ಮುಂಡಗೋಡ: ಕೇಂದ್ರ ಸರ್ಕಾರವು ಜಾರಿಗೆ ತರಲು ಉದ್ದೇಶಿಸಿರುವ ಹೊಸ ‘ವಿಕಸಿತ ಭಾರತ-ಗ್ಯಾರಂಟಿ ಫಾರ್ ರೋಜ್ಗಾರ್ ಅಂಡ್ ಆಜೀವಿಕಾ (ಎಬಿ ಜಿ ರಾಮ್ ಜಿ 2025)’ ಕಾಯ್ದೆಯನ್ನು ಕೈಬಿಟ್ಟು, ಗ್ರಾಮೀಣ ಬಡವರ ಜೀವನಾಡಿಯಾಗಿರುವ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ (ನರೇಗಾ-2005) ಯೋಜನೆಯನ್ನೇ ಮುಂದುವರಿಸಬೇಕು ಎಂದು ಒತ್ತಾಯಿಸಿ
ಮುಂಡಗೋಡ ತಾಲೂಕಿನ ವಿವಿಧ ಸಂಘಟನೆಗಳ ಒಕ್ಕೂಟವು ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿಯವರಿಗೆ ಮನವಿಯನ್ನು ಸಲ್ಲಿಸಿದ್ದಾರೆ. ಗ್ರಾಮೀಣ ಕೂಲಿ ಕಾರ್ಮಿಕರ ತಾಲೂಕು ಸಂಘಟನಾ ಸಮಿತಿ ಹಾಗೂ ಸಮಾನ ಮನಸ್ಕ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ಸಲ್ಲಿಸಲಾದ ಈ ಮನವಿಯಲ್ಲಿ ಕೇಂದ್ರ ಸರ್ಕಾರದ ಹೊಸ ಪ್ರಸ್ತಾವನೆಯ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಲಾಗಿದೆ.
ಹೊಸ ಕಾಯ್ದೆಯು ನರೇಗಾ ಮೂಲಕ ಕಾರ್ಮಿಕರಿಗೆ ಲಭ್ಯವಿದ್ದ ಸಾಂವಿಧಾನಿಕ ಉದ್ಯೋಗದ ಹಕ್ಕನ್ನು ದುರ್ಬಲಗೊಳಿಸುತ್ತದೆ. ಅಲ್ಲದೆ, ಇದು ಮಹಾತ್ಮ ಗಾಂಧೀಜಿಯವರ ಹೆಸರಿಗೆ ಮಾಡಿದ ಅಪಮಾನ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಅವರು ಪ್ರತಿಪಾದಿಸಿದ ಮೂಲ ತತ್ವಗಳಿಗೆ ವಿರುದ್ಧವಾಗಿದೆ ಎಂದು ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ.
ನರೇಗಾ ಯೋಜನೆಯಡಿ ಕೇಂದ್ರ ಸರ್ಕಾರವು ಅಕುಶಲ ಕೂಲಿಯ ಶೇ. 100ರಷ್ಟು ವೆಚ್ಚವನ್ನು ಭರಿಸುತ್ತಿತ್ತು. ಆದರೆ ಹೊಸ ಕಾಯ್ದೆಯಲ್ಲಿ ರಾಜ್ಯ ಸರ್ಕಾರಗಳ ಮೇಲೆ ಶೇ. 40ರಷ್ಟು ವೆಚ್ಚದ ಹೊರೆ ಹಾಕಲು ಉದ್ದೇಶಿಸಲಾಗಿದೆ. ಇದರಿಂದ ಬಡತನ ಹೆಚ್ಚಿರುವ ಮತ್ತು ಕಡಿಮೆ ಆದಾಯದ ಮೂಲಗಳಿರುವ ಕರ್ನಾಟಕದಂತಹ ರಾಜ್ಯಗಳ ಮೇಲೆ ತೀವ್ರ ಪರಿಣಾಮ ಬೀರಲಿದ್ದು, ಕೆಲಸದ ಅವಕಾಶಗಳು ಕಡಿಮೆಯಾಗುವ ಆತಂಕ ಎದುರಾಗಿದೆ.
