ಭಾರತ ಸಂವಿಧಾನ, ಸಂವಿಧಾನ ಕರ್ತೃ ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ದಲಿತ ಸಂಘಟನೆಗಳ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅವಮಾನ, ಅವಹೇಳನಕಾರಿ ಮತ್ತು ಸಮಾಜದಲ್ಲಿ ದ್ವೇಷ ಉಂಟುಮಾಡುವ ದ್ವೇಷಕಾರಿ ಪೋಸ್ಟ್ ಮಾಡಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ದಾವಣಗೆರೆ ಜಿಲ್ಲಾಧಿಕಾರಿಗಳು, ಪೂರ್ವ ವಲಯ ಪೊಲೀಸ್ ಮಹಾನಿರೀಕ್ಷಕರು ಹಾಗೂ ದಾವಣಗೆರೆ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದಲಿತ ಸಂಘಟನೆಗಳ ಮುಖಂಡರು ಮನವಿ ಸಲ್ಲಿಸಿ ಒತ್ತಾಯಿಸಿದರು.
ಮನವಿ ಸಲ್ಲಿಸಿ ಮಾತನಾಡಿದ ಮುಖಂಡರು, “ಭಾರತದ ಸಂವಿಧಾನ ಶಿಲ್ಪಿಯಾದ ಡಾ. ಬಿ.ಆರ್ ಅಂಬೇಡ್ಕರ್ರವರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ “ಗುಲಾಮರ ಅಪ್ಪ” ಎಂಬ ಹೆಸರಿನ ಖಾತೆಯಲ್ಲಿ ಉದ್ದೇಶಪೂರ್ವಕವಾಗಿ ಡಾ. ಬಿ.ಆರ್ ಅಂಬೇಡ್ಕರ್ ಹಾಗೂ ದಲಿತ ನಾಯಕರಿಗೆ ಅಗೌರವ ತೋರುವ ರೀತಿ ನಿರಂತರವಾಗಿ ಅವಹೇಳನ ಮಾಡುತ್ತಾ ಬಂದಿರುತ್ತಾನೆ. ಪ್ರತಿ ನಿತ್ಯ ಇದೆ ಕಾರ್ಯ ನಡೆಸುತ್ತಾ ಬಂದಿರುತ್ತಾನೆ. ಸಾಮಾಜಿಕ ಸ್ವಾಸ್ಥ್ಯ ಕೆಡುವಂತಹ ಧಾರ್ಮಿಕ, ಸಾಮಾಜಿಕ ಭಾವನೆಗಳಿಗೆ ಧಕ್ಕೆ ತಂದು ವರ್ಗಗಳ ನಡುವೆ ದ್ವೇಷ ಹುಟ್ಟುಹಾಕುವ ಕೃತ್ಯದ ಪೋಟೊಗಳನ್ನು ಪೇಸ್ ಬುಕ್ನಲ್ಲಿ ಹಂಚಿಕೊಂಡಿರುತ್ತಾನೆ. ಇವನ ಪೋಸ್ಟ್ಗಳು ಅಂಬೇಡ್ಕರ್ರವರ ಚಾರಿತ್ರ್ಯಹರಣ ಮಾಡುವುದೇ ಆಗಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.

“ಪೋಟೋ ಪೋಸ್ಟ್ ಮಾಡಿ ದಲಿತರ ಮೇಲಿನ ಅಸಹನೆ ಅಂಬೇಡ್ಕರ್ ಮೇಲಿನ ದ್ವೇಷ ಹೊರಹಾಕುತ್ತಿರುತ್ತಾನೆ.
ದಲಿತ ಹಿನ್ನೆಲೆಯ ನಾಯಕರ ಅವಹೇಳನ ಮಾಡುವುದು. ನೀಲಿ ಮತ್ತು ಕೇಸರಿ ಬಣ್ಣಗಳ ಮಧ್ಯೆ ವೈಷಮ್ಯ ಬಿತ್ತುವುದು ಈ ಖಾತೆಯ ಉದ್ದೇಶವಾಗಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
“ಅಂಬೇಡ್ಕರರ ಕುಟುಂಬದ ಬಗ್ಗೆ ಅತಿ ಕೆಳಮಟ್ಟದ ಭಾಷೆ ಬಳಸುವುದು, ಅವಹೇಳನ ಮಾಡುವುದು, ಅವರ ಹೋರಾಟಗಳು ಹಾಗೂ ಮಹಾಡ್ ಚಳವಳಿಯನ್ನು ನಿರಂತರವಾಗಿ ಹೀಯಾಳಿಸುವಂತಹ ಕೃತ್ಯಗಳು ನಡೆಯುತ್ತಿವೆ. ಜೊತೆಗೆ ಅಂಬೇಡ್ಕರ್ರವರ ಮೂರ್ತಿ ಭಗ್ನ ಮಾಡುವ ಛಾಯಾಚಿತ್ರಗಳನ್ನು ಹಾಗೂ ಸಮುದಾಯಗಳ ನಡುವೆ ದ್ವೇಷ ಬೀಜ ಬಿತ್ತುವ ಉದ್ದೇಶದ ಪೋಸ್ಟ್ಗಳನ್ನು ಹಂಚಿಕೊಂಡು ಸಾಮಾಜಿಕ ಶಾಂತಿಯನ್ನು ಕದಡುವ ಪ್ರಯತ್ನ ಮಾಡಲಾಗಿದೆ” ಎಂದು ಕಿಡಿಕಾರಿದರು.

