ಕೇಂದ್ರದ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳ ಘೋಷಣೆಯಲ್ಲಿ ರಾಜಕೀಯ ಹಸ್ತಕ್ಷೇಪ ನಡೆಯುತ್ತಿದೆ ಎಂದು ಗಂಭೀರ ಆರೋಪ ಮಾಡಿರುವ ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್, ಇದಕ್ಕೆ ಪ್ರತಿಯಾಗಿ ತಮಿಳುನಾಡು ಸರ್ಕಾರದ ವತಿಯಿಂದಲೇ 7 ಭಾರತೀಯ ಭಾಷೆಗಳಿಗೆ ರಾಷ್ಟ್ರೀಯ ಮಟ್ಟದ ವಾರ್ಷಿಕ ಸಾಹಿತ್ಯ ಪ್ರಶಸ್ತಿ ನೀಡುವುದಾಗಿ ಭಾನುವಾರ ಘೋಷಿಸಿದ್ದಾರೆ.
ಇಲ್ಲಿ ನಡೆದ ಚೆನ್ನೈ ಅಂತಾರಾಷ್ಟ್ರೀಯ ಪುಸ್ತಕ ಮೇಳದ (CIBF-2026) ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಈ ಪ್ರಶಸ್ತಿಗೆ ‘ಚೆಮ್ಮೊಲಿ ಇಲಕ್ಕಿಯ ವಿರುದು’ (ಶಾಸ್ತ್ರೀಯ ಭಾಷಾ ಸಾಹಿತ್ಯ ಪ್ರಶಸ್ತಿ) ಎಂದು ಹೆಸರಿಸಲಾಗಿದ್ದು, ಪ್ರಶಸ್ತಿಯು 5 ಲಕ್ಷ ರೂ. ನಗದು ಬಹುಮಾನವನ್ನು ಒಳಗೊಂಡಿರುತ್ತದೆ ಎಂದು ತಿಳಿಸಿದರು.
ಯಾವ ಭಾಷೆಗಳಿಗೆ ಪ್ರಶಸ್ತಿ?
ಮೊದಲ ಹಂತದಲ್ಲಿ ತಮಿಳು, ತೆಲುಗು, ಕನ್ನಡ, ಮಲಯಾಳಂ, ಒಡಿಯಾ, ಬೆಂಗಾಲಿ ಮತ್ತು ಮರಾಠಿ ಭಾಷೆಯ ಅತ್ಯುತ್ತಮ ಸಾಹಿತ್ಯ ಕೃತಿಗಳಿಗೆ ಈ ಪ್ರಶಸ್ತಿ ನೀಡಲಾಗುವುದು ಎಂದು ಸ್ಟಾಲಿನ್ ಪ್ರಕಟಿಸಿದರು.
ಕೇಂದ್ರದ ವಿರುದ್ಧ ಆಕ್ಷೇಪವೇಕೆ?
ಇತ್ತೀಚೆಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳ ಘೋಷಣೆಯನ್ನು ರದ್ದುಗೊಳಿಸಿರುವುದು ಆತಂಕಕಾರಿ ಎಂದು ಸ್ಟಾಲಿನ್ ಅಸಮಾಧಾನ ವ್ಯಕ್ತಪಡಿಸಿದರು. “ಕೇಂದ್ರ ಸಂಸ್ಕೃತಿ ಸಚಿವಾಲಯದ ಹಸ್ತಕ್ಷೇಪದಿಂದ ಸಾಹಿತ್ಯ ಪ್ರಶಸ್ತಿಗಳ ಬಗ್ಗೆ ಅನಿಶ್ಚಿತತೆ ಮೂಡಿದೆ. ಕಲೆ ಮತ್ತು ಸಾಹಿತ್ಯ ಕ್ಷೇತ್ರದಲ್ಲೂ ರಾಜಕೀಯ ಹಸ್ತಕ್ಷೇಪ ಮಾಡುವುದು ಅಪಾಯಕಾರಿ ಬೆಳವಣಿಗೆ. ಈ ಸನ್ನಿವೇಶದಲ್ಲಿ ಹಲವು ಲೇಖಕರು ಮತ್ತು ಸಾಹಿತ್ಯ ಸಂಘಟನೆಗಳು ಸೂಕ್ತ ಪರ್ಯಾಯ ವ್ಯವಸ್ಥೆ ಕಲ್ಪಿಸುವಂತೆ ಮನವಿ ಮಾಡಿದ್ದವು. ಆ ಮನವಿಗೆ ಸ್ಪಂದಿಸಿ, ಎಲ್ಲರಿಗೂ ಸಂತಸ ನೀಡುವ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ,” ಎಂದು ಮುಖ್ಯಮಂತ್ರಿಗಳು ಸ್ಪಷ್ಟಪಡಿಸಿದರು.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಪ್ರಾದೇಶಿಕ ಪಕ್ಷಗಳನ್ನು ನುಂಗುವ ಬಿಜೆಪಿ ತಂತ್ರ ಅರಿಯಲು ಜೆಡಿಎಸ್ಗೆ ಸಕಾಲ!
