ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷಾ ಕಾರ್ಯದಲ್ಲಿ ತಮಗೆ ವಹಿಸಿದ್ದ ಮನೆಗಳನ್ನು ಕೇವಲ ಮೂರು ದಿನಗಳಲ್ಲಿ ಪೂರ್ಣಗೊಳಿಸುವ ಮೂಲಕ ರಾಯಚೂರಿನ ಕಟ್ಲಾಟಕೂರು ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಕೃಷ್ಣಮೂರ್ತಿ ಮಲಿಯಾಬಾದ್ ಅವರು ಪ್ರಶಂಸೆಗೆ ಪಾತ್ರರಾಗಿದ್ದಾರೆ.
ರಾಜ್ಯ ಸರ್ಕಾರದ ಹಿಂದುಳಿದ ಆಯೋಗದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷಾ ಕಾರ್ಯಕ್ಕೆ ಸರ್ವರ್ ಹಾಗೂ ಗಣತಿದಾರರ ಗೈರಾಜರಿ ಸೇರಿದಂತೆ ಅನೇಕ ಅಡೆತಡೆಗಳು ಎದುರಾದರೂ ಸಮೀಕ್ಷೆ ಪೂರೈಸಿದ ಕೃಷ್ಣಮೂರ್ತಿ ಅವರ ಪರಿಶ್ರಮ ಜಿಲ್ಲಾಡಳಿತದ ಮೆಚ್ಚುಗೆಗೆ ಪಾತ್ರವಾಗಿದೆ. ಅವರ ಕಾರ್ಯತತ್ಪರತೆ ಶ್ಲಾಘನೀಯ ಹಾಗೂ ಜಿಲ್ಲೆಯ ಇತರ ಗಣತಿದಾರರಿಗೆ ಪ್ರೇರಣೆಯಾಗಿದ್ದಾರೆ ಎಂದು ಗುರುತಿಸಿ ಜಿಲ್ಲಾಡಳಿತ ಅಭಿನಂದನಾ ಪತ್ರ ನೀಡಿ ಗೌರವಿಸಿದೆ.
ಸೆಪ್ಟೆಂಬರ್ 22ರಿಂದ ಆರಂಭವಾದ ಈ ಸಮೀಕ್ಷೆಗೆ ಜಿಲ್ಲೆಯಲ್ಲಿ ಒಟ್ಟು 3178 ಗಣತಿದಾರರನ್ನು ನೇಮಿಸಲಾಗಿತ್ತು. ಆದರೆ ಮಧ್ಯಂತರದಲ್ಲಿ ಸರ್ವರ್ ಹಾಗೂ ನೆಟ್ವರ್ಕ್ ಸಮಸ್ಯೆಯಿಂದಾಗಿ ಹಲವರು ಕಾರ್ಯ ನಿರ್ವಹಣೆಯಲ್ಲಿ ತೊಂದರೆ ಅನುಭವಿಸುತ್ತಿದ್ದರು. ಈ ಅಡೆತಡೆಗಳ ನಡುವೆಯೇ ಕೃಷ್ಣಮೂರ್ತಿ ಅವರಿಗೆ ನಿಗದಿಪಡಿಸಲಾದ 86 ಮನೆಗಳ ಸಮೀಕ್ಷೆಯನ್ನು ಕೇವಲ ಮೂರು ದಿನಗಳಲ್ಲಿ ಪೂರ್ಣಗೊಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ರಾಯಚೂರು | ಸಮೀಕ್ಷೆಗೆ ಗೈರು: 57 ಸಿಬ್ಬಂದಿಗೆ ನೋಟಿಸ್; 6 ಜನ ಅಂಗನವಾಡಿ ಕಾರ್ಯಕರ್ತೆಯರ ಅಮಾನತು
ಮನೆಯಲ್ಲಿ ಲಭ್ಯವಿರದವರನ್ನೂ ನಿರಂತರ ಸಂಪರ್ಕಿಸಿ ಮಾಹಿತಿ ಸಂಗ್ರಹಿಸಿ, ಬ್ಲಾಕ್ ಐಡಿ ಆಧಾರದ ಮೇಲೆ ಗೂಗಲ್ ಮ್ಯಾಪ್, ನೆಟ್ವರ್ಕ್ ,ಸರ್ವರ್ ಸಮಸ್ಯೆಗಳ ನಡುವೆ ತಹಸೀಲ್ದಾರ್ ಕಚೇರಿಯಲ್ಲಿ ಸ್ಥಾಪಿಸಲಾಗಿದ್ದ ವಾರ್ರೂಮ್ಗೆ ನಿರಂತರ ಸಂಪರ್ಕಿಸಿ ಸಮೀಕ್ಷೆ ಮುಗಿಸಿದ್ದು, ಗೂಗಲ್ ಮ್ಯಾಪ್ ಸಮಸ್ಯೆ ನಡುವೆ ಬ್ಲಾಕ್ ಐಡಿ ಆಧಾರದ ಮೇಲೆ ಸಮೀಕ್ಷೆ ನಡೆಸಿ ಪೂರ್ಣಗೊಳಿಸಿರುವುದಾಗಿ ಶಿಕ್ಷಕ ಕೃಷ್ಣಮೂರ್ತಿ ಮಲಿಯಾಬಾದ್ ತಿಳಿಸಿದ್ದಾರೆ.





