ರಷ್ಯಾದಿಂದ ಪೆಟ್ರೋಲಿಯಂ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳುವ ರಾಷ್ಟ್ರಗಳ ಮೇಲೆ ಬರೋಬ್ಬರಿ ಶೇ 500ರಷ್ಟು ಆಮದು ಸುಂಕ ವಿಧಿಸಲು ಅವಕಾಶ ನೀಡುವ ವಿವಾದಾತ್ಮಕ ಮಸೂದೆಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಸಿರು ನಿಶಾನೆ ತೋರಿದ್ದಾರೆ. ಈ ನಡೆ ಅಮೆರಿಕದೊಂದಿಗೆ ವಾಣಿಜ್ಯ ಸಂಬಂಧ ಹೊಂದಿರುವ ಭಾರತ ಮತ್ತು ಚೀನಾ ದೇಶಗಳ ರಫ್ತು ವಹಿವಾಟಿನ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆಯಿದೆ.
‘ಸ್ಯಾಂಕ್ಷನಿಂಗ್ ರಷ್ಯಾ ಆಕ್ಟ್ ಆಫ್ 2025’ (ರಷ್ಯಾ ಮೇಲಿನ ನಿರ್ಬಂಧ ಕಾಯ್ದೆ–2025) ಎಂಬ ಈ ಹೊಸ ಮಸೂದೆಯು, ರಷ್ಯಾ ತೈಲವನ್ನು ಖರೀದಿಸುವ ಮೂಲಕ ಪರೋಕ್ಷವಾಗಿ ಯುದ್ಧಕ್ಕೆ ಆರ್ಥಿಕ ನೆರವು ನೀಡುತ್ತಿರುವ ದೇಶಗಳನ್ನು ಗುರಿಯಾಗಿಸಿಕೊಂಡಿದೆ. ಉಕ್ರೇನ್ ಮೇಲಿನ ರಷ್ಯಾದ ಯುದ್ಧವನ್ನು ತಡೆಯಲು ಮತ್ತು ಶಾಂತಿ ಮಾತುಕತೆಗೆ ರಷ್ಯಾವನ್ನು ಒತ್ತಾಯಿಸಲು ಈ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಅಮೆರಿಕದ ಆಡಳಿತ ಹೇಳಿದೆ.
ಉಕ್ರೇನ್ ಜೊತೆಗಿನ ಶಾಂತಿ ಒಪ್ಪಂದಕ್ಕೆ ರಷ್ಯಾ ನಿರಾಕರಿಸಿದರೆ ಅಥವಾ ಒಪ್ಪಂದಗಳನ್ನು ಉಲ್ಲಂಘಿಸಿ ಆಕ್ರಮಣ ಮುಂದುವರಿಸಿದರೆ, ಈ ಮಸೂದೆಯ ಅನ್ವಯ ಅಮೆರಿಕ ಅಧ್ಯಕ್ಷರು ಕಠಿಣ ಕ್ರಮ ಜರುಗಿಸಬಹುದಾಗಿದೆ. ರಷ್ಯಾ ಮೂಲದ ಯುರೇನಿಯಂ ಮತ್ತು ಪೆಟ್ರೋಲಿಯಂ ಉತ್ಪನ್ನಗಳ ವಿನಿಮಯದಲ್ಲಿ ‘ಜಾಣತನದಿಂದ’ ತೊಡಗಿರುವ ದೇಶಗಳಿಂದ ಅಮೆರಿಕಕ್ಕೆ ಆಮದಾಗುವ ಸರಕು ಮತ್ತು ಸೇವೆಗಳ ಮೇಲೆ ಕನಿಷ್ಠ ಶೇ 500ರಷ್ಟು ಸುಂಕ ವಿಧಿಸಲು ಈ ಕಾಯ್ದೆ ಟ್ರಂಪ್ ಅವರಿಗೆ ಪರಮಾಧಿಕಾರ ನೀಡಲಿದೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ‘ಸುಪ್ರೀಮ್’ ನೀಡಿದ ಎರಡು ವ್ಯತಿರಿಕ್ತ ತೀರ್ಪುಗಳು! ಅರವಿಂದ್ಗೆ ಒಂದು ನ್ಯಾಯ, ಉಮರ್ಗೆ ಮತ್ತೊಂದೇ?
