ʼತಿಂಗಳಿನ ಹಿಂದೆ ಹುಬ್ಬಳ್ಳಿಯಲ್ಲಿ ಮರ್ಯಾದೆಗೇಡು ಹತ್ಯೆಯಾಯಿತು. ಗಜೇಂದ್ರಘಡದ ಹತ್ತಿರ ಮಗುವೊಂದು ದೇವಸ್ಥಾನ ಪ್ರವೇಶ ಮಾಡಿರುವ ಕಾರಣಕ್ಕೆ ಮಗುವಿಗೆ ಥಳಿಸಲಾಗಿತ್ತು. ಇವೆಲ್ಲವೂ ಪ್ರಸ್ತುತ ನಡೆಯುತ್ತಿರುವಾಗ ಲ್ಯಾಂಡ್ ಲಾರ್ಡ್ ಪ್ರಸ್ತುತ ಯಾಕಾಗಬಾರದುʼ ಎಂದು ಹಿರಿಯ ಪತ್ರಕರ್ತ ಡಾ.ಸಿದ್ದನಗೌಡ ಪಾಟೀಲ್ ಪ್ರಶ್ನಿಸಿದರು.
ಬೆಂಗಳೂರು ನಗರದ ಕಬ್ಬನ್ ಪಾರ್ಕ್ನಲ್ಲಿರುವ ಸಚಿವಾಲಯ ಕ್ಲಬ್ನಲ್ಲಿ ಫೆ.13ರಂದು ಸಮಾನ ಮನಸ್ಕರ ವೇದಿಕೆಯ ವತಿಯಿಂದ ಆಯೋಜಿಸಿದ್ದ ಲ್ಯಾಂಡ್ ಲಾರ್ಡ್: ಒಂದು ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ದೇವರಾಜ್ ಅರಸು ಕಾರಣಕ್ಕೆ ಕರ್ನಾಟಕದಲ್ಲಿ ಬಹುತೇಕ ಭೂಮಿ ಸಿಕ್ಕಿದೆ. ಆದರೂ ನಮ್ಮ ನಡುವೆ ಫ್ಯೂಡಲ್ ವ್ಯವಸ್ಥೆ ಜಾಗೃತವಾಗಿದೆ. ಲ್ಯಾಂಡ್ಲಾರ್ಡ್ ಸಿನೆಮಾ ಫ್ಯೂಡಲ್ ವ್ಯವಸ್ಥೆ ವಿರುದ್ಧ ಸಂಘರ್ಷ ಮಾಡುವ ಕಥೆಯನ್ನು ಹೊಂದಿದೆ. ಮರ್ಯಾದೆ ಹತ್ಯೆ, ದೇವದಾಸಿ ಪದ್ಧತಿಯ ಬಗ್ಗೆ ಹೀಗೆ ಪ್ರಸ್ತುತ ಎನಿಸುವ ಎಲ್ಲಾ ಘಟನೆಗಳ ಬಗ್ಗೆ ಸಿನೆಮಾ ಮಾತನಾಡುತ್ತದೆ ಎಂದು ಹೇಳಿದರು.
ಮಾಜಿ ಸಚಿವೆ ಉಮಾಶ್ರೀ ಮಾತನಾಡಿ, ʼದಮನಿತರು, ತುಳಿತಕ್ಕೆ ಒಳಗಾದವರು, ಅಸಹಾಯಕರು, ಎಲ್ಲಿಯವರೆಗೆ ಜಾಗೃತರಾಗುವುದಿಲ್ಲವೋ, ಅಲ್ಲಿಯವರೆಗೆ ನಮ್ಮನ್ನು ತುಳಿಯುವ ವ್ಯವಸ್ಥೆ ಜಾಗೃತವಾಗಿಯೇ ಇರುತ್ತದೆʼ ಎಂದು ಅಭಿಪ್ರಾಯಪಟ್ಟರು.
