ಯುದ್ಧ ಮುಂದುವರೆದರೆ ಮತ್ತು ಅನಿಲ ಹರಿವು ನಿರ್ಬಂಧಿತವಾದರೆ ಗುಜರಾತ್ನ ಅತ್ಯಂತ ಪ್ರಮುಖ ಕೈಗಾರಿಕಾ ಸಮೂಹಗಳು ಇತಿಹಾಸದಲ್ಲಿಯೇ ಕಾಣದಂತಹ ಅತ್ಯಂತ ಕಠಿಣ ಪರಿಸ್ಥಿತಿಗಳನ್ನು ಎದುರಿಸಬಹುದು.
ಗುಜರಾತ್ನ ಮೋರ್ಬಿ ನಗರವು ಭಾರತದ ಅತಿದೊಡ್ಡ ಸೆರಾಮಿಕ್ ಟೈಲ್ಸ್ ಕ್ಲಸ್ಟರ್ಗೆ ಪ್ರಸಿದ್ಧಿಯಾಗಿದೆ. ಇಲ್ಲಿ ವಿಶ್ವದ ಎರಡನೇ ಅತಿದೊಡ್ಡ ಟೈಲ್ಸ್ ಉತ್ಪಾದನಾ ಕೇಂದ್ರವಿದೆ. ವಾರ್ಷಿಕ 60,000ದಿಂದ 75,000 ಕೋಟಿ ರೂಪಾಯಿ ವ್ಯವಹಾರವಿದ್ದು, 600ರಿಂದ 700 ಫ್ಯಾಕ್ಟರಿಗಳಿವೆ. ಇಲ್ಲಿ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ನಾಲ್ಕು ಲಕ್ಷಕ್ಕೂ ಅಧಿಕ ಮಂದಿ ಕಾರ್ಮಿಕರು ತಮ್ಮ ಬದುಕು ಕಟ್ಟಿಕೊಂಡಿದ್ದರು. ಆದರೆ ಅಮೆರಿಕ ಇಸ್ರೇಲ್ ನಡೆಸಿದ ಇರಾನ್ ಮೇಲಿನ ದಾಳಿಯಿಂದಾಗಿ ಸ್ಟ್ರೈಟ್ ಆಫ್ ಹಾರ್ಮುಜ್ ಮೂಲಕ ಬರುವ ಪ್ರೊಪೇನ್ ಮತ್ತು ನೈಸರ್ಗಿಕ ಅನಿಲ ಸರಬರಾಜು ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ಇದರ ಪರಿಣಾಮವಾಗಿ ಮಾರ್ಚ್ ಮಧ್ಯದಿಂದಲೇ ನೂರಾರು ಕಾರ್ಖಾನೆಗಳು ಮುಚ್ಚಿದ್ದು, 450ಕ್ಕೂ ಅಧಿಕ ಯುನಿಟ್ಗಳು ಏಪ್ರಿಲ್ 15ರವರೆಗೆ ಸಾಮೂಹಿಕ ಬಂದ್ ಘೋಷಿಸಿವೆ. ಈಗಾಗಲೇ ಒಂದು ತಿಂಗಳಿನಿಂದ ಹಲವು ಫ್ಯಾಕ್ಟರಿಗಳು ಕಾರ್ಯಾಚರಣೆ ನಿಲ್ಲಿಸಿವೆ.
ಮೋರ್ಬಿ ಭಾರತದ ಸುಮಾರು ಶೇ.80ರಷ್ಟು ಸೆರಾಮಿಕ್ ಅನ್ನು ಉತ್ಪಾದಿಸುತ್ತದೆ. ಮುಖ್ಯವಾಗಿ ಟೈಲ್ಸ್ ಮತ್ತು ಸ್ಯಾನಿಟರಿವೇರ್ ಸೆರಾಮಿಕ್ಸನ್ನು ಮಧ್ಯಪ್ರಾಚ್ಯ, ಆಫ್ರಿಕಾ ಮತ್ತು ಯುರೋಪ್ಗೆ ರಫ್ತು ಮಾಡಲಾಗುತ್ತದೆ. ಆದರೆ ಈಗ ಸೆರಾಮಿಕ್ ಉತ್ಪಾದನೆಗೆ ಪ್ರಮುಖ ಇಂಧನಗಳಾದ ಪ್ರೋಪೇನ್ ಮತ್ತು ನೈಸರ್ಗಿಕ ಅನಿಲದ ಪೂರೈಕೆ ಕಡಿತಗೊಂಡ ನಂತರ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿರುವುದಾಗಿ ತಯಾರಕರು ತಿಳಿಸಿದ್ದಾರೆ.
