ಗಲ್ಫ್ ಸಂಘರ್ಷದಿಂದ ತೈಲ ಹಾಗೂ ಅನಿಲ ಆಮದುವಿನಲ್ಲಿ ಉಂಟಾಗಿರುವ ಬಿಕ್ಕಟ್ಟನ್ನು ಮಾತ್ರವೇ ಗಂಭೀರವಾಗಿ ಪರಿಗಣಿಸಲಾಗಿದೆ. ಆದರೆ ಇಂಧನ ಪೂರೈಕೆಯಲ್ಲಿ ಸೃಷ್ಟಿಯಾದ ಏರುಪೇರಿನಿಂದ ಸಿಮೆಂಟ್ ಮತ್ತು ಸ್ಟೀಲಿನ ಉದ್ದಿಮೆಗಳಿಗೂ ಹೊಡೆತ ಬಿದ್ದಿದೆ. ಕೈಗಾರಿಕ ವಲಯಗಳು ಕಾರ್ಯ ನಿರ್ವಹಿಸಲು ಕಚ್ಚಾ ಸಾಮಾಗ್ರಿಗಳ ಪೂರೈಕೆ ಅವಶ್ಯ. ಬಹುತೇಕ ಎಲ್ಲಾ ಕಾರ್ಖಾನೆಗಳಿಗೂ ಕಚ್ಚಾವಸ್ತು ಸರಬರಾಜು ಆಗುತ್ತಿದ್ದದ್ದು ಗಲ್ಪ್ ರಾಷ್ಟ್ರಗಳಿಂದ. ಗಲ್ಫ್ ರಾಷ್ಟ್ರಗಳಲ್ಲಿ ತೀವ್ರಗೊಂಡ ಸಂಘರ್ಷ ಈಗ ಜಗತ್ತಿನಾದ್ಯಂತ ಕೈಗಾರಿಕೋದ್ಯಮ ಹಿಡಿತ ಕಳೆದುಕೊಳ್ಳುವ ಆತಂಕ ತಂದೊಡ್ಡಿದೆ.
ಭಾರತದ ಯಾವೆಲ್ಲಾ ಉದ್ಯಮಗಳಿಗೆ ನಷ್ಟ?
ಸಿಮೆಂಟ್ ಉತ್ಪಾದನೆಗೆ ಪೆಟ್ಟು: ಸಿಮೆಂಟ್ ಉತ್ಪಾದಿಸಲು ಅವಶ್ಯವಿರುವ ಮೂಲಧಾತು ಸುಣ್ಣದ ಕಲ್ಲು. ಭಾರತ ವಾರ್ಷಿಕ ಸುಮಾರು 483 ಮಿಲಿಯನ್ ಡಾಲರ್ ಬೆಲೆಯ ಸುಣ್ಣದ ಕಲ್ಲನ್ನು ಕಳೆದ ಆರ್ಥಿಕ ವರ್ಷದಲ್ಲಿ ಗಲ್ಫ್ ರಾಷ್ಟ್ರಗಳಿಂದ ಆಮದು ಮಾಡಿಕೊಂಡಿತ್ತು. ಇದು ಭಾರತದ ಸುಮಾರು 68% ಬೇಡಿಕೆಯ ಭಾಗವಾಗಿತ್ತು. ಭಾರತ ಕಟ್ಟಡ ನಿರ್ಮಾಣ ಕಾರ್ಯಗಳಿಗೆ, ಸರ್ಕಾರಿ ಅಭಿವೃದ್ದಿ ಯೋಜನೆಗೆ ಅಗತ್ಯವಾದ ಸಿಮೆಂಟ್ ಉತ್ಪಾದನೆಗೆ ಇದೇ ಸುಣ್ಣದ ಕಲ್ಲುಗಳನ್ನೇ ಬಳಸಿಕೊಳ್ಳುತ್ತದೆ.
ಇನ್ನು ಕಟ್ಟಡ ನಿರ್ಮಾಣಕ್ಕೆ ಬೇಕಾದ ಜಿಪ್ಸಮ್ ಸಹ ಕೊಲ್ಲಿ ರಾಷ್ಟ್ರಗಳಿಂದಲೇ ಆಮದು ಮಾಡಿಕೊಳ್ಳಲಾಗುತ್ತಿದೆ. 62% ಪ್ರಮಾಣದ ಜಿಪ್ಸಮ್ ಪೂರೈಕೆಗೆ ದೇಶವು ಕೊಲ್ಲಿಯನ್ನು ಅವಲಂಬಿಸಿದೆ. ಸಿಮೆಂಟ್ ತಯಾರಿಕೆ ಹಾಗೂ ಕಟ್ಟಡ ನಿರ್ಮಾಣ ಕಾರ್ಯದಲ್ಲಿ ಜಿಪ್ಸಮ್ ಬಳಕೆ ಮಾಡಲಾಗುತ್ತದೆ ಕೊನೆಗಾಣದ ಸಂಘರ್ಷದ ಕಿಚ್ಚು ಈ ಉದ್ದಿಮೆಗಳನ್ನು ನೆಲ ಕಚ್ಚಿಸಿದೆ.
