ಮುಂಗಾರು ಹತ್ತಿ ಬೆಳೆ ಖರೀದಿಗಾಗಿ ಸರ್ಕಾರಿ ಖರೀದಿ ಕೇಂದ್ರ ತೆರೆಯುವಂತೆ ಆಗ್ರಹಿಸಿ, ಕರ್ನಾಟಕ ರಾಜ್ಯ ರೈತ ಸಂಘ (ಹಸಿರು ಸೇನೆ) ಸುರಪುರ ಹಾಗೂ ಹುಣಸಗಿ ತಾಲೂಕು ಸಮಿತಿಗಳ ಸಾಮೂಹಿಕ ನಾಯಕತ್ವದಲ್ಲಿ ಶುಕ್ರವಾರ ತಹಶೀಲ್ದಾರರ ಕಚೇರಿ ಎದುರುಗಡೆ ಪ್ರತಿಭಟನೆ ನಡೆಸಲಾಯಿತು.
ರೈತರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ‘ಹತ್ತಿ ಖರೀದಿಗೆ ಕಳೆದ ಮೂರು ವರ್ಷಗಳಿಂದ ಆಗ್ರಹಿಸುತ್ತಿದ್ದರೂ ಸರ್ಕಾರದಿಂದ ಯಾವುದೇ ಕ್ರಮ ಕೈಗೊಳ್ಳದಿರುವುದು ವಿಷಾದನೀಯ’ ಎಂದು ಆರೋಪಿಸಿದರು. ಪ್ರತಿಭಟನೆಯ ಬಳಿಕ ತಹಶೀಲ್ದಾರರಿಗೆ ಮನವಿ ಪತ್ರವನ್ನು ಸಲ್ಲಿಸಿದರು.
ಮನವಿ ಸಲ್ಲಿಸಿ ರೈತ ಮುಖಂಡ ಹಣಮಂತ್ರಾಯ ಚಂದಲಾಪೂರ ಮಾತನಾಡಿ, “ಪ್ರಸ್ತುತ ಖಾಸಗಿ ವ್ಯಾಪಾರಿಗಳು ಕಡಿಮೆ ದರಕ್ಕೆ ಹತ್ತಿ ಖರೀದಿಸುತ್ತಿದ್ದು, ರೈತರು ನಷ್ಟ ಅನುಭವಿಸುತ್ತಿದ್ದಾರೆ. ಸರ್ಕಾರ ಬೆಂಬಲ ದರದಲ್ಲಿ ಖರೀದಿ ಕೇಂದ್ರ ತೆರೆಯುವ ಮೂಲಕ ರೈತರಿಗೆ ನ್ಯಾಯ ಒದಗಿಸಬೇಕು” ಎಂದು ಬೇಡಿಕೆ ಇಟ್ಟರು.
ಇದನ್ನು ಓದಿದ್ದೀರಾ? ಕಲಬುರಗಿ | ಬಾಲಕಿ ಅತ್ಯಾಚಾರ, ಕೊಲೆ ಪ್ರಕರಣ: ಪರಿಹಾರಕ್ಕೆ ಎನ್ಎಫ್ಐಡಬ್ಲ್ಯೂ ಆಗ್ರಹ
ಅವರು ಮುಂದುವರಿಸಿ, “ಅತಿವೃಷ್ಟಿಯಿಂದ ಹಾನಿಗೊಳಗಾದ ರೈತರಿಗೆ ತಕ್ಷಣ ಪರಿಹಾರ ನೀಡಬೇಕು. ಜೊತೆಗೆ ಬಸವಸಾಗರ ಮತ್ತು ನಾರಾಯಣಪೂರ ಜಲಾಶಯಗಳಲ್ಲಿ ನೀರಿನ ಪ್ರಮಾಣ ಹೆಚ್ಚಿರುವುದರಿಂದ ಬೇಸಿಗೆ ಬೆಳೆಗೆ ನೀರು ಬಿಡುವ ಸಲಹಾ ಸಮಿತಿಯನ್ನು ಶೀಘ್ರ ರಚಿಸಬೇಕು” ಎಂದು ಹೇಳಿದರು.
ಪ್ರತಿಭಟನೆಯಲ್ಲಿ ವೆಂಕಟೇಶಗೌಡ ಕುಪಗಲ್, ಹನುಮಗೌಡ ನಾರಾಯಣಪೂರ, ತಿರುಪತಿ ಕುಪಗಲ್, ಸಾಹೇಬಗೌಡ ಮದಲಿಂಗನಾಳ, ಗದ್ದೆಪ್ಪ ನಾಗಬೇವಿನಾಳ, ದೇವಿಂದ್ರಪ್ಪ ತಿಪ್ಪನಟಗಿ, ಭೀಮಣ್ಣ ತಿಪ್ಪನಟಗಿ, ಭೀಮನಗೌಡ ಕರ್ನಾಳ, ತಿಪ್ಪಣ್ಣ ಜಾಂಪಾ, ನಾಗಪ್ಪ ಕುಪಗಲ್, ಇಮಾಮಸಾಹೇಬ ತಿಪ್ಪನಟಗಿ, ಮೌನೇಶ ಅರಳಹಳ್ಳಿ ಸೇರಿದಂತೆ ಅನೇಕ ರೈತರು ಭಾಗವಹಿಸಿದ್ದರು.