ಆಯ್ಕೆ ಪ್ರಕ್ರಿಯೆ ಹೇಗೆ?
ತಮಿಳುನಾಡು ಸರ್ಕಾರವು ಪೋಷಕನ ಪಾತ್ರ ವಹಿಸಲಿದ್ದು, ಆಯ್ಕೆ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಸ್ವತಂತ್ರ ತಜ್ಞರಿಗೆ ವಹಿಸಲಿದೆ. ಗುಣಮಟ್ಟ ಮತ್ತು ಪಾರದರ್ಶಕತೆಯನ್ನು ಖಚಿತಪಡಿಸಿಕೊಳ್ಳಲು ಪ್ರತಿ ಭಾಷೆಗೆ ಆಯಾ ಭಾಷೆಯ ಹೆಸರಾಂತ ಲೇಖಕರನ್ನೊಳಗೊಂಡ ಪ್ರತ್ಯೇಕ ಸಮಿತಿಯನ್ನು ರಚಿಸಲಾಗುವುದು ಎಂದು ಅವರು ಭರವಸೆ ನೀಡಿದರು.
ಕನ್ನಡದ ಲೇಖಕಿ ಬಾನು ಮುಷ್ತಾಕ್ ಅವರಿಗೆ ಶ್ಲಾಘನೆ
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಅಂತರರಾಷ್ಟ್ರೀಯ ಬೂಕರ್ ಪ್ರಶಸ್ತಿ ವಿಜೇತ ಕನ್ನಡದ ಹಿರಿಯ ಲೇಖಕಿ ಬಾನು ಮುಷ್ತಾಕ್ ಅವರನ್ನು ಸ್ಟಾಲಿನ್ ಇದೇ ವೇಳೆ ಮುಕ್ತಕಂಠದಿಂದ ಶ್ಲಾಘಿಸಿದರು. “ಅನುವಾದದ ಮಹತ್ವಕ್ಕೆ ಬಾನು ಮುಷ್ತಾಕ್ ಅವರ ಗೆಲುವೇ ಸಾಕ್ಷಿ. ಅವರ ಕೃತಿ ಇಂಗ್ಲಿಷ್ಗೆ (Heart Lamp) ಅನುವಾದಗೊಂಡಿದ್ದರಿಂದಲೇ ಜಾಗತಿಕ ಗಮನ ಸೆಳೆಯಲು ಸಾಧ್ಯವಾಯಿತು. ಅವರು ದ್ರಾವಿಡ ಭಾಷಾ ಕುಟುಂಬದ ಅಲ್ಪಸಂಖ್ಯಾತ ಸಮುದಾಯದ ಮಹಿಳಾ ಲೇಖಕಿಯಾಗಿದ್ದು, ಪ್ರತಿಗಾಮಿ ಧೋರಣೆಗಳನ್ನು ವಿರೋಧಿಸುವ ಮತ್ತು ಸಾಮಾಜಿಕ ನ್ಯಾಯದ ಪರವಾದ ದೃಷ್ಟಿಕೋನವನ್ನು ಹೊಂದಿದ್ದಾರೆ,” ಎಂದು ಹೇಳಿದರು.





