ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ಡಿಸೆಂಬರ್ 14ರಂದು ಚುನಾವಣೆ ನಡೆಯಲಿದೆ. ಈಗಾಗಲೇ ನ.15ರಿಂದ 24ರವರೆಗೆ ನಾಮಪತ್ರ ಸಲ್ಲಿಕೆಗೆ ಅವಕಾಶ ನೀಡಲಾಗಿದ್ದು, ಸದ್ಯ ಸ್ತ್ರಿವಾದಿ ಲೇಖಕಿ ಆರ್ ಸುನಂದಮ್ಮ ಮತ್ತು ಲೇಖಕಿ, ಪ್ರಾಧ್ಯಾಪಕಿ ನಿರ್ಮಲಾ ಎಲಿಗಾರ್ ಕಣದಲ್ಲಿದ್ದಾರೆ. ಈಗಾಗಲೇ ಪ್ರಾಥಮಿಕ ಪಟ್ಟಿ ಪ್ರಕಟಿಸಲಾಗಿದೆ.
ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಚುನಾವಣಾಧಿಕಾರಿ ಪ್ರತಿಭಾ ಆರ್, “ನಾಮಪತ್ರಗಳನ್ನು ಹಿಂಪಡೆಯಲು ನವೆಂಬರ್ 28ರ ಮಧ್ಯಾಹ್ನ 12ರಿಂದ ಸಂಜೆ 4 ಗಂಟೆವರೆಗೆ ಅವಕಾಶವಿದೆ. ಅಭ್ಯರ್ಥಿಗಳ ಅಂತಿಮ ಪಟ್ಟಿಯ 29ರಂದು ಸಂಜೆ 4 ಗಂಟೆಗೆ ಪ್ರಕಟಿಸಲಾಗುತ್ತದೆ. ಡಿಸೆಂಬರ್ 14ರಂದು ಬೆಂಗಳೂರಿನ ಶಂಕರಪುರದಲ್ಲಿರುವ ಅಶೋಕ ಶಿಶುವಿಹಾರದಲ್ಲಿ ಬೆಳಿಗ್ಗೆ 10ರಿಂದ ಸಂಜೆ 4 ಗಂಟೆಯವರೆಗೆ ಮತದಾನಕ್ಕೆ ಅವಕಾಶವಿದೆ” ಎಂದು ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಕರ್ನಾಟಕ ಲೇಖಕಿಯರ ಸಂಘಕ್ಕೆ 1 ಕೋಟಿ ರೂ. ವಿಶೇಷ ಅನುದಾನ ನೀಡಲು ಸಿಎಂಗೆ ಮನವಿ
ಈ ಬಗ್ಗೆ ಈ ದಿನ ಡಾಟ್ ಕಾಮ್ಗೆ ಪ್ರತಿಕ್ರಿಯಿಸಿದ ಕರ್ನಾಟಕ ಲೇಖಕಿಯರ ಸಂಘದ ಹಾಲಿ ಅಧ್ಯಕ್ಷೆ, ಕವಯತ್ರಿ, ನಾಟಕಕಾರ್ತಿ ಮತ್ತು ವಿಮರ್ಶಕಿ ಡಾ. ಎಚ್ ಎಲ್ ಪುಷ್ಪ, “ಕರ್ನಾಟಕ ಲೇಖಕಿಯರ ಸಂಘದ ಚುನಾವಣೆಯು ಪ್ರತಿ ಮೂರು ವರ್ಷಕ್ಕೊಮ್ಮೆ ನಡೆಯುತ್ತದೆ. ಲೇಖಕಿಯರ ಬೆಂಗಳೂರು ನಗರದಲ್ಲಿ ವಾಸವಿರುವವರು ಮಾತ್ರ ಚುನಾವಣೆಯಲ್ಲಿ ಸ್ಪರ್ಧಿಸಲು ಅರ್ಹರಾಗಿರುತ್ತಾರೆ. ಆಯ್ಕೆಯಾದವರು ಎಲ್ಲಾ ಜಿಲ್ಲಾ ಘಟಕಗಳಿಗೆ ಒಬ್ಬರೇ ಅಧ್ಯಕ್ಷರಾಗಿರುತ್ತಾರೆ. ಅವರೇ ಕಾರ್ಯಕಾರಿ ಸಮಿತಿ ಮತ್ತು ಪದಾಧಿಕಾರಿಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಬಳಿಕ ತಮ್ಮ ಕೆಲಸಗಳನ್ನು ಮುಂದುವರಿಸುತ್ತಾರೆ” ಎಂದು ತಿಳಿಸಿದ್ದಾರೆ.
“ಸದ್ಯಕ್ಕೆ ನನ್ನ ಕೆಲವು ವೈಯಕ್ತಿಕ ಕೆಲಸಗಳು ಮಾಡಲಿರುವುದರಿಂದ, ಬರಹಗಳ ಕಡೆ ಹೆಚ್ಚು ಗಮನಹರಿಸಬೇಕಾದ ಕಾರಣ ಈ ಬಾರಿ ನಾನು ಚುನಾವಣೆಗೆ ನಿಲ್ಲುತ್ತಿಲ್ಲ. ಸದ್ಯ ಚುನಾವಣೆಗೆ ನಿಂತಿರುವ ನಿರ್ಮಲಾ ಎಲಿಗಾರ್ ಮತ್ತು ಆರ್ ಸುನಂದಮ್ಮ ಪ್ರಚಾರ ನಡೆಸುತ್ತಿದ್ದಾರೆ. ಎಲ್ಲಾ ಕಡೆ ಮಿಶ್ರ ಪ್ರತಿಕ್ರಿಯೆಯಿದ್ದು ಇಬ್ಬರ ನಡುವೆ ಕಠಿಣ ಸ್ಪರ್ಧೆಯಿದೆ. ಡಿಸೆಂಬರ್ 14ರ ಸಂಜೆ ಫಲಿತಾಂಶ ಹೊರಬೀಳಲಿದೆ” ಎಂದು ಹೇಳಿದ್ದಾರೆ.
2022ರಲ್ಲಿ ನಡೆದ ಲೇಖಕಿಯರ ಸಂಘದ ಚುನಾವಣೆಯಲ್ಲಿ ಅಂದಿನ ಅಧ್ಯಕ್ಷೆ ವನಮಾಲಾ ಸಂಪನ್ನಕುಮಾರ್ ಹಾಗೂ ಪುಷ್ಪ ಅವರ ನಡುವೆ ನೇರ ಸ್ಪರ್ಧೆ ನಡೆದಿತ್ತು. ಸಂಘದ 1,330 ಸದಸ್ಯರಲ್ಲಿ1,295 ಮಂದಿ ಮತದಾನದ ಅರ್ಹತೆ ಹೊಂದಿದ್ದರು. ಒಟ್ಟಾರೆಯಾಗಿ ರಾಜ್ಯದ ಎಲ್ಲೆಡೆಯಿಂದ ಒಟ್ಟಾರೆ 699 ಮತಗಳು ಚಲಾವಣೆಯಾಗಿದ್ದವು. ಈ ಪೈಕಿ 44 ಮತಗಳು. ತಿರಸ್ಕರಿಸಲ್ಪಟ್ಟಿದ್ದವು. ಅಂತಿಮವಾಗಿ 62 ಮತಗಳ ಅಂತರದಿಂದ ಪುಷ್ಪ ಗೆಲುವು ಸಾಧಿಸಿದ್ದರು.





