ಬಾಂಗ್ಲಾದೇಶ್ ನ್ಯಾಶನಲಿಸ್ಟ್ ಪಾರ್ಟಿಯ (ಬಿಎನ್ಪಿ) ಹಂಗಾಮಿ ಅಧ್ಯಕ್ಷ ಮತ್ತು ಮಾಜಿ ಅಧ್ಯಕ್ಷ ತಾರಿಖ್ ರಹಮಾನ್ 17 ವರ್ಷಗಳ ಗಡೀಪಾರಿನ ನಂತರ ಗುರುವಾರ ಬಾಂಗ್ಲಾದೇಶಕ್ಕೆ ಹಿಂತಿರುಗಿದರು.
ತಮ್ಮ ತಾಯಿಯೂ ಆಗಿರುವ ಬಾಂಗ್ಲಾದೇಶದ ಮಾಜಿ ಪ್ರಧಾನಿ ಖಾಲೆದಾ ಜಿಯಾ ಅವರ ಆರೋಗ್ಯ ಕೆಟ್ಟಿರುವ ಹಿನ್ನೆಲೆ ಈ ವಾಪಸಾತಿಯ ಅಧಿಕೃತ ಕಾರಣ. ಆದರೆ ವ್ಯಾಪಕ ಅಶಾಂತಿ ಮತ್ತು ರಾಜಕೀಯ ಅಸ್ಥಿರತೆಯ ನಡುವೆ ಖಾಲೆದಾ ಅವರ ರಾಜಕೀಯ ಎದುರಾಳಿ ಶೇಖ್ ಹಸೀನಾ ಪಲಾಯನ ಮತ್ತು 2026ರ ಫೆಬ್ರವರಿ 12ರಂದು ನಡೆಯಬೇಕಿರುವ ಸಾರ್ವತ್ರಿಕ ಚುನಾವಣೆಗಳೇ ತಾರಿಖ್ ವಾಪಸಾತಿಯ ಹಿಂದಿನ ನಿಜ ಕಾರಣ.
ಪತ್ನಿ ಝೈಮಾ ಮತ್ತು ಮಗಳು ಝುಬೇದಾ ಜೊತೆಗೂಡಿ ಲಂಡನ್ ನಿಂದ ಬಂದಿಳಿದ ರಹಮಾನ್ ಅವರಿಗೆ ಢಾಕಾ ವಿಮಾನ ನಿಲ್ದಾಣದಲ್ಲಿ ಬಿ.ಎನ್.ಪಿ. ಭವ್ಯ ಸ್ವಾಗತ ನೀಡಿತು. ಬಿ.ಎನ್.ಪಿ ಬೆಂಬಲಿಗರ ಮೆರವಣಿಗೆ ವಿಮಾನ ನಿಲ್ದಾಣದಿಂದ ಎರಡು ಕಿ.ಮೀ.ಗಳಷ್ಟು ಉದ್ದವಿತ್ತು. ಮುಹಮ್ಮದ್ ಯೂನುಸ್ ನೇತೃತ್ವದ ಹಾಲಿ ಹಂಗಾಮಿ ಸರ್ಕಾರದಡಿ ಎಲ್ಲ ಜನತಾಂತ್ರಿಕ ಹಕ್ಕುಗಳನ್ನು ತುಳಿಯಲಾಗಿದೆಯೆಂದು ಮಾನವ ಹಕ್ಕು ಸಂಸ್ಥೆಗಳು ಆಪಾದಿಸಿವೆ. ಯೂನುಸ್ ಮತ್ತು ರಹಮಾನ್ ನಡುವಣ ಸಂಬಂಧ ಆರಂಭದಲ್ಲಿ ಚೆನ್ನಾಗಿದ್ದರೂ, ತರುವಾಯ ಹದಗೆಟ್ಟಿವೆ ಎನ್ನಲಾಗಿದೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಪ್ರಜಾಪ್ರಭುತ್ವ ಪೊರೆದ ಅಮೆರಿಕ; ಪುಡಿಗಟ್ಟುತ್ತಿರುವ ಭಾರತ