ಕಾರ್ಮಿಕರ ಮೇಲೆ ಆಗುತ್ತಿರುವ ಪರಿಣಾಮಗಳು– ನೇರ ಆಘಾತ
ಈ ಉದ್ಯಮದಲ್ಲಿ ಬಹುತೇಕ ಕಾರ್ಮಿಕರು ಬಿಹಾರ, ಉತ್ತರ ಪ್ರದೇಶ, ಝಾರ್ಖಂಡ್ನಿಂದ ವಲಸೆ ಬಂದವರು. ದೈನಂದಿನ ಕೂಲಿ ಅಥವಾ ಮಾಸಿಕ ಸಂಬಳದ ಮೇಲೆ ಅವರ ಕುಟುಂಬಗಳು ನಿಂತಿವೆ. ಈಗ ಆ ಸಂಬಳಗಳು ಕಡಿತಗೊಳ್ಳುತ್ತಿರುವುದೂ ಅಲ್ಲದೆ ವಿಳಂಬವೂ ಆಗಿತ್ತಿದೆ. ಕೆಲವೆಡೆ ಸಂಪೂರ್ಣವಾಗಿ ವೇತನ ನೀಡುವುದೇ ನಿಂತುಹೋಗಿದೆ. ಸಾವಿರಾರು ಮಂದಿ ಕಾರ್ಮಿಕರು ತಮ್ಮ ಮನೆಗಳಿಗೆ ವಾಪಸ್ಸಾಗುತ್ತಿದ್ದಾರೆ. ಇದರಿಂದಾಗಿ ರೈಲು ನಿಲ್ದಾಣಗಳಲ್ಲಿ ಜನಸಂದಣಿ ಹೆಚ್ಚಾಗಿದೆ. ಉಳಿದವರು ಆಹಾರ, ವಸತಿ ಇಲ್ಲದೆ ಹಸಿವು ಮತ್ತು ಅನಿಶ್ಚಿತತೆಯ ನಡುವೆ ದಿನ ಕಳೆಯುತ್ತಿದ್ದಾರೆ.

ಈ ಕಾರ್ಮಿಕರಿಗೆ ಸಾಮಾನ್ಯವಾಗಿ 16,000 ರೂಪಾಯಿ ಸಂಬಳ. ಮಾರ್ಚ್ 15ರಿಂದಲೇ ಕೆಲಸ ಇಲ್ಲದಂತಾಗಿದೆ. ಇಷ್ಟೇ ಚಪಾತಿ ಇರುವುದು ನನ್ನ ಬಳಿ. ಸಂಬಳ ಸಿಗದಿದ್ದರೆ ಏನನ್ನೂ ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ. ಮನೆಗೆ ವಾಪಸಾಗುವುದೊಂದೇ ದಾರಿ ಎಂದು ಕಾರ್ಖಾನೆ ಆವರಣದಲ್ಲಿ ಕುಳಿತ ರಾಧೆ ಎಂಬುವವರು ತನ್ನ ಮೂರು ಮತ್ತು ಐದು ವರ್ಷದ ಮಕ್ಕಳಿಗೆ ಎರಡು ಚಪಾತಿಗಳನ್ನು ಹಂಚುತ್ತ ಸಂಕಟ ತೋಡಿಕೊಂಡಿದ್ದಾರೆ.