ಮುಖ್ಯವಾಗಿ ಬಿತ್ತನೆ ಮತ್ತು ಕಟಾವು ಅವಧಿಯಲ್ಲಿ ಸುಮಾರು 60 ದಿನಗಳ ಕಾಲ ಕಾಮಗಾರಿಗಳನ್ನು ಸ್ಥಗಿತಗೊಳಿಸುವ ಹೊಸ ನಿಯಮವು ಭೂ-ರಹಿತ ಕೂಲಿ ಕಾರ್ಮಿಕರನ್ನು ಸಂಕಷ್ಟಕ್ಕೆ ತಳ್ಳಲಿದ್ದು, ಅವರು ಅನಿವಾರ್ಯವಾಗಿ ಖಾಸಗಿ ಮಾಲೀಕರ ಬಳಿ ಕಡಿಮೆ ಕೂಲಿಗೆ ದುಡಿಯುವಂತೆ ಮಾಡುತ್ತದೆ ಎಂದು ಮನವಿಯಲ್ಲಿ ವಿವರಿಸಲಾಗಿದೆ.
ಈ ಸುದ್ದಿ ಓದಿದ್ದೀರಾ? ಮುಂಡಗೋಡ | ಸಬ್ ರಿಜಿಸ್ಟ್ರಾರ್ ಆಫೀಸ್ ನಲ್ಲಿ ಡಿಜಿಟಲ್ ಇ-ಸ್ಟ್ಯಾಂಪ್ ಕುರಿತು ತರಬೇತಿ ಕಾರ್ಯಾಗಾರ ಆಯೋಜನೆ
ನರೇಗಾ ಯೋಜನೆಯು ಗ್ರಾಮೀಣ ಭಾಗದ ಮಹಿಳೆಯರ ಘನತೆಯ ಬದುಕಿಗೆ ಮತ್ತು ಮಕ್ಕಳ ಶಿಕ್ಷಣಕ್ಕೆ ಆಸರೆಯಾಗಿದೆ. ಅಂತಹ ಯೋಜನೆಯನ್ನು ಬದಲಾಯಿಸುವುದು ಅಥವಾ ರದ್ದುಗೊಳಿಸುವುದು ಸರಿಯಲ್ಲ. ಆದ್ದರಿಂದ ರಾಜ್ಯ ಸರ್ಕಾರವು ಮಧ್ಯಪ್ರವೇಶಿಸಿ ಕೇಂದ್ರದ ಮೇಲೆ ಒತ್ತಡ ಹೇರಬೇಕು
ಮತ್ತು ರಾಜ್ಯದಲ್ಲಿ ನರೇಗಾ ಯೋಜನೆಯೇ ಮುಂದುವರಿಯುವಂತೆ ಕ್ರಮ ಕೈಗೊಳ್ಳಬೇಕು ಎಂದು ದಲಿತ ಮುಖಂಡ ಬಸವರಾಜ ಸಂಗಮೇಶ್ವರ, ಧರ್ಮರಾಜ ನಡಗೇರ, ಫಾದರ್ ಅನಿಲ ಡಿಸೋಜಾ, ನಾಗರಾಜ್ ಕಟ್ಟಿಮನಿ, ಮಂಗಲಾ ಮೊರೆ, ಮಲ್ಲಮ್ಮ ನೀರಲಗಿ, ತನ್ವೀರ್ ಅಹ್ಮದ್ ಮಿರ್ಜಾನಕರ್, ಮೋಹನ್ ಹರಿಜನ, ಹಜರತ ಮುಲ್ಲಾನವರ, ಮುಂಡಗೋಡ ತಾಲೂಕು ಭೂ-ಹಕ್ಕುದಾರರ ಹೋರಾಟ ಸಮಿತಿ, ಜನವೇದಿಕೆ, ಯುವರತ್ನ ಯುವ ಒಕ್ಕೂಟ ಹಾಗೂ ರೈತ ಸಂಘಟನಾ ಸಮಿತಿಯ ಪದಾಧಿಕಾರಿಗಳು ಮತ್ತು ಸಮಸ್ತ ಅಕುಶಲ ಕೂಲಿ ಕಾರ್ಮಿಕರು ಈ ಮೂಲಕ ಒತ್ತಾಯಿಸಿದ್ದಾರೆ.