ಭಾರತದ ಕೃಷಿಯೂ ಕೊಲ್ಲಿಯನ್ನು ಅವಲಂಬಿಸಿದೆ: ಕಳೆದ ವರ್ಷ ದೇಶವು ಈ ರಾಷ್ಟ್ರಗಳಿಂದ 420 ಮಿಲಿಯನ್ ಡಾಲರ್ ಮೌಲ್ಯದ ಸಲ್ಫರ್ ಖರೀದಿಸಿದೆ. ಎಂದರೆ ಬೇಡಿಕೆಯ 66%. ಸಲ್ಫರ್ ಪೂರೈಕೆಯಲ್ಲಿ ವ್ಯತ್ಯಯವಾದರೆ ರಸಗೊಬ್ಬರದ ತಯಾರಿಕೆಗೆ ಸಂಕಷ್ಟ ಕಟ್ಟಿಟ್ಟ ಬುತ್ತಿ. ರಸಗೊಬ್ಬರದ ಬೆಲೆ ಏರಿಕೆಯಾಗಲು ಸಲ್ಫರ್ ಆಮದಿನಲ್ಲಿ ಉಂಟಾದ ಏರಿಳಿತವೇ ಕಾರಣವಾಗಿದೆ.
ತಜ್ಞರ ಅಭಿಪ್ರಾಯದಂತೆ ಯೂರಿಯಾ ಉತ್ಪಾದನೆಯಲ್ಲಿ ಕೂಡ ಕುಸಿತ ಕಂಡು ಬರಲಿದ್ದು, ಇದರಿಂದ ದೇಶದ ಆಹಾರ ಪೂರೈಕೆಯಲ್ಲಿ ವ್ಯತ್ಯಯ ಸಂಭವಿಸಲಿದೆ. ರಸಗೊಬ್ಬರ ವ್ಯಾಪಾರಿಗಳ ಮೇಲೆ ಮತ್ತು ಭಾರತದ ರೈತರ ಮೇಲೆ ನೇರ ಪರಿಣಾಮ ಬೀರಲಿದೆ. ಪಾಸ್ಪೇಟ್ ಗೊಬ್ಬರ ತಯಾರಿಗೆ ಸಲ್ಫರ್ ಆಸಿಡ್ ಬಳಸಲಾಗುತ್ತದೆ. ಈ ಗೊಬ್ಬರವನ್ನು ಬಹುತೇಕ ಬೆಳೆಗಳಿಗೆ ನಮ್ಮ ರೈತರು ಬಳಸುತ್ತಿದ್ದಾರೆ. ಭಾರತದ 18% ಜಿಡಿಪಿ ಕೃಷಿಯನ್ನು ಮೂಲವಾಗಿಸಿಕೊಂಡಿದೆ. ರಸಗೊಬ್ಬರದ ಕೊರತೆ ದೇಶದ ಆರ್ಥಿಕ ಸ್ಥಿತಿ ಹಾಗೂ ರೈತ ಕಾರ್ಮಿಕರ ಬದುಕಿನ ಮೇಲೆ ದುಷ್ಪರಿಣಾಮ ಬೀರಲಿದೆ.
ವಜ್ರ ಉದ್ದಿಮೆಗೂ ತಟ್ಟಲಿರುವ ಕಾವು!
ದೇಶವು 40% ಕಠಿಣ ರೂಪದ ವಜ್ರವನ್ನು ಗಲ್ಫ್ ರಾಷ್ಟ್ರಗಳಿಂದ ಆಮದು ಮಾಡಿಕೊಂಡು ಅದಕ್ಕೆ ಹೊಳಪು ಮತ್ತು ಆಕಾರ ನೀಡಿ ಪಾಲಿಶ್ ಮಾಡಿದ ವಜ್ರವನ್ನು ಹೊರಗಿನ ಮಾರುಕಟ್ಟೆಗಳಿಗೆ ರಫ್ತು ಮಾಡುತ್ತದೆ. ಆಮದಿನಲ್ಲಿ ಕೊರತೆ ಉದ್ಭವಿಸಿದರೆ ಈ ವಲಯದ ಕಾರ್ಮಿಕರ ಹಾಗೂ ಉದ್ದಿಮೆದಾರರು ಸಂಕಷ್ಟದಲ್ಲಿ ಸಿಲುಕಬಹುದು.
ಭಾರತವೂ ತನಗೆ ಅಗತ್ಯವಿರುವ ಎಲ್ಲಾ ಕಚ್ಚಾ ವಸ್ತುಗಳಿಗೂ ಒಂದೇ ಪ್ರದೇಶದ ದೇಶಗಳ ಮೇಲೆ ಅವಲಂಬಿಸದೆ. ಇಂತಹ ತುರ್ತು ಸಂದರ್ಭಗಳಲ್ಲಿ ಒಂದರ ಹಿಂದೆ ಒಂದರಂತೆ ಎಲ್ಲಾ ಉದ್ಯಮಗಳು ಸ್ಥಗಿತಗೊಂಡರೆ ಆರ್ಥಿಕ ಹಿನ್ನಡೆಗೆ ಮುನ್ನುಡಿ ಬರೆದಂತೆ.