ಬಿಹಾರದ ಕಟಿಹಾರ್ ಜಿಲ್ಲೆಯ ಶಂಭು ಕುಮಾರ್ ಕುಟುಂಬದಲ್ಲಿ ಆರು ಮಂದಿ ಇದ್ದು, ಇವರೊಬ್ಬರ ದುಡಿಮೆಯಿಂದಲೇ ಬದುಕು ನಡೆಯುತ್ತಿತ್ತು. ಇವರು ಫ್ಯಾಕ್ಟರಿ ಕ್ವಾರ್ಟರ್ನಲ್ಲಿ ವಾಸವಾಗಿದ್ದರು. ಮಾಲೀಕರು ಕೆಲವು ತಿಂಗಳು ಉಳಿಸಿಕೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಆದರೆ, ಮನೆಯಲ್ಲಿರುವವರ ಗತಿ ಏನು? ಇಲ್ಲಿ ಬಿಟ್ಟು ಹೋದರೆ ಮತ್ತೆ ನನ್ನ ಸ್ಥಿತಿ ಶೂನ್ಯ ಎಂದು ಅಲವತ್ತುಕೊಂಡಿದ್ದಾರೆ.
ಪರಿಸ್ಥಿತಿ ಸುಧಾರಿಸದಿದ್ದರೆ ಮುಂದಿನ ತಿಂಗಳು ಕಾರ್ಮಿಕರಿಗೆ ಕೇವಲ ಶೇ.50ರಷ್ಟು ಸಂಬಳ ದೊರೆಯುತ್ತದೆ. ಇದರಿಂದ ಮನೆ ಖರ್ಚು, ಔಷಧಿ, ಮಕ್ಕಳ ಶಾಲೆ ಕಾಲೇಜಿನ ಫೀಸ್, ಬಾಡಿಗೆ ಖರ್ಚುಗಳನ್ನು ನಿಭಾಯಿಸುವುದು ಕಷ್ಟವಾಗುತ್ತದೆ. ಅಲ್ಲದೆ ಕೆಲಸ ಇಲ್ಲದೆ ಕಾರ್ಖಾನೆಯಲ್ಲಿಯೇ ಉಳಿದರೆ ಹಸಿವಿನಿಂದ ಸಾಯಬೇಕಾದ ಪರಿಸ್ಥಿತಿ ಎದುರಾಗಿದೆ.
ಕೆಲವು ಕಾರ್ಖಾನೆಗಳ ಮಾಲೀಕರು ಆಹಾರ-ವಸತಿ ಒದಗಿಸುತ್ತಿದ್ದರೂ, ಯುದ್ಧ ಮುಂದುವರೆದರೆ ಇದೂ ಕೂಡ ಸ್ಥಗಿತಗೊಳ್ಳುವ ಸಾಧ್ಯತೆಯಿದೆ. ಸಂಬಂಧಿತ ಕ್ಷೇತ್ರಗಳಾದ ಲಾಜಿಸ್ಟಿಕ್ಸ್(ಸರಕು ಸಾರಿಗೆ), ಪ್ಯಾಕಿಂಗ್, ರೀಟೈಲ್ನಲ್ಲೂ ಸಂಬಳ ಕಡಿತ ಆರಂಭವಾಗಿದೆ. ಟೈಲ್ಸ್ ಬೆಲೆ ಏರಿಕೆಯಿಂದ ಕಟ್ಟಡ ಉದ್ಯಮಕ್ಕೂ ಆಘಾತ.
ಈಗಾಗಲೇ ಲಕ್ಷಾಂತರ ಕಾರ್ಮಿಕರು ಮನೆಗೆ ವಾಪಸ್ಸಾಗುತ್ತಿರುವುದರಿಂದ ಲಕ್ಷ್ಮೀಧೀರ್ಪುರ್, ಸಲಾನಾ, ಲಾಲ್ಪಾರ್, ಜಂಬುಡಿಯಾ ಪ್ರದೇಶಗಳಲ್ಲಿ ವಲಸೆ ಕಾರ್ಮಿಕರ ವಸತಿಗಳು ಖಾಲಿಯಾಗುತ್ತಿವೆ.

