ನೇಪಾಳದ ರಾಜಧಾನಿ ಕಠ್ಮಂಡುವಿನಲ್ಲಿ ಸಾಮಾಜಿಕ ಜಾಲತಾಣಗಳ ನಿಷೇಧ ಹಾಗೂ ಭ್ರಷ್ಟಾಚಾರದ ವಿರುದ್ಧ ಜನ್ಝೆಡ್ ಪೀಳಿಗೆಯ ಪ್ರತಿಭಟನಾಕಾರರು ನಡೆಸಿದ ಗಲಭೆಯಲ್ಲಿ ಕನಿಷ್ಠ 14 ಮಂದಿ ಮೃತಪಟ್ಟು, 100ಕ್ಕೂ ಅಧಿಕ ಜನ ಗಾಯಗೊಂಡಿದ್ದಾರೆ.
ಸರ್ಕಾರವು ಫೇಸ್ಬುಕ್, ಯೂಟ್ಯೂಬ್, ಎಕ್ಸ್ ಸೇರಿದಂತೆ 26 ಸಾಮಾಜಿಕ ಜಾಲತಾಣಗಳನ್ನು ನಿಷೇಧಿಸಿದ ನಂತರ ಈ ಗಲಭೆ ಭುಗಿಲೆದ್ದಿತು. ಪ್ರತಿಭಟನಾಕಾರರು ಕರ್ಫ್ಯೂ ಉಲ್ಲಂಘಿಸಿ ಸಂಸತ್ ಭವನದ ಸುತ್ತಮುತ್ತಲಿನ ನಿಷೇಧಿತ ವಲಯಕ್ಕೆ ನುಗ್ಗಿದ್ದರಿಂದ ಸೇನೆಯನ್ನು ನಿಯೋಜಿಸಲಾಗಿದೆ.
ಪೊಲೀಸರು ಪ್ರತಿಭಟನಾಕಾರರನ್ನು ಚದುರಿಸಲು ಜಲ ಫಿರಂಗಿ, ಅಶ್ರುವಾಯು ಮತ್ತು ರಬ್ಬರ್ ಗುಂಡುಗಳನ್ನು ಬಳಸಿದರು. ಕೆಲವು ಪ್ರತಿಭಟನಾಕಾರರು ಸಂಸತ್ ಆವರಣಕ್ಕೆ ನುಗ್ಗಿದ್ದು, ಪರಿಸ್ಥಿತಿಯನ್ನು ತೀವ್ರಗೊಳಿಸಿತು. ಕಠ್ಮಂಡು ಜಿಲ್ಲಾಡಳಿತವು ಬಾನೇಶ್ವರ್ನಿಂದ ಹಿಡಿದು ರಾಷ್ಟ್ರಪತಿ ಭವನ, ಉಪರಾಷ್ಟ್ರಪತಿ ನಿವಾಸ, ಪ್ರಧಾನಮಂತ್ರಿ ನಿವಾಸ ಮತ್ತು ಸಿಂಗದುರ್ಬಾರ್ನಂತಹ ಉನ್ನತ ಭದ್ರತಾ ವಲಯಗಳಲ್ಲಿ ಕರ್ಫ್ಯೂ ವಿಸ್ತರಿಸಿದೆ. ಮಧ್ಯಾಹ್ನ 12.30ರಿಂದ ರಾತ್ರಿ 10 ಗಂಟೆಯವರೆಗೆ ಈ ಕರ್ಫ್ಯೂ ಜಾರಿಯಲ್ಲಿರುತ್ತದೆ ಎಂದು ಜಿಲ್ಲಾಧಿಕಾರಿ ಚಾಬಿಲಾಲ್ ರಿಜಾಲ್ ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಡಿಜೆ ಬ್ಯಾನ್ನಿಂದ ಕಲೆಗೆ ಪ್ರೋತ್ಸಾಹ, ಕೋಮು ಉದ್ವಿಗ್ನತೆಗೆ ಕಡಿವಾಣ
ರಬ್ಬರ್ ಗುಂಡುಗಳಿಂದ ಇಬ್ಬರು ಗಾಯಗೊಂಡಿದ್ದಾರೆ, ಅವರಲ್ಲಿ ಕಾಂತಿಪುರ್ ಟೆಲಿವಿಷನ್ನ ಪತ್ರಕರ್ತ ಶ್ಯಾಮ್ ಶ್ರೇಷ್ಠ ಕೂಡ ಸೇರಿದ್ದಾರೆ. ಪ್ರತಿಭಟನೆಗಳು ಪೋಖರಾದಂತಹ ಇತರ ಪ್ರದೇಶಗಳಿಗೂ ವ್ಯಾಪಿಸಿದ್ದು, ಅಲ್ಲಿ ಮುಖ್ಯಮಂತ್ರಿಗಳ ಕಚೇರಿಗೆ ಹಾನಿಯಾಗಿದೆ. ಪ್ರಧಾನಮಂತ್ರಿ ಕೆ.ಪಿ. ಶರ್ಮಾ ಒಲಿ ಈ ವಿಷಯದ ಕುರಿತು ತುರ್ತು ಸಂಪುಟ ಸಭೆ ಕರೆದಿದ್ದಾರೆ.
ಸಾಮಾಜಿಕ ಜಾಲತಾಣಗಳ ನಿಷೇಧವು ಈ ಪ್ರತಿಭಟನೆಗೆ ಪ್ರಮುಖ ಕಾರಣವಾಗಿದೆ. ಸರ್ಕಾರವು ಫೇಸ್ಬುಕ್,, ಇನ್ಸ್ಟಾಗ್ರಾಮ್ ಸೇರಿದಂತೆ 26 ವೇದಿಕೆಗಳನ್ನು ನೋಂದಾಯಿಸದ ಕಾರಣ ನಿಷೇಧಿಸಿದೆ. ಈ ನಿಷೇಧವು ಸಾಮಾನ್ಯ ಜನರ ಜೀವನದ ಮೇಲೆ ಪರಿಣಾಮ ಬೀರಿದ್ದು, ಯುವಕರು ಸರ್ಕಾರದ ಏಕಪಕ್ಷೀಯ ಮನೋಭಾವ ಮತ್ತು ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತಿದ್ದಾರೆ.