ʼನಾನು ಬಹಳಷ್ಟು ಸಿನೆಮಾಗಳನ್ನು ಮಾಡಿದ್ದೇನೆ. ಆದರೆ ಲ್ಯಾಂಡ್ ಲಾರ್ಡ್ ಸಿನೆಮಾದ ಪಾತ್ರ ಸಾಮಾಜಿಕವಾಗಿ ತುಳಿತಕ್ಕೆ ಒಳಗಾದವರ ಪಾತ್ರವಾಗಿದೆ. ಈ ಸಿನೆಮಾ ಇಷ್ಟು ಸದ್ದು ಮಾಡಲು ಕಾರಣ, ತಪ್ಪು ಮಾಡಿದವರಿಗೆ ಚಿತ್ರದ ನಾಯಕ ಶಿಕ್ಷೆ ಕೊಡುವ ಬದಲಿಗೆ ಸಂವಿಧಾನವೇ ಶಿಕ್ಷೆ ಕೊಡುವ ರೀತಿಯಲ್ಲಿ ಕೊನೆಯಾಗಿಸಲಾಗಿದೆ. ದೇಶದ ಸಂವಿಧಾನಕ್ಕೆ ಎಷ್ಟು ಗೌರವವನ್ನು ಕೊಡಬೇಕು ಎನ್ನುವುದನ್ನು ಸಿನೆಮಾದಲ್ಲಿ ಹೇಳಲಾಗಿದೆʼ ಎಂದರು.
ಲ್ಯಾಂಡ್ ಲಾರ್ಡ್ ಸಿನೆಮಾ ಶಿಕ್ಷಣ, ಸಂಘಟನೆ, ಹೋರಾಟದ ಮಹತ್ವವನ್ನು ಹೇಳುತ್ತದೆ. ಸಿನೆಮಾದಲ್ಲಿ ಸಮಾಜದಲ್ಲಿ ನಡೆದಿರುವ ಘಟನೆಗಳನ್ನು ಇಡಲಾಗಿದೆ. ಶೋಷಣೆ ಎನ್ನುವುದು ಮನುಷ್ಯನ ಬದುಕಿನಲ್ಲಿ ನಿರಂತರವಾಗಿ ಬಂದಿದೆ. ಸಂವಿಧಾನ, ಪ್ರಜಾಪ್ರಭುತ್ವ ಬಂದಿದ್ದರೂ, ಅದರ ಮೂಲಕ ನಮ್ಮನ್ನು ನಾವು ರಕ್ಷಣೆ ಮಾಡಿಕೊಳ್ಳುವ ವಿಶ್ವಾಸ ಇದ್ದರೂ ಕೂಡ, ಅದು ಪರಿಪೂರ್ಣವಾಗಿ ಸಾದ್ಯವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ನಾಟಕಕಾರ ಕೆ.ವೈ.ನಾರಾಯಣಸ್ವಾಮಿ ಮಾತನಾಡಿ, ʼಚರಿತ್ರೆಯೇ ಗೊತ್ತಿಲ್ಲದ ಹೊಸ ತಲೆಮಾರಿಗೆ ಲ್ಯಾಂಡ್ ಲಾರ್ಡ್ ಸಿನೆಮಾ ಶೋಷಣೆಯ ಚರಿತ್ರೆಯನ್ನು ತಿಳಿಸುತ್ತದೆ. ಇವತ್ತು ಊಳಿಗಮಾನ್ಯ ಪದ್ಧತಿ, ಭೌತಿಕ ರೂಪದಿಂದ ಮಾನಸಿಕ ರೂಪಕ್ಕೆ ಪಲ್ಲಟಗೊಂಡಿದೆ. ಶೋಷಣೆ, ಹಿಂಸೆ, ಜಾತೀಯತೆ ಹೇಗೆ ಹೊಸ ರೂಪಕ್ಕೆ ತಾಳಿದೆ ಎನ್ನುವುದನ್ನು ದುನಿಯಾ ವಿಜಯ್ ಹಾಗೂ ಲ್ಯಾಂಡ್ ಲಾರ್ಡ್ ಸಿನೆಮಾ ತಂಡ ಮುಂದಿನ ಸಿನೆಮಾಗಳಲ್ಲಿ ಹೇಳಲು ಪ್ರಯತ್ನಿಸಲಿʼ ಎಂದು ತಿಳಿಸಿದರು.