ಸರ್ಕಾರದಿಂದ ತ್ವರಿತ ಹಸ್ತಕ್ಷೇಪ, ಪರ್ಯಾಯ ಇಂಧನ ಮೂಲಗಳು, ಉದ್ಯೋಗ ಭದ್ರತಾ ಯೋಜನೆಗಳ ಅಗತ್ಯವಿದೆ. ಈ ಯುದ್ಧದ ಬಿಸಿ ಮೊರ್ಬಿಯ ಫ್ಯಾಕ್ಟರಿಗಳಿಂದ ಬಿಹಾರ-ಉಪ್ರದೇಶದ ಗ್ರಾಮಗಳವರೆಗೆ ತಲುಪಿದೆ. ಒಂದು ತಿಂಗಳ ಬಂದ್ ಲಕ್ಷಾಂತರ ಕುಟುಂಬಗಳ ಭವಿಷ್ಯವನ್ನು ಅನಿಶ್ಚಿತತೆಯಲ್ಲಿ ಮುಳುಗಿಸಿದೆ. ಯುದ್ಧ ನಿಲ್ಲದಿದ್ದರೆ ಹಸಿವು ಮತ್ತು ಬಡತನದ ಸರಣಿ ಪ್ರಾರಂಭವಾಗುತ್ತದೆ.
ಇಂಧನ ಕೊರತೆಯು ತೀವ್ರವಾಗಿ ಹದಗೆಟ್ಟಿರುವ ಕಾರಣ ಹೆಂಚು(ಟೈಲ್ಸ್)ಗಳನ್ನು ನಿರಂತರವಾಗಿ ಸುಡಲಾಗದೆ ಕಾರ್ಖಾನೆಗಳು ಕಾರ್ಯಾಚರಣೆಗಳನ್ನು ನಿಲ್ಲಿಸಿವೆ. ಪ್ರೋಪೇನ್ ಅನ್ನು ಅವಲಂಬಿಸಿರುವ ಕಾರ್ಖಾನೆಗಳು ಸಂಪೂರ್ಣವಾಗಿ ಮುಚ್ಚಿವೆ. ನೈಸರ್ಗಿಕ ಅನಿಲ ಇನ್ನೂ ಲಭ್ಯವಿದೆ, ಆದರೆ ಬೆಲೆಗಳು ಅಸ್ಥಿರ ಮತ್ತು ಅನಿರೀಕ್ಷಿತವಾಗಿರುವುದರಿಂದ ಅದನ್ನು ಬಳಸುತ್ತಿರುವ ಹೆಚ್ಚಿನ ಘಟಕಗಳೂ ಕೂಡ ನಿಂತುಹೋಗಿವೆ. ಇದರಿಂದಾಗಿ ತಯಾರಕರು ತಮ್ಮ ಉತ್ಪನ್ನಗಳಿಗೆ ಹೇಗೆ ಬೆಲೆ ನಿಗದಿಪಡಿಸಬೇಕೆಂದು ತಿಳಿಯದೆ ಅತಂತ್ರರಾಗಿದ್ದಾರೆ.
ಮೋರ್ಬಿಯ 3,000ಕ್ಕೂ ಹೆಚ್ಚು ಸೆರಾಮಿಕ್ ಮಾರಾಟಗಾರರು ಮತ್ತು ವಿತರಕರು ಈಗಾಗಲೇ ಸ್ಟಾಕ್ ಇರುವ ಟೈಲ್ಸ್ಗಳ ಮೇಲೆ ಅವಲಂಬಿತರಾಗಿದ್ದಾರೆ. ಒಂದು ವಾರದವರೆಗೆ ಹೊಸ ಸರಬರಾಜುಗಳನ್ನು ಕಡಿತಗೊಳಿಸಲಾಗಿದೆ. ಈ ಸ್ಥಗಿತವು ಹೀಗೆಯೇ ಮುಂದುವರಿದರೆ, ದೇಶೀಯ ಕೊರತೆ ಉಂಟಾಗಬಹುದು. ಇದರಿಂದಾಗಿ ಏಪ್ರಿಲ್ನಿಂದ ದಾಸ್ತಾನುಗಳು ಕುಗ್ಗಲು ಪ್ರಾರಂಭವಾಗುವ ಸಾಧ್ಯತೆಯಿದೆ.