“ಭಾರತ ಸಂವಿಧಾನ ಹಾಗೂ ಅದರ ರಚನೆಗೆ ಸಂಬಂಧಿಸಿದಂತೆ ಅಪಹಾಸ್ಯ ಮಾಡುವ ಪೋಸ್ಟ್ಗಳು, ಸಂವಿಧಾನದಿಂದ ಹೆಣ್ಣು ಮಕ್ಕಳಿಗೆ ಶಿಕ್ಷಣ ಸಿಗಲಿಲ್ಲ ಎನ್ನುವ ಸುಳ್ಳು ಹಾಗೂ ಸ್ವಾಸ್ಥ್ಯ ಕದಡುವ ಚಿತ್ರಗಳು ಹರಡಲಾಗಿದೆ. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾದ ‘ಮಹಾನಾಯಕ’ ಧಾರಾವಾಹಿಯಲ್ಲಿ ಅಂಬೇಡ್ಕರ್ರವರ ತಂದೆಯವರ ವಿದ್ಯಾಭ್ಯಾಸದ ಕುರಿತು ಅವಹೇಳನಕಾರಿ ಪೋಸ್ಟ್ ಮಾಡಿದ್ದಾರೆ” ಎಂದು ಆಕ್ಷೇಪ ವ್ಯಕ್ತಪಡಿಸಿದರು.
“ದಲಿತರ ಮೇಲಿನ ದೌರ್ಜನ್ಯದ ವಿರುದ್ಧ ಹೋರಾಡುವ ಭೀಮ್ ಆರ್ಮಿಯನ್ನು ದೇಶದ್ರೋಹಿ ಸಂಘಟನೆಯೆಂದು ಬಿಂಬಿಸುವುದು, “ಗುಲಾಮರ ಅಪ್ಪ” ಎಂಬ ಖಾತೆಯಿಂದ ಪ್ರಚೋದನಕಾರಿ ಚಿತ್ರಗಳನ್ನು ಹಂಚುವುದು. ಈ ಎಲ್ಲಾ ಕೃತ್ಯಗಳು ಸಮುದಾಯಗಳ ಮಧ್ಯೆ ದ್ವೇಷ ಮತ್ತು ಹಿಂಸೆಯನ್ನು ಪ್ರಚೋದಿಸುವ ಉದ್ದೇಶ ಹೊಂದಿವೆ. ಇಂತಹ ಮನುವಾದಿ ಹಾಗೂ ಬಲಪಂಥೀಯ ದ್ವೇಷ ಹರಡುವವರ ವಿರುದ್ಧ ಕಾನೂನಿನ ಮೂಲಕ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವುದು ಅವಶ್ಯಕ” ಎಂದು ಅಭಿಪ್ರಾಯಪಟ್ಟರು.
“ಅಂಬೇಡ್ಕರ್ ರವರ ಆಪಾರ ಜ್ಞಾನದಿಂದ ಸಮಾಜದ ಎಲ್ಲಾ ಜನರು ಗೌರವಯುತವಾಗಿ ಜೀವನ ನಡೆಸುವ ಉದ್ದೇಶದಿಂದ ಸಂವಿಧಾನವನ್ನು ರಚಿಸಿದ್ದಾರೆ. ಇಂತಹ ಮಹಾನ್ ವ್ಯಕ್ತಿಗಳ ಗೌರವ ರಕ್ಷಿಸುವುದು ಸಂವಿಧಾನಾತ್ಮಕ ಕರ್ತವ್ಯವಾಗಿದೆ. ಹಾಗಾಗಿ ಅವಹೇಳನ ಸಮಾಜದ ಸ್ವಾಸ್ಥ್ಯ ಕದಡುವ ದಲಿತ ಸಂಘಟನೆಗಳ ಬಗ್ಗೆ ಅವಹೇಳನ ಮಾಡುವ ವ್ಯಕ್ತಿಗಳು, ಬಲಪಂಥೀಯ ಕೋಮುವಾದಿಗಳಿಗೆ ಕಾನೂನಿನ ಮೂಲಕ ಅತ್ಯಂತ ಕಠಿಣವಾದ ಕ್ರಮ ಕೈಗೊಳ್ಳಬೇಕಾಗಿದೆ. ಇಲ್ಲದಿದ್ದರೆ ಇಂತಹ ಕೃತ್ಯಗಳು ಹೆಚ್ಚಾಗಿ ಸಮಾಜದಲ್ಲಿ ಕಲಹಗಳು ಹೆಚ್ಚುವ ಸಾಧ್ಯತೆಗಳನ್ನು ಕಾಣಬಹುದಾಗಿದೆ. ಹಾಗೂ ಇಂತಹ ವಿಕೃತ ಮನಸ್ಥಿತಿಯ ಜನರು ಹಾಗೂ ಬಲಪಂಥೀಯ ಕೋಮುವಾದಿಗಳಿಗೆ ಶಿಕ್ಷೆ ಕೊಡಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಶೂದ್ರರಿಗೆ ಗೌರವ ಸ್ಥಾನಮಾನ ಸಿಗಲು ಅಂಬೇಡ್ಕರ್ ಕಾರಣ:ಐಜಿಪಿ ಡಾ.ಬಿಆರ್ ರವಿಕಾಂತೇಗೌಡ
ದಲಿತ ಸಂಘಟನೆಗಳ ಮುಖಂಡರಾದ ಕುಂದುವಾಡ ಮಂಜುನಾಥ, ಹೆಚ್ ಮಲ್ಲೇಶಪ್ಪ ಹರಿಹರ, ಲಿಂಗರಾಜು ಎಮ್. ಗಾಂಧೀನಗರ, ನಾಗೇಶ್, ಮಾರುತಿ, ವಕೀಲರಾದ ಅರುಣ, ಅಜಯ್, ಜೀವನ್, ವಸಂತ್ ಸೇರಿದಂತೆ ಇತರರು ಹಾಜರಿದ್ದರು.