ನಟ ದುನಿಯಾ ವಿಜಯ್ ಮಾತನಾಡಿ, ʼನಾವು ಸಿನೆಮಾದವರು ಜಾತ್ಯತೀತ, ಪಕ್ಷಾತೀತ, ಧರ್ಮಾತೀತವಾಗಿ ಕೆಲಸ ಮಾಡುತ್ತಿರುತ್ತೇವೆ. ಕೆಲವು ಪಕ್ಷದಲ್ಲಿ ಸಂವಿಧಾನಕ್ಕೆ ಬೆಲೆ ಕೊಡದೇ ಇರಬಹುದು. ಆದರೆ ಸಿನೆಮಾದವರು ಕೊಡುತ್ತೇವೆ. ದುನಿಯಾ ವಿಜಯ್ ಯಾಕೆ ಜೈಭೀಮ್ ಎನ್ನುತ್ತಾರೆ ಎಂದು ಅನೇಕರು ಕೇಳುತ್ತಾರೆ. ಎಲ್ಲರಿಗೂ ಲಾಭವಾಗಲೆಂದು ಜೈಭೀಮ್ ಎಂದು ಹೇಳುತ್ತೇನೆʼ ಎಂದರು.
ʼಹಿಂದುಳಿದ, ದಲಿತ, ಶೋಷಿತರು, ಅಲ್ಪಸಂಖ್ಯಾತರು ಸೇರಿ ಎಲ್ಲಾ ಪಕ್ಷದ ನಾಯಕರನ್ನು ಗೆಲ್ಲಿಸಿದ್ದೇವೆ. ಲ್ಯಾಂಡ್ ಲಾರ್ಡ್ ಸಿನೆಮಾ ಇಷ್ಟೊಂದು ಚರ್ಚೆ ಆಗುತ್ತಿದ್ದರೂ ಜನ ನಾಯಕರು ಸಿನೆಮಾ ನೋಡಲು ಮನಸ್ಸು ಮಾಡುತ್ತಿಲ್ಲ. ಬೆರಳೆಣಿಕೆಯ ಜನ ಮಾತ್ರ ನೋಡಿದ್ದಾರೆʼ ಎಂದು ಹೇಳಿದರು.
ಸಂವಾದದಲ್ಲಿ ದಲಿತ ಸಂಘರ್ಷ ಸಮಿತಿಯ ಪ್ರದಾನ ಸಂಚಾಲಕ ಮಾವಳ್ಳಿ ಶಂಕರ್, ಸಿನೆಮಾ ನಿರ್ದೇಶಕ ಬಿ.ಎಂ.ಗಿರಿರಾಜ್, ಜಡೇಶ್ ಕೆ.ಹಂಪಿ, ನಟಿ ರಿತನ್ಯಾ ವಿಜಯ್, ಸಿನಿಮಾ ಬರಹಗಾರ ಮಾಸ್ತಿ ಉಪ್ಪಾರಳ್ಳಿ, ಸಂಜ್ಯೋತಿ ವಿ.ಕೆ., ಪತ್ರಕರ್ತ ಮಂಜುನಾಥ ಅದ್ದೆ, ಮುರಳಿ ಮೋಹನ್ ಕಾಟಿ, ಸೂರ್ಯ ಮುಕುಂದರಾಜ್, ಡಾ.ಹುಲಿಕುಂಟೆ ಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.





