ಅಫ್ಘಾನಿಸ್ತಾನದ ವಿದೇಶಾಂಗ ಸಚಿವ ಮೌಲವಿ ಅಮೀರ್ ಖಾನ್ ಮುತ್ತಕಿ ಅವರು ಗುರುವಾರ ರಾಷ್ಟ್ರ ರಾಜಧಾನಿ ನವದೆಹಲಿಗೆ ಆಗಮಿಸಿದ್ದಾರೆ. ತಾಲಿಬಾನ್ ಸರ್ಕಾರವು ನಾಲ್ಕು ವರ್ಷಗಳ ಹಿಂದೆ ಅಶ್ರಫ್ ಘನಿ ಸರ್ಕಾರದ ಪತನದ ನಂತರ ಕಾಬೂಲ್ನಲ್ಲಿ ಅಧಿಕಾರ ಹಿಡಿದ ಬಳಿಕ ಇದು ಕಾಬೂಲ್ನಿಂದ ಭಾರತಕ್ಕೆ ಆಗಮಿಸಿದ ಮೊದಲ ಉನ್ನತ ಮಟ್ಟದ ಭೇಟಿಯಾಗಿದೆ.
ಮುತ್ತಾಕಿ ಅವರು ತಮ್ಮ ಆರು ದಿನಗಳ ಭಾರತ ಭೇಟಿಯ ಸಂದರ್ಭದಲ್ಲಿ ವಿದೇಶಾಂಗ ಸಚಿವ ಎಸ್. ಜೈಶಂಕರ್ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರೊಂದಿಗೆ ವಿವಿಧ ವಿಷಯಗಳ ಕುರಿತು ವಿವರವಾದ ಚರ್ಚೆ ನಡೆಸಲಿದ್ದಾರೆ ಎಂದು ಈ ವಿಷಯದ ಬಗ್ಗೆ ಮಾಹಿತಿಯುಳ್ಳವರು ತಿಳಿಸಿದ್ದಾರೆ.
“ಅಫ್ಘಾನ್ ವಿದೇಶಾಂಗ ಸಚಿವ ಮೌಲವಿ ಅಮೀರ್ ಖಾನ್ ಮುತ್ತಾಕಿ ಅವರನ್ನು ನವದೆಹಲಿಗೆ ಆಗಮಿಸಿದ ಸಂದರ್ಭದಲ್ಲಿ ಹಾರ್ದಿಕವಾಗಿ ಸ್ವಾಗತಿಸುತ್ತೇವೆ,” ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ರಧೀರ್ ಜೈಸ್ವಾಲ್ ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದ್ದಾರೆ. “ದ್ವಿಪಕ್ಷೀಯ ಸಂಬಂಧಗಳು ಮತ್ತು ಪ್ರಾದೇಶಿಕ ವಿಷಯಗಳ ಕುರಿತು ಅವರೊಂದಿಗೆ ಚರ್ಚೆಗೆ ಎದುರು ನೋಡುತ್ತಿದ್ದೇವೆ,” ಎಂದು ಅವರು ಹೇಳಿದ್ದಾರೆ.
ಮುತ್ತಾಕಿ ಅವರ ಕಾರ್ಯಕ್ರಮದಲ್ಲಿ ದಾರುಲ್ ಉಲೂಮ್ ದೇವಬಂದ್ ಧಾರ್ಮಿಕ ಶಾಲೆಗೆ ಭೇಟಿ ಮತ್ತು ತಾಜ್ಮಹಲ್ ವೀಕ್ಷಣೆಯು ಸೇರಿದೆ ಎಂದು ಮೂಲಗಳು ತಿಳಿಸಿವೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಮತ್ತೆ ಬಿಹಾರ ಗೆಲ್ಲಲು ಮೋದಿ ರಣತಂತ್ರ- ಹಣದ ಹೊಳೆ, ಆಶ್ವಾಸನೆಗಳ ಮಳೆ!
ಕಳೆದ ತಿಂಗಳು ಮುತ್ತಾಕಿ ಅವರು ದೆಹಲಿಗೆ ಭೇಟಿ ನೀಡಬೇಕಿತ್ತಾದರೂ, ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ (UNSC)ನಿರ್ಬಂಧದಿಂದಾಗಿ ಅವರಿಗೆ ತಡೆಯಾದ ಪ್ರಯಾಣ ನಿಷೇಧದಿಂದಾಗಿ ಆ ಭೇಟಿ ರದ್ದಾಗಿತ್ತು. ಆದರೆ, ಸೆಪ್ಟೆಂಬರ್ 30 ರಂದು ಯುಎನ್ಎಸ್ಸಿ ಮುತ್ತಾಕಿ ಅವರಿಗೆ ಅಕ್ಟೋಬರ್ 9 ರಿಂದ 16 ರವರೆಗೆ ದೆಹಲಿಗೆ ಭೇಟಿ ನೀಡಲು ತಾತ್ಕಾಲಿಕವಾಗಿ ಪ್ರಯಾಣ ನಿಷೇಧದಿಂದ ವಿನಾಯಿತಿ ನೀಡಿದೆ ಎಂದು ವಿಶ್ವಸಂಸ್ಥೆ ಹೇಳಿಕೆಯಲ್ಲಿ ತಿಳಿಸಿದೆ. ಈ ವಿನಾಯಿತಿಯು ಅಫ್ಘಾನ್ ವಿದೇಶಾಂಗ ಸಚಿವರ ಭಾರತ ಭೇಟಿಗೆ ಮಾರ್ಗ ಮಾಡಿಕೊಟ್ಟಿದೆ.
ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು ತಾಲಿಬಾನ್ನ ಎಲ್ಲ ಪ್ರಮುಖ ನಾಯಕರ ಮೇಲೆ ನಿರ್ಬಂಧಗಳನ್ನು ವಿಧಿಸಿದ್ದು, ಅವರಿಗೆ ವಿದೇಶಿ ಪ್ರಯಾಣಕ್ಕೆ ವಿನಾಯಿತಿ ಪಡೆಯುವ ಅಗತ್ಯವಿದೆ.
ಮುತ್ತಾಕಿ ಅವರ ಈ ಭೇಟಿಯು ಭಾರತ ಮತ್ತು ಕಾಬೂಲ್ನ ತಾಲಿಬಾನ್ ಸರ್ಕಾರದ ನಡುವಿನ ಸಂಬಂಧಕ್ಕೆ ಹೊಸ ಆಯಾಮವನ್ನು ಒದಗಿಸುವ ನಿರೀಕ್ಷೆಯಿದೆ. ಈ ಹಿಂದೆ, ಮೇ 15 ರಂದು ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರು ಮುತ್ತಾಕಿ ಅವರೊಂದಿಗೆ ದೂರವಾಣಿ ಸಂಭಾಷಣೆ ನಡೆಸಿದ್ದರು. ಇದು ತಾಲಿಬಾನ್ ಅಧಿಕಾರಕ್ಕೆ ಬಂದ ಬಳಿಕ ಭಾರತ ಮತ್ತು ಕಾಬೂಲ್ ನಡುವಿನ ಉನ್ನತ ಮಟ್ಟದ ಸಂಪರ್ಕವಾಗಿತ್ತು.