ಈ ಕುರಿತು ‘ಎಕ್ಸ್’ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿರುವ ಅಮೆರಿಕದ ಸೆನೆಟರ್ ಲಿಂಡ್ಸೆ ಗ್ರಹಾಂ, “ಅಧ್ಯಕ್ಷ ಟ್ರಂಪ್ ಅವರೊಂದಿಗೆ ನಡೆದ ಮಹತ್ವದ ಸಭೆಯಲ್ಲಿ ಈ ಮಸೂದೆಗೆ ಅನುಮೋದನೆ ದೊರೆತಿದೆ. ರಷ್ಯಾದಿಂದ ಅಗ್ಗದ ದರದಲ್ಲಿ ತೈಲ ಖರೀದಿಸಿ, ಪುಟಿನ್ ಅವರ ‘ಯುದ್ಧ ಯಂತ್ರ’ಕ್ಕೆ ಇಂಧನ ತುಂಬುತ್ತಿರುವ ರಾಷ್ಟ್ರಗಳಿಗೆ ಪಾಠ ಕಲಿಸುವುದು ಇದರ ಉದ್ದೇಶ,” ಎಂದು ಸಮರ್ಥಿಸಿಕೊಂಡಿದ್ದಾರೆ.
ಈ ಮಸೂದೆಯು ಭಾರತ, ಚೀನಾ ಮತ್ತು ಬ್ರೆಜಿಲ್ನಂತಹ ದೇಶಗಳ ಮೇಲೆ ತೂಗುಗತ್ತಿಯಂತಿದೆ. ಈಗಾಗಲೇ ರಷ್ಯಾ ತೈಲ ಆಮದಿನ ಕಾರಣವೊಡ್ಡಿ ಕಳೆದ ಆಗಸ್ಟ್ನಲ್ಲಿ ಅಮೆರಿಕವು ಭಾರತದ ಕೆಲವು ಸರಕುಗಳ ಮೇಲೆ ಶೇ 25ರಷ್ಟು ಹೆಚ್ಚುವರಿ ಸುಂಕ ವಿಧಿಸಿತ್ತು. ಇದೀಗ ಹೊಸ ಮಸೂದೆ ಜಾರಿಯಾದರೆ, ಸುಂಕದ ಪ್ರಮಾಣ ಊಹಾತೀತವಾಗಿ ಏರಿಕೆಯಾಗಲಿದ್ದು, ಭಾರತದ ರಫ್ತು ವಲಯಕ್ಕೆ ಭಾರೀ ಪೆಟ್ಟು ಬೀಳಲಿದೆ.
ಭಾರತದ ಸರಕುಗಳ ಮೇಲಿನ ಸುಂಕ ಏರಿಕೆ ಕುರಿತು ಪ್ರಸ್ತಾಪಿಸಿರುವ ಡೊನಾಲ್ಡ್ ಟ್ರಂಪ್, “ನಮ್ಮ ಸುಂಕ ನೀತಿಯಿಂದಾಗಿ ಪ್ರಧಾನಿ ನರೇಂದ್ರ ಮೋದಿ ಅವರು ನನ್ನ ಮೇಲೆ ಅಷ್ಟೇನೂ ಸಂತೋಷವಾಗಿಲ್ಲ. ರಷ್ಯಾ ತೈಲದ ಮೇಲಿನ ಅವಲಂಬನೆಯನ್ನು ಭಾರತ ಕಡಿಮೆ ಮಾಡಿದೆ ಎಂದು ಅವರು ಹೇಳುತ್ತಿದ್ದಾರೆ,” ಎಂದು ತಿಳಿಸಿದ್ದಾರೆ.
ಈಗಾಗಲೇ ಹೇರಲಾಗಿರುವ ಶೇ 25ರಷ್ಟು ಸುಂಕವನ್ನು ಹಿಂಪಡೆಯುವಂತೆ ಕೋರಿ ಅಮೆರಿಕದಲ್ಲಿರುವ ಭಾರತದ ರಾಯಭಾರಿ ವಿನಯ್ ಮೋಹನ್ ಕ್ವಾತ್ರಾ ಅವರು ಸೆನೆಟರ್ ಗ್ರಹಾಂ ಅವರನ್ನು ಭೇಟಿಯಾಗಿ ಮನವಿ ಮಾಡಿದ್ದರು. ಆದರೆ, ವಾಷಿಂಗ್ಟನ್ ತನ್ನ ಪಟ್ಟು ಸಡಿಲಿಸುವ ಬದಲು ಮತ್ತಷ್ಟು ಕಠಿಣ ಕ್ರಮಕ್ಕೆ ಮುಂದಾಗಿರುವುದು ದ್ವಿಪಕ್ಷೀಯ ಸಂಬಂಧದಲ್ಲಿ ಬಿರುಕು ಮೂಡಿಸುವ ಲಕ್ಷಣಗಳು ಗೋಚರಿಸುತ್ತಿವೆ.