ರಹಮಾನ್ 2008ರಲ್ಲಿ ವೈದ್ಯಕೀಯ ಚಿಕಿತ್ಸೆಗೆಂದು ಲಂಡನ್ಗೆ ಹಾರಿದ್ದರು. ಫೆ.12ರ ಚುನಾವಣೆಗಳಲ್ಲಿ ಬಾಂಗ್ಲಾದೇಶದ ನಾಯಕನಾಗಿ ಹೊರಹೊಮ್ಮುವ ದಟ್ಟ ನಿರೀಕ್ಷೆಯಿದೆ. 2024ರ ಜುಲೈ ತಿಂಗಳಲ್ಲಿ ಅಂದಿನ ಪ್ರಧಾನಿ ಶೇಖ್ ಹಸೀನಾ ವಿರುದ್ಧ ವಿದ್ಯಾರ್ಥಿ ಶಕ್ತಿಯ ಆಕ್ರೋಶ ಸಿಡಿದಿತ್ತು. ಪಲಾಯನ ಮಾಡಿದ್ದ ಆಕೆ ಭಾರತದಲ್ಲಿ ಆಶ್ರಯ ಪಡೆದಿದ್ದಾರೆ. ಹಸೀನಾ ಅವರ ಅವಾಮಿ ಲೀಗ್ ಪಕ್ಷ ಸದ್ಯ ತೀವ್ರ ಜನಾಕ್ರೋಶಕ್ಕೆ ತುತ್ತಾಗಿದೆ. ಶೇಖ್ ಹಸೀನಾ ಆಡಳಿತವಾಧಿಯಲ್ಲಿ ಅಕ್ರಮ ನಗದು ಪರಿವರ್ತನೆ ಮತ್ತು ಹಸೀನಾ ಅವರ ಹತ್ಯೆಯ ಸಂಚು ನಡೆಸಿದ್ದರೆಂದು ರಹಮಾನ್ ಅನುಪಸ್ಥಿತಿಯಲ್ಲೇ ಅವರಿಗೆ ಶಿಕ್ಷೆ ವಿಧಿಸಲಾಗಿತ್ತು. ಆದರೆ ಕಳೆದ ವರ್ಷ ಹಸೀನಾ ಪಲಾಯನದ ನಂತರ ರಹಮಾನ್ ವಿರುದ್ಧದ ಈ ತೀರ್ಪುಗಳನ್ನು ರದ್ದು ಮಾಡಲಾಗಿದೆ.
ಹಸೀನಾ ಪಲಾಯನದ ನಂತರ ಬಿ.ಎನ್.ಪಿ. ಜನಪ್ರಿಯತೆ ಏರುಮುಖದಲ್ಲಿದೆ. ರಹಮಾನ್ ಅವರೇ ಈ ಪಕ್ಷದ ಪ್ರಶ್ನಾತೀತ ನಾಯಕರಾಗಿದ್ದಾರೆ. ಲಂಡನ್ನಿಂದ ಆನ್ಲೈನ್ ಸಭೆಗಳನ್ನು ನಡೆಸುತ್ತಿದ್ದರು, ರ್ಯಾಲಿಗಳನ್ನೂ ಉದ್ದೇಶಿಸಿ ಭಾಷಣ ಮಾಡಿದ್ದರು. ಅಮೆರಿಕೆಯ ಇಂಟರ್ನ್ಯಾಶನಲ್ ರಿಪಬ್ಲಿಕನ್ ಇನ್ಸ್ಟಿಟ್ಯೂಟ್ ಸಮೀಕ್ಷೆಯೊಂದರ ಪ್ರಕಾರ ಮುಂಬರುವ ಲೋಕಸಭಾ ಚುನಾವಣೆಗಳಲ್ಲಿ ಬಿ.ಎನ್.ಪಿ.ಗೆ ಭಾರೀ ಗೆಲುವಾಗಲಿದೆ ಎಂದು ರಾಯಿಟರ್ಸ್ ವರದಿ ಮಾಡಿದೆ.





