. ವೈದ್ಯರು ಎಂದೇ ಖ್ಯಾತರಾಗಿದ್ದರು. ತಮ್ಮಲ್ಲಿ ಚಿಕಿತ್ಸೆಗೆ ಬರುವ ರೋಗಿಗಳ ಬಳಿ 30 ರೂ. ಪಡೆದು ಎಲ್ಲ ಔಷಧಗಳನ್ನು ನೀಡುತ್ತಿದ್ದರು. ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷರಾಗಿ, ಬಾಳ್ಳುದ್ರು ಶಾಲೆಯ ಶತಮಾನೋತ್ಸವ ಸಮಿತಿಯಲ್ಲೂ ಸೇವೆ ಸಲ್ಲಿಸಿದ್ದರು. ಅವರ ಸೇವೆಯನ್ನು ಗುರುತಿಸಿ ಹಲವಾರು ಸಂಘ ಸಂಸ್ಥೆಗಳು ಸಮ್ಮಾನಿಸಿ ಗೌರವಿಸಿವೆ.ಮೃತರು ಮೂವರು ಪುತ್ರರು, ಓರ್ವ ಪುತ್ರಿಯನ್ನು ಅಗಲಿದ್ದಾರೆ.