ಸೆರಾಮಿಕ್ಸನ್ನು ರಫ್ತು ಮಾಡಲು ವಿಳಂಬವಾಗಬಹುದು. ಅಲ್ಲದೆ ಉತ್ಪಾದನೆಯು ತ್ವರಿತವಾಗಿ ಪುನರಾರಂಭಗೊಳ್ಳದಿದ್ದರೆ ಬೆಲೆಗಳು ಏರಿಕೆಯಾಗಬಹುದು. ಯಾವುದೇ ಹೆಚ್ಚಳದ ಪ್ರಮಾಣವು ಎಷ್ಟು ಸಮಯದವರೆಗೆ ಇಂಧನ ಕೊರತೆ ಉಂಟುಮಾಡುತ್ತದೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ಆದರೆ ಸದ್ಯಕ್ಕೆ ತಯಾರಾಗಿರುವ ಸೆರಾಮಿಕ್ಸ್ಗಳಿಂದ ತಕ್ಷಣದ ಪರಿಣಾಮವನ್ನು ಕಡಿಮೆ ಮಾಡಬಹುದು. ಆದರೆ ಹೀಗೆ ಸ್ಥಗಿತ ಮುಂದುವರೆದರೆ ಕೊರತೆಗಳು ಹೆಚ್ಚಾಗುತ್ತವೆ.
ಕಾರ್ಖಾನೆಗಳು ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿರುವುದರಿಂದ ಮೋರ್ಬಿಯನ್ನು ಮೀರಿ ಆರ್ಥಿಕ ಪರಿಣಾಮ ವಿಸ್ತರಿಸಿದೆ. ವರ್ಷಗಳಲ್ಲಿ ಪಟ್ಟಣದ ಬೆಳವಣಿಗೆಯು ಸೆರಾಮಿಕ್ ಕ್ಷೇತ್ರದ ಯಶಸ್ಸಿನೊಂದಿಗೆ ನಿಕಟ ಸಂಬಂಧ ಹೊಂದಿದೆ. ದೀರ್ಘಕಾಲದ ಸ್ಥಗಿತದಿಂದ ಸ್ಥಳೀಯ ವ್ಯವಹಾರಗಳು, ದಿನಗೂಲಿ ಕಾರ್ಮಿಕರು ಮತ್ತು ಪೂರೈಕೆ ಸರಪಳಿ ಪಾಲುದಾರರ ಮೇಲೆ ದುಷ್ಪರಿಣಾಮ ಬೀರಬಹುದು.
ಇದನ್ನೂ ಓದಿದ್ದೀರಾ? ಮಧ್ಯಪ್ರಾಚ್ಯ ಬಿಕ್ಕಟ್ಟು: ಇರಾನ್ ತೈಲ ಖರೀದಿಗೆ ಮುಂದಾದ ಭಾರತ
ಸದ್ಯಕ್ಕೆ, ತಯಾರಕರು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಕೊಲ್ಲಿಯಲ್ಲಿ ತ್ವರಿತ ಸ್ಥಿರತೆಗಾಗಿ ಆಶಿಸುತ್ತಿದ್ದಾರೆ. ಆದರೆ ಯುದ್ಧ ಮುಂದುವರೆದರೆ ಮತ್ತು ಅನಿಲ ಹರಿವು ನಿರ್ಬಂಧಿತವಾದರೆ ಗುಜರಾತ್ನ ಅತ್ಯಂತ ಪ್ರಮುಖ ಕೈಗಾರಿಕಾ ಸಮೂಹಗಳು ಇತಿಹಾಸದಲ್ಲಿಯೇ ಕಾಣದಂತಹ ಅತ್ಯಂತ ಕಠಿಣ ಪರಿಸ್ಥಿತಿಗಳನ್ನು ಎದುರಿಸಬಹುದು.





